ಬೆಂಗಳೂರು, ಮಾ.21:- ಕನ್ನಡ ಚಿತ್ರರಂಘ ಕಂಡ ಯಶಸ್ವಿ ಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಎ.ಟಿ. ರಘು ಎಂದೇ ಖ್ಯಾತರಾಗಿದ್ದ ಆಪಾಡಂಡ ರಘು ಅವರ ಅಗಲಿಕೆಗೆ ಕೊಡವಾಮೆರ ಕೊಂಡಾಟ ಸಂಘಟನೆ ತೀವ್ರ ಸಂತಾಪ ವ್ಯಕ್ತ ಪಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಕನ್ನಡ ಚಿತ್ರರಂಗದ ದೈತ್ಯ ನಾಯಕ ಅಂಬರೀಶ್ ಅವರಿಗೆ ಸುಮಾರು 27 ಚಿತ್ರಗಳನ್ನು ನಿರ್ದೇಶಿಸಿದ್ದ, ಒಟ್ಟು ಸುಮಾರು 55 ಚಿತ್ರಗಳ ನಿರ್ದೇಶನ ಮಾಡಿ, ಹಲವು ಚಿತ್ರಗಳಲ್ಲಿ ನಟಿಸಿದ್ದೂ ಅಲ್ಲದೆ, ಸ್ವತಃ ತಾವೇ ನಿರ್ಮಾಣವನ್ನೂ ಮಾಡಿ ಸೈ ಎನಿಸಿಕೊಂಡಿದ್ದ ಆಪಾಡಂಡ ಟಿ.ರಘು ಅವರು ನಂಗ ಕೊಡವ, ಜಮ್ಮ ಕೊಡವ, ಗೆಜ್ಜೆತಂಡ್ ಸೇರಿದಂತೆ ಹಲವು ಕೊಡವ ಧಾರವಾಹಿಗಳನ್ನೂ ಮಾಡಿದ್ದರು.
ಪ್ರತಿಷ್ಠಿತ ಪುಟ್ಟಣ ಕಣಗಾಲ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಬಿರುದು ಬಾವಲಿಗಳಿಗೆ ಭಾಜನರಾಗಿದ್ದ, ಎ.ಟಿ. ರಘು ಅವರು ಧೀರ್ಗಕಾಲದ ಅನಾರೋಗ್ಯದಿಂದ ಇಂದು ನಿಧನರಾಗಿದ್ದು, ನಾಡಿಗೆ ಮತ್ತು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಕೊಡವ ಜನಾಂಗದ ಅನರ್ಘ್ಯ ರತ್ನವೊಂದು ಇಂದು ಕಳಚಿದಂತಾಗಿದ್ದು, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಕ್ಕೆ ನೀಡಲಿ, ಅವರ ಆತ್ಮವು ಕಾರೋಣನಾಗಿ ಎಲ್ಲರನ್ನೂ ಹರಸಲಿ ಎಂದು ಆಶಿಸಿದ್ದಾರೆ.
ಮೃತರ ಗೌರವಾರ್ಥ ಕೊಡವಾಮೆರ ಕೊಂಡಾಟ ಸಂಘಟನೆಯ ಸಾಮಾಜಿಕ ಮಾಧ್ಯಮದ ಎಲ್ಲಾ ಚಟುವಟಿಕೆಗಳನ್ನು ಇಂದು ಸ್ಥಗಿತಗೊಳಿಸಲಾಗಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.