ಸಂಪಾದಕೀಯ: ಜೂ.09: (nadubadenews) : ಕೊಡವ ಮತ್ತು ತುಳುವ ದಕ್ಷೀಣ ಭಾರತದ ನಾನಾ ಭಾಗಗಳಲ್ಲಿ ಪಾರಮ್ಯ ಮೆರೆದಿವೆ. ಸರ್ವ ಸ್ವತಂತ್ರ ಆದಿಭಾಷೆಗಳಾಗಿ ಹಿಗ್ಗಿವೆ. ಅಷ್ಟೇ ವೇಗವಾಗಿ ಆಧುನೀಕತೆಯ ಬಿರುಗಾಳಿಗೆ ಸಿಲುಕಿ ನಲುಗಿವೆ. ಇನ್ನೇನು ಕೆಲವೇ ವರ್ಷಗಳಲ್ಲಿ ಅಳಿದು ಹೋದಾವೂ ಎನ್ನುವಷ್ಟು ಸೊರಗಿವೆ. ಇವೆರಡೂ ಭಾಷೆಗಳು ಮತ್ತು ಅದನ್ನಾಡುವ ಜನರು ತಮ್ಮ ಭಾಷೆ, ನೆಲ ಮತ್ತು ಮೂಲ ಸಂಸ್ಕೃತಿಗಾಗಿ ಹೆಣಗುತ್ತಿವೆ. ಈ ಹೆಣಗಾಟ ತೊಳಲಾಟಕ್ಕೆ ಕಾರಣರಾದವರೂ ನಾವೇ ಎನ್ನುವ ಸತ್ಯವೂ ನಮಗೆ ತಿಳಿದಿದೆ.
ಆದರೆ ಈ ಎರಡೂ ಭಾಷೆಗಳನ್ನೊಮ್ಮೆ ನೋಡಿದರೆ ತುಳುವರಿಗಿರುವ ಭಾಷಾ ಪ್ರೇಮ, ಕೊಡವರಿಗೆ ಇಲ್ಲವೆಂದೇ ಹೇಳಬೇಕು. ಒಮ್ಮೆ ನಾವು ಕೊಡಗಿನ ಗಡಿಯನ್ನು ದಾಟಿ, ಕಡಲ್ಕರವಾಳಿಯ ಭಾಗ, ತುಳುನಾಡಿನ ಗರ್ಭಗುಡಿ, ದಕ್ಷಿಣಕನ್ನಡ ಮತ್ತು ಉಡುಪಿಯ ಪರಿಸರವನ್ನು ಹೊಕ್ಕರೆ, ಅಲ್ಲಿಯ ಬಿಸಿಯೇರಿದ ವಾತಾವರಣದಂತೇ, ಅವರ ಭಾಷಾ ಪ್ರೌಡಿಮೆಯ ಅಭಿಮಾನವೂ ಅನಾವರಣಗೊಳ್ಳುತ್ತದೆ. ಅಬಾಲವೃದ್ದರಾದಿಯಾಗಿ ಸರ್ವರ ಬಾಯಿಯಲ್ಲೂ ಮುತ್ತಿನಂತೆ ಉದುರುವ ತುಳು ಭಾಷಾಘಮಲು, ತುಳು ಅರಿಯದ ನನ್ನಂತವರನ್ನೂ ತುಳುವಿನಲ್ಲೇ ಮಾತಾಡುವಂತೆ ತನ್ನಷ್ಟಕ್ಕೇ ಪ್ರೆರೇಪಿಸುತ್ತದಾದೆ. ತುಳುವಿನ ಬಗ್ಗೆ ಅಭಿಮಾನ ಮೂಡಿಸುತ್ತದೆ.
ತುಳುವರ ಈ ಭಾಷಾ ಪ್ರೇಮಕ್ಕೆ ಶಹಬ್ಬಾಸ್ ಹೇಳದಿದ್ದರೆ, ಅವರಂತೆ ಅಳಿವಿನಂಚಿನಲ್ಲಿರುವ ಕೊಡವನಾಗಿ ನನ್ನ ಭಾಷೆಗೂ ನಾ ಮಾಡಿದ ಅಪಮಾನವಾದೀತು.
ತುಳುವರಿಗೊಮ್ಮೆ ಕೊಡವರನ್ನು ಹೋಲಿಸಿದರೆ, ಅವರಿಗಿರುವ ಮಾತೃಭಾಷಾ ಪ್ರೇಮ, ಕೊಡವರಿಗೆ ತೀರಾತಿ ತೀರ ಕಡಿಮೆ. ಇತಿಹಾಸದ ಪುಟಗಳನ್ನು ಅವಲೋಕಿಸಿದರೆ, ತುಳು ಭಾಷೆ ಮತ್ತು ಸಂಸ್ಕೃತಿಯಮೇಲಾದ ಆಧುನೀಕತೆಯ ಪ್ರಹಾರ ಅಷ್ಟಿಷ್ಟಲ್ಲ. ಸ್ವಾತಂತ್ರ ಪೂರ್ವದಲ್ಲಂತೂ ಆಧುನೀಕತೆಯ ಬಕಾಸುರ ನಾನಾ ಕೋನಗಳಿಂದ ಸೈತಾನನಂತೇ ತುಳು ನಾಡಿನ ಭಾಷೆ ಮತ್ತು ಸಂಸಕೃತಿಯನ್ನು ಕಾಡಿ ಕೆಡುಹಿದೆ. ಆದರೂ ತುಳುವರು ಇಂದಿಗೂ ತನ್ನ ಮೂಲ ಸೊಗಡನ್ನು ಬಿಡಲಿಲ್ಲ. ಭಾಷಾ ಪ್ರೇಮದಿಂದ ವಿಚಲಿತರಾಗಲಿಲ್ಲ. ಒಂದಷ್ಟು ಭಾಗ ಅದರಲ್ಲೂ ಶ್ರೀಮಂತ ವರ್ಗ ಪಾಶ್ಚಿಮಾತ್ಯ ಮತ್ತು ಇಂಗ್ಲಿಷ್ ಸಂಸ್ಕೃತಿಗೆ ಮರುಳಾಗಿದೆ. ಆದರೂ, ಆ ವರ್ಗವನ್ನು ತುಳುನಾಡಿನ ಬಹುಪಾಲು ಜನ, ಜಾತಿ ಧರ್ಮಗಳ ಎಲ್ಲೆಯನ್ನ ಮೀರಿ ಹೊಸಕಿ ಹಾಕಿವೆ. ಮಣ್ಣಿನ ಸೊಗಡೆಂಬ ಗುರಾಣಿ ಆಧುನೀಕತೆಯ ಪ್ರಹಾರವನ್ನು ತಡೆಯುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದು. ಆದರೂ ತುಳುವಿಗೆ ಸಿಗಬೇಕಾದ ಮಾನ್ಯತೆ, ಗೌರವ ಸರ್ಕಾರಗಳಿಂದ ದೊರಕಿಲ್ಲ ಎನ್ನುವುದು ವಿಪರ್ಯಾಸ.
ಆದರೆ ಕೊಡವ ನಾಡಿನ ಪರಿಸ್ಥಿತಿಯೇ ವಿಭಿನ್ನ, ತುಳುವರಂತೇ ನಮ್ಮ ಭಾಷೆ ಸಂಸ್ಕೃತಿಯ ಮೇಲೂ ಆಧುನಿಕ ಪ್ರಭಾವಳಿಯ ದಾಳಿ ನಡೆದಿದೆ. ಅದನ್ನು ಪ್ರತಿಭಟಿಸಿದ್ದೇವೆ ದಿಕ್ಕರಿಸಿದ್ದೇವೆ ನಿಜ, ಆದರೆ ಅದರೊಂದಿಗೆ ನಾವೂ ಕಳೆದು ಹೊದದ್ದು ಮಾತ್ರ ನಾವು ಅರಿಯಲೇ ಇಲ್ಲ. ಕೊಡವರಿಗೆ ನಮ್ಮ ಭಾಷೆ ಸಂಸ್ಕೃತಿಯ ಆಚರಣೆ ಅನುಸರಣೆಯ ಕುರಿತು ಹೆಮ್ಮೆ ಇದೆ. ಆ ಹೆಮ್ಮೆಯ ಹಿರಿಮೆ ಎಷ್ಟಿದೆ ಎಂದರೆ, ಅಂತಾರಾಷ್ಟ್ರೀಯ ಮಾತೃಭಾಷಾ ದಿನದಂದೂ, ಇಂಗ್ಲಿಷ್ನಲ್ಲಿಯೆ ಶುಭಾಶಯ ಕೋರುವಷ್ಟು, ವಾಹನಗಳ ಮೇಲೆ, ದೇಹದ ಭಾಗಗಳಲ್ಲಿಯೂ ಪ್ರೌಡ್ ಟು ಬಿ ಎ ಕೊಡವ ಎಂದು ಇಂಗ್ಲಿಷ್ನಲ್ಲಿಯೇ ಬರೆದು ಕೊಳ್ಳುವಷ್ಟು. ಆದರೆ ಅದರ ಆಚರಣೆ ಮಾತ್ರ ಅಸ್ಟಕಷ್ಟೆ. ಕಾರಣ ಆಧುನೀಕತೆಯ ಪ್ರಭಾವದ ಜೊತೆಗೆ, ದೊಡ್ಡಸ್ತೀಕೆ ತೋರಿಸುವ ದಾವಂತವನ್ನೂ ನಾವು ಅಲ್ಲಗಳೆಯುವಂತಿಲ್ಲ.
ಕೊಡವಾರಾದ ನಾವು ತುಳುವರನ್ನ ಅನುಕರಿಸಿ ಅನುಸರಿಸಬೇಕಾದ ಅನಿವಾರ್ಯ ಅವಶ್ಯಕತೆ ಎರಡೂ ಇದೆ. ನಾವಂತೂ ಸ್ವಂತ ಬುದ್ಧಿಯಿಂದ ಬದಲಾದವರು ನಮ್ಮ ತನವನ್ನ ಆಸ್ವಾದಿಸಿ ಆಚರಿಸಿದವರಲ್ಲ. ಕನಿಷ್ಟ ಅವರನ್ನ ನೋಡಿಯಾದರೂ ನಮ್ಮ ತನವನ್ನ ಪಾಲಿಸೋಣ. ನೈಜ ತುಳುವರಂತೇ, ನೈಜ ಕೊಡವರಾಗೋಣ.
ಜಾತಿ, ಧರ್ಮಾತೀತವಾಗಿ ಬಳಸಲ್ಪಡುವ ತುಳುಭಾಷೆಗೇ ಸಿಗಬೇಕಾದ ಮನ್ನಣೆ ದರೊಕಬೇಕಾದ ಮಾನ್ಯತೆ ದೊರೆಯಲಿಲ್ಲ. ಇನ್ನು ನಾವೇ ಬಳಸದ ಕೊಡವ ಭಾಷೆಗೆ, ಬೇರೆಯವರು ಕೊಡವ ತಕ್ಕ್ನಲ್ಲಿ ಮಾತನಾಡಿದರೂ ನಾವೇ ದಾಟಿ ಇತರ ಭಾಷೆಯಲ್ಲಿ ಮಾತನಾಡುವಾಗ, ಸರ್ಕಾರಗಳು ಗಮನಿಸಬಹುದೇ…?
ಒಂದು ವಾಸ್ತವ ಸತ್ಯವನ್ನು ನಾವಿಬ್ಬರೂ ಎಂದರೆ ಕೊಡವ ಮತ್ತು ತುಳುವರು ಅರಿಯಬೇಕಿದೆ. ಭಾಷೆಯೇ ಇಲ್ಲದಿದ್ದರೆ ಯಾವ ಆಚರಣೆ ಸಂಪ್ರದಾಯ ಆಡಂಬರಗಳೂ ಉಳಿಯುವಿದಿಲ್ಲ ಎಂಬ ವಾಸ್ತವತೆಯನ್ನು ಅರಿಯೋಣ, ಎಲ್ಲಾ ಭಾಷೆಗಳೂ ಬೇಕು ನಮ್ಮ ಮಾತೃಭಾಷೆಯಷ್ಟೇ ಆಚರಣೆಗೆ ಸಾಕು….
ಇಷ್ಟೆಲ್ಲ ಬರೆದವರೂ ಬಳಸಿದ್ದು ಕನ್ನಡ ಭಾಷೆಯೇ ಎನ್ನು ಪ್ರಶ್ನೆಯಾದರೆ, ಕನ್ನಡ ನಮ್ಮ ನಾಡಿನ ಆಡುಭಾಷೆ, ಆಡಳಿತ ಭಾಷೆ, ಇಲ್ಲಿ ತುಳುವ ಮತ್ತು ಕೊಡವರಿಬ್ಬರಿಗೂ ವಿಷಯದ ಆಳ ಅರಿಯಬೇಕಾಗಿರುವುದರಿಂದ ಸಂವಹನ ಭಾಷೆಯಾಗಿ ಕನ್ನಡವೇ ಬೇಕು. ಆದರೆ ನಮ್ಮ ಮಾತೃಭಾಷಾ ಪ್ರೇಮ ಎಂದೂ ತಗ್ಗದು.