Site icon nadubadenews.com

ಭಾರತ ಹಾಕಿ ವಿಶ್ವಕಪ್ ಗೆದ್ದು ಇಂದಿಗೆ 50 ವರ್ಷ. ತಂಡದಲ್ಲಿದ್ದರು ಕೊಡಗಿನ ಇಬ್ಬರು ಸಿಡಲಮರಿಗಳು :  ಚೆಪ್ಪುಡಿರ ಕಾರ್ಯಪ್ಪ

ಭಾರತ ಹಾಕಿ ವಿಶ್ವಕಪ್ ಗೆದ್ದು ಇಂದಿಗೆ 50 ವರ್ಷ. ತಂಡದಲ್ಲಿದ್ದರು ಕೊಡಗಿನ ಇಬ್ಬರು ಸಿಡಲಮರಿಗಳು :  ಚೆಪ್ಪುಡಿರ ಕಾರ್ಯಪ್ಪ
Spread the love
ಭಾರತ ಹಾಕಿ ವಿಶ್ವಕಪ್ ಗೆದ್ದು ಇಂದಿಗೆ 50 ವರ್ಷ. ತಂಡದಲ್ಲಿದ್ದರು ಕೊಡಗಿನ ಇಬ್ಬರು ಸಿಡಲಮರಿಗಳು :  ಚೆಪ್ಪುಡಿರ ಕಾರ್ಯಪ್ಪ

ಇಂದಿಗೆ 50 ವರ್ಷಗಳ ಹಿಂದೆ, ಅಂದರೆ 14/03 1975 ರಲ್ಲಿ ಭಾರತದ ಹಾಕಿ ತಂಡವು ವಿಶ್ವಕಪ್ ಗೆದ್ದುಕೊಂಡಿತ್ತು. ಪಾಕಿಸ್ತಾನದ ವಿರುದ್ಧ 2-1 ಗೋಲುಗಳಿಂದ ಮಲೇಷ್ಯಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತ ವಿಜಯ ಪತಾಕೆ ಹಾರಿಸಿತ್ತು.

ಪಂದ್ಯದ ಮೊದಲ ಗೋಲನ್ನು ಪಾಕಿಸ್ತಾನದ ಸೈಯದ್ ಅವರು ಹೊಡೆಯುತ್ತಾರೆ, ಅದನ್ನು ಭಾರತದ ಸುರ್ಜಿತ್ ಸಿಂಗ್ ಅವರು ಸಮ ಮಾಡುತ್ತಾರೆ. ನಂತರ ಅಶೋಕ್ ಕುಮಾರ್ ಅವರು ಹೊಡೆದ ಗೋಲಿನಿಂದ ಭಾರತ ತಂಡ ಹಾಕಿ ವಿಶ್ವ ವಿಜೇತವಾಗುತ್ತದೆ. 1973ರಲ್ಲೇ ವಿಶ್ವ ಕಪ್‌ ಗೆಲ್ಲಬೇಕಿದ್ದ ಭಾರತ 1975ರಲ್ಲಿ ಗೆದ್ದಿತು. ಈ ತಂಡ ಭಾರತದ ಬಲಿಷ್ಠ ತಂಡವಾಗಿತ್ತು.

ಹಾಕಿ ವಿಶ್ವಕಪ್ನ ಟ್ರೋಫಿಯನ್ನು ಪಾಕಿಸ್ತಾನದ ಏರ್ ಮಾರ್ಷಲ್ ಆರಿಫ್ ಅವರು ಮಾಡಿಸಿದ್ದಾರೆ, ಇದನ್ನು ಚಿನ್ನ ಮತ್ತು ಬೆಳ್ಳಿಯಿಂದ ತಯಾರಿಸಲಾಗಿದೆ. ಹಾಕಿ ಸ್ಟಿಕ್ ಮತ್ತು ಚೆಂಡನ್ನು ದೊಡ್ಡ ಗ್ಲೋಬ್‌ನ ಮೇಲೆ ಅಲಂಕರಿಸಿರುವಂತೆ ಪ್ರದರ್ಶಿಸಲಾಗಿದೆ. ಬೇಸ್ ಸೇರಿದಂತೆ, ಟ್ರೋಫಿ 650 ಮಿಲಿ ಮೀಟರ್ಎತ್ತರವಿದೆ. ಇದು 895 ಗ್ರಾಂ ಚಿನ್ನ, 6,815 ಗ್ರಾಂ ಬೆಳ್ಳಿ, 350 ಗ್ರಾಂ ದಂತ ಮತ್ತು 3,500 ಗ್ರಾಂ ತೇಗ ಸೇರಿದಂತೆ 11,560 ಗ್ರಾಂ ತೂಗುತ್ತದೆ.

 ಆ ವಿಜಯೋತ್ಸವದಂದು ಭಾರತ ತಂಡ ಕಪ್ ಅನ್ನು ಸ್ವೀಕರಿಸುವಾಗ ಭಾರತದ ನಕ್ಷೆಯಲ್ಲಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಲಾಗಿತ್ತು. ಇದನ್ನು ಕಂಡ ಭಾರತದ ತಂಡದವರು ಪ್ರತಿಭಟನೆಯ ಮೂಲಕ  ಕಪ್ ಅನ್ನು ಪಡೆದುಕೊಂಡದ್ದು ಇಂದು ಇತಿಹಾಸ. 2018ರಲ್ಲಿ ನರೇಂದ್ರ ಬಾತ್ರಾ ಅವರು ಎಫ್.ಐ.ಹೆಚ್ ಮುಖ್ಯಸ್ಥರಾದಾ ಮೇಲೆ ಟ್ರೋಫಿಯಲ್ಲಿ ಪಾಕಿಸ್ತಾನದ ಭಾಗವಾಗಿದ್ದ ಕಾಶ್ಮೀರವನ್ನು  ಸರಿಪಡಿಸಿದ್ದಾರೆ ಈಗ ಅದು ಸರಿಯಾಗಿದೆ.

          ಅಂದು  ಭಾರತಕ್ಕೆ ಮರಳಿದ ಹಾಕಿ ತಂಡವು ಅಂದಿನ ಹಾಕಿ ಫೆಡರೇಶನ್ ಅಧ್ಯಕ್ಷರಾದ ಎಂ.ಎ.ಎಂ. ರಾಮಸ್ವಾಮಿ ಅವರ ಸೂಚನೆಯ ಮೇರೆಗೆ ಭಾರತದ ಹಲವು ಕಡೆಗಳಲ್ಲಿ ಪ್ರದರ್ಶನ ಪಂದ್ಯ ಆಡಿತು. ತಲೆಚೇರಿ, ಲಕ್ನೋ, ದಿಲ್ಲಿ , ಬೆಂಗಳೂರು, ಹೈದರಾಬಾದ್, ಅಮೃತ್‌ಸರ್, ಮದ್ರಾಸ್‌ನಲ್ಲಿ ಪ್ರದರ್ಶನ ಪಂದ್ಯಾವಳಿ ನಡೆಯಿತು. ಲಕ್ನೋದಲ್ಲಿ ಪಂದ್ಯಾವಳಿ ಆಡುವಾಗ ಅಂದಿನ ಮುಖ್ಯಮಂತ್ರಿಯಾದ ಬಹುಗುಣ ಅವರು 16 ಆಟಗಾರರಿಗೆ, ಸ್ಕೂಟರ್ ಇಂಡಿಯಾದ ವತಿಯಿಂದ ವಿಜಯ್ ಸ್ಕೂಟರ್ ಅನ್ನು ಉಡುಗೊರೆಯಾಗಿ ಕೊಟ್ಟರು. ಇದಲ್ಲದೆ ಆಟಗಾರರಿಗೆ ಕೇವಲ ತಲಾ 50,000 ರೂಪಾಯಿ  ಹಣವನ್ನು, ಆಯಾ ರಾಜ್ಯದ ಆಟಗಾರರಿಗೆ, ಆಯಾ ಸರ್ಕಾರದಿಂದ ನೀಡಲಾಯಿತು.

ಈ ವಿಶ್ವ ಕಪ್‌ನ ಜ್ಞಾಪಕಾರ್ಥವಾಗಿ ವ್ಯಾಂಪೈರ್ ಹಾಕಿಸ್ಟಿಕ್‌ನಲ್ಲಿ ಎಲ್ಲಾ 16 ಆಟಗಾರರ ಸಹಿ ಇದೆ. ಇದನ್ನು ಈಗಲೂ ಕೂಡ ಮ್ಯೂಸಿಯಂನಲ್ಲಿ ಇರಿಸಲಾಗಿದೆ.

ವಿಶ್ವ ಕಪ್‌ಗೂ ಮುನ್ನ ಹಾಕಿಯ ಪೂರ್ವಭಾವಿ ತರಬೇತಿಯ ಪೂರ್ತಿ ಜವಾಬ್ದಾರಿಯನ್ನು ಪಂಜಾಬ್ ರಾಜ್ಯ ವಹಿಸಿಕೊಂಡಿತ್ತು. ಅದು ಯಾರಿಗೂ ತೊಂದರೆಯಾಗದ ಅಚ್ಚು ಕಟ್ಟಿನ ಶಿಸ್ತುಬದ್ಧ ತರಬೇತಿ ಕೇಂದ್ರವಾಗಿತ್ತು.

      1975ರ  ವಿಶ್ವ ಕಪ್ ಆಡಿದ ಆಟಗಾರರ ಹೆಸರು ಹೀಗಿದೆ.

ಗೋಲ್ ಕೀಪರ್ – ಲೆಸ್ಲಿ ಫರ್ನಾಂಡಿಸ್ ಹಾಗೂ ಅಶೋಕ್ ದಿವಾನ್, ಇತರ ಆಟಗಾರರಾದ ಸುರ್ಜಿತ್ ಸಿಂಗ್, ಅಸ್ಲಾಂ ಶೇರ್ ಖಾನ್, ಮೈಕಲ್ ಕಿಂಡೊ, ಓಂಕಾರ್ ಸಿಂಗ್, ಅಜಿತ್ ಪಾಲ್, ವಿರೇಂದರ್ ಸಿಂಗ್, ಅರ್ಚರಣ್     ಸಿಂಗ್,  ವಿ.ಜೆ. ಪಿಲಿಪ್ಸ್, ಶಿವಾಜಿ ಪವರ್, ಮೋಹೆಂದರ್ ಸಿಂಗ್, ಚಿಮ್ಣಿ,  ಅಶೋಕ್ ಕುಮಾರ್, ಪೈಕೆರ ಕಾಳಯ್ಯ, ಬಿಳಿಮಗ್ಗ ಗೋವಿಂದ ಇವರುಗಳನ್ನು ಒಳಗೊಂಡಿತ್ತು. ತಂಡದ ತರಬೇತುದಾರರಾಗಿ ಗುರು ಚರಣ್ ಸಿಂಗ್ ಬೋದಿ, ವ್ಯವಸ್ಥಾಪಕರಾಗಿ ಬಲ್ಬೀರ್ ಸಿಂಗ್ ಇದ್ದರು. ಇವರೆಲ್ಲರೂ ವಿಶ್ವದ ಖ್ಯಾತ ಆಟಗಾರರು ದುರದೃಷ್ಟವಾಗಿ ಇಂದು ಸುರ್ಜಿತ್ ಸಿಂಗ್, ವಿರೇಂದರ್ ಸಿಂಗ್, ಶಿವಾಜಿ ಪವರ್, ಮೋಹೆಂದರ್ ಸಿಂಗ್ ಹಾಗೂ ಮೈಕಲ್ ಕಿಂಡೊ ಅವರು ನಮ್ಮ ಜೊತೆ ಇಲ್ಲ. ಅಸ್ಲಾಂಶೇರ್ ಖಾನ್ ಅವರು ಭೂಪಾಲ್ ನಿಂದ ಸಂಸದರಾಗಿ ಗೆದ್ದು ಇಂದಿರಾಗಾಂಧಿಯವರ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಧ್ಯಾನ್ ಚಂದ್ ರವರ ಮಗ ಅಶೋಕ್ ಕುಮಾರ್ ಅವರು 4 ವಿಶ್ವ ಕಪ್ ಆಡುತ್ತಾರೆ. ಅಜಿತ್ ಪಾಲ್ ಅವರು ವಿಶ್ವದ ಖ್ಯಾತ ಆಟಗಾರರಾಗಿ ಹೊರಹೊಮ್ಮುತ್ತಾರೆ. ಇದೆಲ್ಲವೂ ಅರ್ಧ ಶತಮಾನದ  ಹಿಂದೆ ನಡೆದ ದಂತಕಥೆ.

         1975ರ ವಿಶ್ವಕಪ್‌ನಲ್ಲಿ ಕೊಡಗಿನ ಖ್ಯಾತ ಆಟಗಾರರಾದ ಕೊಡಗಿನ ಸಿಡಿಲುಮರಿ ಬಿ.ಪಿ.ಗೋವಿಂದ ಹಾಗೂ ಪಿ.ಇ. ಕಾಳಯ್ಯ ಅವರು, ಮಡಿಕೇರಿಯ ವಾಂಡರ್ಸ್ ಕ್ಲಬಿನ ಸದಸ್ಯರಾಗಿ ಹಾಗೂ ಶಂಕರ್ ಸ್ವಾಮಿಯವರ ಶಿಷ್ಯರಾಗಿ ಭಾರತ ತಂಡಕ್ಕೆ ಆಡಿದ್ದು, ಕೊಡಗಿಗೆ ಅಪಾರ ಗೌರವ ತಂದಿದೆ. ಇತಿಹಾಸದ ಗತವೈಭಯ ಮರುಕಳಿಸಲೀ ಎಂಬುದು ಹಾಕಿ ಪ್ರೇಮಿಗಳ ಹೆಬ್ಬಯಕೆಯಾಗಿದೆ.

          – ಚೆಪ್ಪುಡೀರ ಕಾರ್ಯಪ್ಪ, ಹಾಕಿ ವೀಕ್ಷಕ ವಿವರಣೆಗಾರರು, (Mob.No:9900369212)

Exit mobile version