
ಹೊದ್ದೂರು, ಮಾ.17: ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೂಕು ಹೊದ್ದೂರು ಗ್ರಾಮದಲ್ಲಿ ರೈತರ ಮೇಲೆ ನಿರಂತರ ದೌರ್ಜನ್ಯ ನಡೆಯುತಿದ್ದು, ತಕ್ಷಣ ಸೂಕ್ತ ಕಾನೂನು ರೀತಯ ಕ್ರ ಕೈಗೊಳ್ಳದಿದ್ದರೇ ರೈತರು ಕಾನೂನು ಕೈಗೆತ್ತಿಕೋಳ್ಳಬೇಕಾಗಬಹುದು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರೂ, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಕಾಡ್ಯಮಾಡ ಮನು ಸೋಮಯ್ಯ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಹೊದ್ದೂರಿನಲ್ಲಿ ರೈತರೊಂದಿಗೆ ಸಭೆ ನೆಡೆಸಿದ ರೈತ ಸಂಘದ ಮುಖಂಡರು, ಹೊದ್ದೂರು ಗ್ರಾಮದಲ್ಲಿ ನೂರಾರು ವರ್ಷಗಳಿಂದ ವಾಸಾವಿದ್ದುಕೊಂಡು ಬರುತ್ತಿರುವ ರೈತ ಕುಟುಂಬಗಳು ಮತ್ತು ಅವರಿಗೆ ಸೇರಿದ ತೋಟಗಳಿಗೆ, ಬೇರೆಯವರು ಅನಧಿಕೃತವಾಗಿ ಪ್ರವೇಶ ಮಾಡಿ, ಶೆಡ್ ನಿರ್ಮಿಸುವುದು, ತೋಟಗಳಿಗೆ ತೆರಳಲು ರಸೆ ಸಂಚಾರಕ್ಕೆ ತಡೆ ಮಾಡುವುದು, ಗ್ರಾಮ ಪಂಚಾಯಿತಿ ಅನುದಾನಗಳಲ್ಲಿ ತಾರತಮ್ಯ ಮಾಡುವುದು ಹೀಗೆ ಹಲವಾರು ರೀತಿಯಲ್ಲಿ ದೌರ್ಜನ್ಯಕ್ಕೊಳಪಡುತ್ತಿದ್ದಾರೆ. ಈ ಕುರಿತು ಸಾಕಷ್ಟು ಬಾರಿ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಮಾಡಲಾಗಿಯೂ ಸಹ, ಯಾವುದೇ ಸಕಾರಾತ್ಮಕ ಪರಿಹಾರ ದೊರಕದೇ ಇರುವುದರಿಂದ, ರೈತ ಸಂಘದ ಮುಖಾಂತರ ಪ್ರತಿಭಟನೆ ಮಾಡುವ ನಿರ್ಧಾರವನ್ನು ಕೈಗೊಳ್ಳಲೇಬೇಕಾಗಿ ಬಂದಿರುತ್ತದೆ ಬಂದಿರುತ್ತದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಈ ಸಂಧರ್ಭ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು, ಮುಂದಿನ 15 ದಿನಗಳೊಳಗಾಗಿ ಕೃಷಿಕರ ಜಮೀನಿನಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿರುವವರನ್ನು ತೆರವುಗೊಳಿಸಬೇಕು, ರೈತರು ಮನೆ ಖಾತೆ ಬದಲಾವಣೆ, ಹೋಂಸ್ಟೇ ದೃಢೀಕರಣ ಇತ್ಯಾದಿ ದಾಖಲೆಗಳಿಗೆಂದು ಗ್ರಾಮ ಪಂಚಾಯಿತಿಗೆ ತೆರಳಿದರೆ ಗ್ರಾಮ ಪಂಚಾಯಿತಿಯವರು ನಿಮ್ಮ ದಾಖಲೆ ಸರಿಯಿರುವುದಿಲ್ಲವೆಂದು 30 ರಿಂದ 40 ಸಾವಿರ ಲಂಚಕ್ಕೆ ಬೇಡಿಕೆಯಿಡುತ್ತಿದ್ದು, ಹೊದ್ದೂರು ಗ್ರಾಮ ಪಂಚಾಯಿತಿಯ ಭ್ರಷ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರನ್ನು ಕೂಡಲೇ ವರ್ಗಾಯಿಸಬೇಕು,
ನ್ಯಾಯ ಕೊಡಿಸುವ ಸ್ಥಾನದಲ್ಲಿ ಕುಳಿತು ಏಕಾಏಕಿ 30-40ವರ್ಷಗಳಿಂದ ಫಸಲು ಕೊಡುತ್ತಿರುವ ತೋಟಕ್ಕೆ ಅಕ್ರಮವಾಗಿ ನುಗ್ಗಿ ಶೆಡ್ ನಿರ್ಮಿಸಿ ಗೂಂಡಾಗಿರಿ ಮಾಡುತ್ತಾ ಅನ್ಯಾಯವೆಸಗುತ್ತಿರುವ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಕೆ.ಮೊಣ್ಣಪ್ಪ ನವರನ್ನು ಕೂಡಲೇ ಅಧಿಕಾರ ಸ್ಥಾನದಿಂದ ವಜಾಗೊಳಿಸುವುದು. ಗ್ರಾಮ ಪಂಚಾಯಿತಿಗೆ ಬರುವ ಅನುದಾನದಲ್ಲಿ ಕೃಷಿಕರಿಗಾಗುವ ತಾರತಮ್ಯ ಧೋರಣೆಯನ್ನು ಸರಿಪಡಿಸಬೇಕು. ಹೊದ್ದೂರು ಗ್ರಾಮ ಪಂಚಾಯಿತಿಯ ದನಕರುಗಳ ಸಂಖ್ಯೆಗನುಗುಣವಾಗಿ ಗೋಮಾಳ ಜಮೀನನ್ನು ಮಂಜೂರು ಮಾಡುವುದು. ರೈತರ ಕೃಷಿ ಜಮೀನಿಗೆ ಯಂತ್ರೋಪಕರಣಗಳ ಸಾಗಾಟಕ್ಕೆ ರಸ್ತೆ ನಿರ್ಮಾಣ ಮಾಡಿಕೊಡಬೇಕು. ನೂರಾರು ವರ್ಷಗಳಿಂದ ನೆಲೆನಿಂತಿರುವ ಕೃಷಿಕರ ಮನೆಗಳಿಗೆ ತೆರಳಲು ರಸ್ತೆ ಸಂಪರ್ಕ ಕಲ್ಪಿಸಬೇಕು. ಹೊದ್ದೂರು ಗ್ರಾಮದಲ್ಲಿ ಈಗಾಗಲೇ 9 ಕಾಲೋನಿಗಳಿದ್ದು, 2000 ಜನ ಸಂಖ್ಯೆ ಹೊಂದಿದ್ದು ಇನ್ನು ಮುಂದೆ ನಿವೇಶನ ರಹಿತರಿಗೆ ನಿವೇಶನ ಕಾಯ್ದಿರಿಸದಿರುವಂತೆ ಕ್ರಮವಹಿಸಬೇಕು.
ಈಗಾಗಲೇ ಹೊದ್ದೂರು ಗ್ರಾಮದಲ್ಲಿ ನಿವೇಶನ ರಹಿತರಿಗೆ 30 ರಿಂದ 40 ಎಕ್ರೆ ಮಂಜೂರು ಮಾಡಿದ್ದು, ಇದರಲ್ಲಿ ನಿಯಮಕ್ಕಿಂತ ಹೆಚ್ಚಿನ ನಿವೇಶನ ಮಂಜೂರಾಗಿರುವ ದಾಖಲೆಗಳಿವೆ. ಅಲ್ಲದೆ ಬಹುಪಾಲು ಕಾರ್ಮಿಕರು ಹೊರ ರಾಜ್ಯದವರಾಗಿದ್ದು, ಅವರಿಗೆ ಇಲ್ಲೆ ನಿವೇಶನ ನೀಡುತ್ತಿರುವ ಔಚಿತ್ಯವೇನು ಎಂದು ಪ್ರಶ್ನಿಸಿದರು. ಇದರಲ್ಲಿ 7 ಏಕ್ರೆ ಜಮೀನನ್ನು ಸ್ಮಶಾನದ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿರುತ್ತದೆ. ಆದರೆ ರೈತರ ದನ ಕರುಗಳಿಗೆ ಮೇಯಲು ಗೋಮಾಳ ಜಮೀನನ್ನು ಕಾಯ್ದಿರಿಸಲು ಮೀಸಲಿಟ್ಟ ಜಾಗವನ್ನು ಸಹ ನಿವೇಶನ ರಹಿತರಿಗೆ ನೀಡಿದ್ದು, ಇದರಿಂದ ರೈತರಿಗೆ ಅನ್ಯಾಯವಾಗುತ್ತಿರುತ್ತದೆ. ರೈತರ ಜಮೀನಿಗೆ ನುಗ್ಗಿ ಗೂಂಡಾಗಿರಿ ನಡೆಸಿದವರನ್ನು 15 ದಿವಸಗಳಲ್ಲಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಮುಂದು ವರೆದು ಮಾತನಾಡಿದ ಅವರು, ಈ ಸಂಭಂದಿತ ಮನವಿಯನ್ನು ಇಂದು, ಮಡಿಕೇರಿ ತಹಶಿಲ್ದಾರರಾದ ಪ್ರವೀಣ್, ಹೊದ್ದೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹಂಸ ಕೊಟ್ಟಮುಡಿ, ಅವರುಗಳ ಮೂಲಕ ಮಾನ್ಯ ಶಾಸಕರು, ಮಡಿಕೇರಿ ವಿಧಾನಸಭಾ ಕ್ಷೇತ್ರ ಮಡಿಕೇರಿ ರವರಿಗೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು, ಕೊಡಗು ಜಿಲ್ಲೆ, ಮಡಿಕೇರಿ ರವರಿಗೆ, ಉಪವಿಭಾಗಾಧಿಕಾರಿಯವರು, ಮಡಿಕೇರಿ ಉಪವಿಭಾಗ, ಮಡಿಕೇರಿ ರವರಿಗೆ., ತಹಶೀಲ್ದಾರರು ಮಡಿಕೇರಿ ತಾಲ್ಲೂಕು ಮಡಿಕೇರಿ ರವರಿಗೆ, ಕಾರ್ಯ ನಿರ್ವಾಹಕ ಅಧಿಕಾರಿಯವರು, ತಾಲ್ಲೂಕು ಪಂಚಾಯತ್ ಮಡಿಕೇರಿ ತಾಲ್ಲೂಕು ಮಡಿಕೇರಿರವರಿಗೆ, ಅಧ್ಯಕ್ಷರು, ಗ್ರಾಮ ಪಂಚಾಯಿತಿ ಹೊದ್ದೂರು ಮಡಿಕೇರಿ ತಾಲ್ಲೂಕು ರವರಿಗೆ ಸಲ್ಲಿಸಲಾಗಿದೆ. ಈ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ರೈತರ ಪಿತ್ರಾರ್ಜಿತ ಜಮೀನುಗಳಲ್ಲಿ ಹಾದು ಹೋಗುತ್ತಿರುವ ಎಲ್ಲಾ ಸಾರ್ವಜನಿಕ ರಸ್ತೆಗಳನ್ನು ಸರ್ವೆ ನಡೆಸಿ ಮುಟ್ಟುಗೋಲು ಹಾಕಿಕೊಂಡು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುವುದು. ಅಲ್ಲದೆ, ರಾಜ್ಯವ್ಯಾಪಿ ಈ ವಿಚಾರದ ಕುರಿತು ರೈತ ಚಳುವಳಿಗೆ ರಾಜ್ಯ ರೈತಸಂಘದ ಮೂಲಕ ಕರೆ ಕೊಡುವುದಲ್ಲದೆ, ರಾಜ್ಯವ್ಯಾಪಿ ರೈತರನ್ನು ಕರೆತಂದು ಹೊದ್ದೂರಿನಲ್ಲಿ ಬೃಹತ್ ಹರತಾಳ ನಡೆಸುವುದಾಗಿ ಹೇಳಿದರು.
ಈ ವಿಚಾರವಾಗಿ ಮತ್ತೊಮ್ಮೆ ಮಾನ್ಯ ಶಾಸಕರ ಸೇರಿದಂತೆ ಎಲ್ಲಾ ಹಾಲೀ ಮಾಜಿ ಜನಪರತಿನಿಧಿಗಳು, ರೈತ ಮುಖಂಡರೊಂದಿಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಲು ಪ್ರಯತ್ನಿಸಲಾಗುವುದು. ಅದೂ ಫಲ ಕೊಡದಿದ್ದರೆ ಈಗಾಗಗಲೇ ರೂಪುರೇಷೆ ಸಿದ್ದಪಡಿಸಿರುವಂತೆ ಉಗ್ರ ಹೋರಾಟ ನಡೆಸಿ, ನಮ್ಮ ಹಕ್ಕನ್ನು ಪಡೆಯಲಾಗುವುದು ಎಂದು ಮನು ಸೋಮಯ್ಯ ಹೇಳಿದರು.
ಸಭೆಯಲ್ಲಿ ಮಾಜೀ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ರೈತ ಸಂಘದ ಕಾರ್ಯದರ್ಶಿ ಚೆಟ್ರಮಾಡ ಸುಜಯ್, ಸಂಚಾಲಕ ಪುಚ್ಚಿಮಡ ಸುಭಾಷ್, ಮುಖಂಡರಾದ ಚೆಪ್ಪುಡಿರ, ಕಾರ್ಯಪ್ಪ, ದಿನೇಶ್ ಸೋಮವಾರಪೇಟೆ, ರಾಜೇಂದ್ರ ಹೊದ್ದೂರು ಗ್ರಾಮ ಅಧ್ಯಕ್ಷ ಚೌರಿರ ಜಗತ್ ತಿಮ್ಮಯ್ಯ, ಮಾಜೀ ತಾಲೂಕು ಪಂಚಾಯತಿ ಅಧ್ಯಕ್ಷೆ ತೆಕ್ಕೆಡೆ ಶೋಭಾ ಮೋಹನ್, ಗ್ರಾಮಸ್ಥರು, ರೈತ ಸಂಘದ ಸದಸ್ಯರು ಹಾಜರಿದ್ದರು.