ವಿರಾಜಪೇಟೆ, ಜೂನ್. 17: (nadubaenews) : ಕೊಡಗು ಜಿಲ್ಲೆ ಮಡಿಕೇರಿ ವಿಧಾನ ಸಭಾ ವ್ಯಾಪ್ತಿಯ ಗಾಳಿಬೀಡು, ಗರ್ವಾಲೆ, ಶಾಂತಳ್ಳಿ, ಬೆಟ್ಟದಳ್ಳಿ ಗ್ರಾಮ ಪಂಚಾಯತಿ ಗ್ರಾಮಗಳಲ್ಲಿ ಪ್ರತೀ ವರ್ಷವೂ ಅತ್ಯಧಿಕ ಮಳೆಯಾಗುತಿದ್ದು, ಈ ಭಾರಿಯೂ ಮಳೆರಾಯ ಮೇ ಅಂತ್ರದಿಂದಲೇ ತನ್ನ ಆರ್ಭಟ ಆರಂಭಿಸಿ, ಇಂಚುಗಳಲ್ಲಿ ಇನ್ನೇನೆ ಶತಕವನ್ನೇ ಭಾರಿಸುತಿದ್ದಾನೆ. ಇದರಿಂದ ಕೃಷಿಯನ್ನೇ ಅವಲಂಭಿಸಿರುವ ರೈತಾಪಿ ವರ್ಗ ಕಂಗೆಟ್ಟಿದ್ದು, ಇತ್ತೀಚಿಗಿನ ವರ್ಷಗಳಲ್ಲಿ ಈ ರೀತಿಯ ಮಳೆಗಾಲವನ್ನು ಇದೇ ಮೊದಲು ನೋಡುತಿದ್ದೇವೆ ಎನ್ನುತಿದ್ದಾರೆ.
ಸಾಮಾನ್ಯವಾಗಿ ಕೊಡಗು ಜಿಲ್ಲೆಯಲ್ಲಿ ಕೃಷಿಚಟುವಟಿಕೆಗಳು ಆರಂಭ ಆಗುವುದೇ ಈ ಭಾಗದಿಂದ. ಮೇ ಅಂತ್ಯದಿಂದಲೇ ಭತ್ತದ ಕೃಷಿಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳನ್ನು ಆರಂಬಿಸುವ ರೈತರು ಜೂನ್ ಮದ್ಯಭಾಗದಿಂದ ನಾಟಿ ಕಾರ್ಯ ಆರಂಬಿಸಿ ಜುಲೈ ಮೊದಲ ವಾರಕೆಲ್ಲಾ ಮುಗಿಸಿಬಿಡುತ್ತಾರೆ. ಈ ಬಾರಿಯೂ ಇದೇ ಹುಮ್ಮಸ್ಸಿನಿಂದ ಉತ್ತಮ ಮಳೆಯಾಗುತ್ತಿದೆ ಎಂಬ ಹರ್ಷದಲ್ಲಿ ಭತ್ತದ ಕೃಷಿ ಕಾರ್ಯ ಆರಂಬಿಸಿದ ಈ ಭಾಗದ ರೈತರಿಗೆ, ಅಕಾಲಿಕ ಮತ್ತು ಅನಿರೀಕ್ಷಿತವಾಗಿ ಸುರಿದ ಭಾರೀ ಮಳೆಯಿಂದಾಗಿ ಗಾಯದ ಮೇಲೆ ಬರೆ ಎಂಬತಾಗಿದೆ. ಗದ್ದೆಗಳಮೇಲೆಯೇ ಹರಿದು ಬರುತ್ತಿರುವ ನೀರಿನಿಂದ ಬಹುತೇಕ ಗದ್ದೆಗಳು ಕೆರೆಯಂತಾಗಿದ್ದು, ಬಿತ್ತನೆಮಾಡಿದ್ದ ಭತ್ತದ ಸಸಿಗಳು ಕೊಳೆತು ಹೋಗುತ್ತಿವೆ. ಇನ್ನೂ ಕೂಡ ಮಳೆಗಾಲದ ಆರಂಭಿಕ ಹಂತವಾಗಿರುವಾಗಲೇ ಹೀಗಾದರೆ, ಮತ್ತೆ ಭತ್ತ ಬಿತ್ತನೆ ಮಾಡಿ ಹೊಸ ನಾಟಿ ಮಾಡುವಷ್ಟರಲ್ಲಿ ನಡುಮಳೆಗಾಲದ ಅಬ್ಬರಕ್ಕೆ ತತ್ತರಿಸಿ ಮತ್ತೊಮ್ಮೆ ನಷ್ಟ ಅನುಭವಿಸುವ ಆತಂಕವೂ ಇದೆ.
ಇನ್ನು ತೋಟಗಾರಿಕಾ ಬೆಳೆಗಳಾದ, ಏಲಕ್ಕಿ ಮತ್ತು ಕಾಫಿಯನ್ನು ಬೆಳೆಯುತ್ತರಾದರೂ ಸಾಮಾನ್ಯ ಮಳೆಗೆ ಶೇಕಡಾ 95%ರಷ್ಟು ಫಸಲು ಉದುರಿಹೋಗುತಿದ್ದು, ಈ ಬಾರಿ ಸಂಪೂರ್ಣ ಹಾನಿಯಾಗುವ ಸಾಧ್ಯತೆ ಇರುವುದರಿಂದ ರೈತರ ಮುಂದಿನ ಬದುಕಿನ ಬಗ್ಗೆ ಯೋಚಿಸಿ ಬಿರುಮಳೆಯ ಚಳಿಯಲ್ಲಿಯೂ ಬೆವರುತ್ತಿದ್ದಾರೆ.
ವರ್ಷಂಪ್ರತಿ ಸರಿಸುಮಾರು 280 ರಿಂದ 350 ಇಂಚುಗಳಷ್ಟು ಸರಾಸರಿ ಮಳೆಯಾಗುವ ಈ ಭಾಗದ, ಶಾಂತಳ್ಳಿ, ಬೆಟ್ಟದಳ್ಳಿ, ಕುಂದಳ್ಳಿ, ಕುಮಾರಳ್ಳಿ, ಬೆಟ್ಟದಳ್ಳಿ, ಬೆಟ್ಟದಕೊಪ್ಪ, ಬೆಂಕಳ್ಳಿ, ಜಕ್ಕನಳ್ಳಿ, ಇನಕನಳ್ಳಿ, ಕುಮಾರಳ್ಳಿ, ಬಾಚಳ್ಳಿ, ಹೆಗ್ಗಡೆಮನೆ, ಕೊತ್ತನಳ್ಳಿ ಕುಡಿಗಾಣ, ಹರಗ, ಮಂಕ್ಯ, ಕಿಕ್ಕರಳ್ಳಿ, ಕುಂಬಾರಗಡಿಗೆ, ಸೂರ್ಲಬ್ಬಿ, ಗರ್ವಾಲೆ, ಶಿರಂಗಳ್ಳಿ, ಕಿರುದಾಲೆ, ಮುಟ್ಲು, ಹಮ್ಮಿಯಾಲ ಹಚ್ಚಿನಾಡು, ಮುಕ್ಕೋಡ್ಲು, ಅವಂಡಿ., ಕಾಲೂರು, ದೇವಸ್ಥೂರು, ಮೇಘತಾಳು, ಹೆಮ್ಮೆತ್ತಾಳು, ಗಾಳಿಬೀಡು, ವಣಚಲು, ಹೆಬ್ಬಟ್ಟೆಗೇರಿ ಸೇರಿದಂತೆ ಆ ಭಾಗದ ಬಹುಪಾಲು ಗ್ರಾಮಗಳು ಈಗಾಗಲೇ ಮಳೆಯಿಂದ ತತ್ತರಿಸಿ ಹೋಗಿದೆ. ಕೃಷಿಯೇ ಜೀವನದ ಏಕೈಕ ಮಾರ್ಗಾವಾಗಿದ್ದು ತೀವ್ರ ಹಾನಿಯಿಂದಾಗಿ ಭವಿಷ್ಯವೂ ಕತ್ತಲೆಯೆಡೆಗೆ ಸಾಗುವ ಆತಂಕ ವ್ಯಕ್ತಪಡಿಸುತಿದ್ದಾರೆ.
ಜಪ್ರತಿನಿಧಿಗಳು, ಅಧಿಕಾರಿಗಳು ಈ ಸಮಯದಲ್ಲೇ ಈ ವ್ಯಾಪ್ತಿಯ ಪ್ರತೀ ಗ್ರಾಮಗಳನ್ನೂ ಭೇಟಿ ಮಾಡಿ, ಈ ಭಾಗಕ್ಕೇ ವಿಷೇಶ ಪರಿಹಾರದ ಪ್ಯಾಕೇಜನ್ನು ನೀಡುವುದಲ್ಲದೆ, ಈ ಪ್ರದೇಶದ ಬಹುಪಾಲು ರೈತರಿಗೆ ಜಮೀನು ದಾಖಲಾತಿಗಳ ಸಮಸ್ಯೆಯಿದ್ದು ಮಳೆ ಪರಿಹಾರದಲ್ಲಿ ವಿಶೇಷ ಆದ್ಯತೆಯಾಗಿ ಪರಿಗಣಿಸಿ ಪರಿಹಾರ ಒದಗಿಸಿಕೊಡಬೇಕೆಂದು ಆಗ್ರಹಿಸುತಿದ್ದಾರೆ.