
ವಿರಾಜಪೇಟೆ, ಜೂ.25(nadubadenews): ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಶಾಲಾಮಕ್ಕಳಿಗೆ ರಜೆ ನೀಡುವ ವಿಚಾರದಲ್ಲಿ ತೀವ್ರ ಗೊಂದಲವಾಗುತ್ತಿದೆ. ಆತಂಕ ಪರಿಹಾರಕ್ಕೆ ಜಿಲ್ಲಾಧಿಕಾರಿಗಳಿಗೇ ನೇರ ನಿರ್ಧಾರ ತೆಗೆದುಕೊಳ್ಳಲು ಸೂಚಿಸುವುದಾಗಿ ಕೊಡಗು ಜಿಲ್ಲಾ ಉಸ್ತವಾರಿ ಸಚಿವ ಎನ್. ಎಸ್. ಬೋಸರಾಜು ನಡುಬಾಡೆ ನ್ಯೂಸ್ಗೆ ಸ್ಪಷ್ಟಪಡಿಸಿದ್ದಾರೆ.
ಇಂದು ಶಿಕ್ಷಣ ಇಲಾಖಾಧಿಕಾರಿಗಳು ಬೆಳಿಗ್ಗೆ 8.30ಕ್ಕೆ ಗೊಂದಲಕಾರಿಯಾಗಿ ರಜೆ ಘೋಷಿಸಿದ್ದು, ಇದರಿಂದಾಗಿ ಮಕ್ಕಳು, ಪೋಷಕರು, ಶಿಕ್ಷಕರ ಗೊಂದಲ ಮತ್ತು ಆತಂಕವನ್ನು, ನಡುಬಾಡೆ ನ್ಯೂಸ್ ಧೂರವಾಣಿ ಮೂಲಕ ಸಚಿವರ ಗಮನಕ್ಕೆ ತಂದಾಗ, ಮಾತನಾಡಿದ ಸಚಿವರು, ನಿನ್ನೆ ರಾತ್ರಿಯೇ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಢಿದ್ದೇನೆ, ಆದರೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಧಿಕಾರ ನೀಡಿರುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ ಎಂದರು.
ಇಂದು ಆಗಿರುವ ಗೊಂದಲ ಮತ್ತು ಆತಂಕದ ವಾಸ್ತವ ಚಿತ್ರಣವನ್ನು ನಡುಬಾಡೆ ನ್ಯೂಸ್ ಸಚಿವರಿಗೆ ಮನವರಿಕೆ ಮಾಡಿದಾಗ, ಸ್ಪಂದಿಸಿದ ಸಚಿವರು ಜಿಲ್ಲಾಧಿಕಾರಿಗಳಿಗೇ ನೇರ ನಿರ್ಧಾರ ತೆಗೆದುಕೊಂಡು, ಗೊಂದಲಕ್ಕೆ ಎಡೆಯಿಲ್ಲದಂತೆ ಕ್ರಮವಹಿಸಲು ತಕ್ಷಣ ಸೂಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.