
ಮಡಿಕೇರಿ, ಮಾ.16:- ಮೈಸೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಡಿಕೇರಿಯಿಂದ ಸಂಪಾ ಜೆವರೆಗೆ 21 ಸ್ಥಳಗಳಲ್ಲಿ ತಡೆಗೋಡೆ ನಿರ್ಮಿ ಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿ ವಾಲಯ ಅನುಮೋದನೆ ನೀಡಿದ್ದು, ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದೆ.
ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಡಿಕೇರಿಯಿಂದ ಸಂಪಾಜೆವರೆಗೆ ಮಳೆಗಾಲದಲ್ಲಿ ಭೂಕುಸಿತದ ಅಪಾಯವಿರುವ 21 ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಬೇಕೆಂಬ ಎಂಜಿನಿಯರಿಂಗ್ ವಿಭಾಗದ ಕೋರಿಕೆಗೆ, ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದ್ದು, 94 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಿದೆ. ಮಡಿಕೇರಿಯ ಸಂಪಿಗೆಕಟ್ಟೆ ಸಮೀಪದ ಅಪಾಯಕಾರಿ ತಿರುವುಗಳ ಆಗಲೀಕರಣ ಸೇರಿದಂತೆ, ಡಿಸಿ ಕಚೇರಿ ಎದುರು (ಎಡಭಾಗ), ಕರ್ತೋಜಿ ಗುಡ್ಡ ಕುಸಿತ ಸ್ಥಳ, ಪಯಸ್ವಿನಿ ನದಿ ಕಣಿವೆ ಭಾಗ, ದೇವರಕೊಲ್ಲಿ ಬಳಿ, 2ನೇ ಮೊಣ್ಣಂಗೇರಿ ಸೇರಿದಂತೆ ಒಟ್ಟು 21 ಕಡೆಗಳಲ್ಲಿ ತಡೆಗೋಡೆ ನಿರ್ಮಾಣವಾಗಲಿದೆ. ಈ ಸಂಬಂಧ 2021-22ನೇ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿ ಮಡಿಕೇರಿ ಉಪ ವಿಭಾಗದಿಂದ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಕೇಂದ್ರದಿಂದ ಈಗ ಅನುಮೋದನೆ ಸಿಕ್ಕಿದೆ. 2018ರಲ್ಲಿ ಸಂಭವಿಸಿದ ಭಾರಿ ಭೂಕುಸಿತಗಳ ಬಳಿಕ 2019ರಲ್ಲಿ ಮಡಿಕೇರಿ-ಸಂಪಾಜೆ ಘಾಟಿ ರಸ್ತೆ (ರಾಷ್ಟ್ರೀಯ ಹೆದ್ದಾರಿ275)ಯ ಭೂಕುಸಿತ ಸ್ಥಳಗಳು.
ಈ ಸಂಬಂಧ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಬಳಿಕ ಕಾಮಗಾರಿ ಆರಂಭವಾಗಲಿದೆ. ಈ ತಡೆ ಗೋಡೆಗಳ ನಿರ್ಮಾಣದಿಂದ ಸಂಪಾಜೆ ಘಾಟಿ ರಸ್ತೆಯಲ್ಲಿ ಪ್ರತಿ ಮಳೆಗಾಲ ದಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಸಮಸ್ಯೆಗೆ ಬಹುತೇಕ ಪರಿಹಾರ ಸಿಗಲಿದೆ.
ಪ್ರತಿ ವರ್ಷ ಪ್ರತಿ ಮಳೆಗಾಲದಲ್ಲಿ ಮಳೆ ಹೆಚ್ಚಾದಾಗ ಸಂಪಾಚೆ ಘಾಟಿ ರಸ್ತೆಯಲ್ಲಿ ಸಂಪರ್ಕ ಕಡಿತ ಭೂಕುಸಿತಗಳು ಸಂಭವಿಸುತ್ತಿವೆ. ಕೆಲವು ಸಲ ರಸ್ತೆಯೇ ಕೊಚ್ಚಿ ಹೋಗಿದ್ದು, ಹಲವು ದಿನಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿದೆ. ನಿರಂತರ ಭೂಕುಸಿತದ ಅಪಾಯವಿರುವ ಕಾರಣ ಹೆಚ್ಚು ಮಳೆಯಿದ್ದಾಗ ಪ್ರತಿ ಸಲ ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಹಲವು ಸಲ ರಸ್ತೆಯನ್ನೇ ಸಂಪೂರ್ಣ ಬಂದ್ ಮಾಡಿದ ಉದಾಹರಣೆಗಳಿವೆ. ಈ ತಡೆಗೋಡೆಗಳ ನಿರ್ಮಾಣದಿಂದ ಈ ಸಮಸ್ಯೆಗೆ ಬಹುತೇಕ ಪರಿಹಾರ ಸಿಗುವ ನಿರೀಕ್ಷೆಯಿದೆ.
ಈ ಹಿಂದೆ ಈ ಭಾಗದಲ್ಲಿ ಒಟ್ಟು 48 ಕೋಟಿ ರೂ. ವೆಚ್ಚದಲ್ಲಿ 18 ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಬಳಿಕ ನಿರಂತರ ಭೂಕುಸಿತಗಳ ಸಂಬಂಧ ಅಧ್ಯಯನ ನಡೆಸಿದ ತಜ್ಞರು ಹಾಗೂ ಎಂಜಿನಿಯರ್ಗಳ ತಂಡ ಇನ್ನೂ 21 ಸೂಕ್ಷ್ಮ ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಲು ಶಿಫಾರಸು ಮಾಡಿತ್ತು.