ಮಡಿಕೇರಿ, ಜು.02;(nadubadenews): ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ವಿವಿಧ ಸಂಘಟನೆಗಳ ಸ್ವಯಂ ಸೇವಕರು ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್ ಅವರು ಕೋರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಡಗು ಜಿಲ್ಲೆಯಲ್ಲಿ ಹಲವು ವರ್ಷಗಳ ನಂತರ 2025ನೇ ಜೂನ್ ಅಂತ್ಯದವರೆಗೆ ಅತೀ ಹೆಚ್ಚು ಮಳೆಯಾಗಿರುತ್ತದೆ. ಅಲ್ಲದೇ ಈ ವರ್ಷವೂ ಅತೀ ಹೆಚ್ಚು ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿನ ನದಿ ಜಲಾಶಯ, ಕೆರೆ, ಹಳ್ಳ, ತೋಡು ಹಾಗೂ ಇತರೆ ಜಲಮೂಲಗಳು ಈಗಾಗಲೇ ತುಂಬಿ ಹರಿಯುತ್ತಿದ್ದು ಮುಂದಿನ ದಿನಗಳಲ್ಲಿಯೂ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಎಲ್ಲ PSI, CPI/PI ಹಾಗೂ DSP ರವರುಗಳೊಂದಿಗೆ ದಿನಾಂಕ 01-07-2025 ರಂದು ಸಭೆ ನಡೆಸಿ
ಪ್ರಕೃತಿ ವಿಕೋಪ ಉಂಟಾದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಈ ಕೆಳಗಿನ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಠಾಣೆ ಹಾಗೂ ಗ್ರಾಮ ಬೀಟ್ ವ್ಯಾಪ್ತಿಯಲ್ಲಿ ಸ್ವಯಂ ಸೇವಕರನ್ನು ಗುರುತಿಸಿ ಅವರ ವಿವರ (ಹೆಸರು, ವಿಳಾಸ, ಠಾಣೆ ಹೆಸರು, ಮೊಬೈಲ್ ಸಂಖ್ಯೆ) ಗಳನ್ನು ಸಂಗ್ರಹಿಸುವುದು.
ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಗೆ ಸನ್ನದ್ದರಾಗಿರುವ ನಿಟ್ಟಿನಲ್ಲಿ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸ್ವಯಂ ಸೇವಕರೊಂದಿಗೆ ಠಾಣೆಯಲ್ಲಿ ಸಭೆ ನಡೆಸಿ ಸೂಕ್ತ ಸಲಹೆಗಳನ್ನು ನೀಡುವುದು.
ಠಾಣಾ ವ್ಯಾಪ್ತಿಯಲ್ಲಿರುವ ಕ್ರೇನ್, ಜೆಸಿಬಿ, ಟೋಯಿಂಗ್ ವಾಹನ, ವುಡ್ ಕಟ್ಟರ್, 4*4 ಜೀಪ್ ಗಳ ವಿವರ ಹಾಗೂ ಸದರಿಯವರ (ಹೆಸರು, ವಿಳಾಸ, ಠಾಣೆ ಹೆಸರು, ಮೊಬೈಲ್ ಸಂಖ್ಯೆ)ಗಳನ್ನು ಸಂಗ್ರಹಿಸುವುದು.
ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಯಲ್ಲಿ ಪಾಲ್ಗೊಳ್ಳಲು ಇಚ್ಛೆಯುಳ್ಳವರು ತಮ್ಮ ವಿವರಗಳನ್ನು ಕೊಡಗು ಜಿಲ್ಲಾ ಪೊಲೀಸ್ 8277958444ಗೆ ನೇರವಾಗಿ ನೀಡಲು ಕೋರಿದೆ. ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳಿಗೆ ವಿವರಗಳನ್ನು ನೀಡಿ ಸ್ವಯಂ ಸೇವಕರ ಪಟ್ಟಿಯಲ್ಲಿ ಸೇರ್ಪಡೆಗೊಂಡು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಲು ಕೋರಿದೆ.
ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಪ್ರಕೃತಿ ವಿಕೋಪದ ಉಂಟಾದ ಸ್ಥಳ ಹಾಗೂ ನೆರವಿನ ಅವಶ್ಯಕತೆ ಕುರಿತು ಕೊಡಗು ಜಿಲ್ಲಾ ಪೊಲೀಸ್ 8277958444ಗೆ ಮಾಹಿತಿ ನೀಡಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್ ಅವರು ಕೋರಿದ್ದಾರೆ.