ಗೋಣಿಕೊಪ್ಪ, ಏ.11 (ನಡುಬಾಡೆ ನ್ಯೂಸ್):- ತಲಾಂತರದಿಂದ , ಕೊಡಗಿನ ಮಣ್ಣಿನಲ್ಲಿ ಹುಟ್ಟಿಬೆಳೆದು, ಮೂಲ ಸಂಸ್ಕೃತಿಯೊಂದಿಗೆ ಬಾಳುತ್ತಿರುವ ಕೊಡವ ಭಾಷಿಕ ಮೂಲ ನಿವಾಸಿಗಳು, ನಮ್ಮ ನೆಲದಲ್ಲಿಯೇ ಸಮಾಜದ ಸೂರಿಗಾಗಿ ಅಂಗಾಲಾಚುವ ಪ್ರಸಂಗ ಬಂದಿದೆ ಎಂದು, ಜನಾಂಗ ಪ್ರಮುಖರು ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ಗೋಣಿಕೊಪ್ಪದ ಸವಿತಾ ಸಮಾಜದಲ್ಲಿ ನಡೆದ ಕೊಡವ ಭಾಷಿಕ ಜನಾಂಗಗಳ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ, ಉಪಸ್ತಿತರಿದ್ದ 22ಮೂಲನಿವಾಸಿ ಜನಾಂಗ ಪ್ರಮುಖರು ಹಾಗೂ ಸದಸ್ಯರು ಸರ್ಕಾರಗಳ ನಿರ್ಲಕ್ಷತೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಜನಾಂಗಳ ಶ್ರೇಯೋಭಿವೃದ್ದಿಗಾಗಿ, ವಿವಿಧ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವ ಉದ್ದೇಶದಿಂದ ಭಾಷಿಕ ಜನಾಂಗಗಳ ಒಕ್ಕೂಟವನ್ನು ಸ್ಥಾಪಿಸಿ, ಎಲ್ಲರನ್ನೊಳಗೊಂಡು ದುಡಿಯುತಿದ್ದು, ಒಕ್ಕೂಟದ ಬಯಕೆಯಂತೆ ಎಲ್ಲ ಕೊಡವ ಭಾಷಿಕ ಜನಾಂಗಗಳಿಗೂ ಅನುಕೂಲ ಆಗುವಂತೆ, ಕ್ರೀಡಾಂಗಣ, ವಸತಿ ನಿಲಯ, ವಿದ್ಯಾಕೇಂದ್ರ, ಸಮುದಾಯ ಭವನಗಳನ್ನು ನಿರ್ಮಿಸುವ ಉದ್ದೇಶದಿಂದ, ಹಲವಾರು ವರ್ಷಗಳಿಂದ ನಿವೇಶನಕ್ಕಾಗಿ ಪ್ರಯತ್ನಿಸಲಾಗುತ್ತಿದೆ. ಹಲವು ಸರ್ಕಾರಗಳ ಮುಖ್ಯಮಂತ್ರಿಯಾದಿಯಾಗಿ ಜನಪ್ರತಿನಿಧಿಗಳಿಗೆ ಸಾಲು ಸಾಲು ಮನವಿ ಪತ್ರಗಳನ್ನೂ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಹಲವು ಜಾಗಗಳನ್ನು ಗುರುತಿಸಿ, ಸರ್ವೆಕಾರ್ಯವನ್ನೂ ಕೈಗೊಳ್ಳಲಾಗಿದ್ದರೂ, ನಿವೇಶನ ಮಾತ್ರ ಮಂಜೂರಾಗಲೇ ಇಲ್ಲ ಎಂದು ಒಕ್ಕೊರಲ ಬೇಸರ ವ್ಯಕ್ತಗೊಂಡಿದೆ.
ಈ ವಿಚಾರದಲ್ಲಿ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅವರ ಮೇಲೆ ಸಂಘಟನೆಯು ಭರವಸೆ ಇಟ್ಟಿದ್ದು, ಪ್ರಸ್ತುತ ಗುರುತಿಸಿರುವ ಪ್ರದೇಶದಲ್ಲಿ ನಿವೇಶನ ಮಂಜೂರು ಮಾಡಿಕೊಡುವ ಆಶಭಾವನೆಯನ್ನೂ ಸಭೆ ವ್ಯಕ್ತಪಡಿಸಿತು.
ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ ಅಧ್ಯಕ್ಷತೆ ವಹಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವೆಲ್ಲರೂ ಒಂದಾಗಿ ಜಾಗೃತರಾಗುತ್ತಿರುವುದು ಸಂತೋಷಕರ ವಿಚಾರವಾಗಿದೆ. ನಮ್ಮತನವನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ, ಭವಿಷ್ಯದ ಮಕ್ಕಳಿಗೆ ದಾರಿದೀಪವಾಗಬೇಕು. ಈಗಾಗಲೇ ಜನಾಂಗದ ಒಗ್ಗೂಡುವಿಕೆಗೆ ಅನುಕೂಲಕರವಾದ ಜಾಗವೊಂದನ್ನು ಗುರುತಿಸಲಾಗಿದ್ದು, ಸದ್ಯದಲ್ಲಿಯೇ ಕೂಟದ ಹೆಸರಿಗೆ ಸೇರ್ಪಡೆ ಯಾಗಲಿದೆ. ನೂತನ ಜಾಗದಲ್ಲಿ ಶಾಸಕರ ಅಭಿಪ್ರಾಯದಂತೆ ಸುಸಜ್ಜಿತ ಸಮುದಾಯ ಭವನವೊಂದನ್ನು ನಿರ್ಮಿಸಿ ಜನಾಂಗದ ಅಭಿವೃದ್ಧಿಗೆ ನೀಡಲಾಗುವುದು ಎಂದರು.
ಈ ಬಾರಿ ನೂತನವಾಗಿ ಪ್ರಪ್ರಥಮ ಬಾರಿಗೆ 21 ಜನಾಂಗಗಳನ್ನು ಒಳಗೊಂಡಂತೆ ಇದೇ ಮೇ ತಿಂಗಳಿನಲ್ಲಿ ಮೂರ್ನಾಡಿನಲ್ಲಿ ಕ್ರೀಡಾಕೂಟವನ್ನು ನಡೆಸಲಾಗುವುದೆಂದರಲ್ಲದೆ, ಕ್ರೀಡಾಕೂಟದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ, ಹಗ್ಗಜಗ್ಗಾಟ, ಮಹಿಳೆಯರ ಥ್ರೋಬಾಲ್ ಸ್ಪರ್ಧೆ ನಡೆಸುವಂತೆ ತೀರ್ಮಾನಿಸಲಾಗಿದ್ದು, ಒಮ್ಮತದ ಅಭಿಪ್ರಾಯದೊಂದಿಗೆ ಕ್ರೀಡಾಕೂಟ ನಡೆಸುವಲ್ಲಿ ಭಾಷಿಕ ಜನಾಂಗದ ಸಹಕಾರ ಅಗತ್ಯವಾಗಿ ಕೂಟಕ್ಕೆ ಸಿಗುವಂತಾಗಲಿ ಎಂದು ಮನವಿ ಮಾಡಿದರು.
ಮಹಾಸಭೆಯಲ್ಲಿ ಕೂಟದ ಅಭಿವೃದ್ಧಿಗಾಗಿ ಸದಸ್ಯರು ಸಲಹೆ, ಅಭಿಪ್ರಾಯಗಳನ್ನು ನೀಡಿದರು. ಅದರಂತೆ ಮುಂದಿನ ದಿನಗಳಲ್ಲಿ ಕೊಡವ ಭಾಷಿಕ ಸಮುದಾಯಗಳ ಪೊಮ್ಮಕ್ಕಡ ಕೂಟ ಹಾಗೂ ಯೂತ್ ವಿಂಗ್ ರಚಿಸುವಂತೆ ತೀರ್ಮಾನಿಸಲಾಯಿತು. ಜನಾಂಗಗಳ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಹ ಯಾವುದೇ ವಿಚಾರಗಳ ಬಗ್ಗೆ ಎಲ್ಲರೂ ಒಂದಾಗಿ, ಕೂಟದ ಮೂಲಕ ಹೋರಾಡುವಂತೆ ತೀರ್ಮಾನಿಸ ಲಾಯಿತು.
ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಅವರು ಮಾತನಾಡಿ, ಜನಾಂಗದ ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲದು, ಜನಾಂಗದ ಒಗ್ಗಟ್ಟೇ ರಾಜಕೀಯದ ಬೆಳವಣಿಗೆಗೆ ಪ್ರೇರಣೆಯಾಗಬೇಕೆಂದರು. ಸಮಾಜದಲ್ಲಿ ನಮ್ಮತನದಿಂದಲೇ ಗೌರವ, ಘನತೆ, ಸ್ಥಾನಮಾನ ಪಡೆದುಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಕೂಟದ ಉಪಾಧ್ಯಕ್ಷರಾದ ತೋರೆರ ಮುದ್ದಯ್ಯ, ಪೊನ್ನೀರ ಗಗನ್, ನೆರೆಯಂಡಮ್ಮಂಡ ಉಮಾಪ್ರಭು, ಸಹಕಾರ್ಯದರ್ಶಿ ಪಟ್ಟಚಾರೀರ ದಿನೇಶ್ ಕಾರ್ಯಪ್ಪ, ನಿರ್ದೇಶಕರುಗಳಾದ ಜೋಕಿರ ಜೀವನ್, ಪೊಟ್ಟಂಡ ಗಣೇಶ್, ವೇದಪಂಡ ಕಿರಣ್, ಪಾತಂಡ ಸಂತೋಷ್, ಬೀಕಚಂಡ ಬೆಳ್ಯಪ್ಪ, ಕಾಪಾಳ ಮಿಲನ್, ತೋರೆರ ಕಾಶಿ ಕಾರ್ಯಪ್ಪ, ಪೊನ್ನಜ್ಜಿರ ಕಿಶು ಭರತ್, ಕಣಿಯರ ಪ್ರಕಾಶ್, ಚೋಕಿರ ಭೀಮಯ್ಯ, ಮೇದರ ಚಂದ್ರ, ಅರಮನೆ ಪಾಲೆ ದೇವಯ್ಯ ಉಪಸ್ಥಿತರಿದ್ದರು. ಜನಾಂಗದ ನೋಂದಾಯಿತ ಸದಸ್ಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ಮಹಾಸಭೆಯ ಯಶಸ್ವಿಗೆ ಸಹಕರಿಸಿದ ಸವಿತಾ ಸಮಾಜದ ಅಧ್ಯಕ್ಷ ವೇದಪಂಡ ಬಿದ್ದಪ್ಪ ಅವರನ್ನು ಕೂಟದ ವತಿಯಿಂದ ಸನ್ಮಾನಿಸಿ. ಗೌರವಿಸಲಾಯಿತು.
ಸಮಾಜದ ಕಾರ್ಯದರ್ಶಿ ಮಹೇಶ್, ಸದಸ್ಯರಾದ ರಶ್ಮಿ, ಸುಮನ್ ಪ್ರಾರ್ಥಿಸಿದರು. ಕೂಟದ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಕಳೆದ ಸಾಲಿನ ಆಡಳಿತ ಮಂಡಳಿ ವರದಿ జాంజి ಪಡಿಜ್ಞಾರಂಡ ಪ್ರಭುಕುಮಾರ್ ನಿರೂಪಿಸಿ, ಲೆಕ್ಕಪತ್ರ ಮಂಡಿಸಿದರು.
ಜನಾಂಗಗಳಲ್ಲಿ ಮೃತಪಟ್ಟ ಸದಸ್ಯರಿಗೆ ಸಭೆಯಲ್ಲಿ ಸಂತಾಪ ಸೂಚಿಸಿ ಮೌನ ಆಚರಿಸಲಾಯಿತು. ಕೊನೆಯಲ್ಲಿ ಕೂಟದ ನಿರ್ದೇಶಕ ಕೋಲೆಯಂಡ ಗಿರೀಶ್ ವಂದಿಸಿದರು