
ತಿತಿಮತಿ, ಮಾ.12: ಎರಡು ವರ್ಷಗಳ ಹಿಂದೆ ಸಕಲೇಶಪುರದಲ್ಲಿ ಸೆರೆಹಿಡಿದ ಪುಂಡಾನೆಯನ್ನು ನೊಖ್ಯ ಗ್ರಾಮದಲ್ಲಿ ಬಿಡಲಾಯಿತು ಎಂಬ ಸಂಶಯ ಹಾಗೂ ಸತ್ಯವನ್ನು ಅರಣ್ಯ ಇಲಾಖೆಯು ಮುಚ್ಚಿಹಾಕಿದಂತಿದೆ ಎಂದು ನೋಕ್ಯ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕಳವಳ ವ್ಯಕ್ತಪಡಿಸಿರುವ ಗ್ರಾಮದ ಬೆಳೆಗಾರರಾದ ಚೆಪ್ಪುಡಿರ ಕಾರ್ಯಪ್ಪ ಅವರು, ಪೊನ್ನಂಪೇಟೆಯ ಪಟ್ಟಣದ ಮಧ್ಯ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದ ಆನೆ ಹಾಗೂ ನೊಖ್ಯ ಗ್ರಾಮದಲ್ಲಿ ಪ್ರತಿನಿತ್ಯ ತೋಟಕ್ಕೆ ಲಗ್ಗೆ ಇಡುತ್ತಿರುವ ಆನೆ ಒಂದೇ ಎಂಬುದು ಗ್ರಾಮಸ್ಥರ ವಾದ ಎಂದಿರುವ ಅವರು, ಈ ಕುಳ್ಳ ಆನೆಯನ್ನು ಸಕಲೇಶಪುರದಲ್ಲಿ ಸೆರೆ ಹಿಡಿಯಲಾಗಿತ್ತು. ಇದು ಪೊನ್ನಂಪೇಟೆ ತಾಲ್ಲೂಕಿಗೆ ಹೇಗೆ ಬಂತು ಎಂಬುದು ಸಂಶಯ ಎಂದಿದ್ದಾರೆ.
ಸೆರೆಹಿಡಿದ ಕಾಡಾನೆಯನ್ನು ಈ ರೀತಿ ಸ್ಥಳಾಂತರ ಮಾಡಿದರೆ ರೈತರು ಬಹಳಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಪ್ರತಿನಿತ್ಯ ರಾತ್ರಿ 7:00ಗೆ ಸರಿಯಾಗಿ ನೊಖ್ಯ ಗ್ರಾಮದಲ್ಲಿ ಪ್ರತ್ಯಕ್ಷಗೊಳ್ಳುತ್ತಿದೆ, ಬೆಳೆಗಳು ಹಾಗೂ ಸ್ಪಿಂಕ್ಲರ್ಪೈ ಪುಗಳನ್ನು ನಾಶ ಮಾಡುತ್ತಲೇ ಇದೆ. ಇದನ್ನು ಅರಣ್ಯ ಇಲಾಖೆ ಸೆರೆ ಹಿಡಿದರೆ ಬೇರೆ ಎಲ್ಲಿಗೆ ಬಿಡುವುದು ಎಂಬ ಪ್ರಶ್ನೆ ಕಾಡುತ್ತಿದೆ. ಈ ಕುಳ್ಳ ಆನೆಯು ಕಾಫಿ ಗಿಡದಷ್ಟೇ ಎತ್ತರವಿದ್ದು, ಕಂದಕ ಸ್ವಚ್ಛಗೊಳಿಸುವಾಗ ಇದು ತೋಟದಲ್ಲೇ ಬಿಡು ಬಿಟ್ಟಿತ್ತು. ಜನರಿದ್ದರೂ ಭಯವಿಲ್ಲದೆ ತೋಟಗಳಲ್ಲಿ ಹಾಗೂ ಊರಿನಲ್ಲಿ ಅಡ್ಡಾಡುತ್ತಿದೆ. ಇದನ್ನು ಆದಷ್ಟು ಬೇಗ ಸೆರೆಹಿಡಿದು ಸ್ಥಳಾಂತರಿಸಬೇಕು ಇಲ್ಲವೇ ಕೆಡ್ಡಕ್ಕೆ ಕಳಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂಞ್ಞಿರಾಮನಕಟ್ಟೆಯಲ್ಲಿ ಆನೆ ಹೋಗುವ ದಾರಿಯನ್ನು ಇನ್ನು ಕೂಡ ಭದ್ರಪಡಿಸಿಲ್ಲ. ಈ ಆನೆಯು ಪ್ರತಿನಿತ್ಯ ಬಂದು ನೊಖ್ಯ ಗ್ರಾಮಸ್ಥರಿಗೆ ತೊಂದರೆ ಕೊಡುತ್ತಿರುವುದು ತಪ್ಪುತಿಲ್ಲ. ಇದನ್ನು ಸರಿಪಡಿಸುವುದು ಯಾರ ಹೊಣೆ. ಈ ಯಡವಟ್ಟಿಗೆ ಕಾರಣಕರ್ತರಾರು ? ರೈತಾಪಿ ವರ್ಗದವರನ್ನು ಸದಾ ಕಾಡುತ್ತಿರುವ ಆನೆ ಮಾನವನ ಸಂಘರ್ಷಕ್ಕೆ ಕೊನೆ ಎಂದು ಚೆಪ್ಸಪುಡಿರ ಕಾರ್ಯಪ್ಪ ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.