
(✍️ ಚಾಮೆರ ದಿನೇಶ್ ಬೊಳ್ಯಪ್ಪ…ʼ)
ಕೊಡಗು ಜಿಲ್ಲೆ ಶಾಂತಿಯ ಬೀಡು ನಿಜ, ಆದರೆ ಅಷ್ಟೇ ಸೂಕ್ಷ್ಮ ಪ್ರದೇಶವೂ ಹೌದು. ಪ್ರಾದೇಶಿಕವಾಗಿ ವಿಸ್ತೀರ್ಣ ಕಡಿಮೆ ಇದ್ದರೂ ಪ್ರಾಕೃತಿಕವಾಗಿ ವಿಸ್ತಾರ ಅಧಿಕವಿರುವ ವಿಚಿತ್ರ ಸೌಂದರ್ಯದ ಮೇಲ್ಮೈ ಹೊಂದಿರುವ ನಾಡಿದು. ಇಲ್ಲಿ ರಕ್ಷಣಾ ಕಾರ್ಯ ಅಥವಾ ಶೋಧನಾ ಕಾರ್ಯ ಎರಡೂ ಅತ್ಯಂತ ಕ್ಲಿಷ್ಟವೇ. ಆದರೆ ನಮ್ಮ ಪೊಲೀಸ್ ಇಲಾಖೆ ಇವೆರಡನ್ನೂ ಮೆಟ್ಟಿ, ಎಲ್ಲಕ್ಕಿಂತ ನಾವು ಬಲಿಷ್ಟರು ಎನ್ನುವುದನ್ನು, ಮತ್ತೊಮ್ಮೆ ಸಾದಿಸಿ ತೋರಿದ್ದಾರೆ. ಇವರ ಕಾರ್ಯ ಕ್ಷಮತೆ ಮತ್ತು ಸಾಂದರ್ಭಿಕ ಕಾರ್ಯಾಚರಣೆಗೆ ಸಲ್ಯೂಟ್ ಸಲ್ಲಲೇ ಬೇಕು.
ನಿನ್ನೆ ಸಂಜೆಯ ಸಮಯದಲ್ಲಿ ನಾಪೋಕ್ಲು ಪಟ್ಟಣದಲ್ಲಿ ನಡೆದ ಹಲ್ಲೆ ಪ್ರಕರಣವೊಂದು ಕೊಡಗಿನ ಶಾಂತಿಯನ್ನ ಮತ್ತೊಮ್ಮೆ ಭಂಗಿಸುವ ಎಲ್ಲಾ ಸೂಚನೆಗಳು ಕಾಣುತಿದ್ದವು. ಎಲ್ಲೆಡೆ ಶಾಂತಿಯಿಂದಲೇ ನಡೆದ ಹಿಂದೂ ಸಂಗಮ ಕಾರ್ಯಕ್ರಮ, ನಾಪೋಕ್ಲು ಬಲ್ಲಮಾವಟಿ ಭಾಗದಲ್ಲಿ ಆಯೋನೆಗೆ ಮುನ್ನ ಕೋಮು ಸಂಘರ್ಷದ ಮೊಳಕೆ ಚಿಗುರೊಡಯುಂತೆ ಮಾಡಿಬಿಟ್ಟಿತ್ತು.
ಹೇಳಿಕೇಳಿ ನಾಪೋಕ್ಲು, ಜಿಲ್ಲೆಯಲ್ಲಿಯೇ ಅತ್ಯಂತ ಕೋಮು ಸೂಕ್ಷ್ಮ ಪ್ರದೇಶ, ಹಿಂದಿನ ಕೆಲ ಕೋಮುಗಲಬೆಗಳನ್ನು ನೋಡಿದರೆ ಬಹಪಾಲು ನಾಪೋಕ್ಲು ಸುತ್ತಲ ಮೂಲದಿಂದಲೇ ಪ್ರಾರಂಭವಾಗಿ ಜಿಲ್ಲೆಯಾದ್ಯಂತ ಹರಡಿದ ಉದಾಹರಣೆಗಳು ಸಾಕಷ್ಟಿದೆ. ಮತ್ತೊಮ್ಮೆ ನಾಪೋಕ್ಲು ಹೃದಯಭಾಗಲ್ಲೆ ಇಂತದೊಂದು ಘಟನೆ ನಡೆದಾಗ ಸಹಜವಾಗಿಯೇ ಆತಂಕ ಏರ್ಪಡುತ್ತದೆ. ಆದರೆ ಅದಕ್ಕೆ ಅವಕಾಶವೇ ನೀಡದ ಪೊಲೀಸರು ಕೆಲವೇ ಘಂಟೆಗಳಲ್ಲಿ ಆರೋಪಿಗಳನ್ನು ಹೆಡೆಮುರಿಕಟ್ಟಿ ಕಠಿಣ ಸೆಕ್ಷನ್ಗಳ ಮೂಲಕ, ಧರ್ಮದ್ರೋಹಿಗಳಿಗೆ ಸೆರೆಮನೆಯ ದಾರಿ ತೋರಿದ ಪೊಲೀಸರು ನಿಜ ಹೀರೋಗಳು ಅದಕ್ಕಾಗಿ ಅವರಿಗೆ ಮತ್ತೊಂದು ಸೆಲ್ಯೂಟ್.
ಇಂತ ಘಟನೆಗಳು ನಡೆದಾಗಲೆಲ್ಲ, ರಾಜಕೀಯ ಮೇಲಾಟಗಳು, ಪರಸ್ಪರ ಕೆಸರೆರಚಾಟಗಳು ಸರ್ವೆ ಸಾಮಾನ್ಯ. ರಾಜಕಾರಣಿಗಳಿಗೆ ಕೆಲ ಸಂದರ್ಭದಲ್ಲಿ ಇಂತ ಘಟನೆಗಳೆ ಲಾಭತರುವ ವ್ಯಾಪಾರಕೇಂದ್ರಗಳೂ ಆಗಿಬಿಡುತ್ತವೆ. ಆದರೆ ಕೊಡಗು ಪೊಲೀಸ್ ಇದಕ್ಕೆ ಅವಕಾಶ ನೀಡಲಿಲ್ಲ ಅದಕ್ಕಾಗಿ ಅವರಿಗೆ ಮತ್ತೊಂದು ಸೆಲ್ಯೂಟ್.
ಘಟನೆಯನ್ನು ಖಂಡತುಂಡವಾಗಿ ಇಡೀ ನಾಗರೀಕ ಸಮಾಜ, ಪಕ್ಷ, ಜಾತಿ, ಧರ್ಮಗಳನ್ನು ಮೀರಿ ಖಂಡಿಸಿದೆ. ಇದು ಈ ಮಣ್ಣಿನ ಘನತೆಗೆ ಮತ್ತೊಂದು ಹಿರಿಮೆ, ಅವರವರ ಆಚರಣೆ, ಪಾಲನೆಗಳು ಅವರವರ ಸ್ವಾತಂತ್ರ್ಯ. ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಎನ್ನೊ ಸಂದೇಶ ಸಾರಿದ ಸರ್ವ ಧರ್ಮದ ಅನುಯಾಯಿಗಳೂ ಅಭಿನಂದನಾರ್ಹರೇ.
ಕಾವೇರಿ ಹರಿವ ನಾಡಿನಲ್ಲಿ ನೆತ್ತರು ಹರಿಯಬಾರದು, ಸರ್ವಜನಾಂಗದ ಶಾಂತಿಯ ತೋಟದಲ್ಲಿ, ಬೆರಕೆಗಳು ಬೆಳೆಯಬಾರದು, ಅದಕ್ಕೆ ಅವಕಾಶವನ್ನೂ ಕೊಡಲಾರೆವು ಎಂದು ತೋರಿಸಿರುವ ಕೊಡಗು ಪೊಲೀಸ್ ಇಲಾಖೆಗೆ ಮತ್ತೆ ಮತ್ತೆ ಸೆಲ್ಯೂಟ್ ಹಾಕುವುದು ನಾಗರಿಕ ಕರ್ತವ್ಯ. ಎಲ್ಲಾ ಪ್ರಮಾದಗಳಿಗೂ ಪೊಲೀಸರತ್ತ ಬೊಟ್ಟುಮಾಡುವ ನಾವು, ಅವರ ಕಾರ್ಯದಕ್ಷತೆಯನ್ನೂ ಅಭಿನಂದಿಸಬೇಕಲ್ಲಾ… ಅದಕ್ಕಾಗಿ ಹೆಮ್ಮೆಯ ಕೊಡಗು ಪೊಲೀಸರಿಗೆ ಸಾರ್ವಜನಿಕ ಸಲಾಂ…




