
ವಿರಾಜಪೇಟೆ.ಜೂ.02(Nadubade News): ವಿರಾಜಪೇಟೆಯ ಮಾನ್ಯ ಶಾಸಕರ ಮನೆಯಲ್ಲಿ, ವಿರಾಜಪೇಟೆ ಪುರಸಭೆಯ ಪೌರಕಾರ್ಮಿಕರಿಗಾಗಿ ಏರ್ಪಡಿಸಿದ ವಿಶೇಷ ಔತಣಕೂಟದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಪೌರಕಾರ್ಮಿಕರಿಗೆ ಪ್ರೀತಿಯಿಂದ ತಾವೇ ಸ್ವತಃ ಊಟ ಬಡಿಸಿದರು.
ಪೌರ ಕಾರ್ಮಿಕರ ಕಷ್ಟ ಸುಖಗಳನ್ನು ವಿಚಾರಿಸುತ್ತ ಅವರ ಅಹವಾಲುಗಳನ್ನು ಆಲಿಸುತ್ತಾ ಮಾತನಾಡಿದ ಮಾನ್ಯ ಶಾಸಕರು, ಪುರಸಭೆ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ಆರೋಗ್ಯದಿಂದಿರಲು ಮತ್ತು ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಪ್ರದೇಶಗಳು ಸ್ವಚ್ಛತೆಯಿಂದ ಇರಲು ಈ ಪೌರಕಾರ್ಮಿಕರ ಕೊಡುಗೆ ಬಹುದೊಡ್ಡದಾಗಿದೆ. ಅವರುಗಳ ಕೊಡುಗೆಯನ್ನು ಸದಾ ಸ್ಮರಿಸುತ್ತಾ, ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಪುರಸಭೆ ವ್ಯಾಪ್ತಿಯ ಸ್ವಚ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕರ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಮಾನ್ಯ ಶಾಸಕರು, ಪೌರಕಾರ್ಮಿಕರ ಹಿತದೃಷ್ಟಿಯಿಂದ ತಾನು ಸರ್ಕಾರದೊಂದಿಗೆ ಚರ್ಚಿಸಿ ಹಲವಾರು ಕಾರ್ಯಕ್ರಮಗಳನ್ನು ತರಲು ಬದ್ಧನಾಗಿದ್ದು, ಪೌರ ಕಾರ್ಮಿಕರು ಸಹ ಅನಾವಶ್ಯಕ ಮಾತುಗಳಿಗೆ ಕಿವಿಗೊಡದೆ, ಪುರಸಭೆ ವ್ಯಾಪ್ತಿಯ ಸ್ವಚ್ಛತೆ ಕಾಪಾಡುವಲ್ಲಿ ಮತ್ತಷ್ಟು ಮುತುವರ್ಜಿ ವಹಿಸಿ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಪುರಸಭೆಯ ಪೌರಕಾರ್ಮಿಕರು ಮಾನ್ಯ ಶಾಸಕರೊಂದಿಗೆ ಅತ್ಯಂತ ಆತ್ಮೀಯವಾಗಿ ಮಾತನಾಡುತ್ತಾ, ಹಿಂದೆಂದೂ ಯಾರು ಸಹ ತಮ್ಮನ್ನು ಇಷ್ಟು ಗೌರವಯುತವಾಗಿ ನಡೆಸಿಕೊಂಡಿರಲಿಲ್ಲ. ಮಾನ್ಯ ಪೊನ್ನಣ್ಣನವರು ಶಾಸಕರಾಗಿ ಬಂದಮೇಲೆ ತಮಗೆ ಬೇಕಾದ ಸವಲತ್ತುಗಳನ್ನು ಕಲ್ಪಿಸಿ ಕೊಡುವುದು ಮಾತ್ರವಲ್ಲ, ನಮಗೆ ಕೆಲಸ ಮಾಡಲು ಹುರಿದುಂಬಿಸುವ ಅವರೊಂದಿಗೆ ತಾವು ಸದಾ ಇರುವುದಾಗಿ ತಮ್ಮ ಮನದಾಳದ ಮಾತನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷರು ಮತ್ತು ಕಾಂಗ್ರೆಸ್ ಸದಸ್ಯರುಗಳು, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.