
(ನಿನ್ನೆಯ ಲೇಖನದ ಮುಂದುವರೆದ ಭಾಗ) ಆಧ್ಯಾತ್ಮಿಕತೆ ಮತ್ತು ಧಾರ್ಮಿಕತೆಗಿರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿಸಲಾಗಿದ್ದರೂ ಹಲವರ ಪ್ರಶ್ನೆ ನಿನಗೇಕೆ ರಾಜಕೀಯ ಎಂಬುದಾಗಿತ್ತು? ಶೀರ್ಷಿಕೆಯೇ ಹೇಳುವಂತೆ ಅನೇಕರಿಗೆ ತಮ್ಮ ಪೂರ್ವ ತಲೆಮಾರಿನ ಸ್ವಾಭಾವಿಕ ಅಸ್ತಿತ್ವದ ಗುರುತು ಅಳಿಸಿಯೇ ಹೋಗಿದೆ ಎಂಬುದರ ಅರಿವೇ ಇಲ್ಲ. ಇದ್ದವರಿಗೆ ವಾಸ್ತವಗಳನ್ನು ಅರಿಗಿಸಿಕೊಳ್ಳಲಾಗುತ್ತಿಲ್ಲ. ಇನ್ನು ಕೆಲವರಿಗೆ ಈಗ ಅದರ ಅವಶ್ಯಕತೆ ಇಲ್ಲ ಈಗಾಗಲೇ ಅವರು ತಮಗೆ ಬೇಕಿರುವ ಹಾಗೆ ಬದುಕುತ್ತಿದ್ದಾರೆ. ಆದರೆ ಜನರಿಗೆ ನಮ್ಮ ದೇಶದ ಪಾಲಿ ಮತ್ತು ಲಟ್ ಭಾಷೆಯ ಮೂಲಪದವಾಗಿರುವ ಸನಾತನಕ್ಕಿರುವ ಇತಿಹಾಸ ಏನೆಂಬ ಅರಿವೇ ಇಲ್ಲದೆ ಹೋಗಿದೆ. ಪ್ರಾಕೃತಿಕ ನೆಲೆಗಟ್ಟಿನಲ್ಲಿ ಯಾವುದೇ ಧರ್ಮಾಚರಣೆಗಳಿಲ್ಲದೇ ಇದ್ದ ಭಾರತದ ಒಂದು ಚರಿತ್ರೆಯನ್ನು ಕೆಲವರು ತಮ್ಮ ಅಸ್ತಿತ್ವ ಸ್ಥಾಪನೆಗೆ ಮೂಲೆ ಗುಂಪು ಮಾಡಿದ್ದಾರೆ. ಅವರೇ ಮದ್ಯಪ್ರಾಚ್ಯದ ಬ್ರಹ್ಮಣರು. ಈಗಲೂ ಅದರ ಪ್ರಭಾವ ಎಷ್ಟು ಗಾಢವಾಗಿದೆ ಎಂಬುದರ ಅರಿವು ನಮ್ಮವರಾರಿಗೂ ಇಲ್ಲ. ಈಗಿನ ಬದಲಾವಣೆ ಮತ್ತು ವ್ಯತ್ಯಾಸ ಎಂದರೆ ಜನರು ತಾವಾಗಿಯೇ ಅಂತಹ ಧಾರ್ಮಿಕತೆಯನ್ನು ಸ್ವೀಕರಿಸಿ ಲೌಕಿಕತೆಯಲ್ಲಿರುವ ಆಚಾರ-ವಿಚಾರಗಳಿಗೆ ತಕರಾರು ಮಾಡಿ ಸಮಾಜದ ಶಾಂತಿಯನ್ನು ಕದಡುತ್ತಿದ್ದಾರೆ. ರಾಜಕೀಯದವರು ಇವರನ್ನೇ ಸುಲಭವಾಗಿ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ.
ಆ ಕಾರಣಕ್ಕಾಗಿಯೇ ಎರಡನೆಯ ಭಾಗವನ್ನೂ ಪ್ರಸ್ತುತ ಪಡಿಸುತ್ತಿದ್ದೇನೆ. ಆಧ್ಯಾತ್ಮಿಕತೆ ಮತ್ತು ಧಾರ್ಮಿಕತೆಗೆ ಇರುವ ವ್ಯತ್ಯಾಸವನ್ನು ಈಗಾಗಲೇ ಮೊದಲನೆಯ ಭಾಗದಲ್ಲಿ ತಿಳಿಸಲಾಗಿದೆ. ಇದಕ್ಕೂ ಕೊಡವ ಮತ್ತು ಅರೆಭಾಷಿಕರ ನಡುವಿನ ತಕರಾರು ಮತ್ತು ಸಮ್ಮಂಧ ಪ್ರಶ್ನೆಗೆ ಉತ್ತರವೇ ಈ ಎರಡೂ ಕುಲದವರು ಆ ಧಾರ್ಮಿಕತೆ ಹರಡುವವರ ಹಿಡಿತದಲ್ಲಿ ಬಂಧಿಯಾಗಿದ್ದಾರೆ ಎಂಬುದು. ಇದರಿಂದಾಗಿ ಇವರು ತಮ್ಮ ತಮ್ಮ ಮೂಲ ಅಸ್ತಿತ್ವವನ್ನು ಮರೆತು ಅಸ್ತಿತ್ವ, ಆಚಾರ, ವಿಚಾರ, ಉಡುಪು, ತೊಡುಪುಗಳ ತಗಾದೆ ತೆಗೆದು ಜಗಳವಾಡುತ್ತ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿದ್ದಾರೆ.
ಈ ಮತಧರ್ಮ ಸಂಪ್ರದಾಯ ಪಾಲನೆ ಮಾಡಿಕೊಂಡು ಬಂದಂತಹ ಪ್ರಪಂಚದ ಎಲ್ಲ ಧರ್ಮಗಳ ಅಲೌಕಿಕತೆ ಪಾಲಿಸುವವರೇ ಧಾರ್ಮಿಕತೆಯವರು ಎಂಬ ವಿಚಾರವನ್ನು ಸ್ಪಷ್ಟವಾಗಿ ಮೊದಲ ಭಾಗದಲ್ಲಿ ತಿಳಿಸಲಾಗಿದೆ. ಇದೇ ವಿಚಾರವಾಗಿ ಕೆಲವರು ಕೊಡವರ ಡಿ.ಎನ್.ಎ ಬಗ್ಗೆಯೂ ಮಾತನಾಡಿರುವುದು ನಮ್ಮ ಅಸ್ತಿತ್ವದ ಪ್ರಾಚೀನತೆಯನ್ನು ತಿಳಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಅದೇ ಕಾರಣದಿಂದಾಗಿ ಲೇಖನವನ್ನು ಮುಂದುವರಿಸಿದ್ದೇನೆ. ಕೊಡವರ ಡಿ.ಎನ್.ಎ ಯಾವುದೋ ಖಂಡದ ವಿದೇಶಿಯರ ಡಿ.ಎನ್.ಎದೊಂದಿಗೆ ಅಲ್ಲ ಭಾರತದ ಪಂಜಾಬಿನ ಕೆಲವು ಜನಾಂಗ, ಜೈನರ ಕೆಲವು ಪಂಗಡದವರೊಂದಿಗೆ ಹತ್ತಿರದ ಸ್ವಾಮ್ಯತೆ ಇರುವುದನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಗಂಡಿನ ಸ್ವಾಯತ್ತ ಡಿ. ಎನ್. ಎ ಎಂದಿಗೂ ಬದಲಾಗುವುದಿಲ್ಲ ಎಂಬ ಅರಿವು ಇದ್ದರೆ ಇದು ಪ್ರಶ್ನಿಸಿದವರಿಗೆ ಅರ್ಥವಾಗುತ್ತದೆ ಅಂದುಕೊಳ್ಳುತ್ತೇನೆ. ಇದೇ ನಿಟ್ಟಿನಲ್ಲಿ ಅವರೆಲ್ಲರು ಭರತನ ವಂಶಜರೆಂಬ ಅಂದಾಜು ಮಾಡಲಾಗಿದೆ. ಅವರು ಯಾರೂ ಅಲೌಕಿಕ ಸಂಪ್ರದಾಯ ಪಾಲಿಸುವ ವೈದಿಕರ ಧಾರ್ಮಿಕತೆ ಪಾಲಿಸುತ್ತಿಲ್ಲ. ಅದರಂತೆ ಕೊಡವರು ಕೂಡ ತಮ್ಮದೇ ಆದ ಅವೈದಿಕ ಸಂಸ್ಕೃತಿಯನ್ನು ಪಾಲಿಸುತ್ತ ಬಂದಿರುವವರು. ಆದರೆ ಈಗ ಅನೇಕರು ಅಲೌಕಿಕ ಧಾರ್ಮಿಕತೆಯ ಹಿಂಬಾಲಕರಾಗಿದ್ದಾರೆ. ಕೆಲವರು ತಲೆಯ ವಸ್ತ್ರ ನೋಡಿ ಕುರ್ದಿಗಳು, ಕುಪ್ಪಸ, ಕತ್ತಿ ನೋಡಿ ಅರಬ್ಬರ ಡಿ. ಎನ್. ಎ ಎನ್ನುತ್ತಾರೆ. ಎಲ್ಲ ರಾಜರೂ ಧರಿಸುತ್ತಿದ್ದುದು ಕುಪ್ಪಸ, ಕೊಡವ ಹೆಂಗಸರು ಉಡುವ ಶೈಲಿ ಬೇರೆ ಆದರೆ ಸೀರೆ ಭಾರತದ್ದೇ ಎಂಬುದನ್ನು ಮಾತ್ರ ಅವರು ಗಮನಿಸುತ್ತಿಲ್ಲ. ಆದರೆ ಕೊಡಗಿನಲ್ಲಿ ಟಿಪ್ಪುವಿನಿಂದ ಆದ ವಸ್ತ್ರ ಸಂಹಿತೆ ಬದಲಾವಣೆ, ಆತ ಪರ್ಶಿಯಾದಿಂದ ಬಂಟ್ವಾಳಿಗಳ ಮೂಲಕ ತರಿಸಿಕೊಳ್ಳುತ್ತಿದ್ದ ಬಟ್ಟೆಬರೆಗಳ ಬಗ್ಗೆ ಹೇಳುವುದಿಲ್ಲ. ಟಿಪ್ಪುವಿನಿಂದ ಪ್ರಾಣ ಉಳಿಸಿಕೊಂಡು ಪಿರಿಯಾಪಟ್ಟಣದಿಂದ ತಪ್ಪಿಸಿಕೊಂಡು ಬರಲು ಸಹಕರಿಸಿದ ಪರ್ಶಿಯನ್ ವ್ಯಕ್ತಿಗಾಗಿ ಮಸೀದಿಗೆ ಚಾದರ್ ಹಾಕುತ್ತಿದ್ದುದು ಮತ್ತು ಚೆಕ್ ವಸ್ತ್ರ ಧರಿಸುತ್ತಿರುವ ಕುರಿತು ಯಾವುದೇ ಶೋಧನೆ ನಡೆಸಿಲ್ಲ. ಲಿಂಗರಾಜರ ಕಾಲದಿಂದಲೂ ಕೊಡಗಿನಲ್ಲಿ ಹತ್ತಿಯಿಂದ ಮಾಡಿದ ಚೌಕ ವಿನ್ಯಾಸದ ಇಳಕಲ್ ಸೀರೆಗಿದ್ದ ಬೇಡಿಕೆಯ ಅರಿವಿಲ್ಲ. ತಾಲಿಯೇ ಕಟ್ಟದ ಜನಾಂಗಗಳು ಇಂದಿಗೂ ಭಾರತದಲ್ಲಿದೆ ಎಂಬ ಅರಿವಿಲ್ಲ. ಈಗಿನ ಹೊರ ರಾಷ್ಟ್ರಗಳಲ್ಲಿ ನಮ್ಮಂತೆಯೆ ಕಾಣುವ ಸಂಸ್ಕೃತಿ ಇದೆ ಎಂದಾದರೆ ಅವು ಕೂಡ ಬೇರೆ ಬೇರೆ ಕಾಲಘಟ್ಟದಲ್ಲಿ ಭಾರತದ ಆಳ್ವಿಕೆಗಾರರ ಅಧೀನದಲ್ಲಿದ್ದ ಪ್ರದೇಶವಾಗಿತ್ತು ಎಂಬುದನ್ನೂ ಗಮನಿಸುತ್ತಿಲ್ಲ.
ಇನ್ನು ಭರತನಿಗೂ ಇದಕ್ಕೂ ಏನು ಸಂಬಂಧ ಎಂದು ಕೇಳಿದವರು ಇದ್ದಾರೆ. ಇಂದಿನ ನಮ್ಮ ಭಾರತದ ಹೆಸರು ಭರತ ಖಂಡ ಎಂದು ಜಗತ್ಪ್ರಸಿದ್ಧವಾಗಿರುವುದು ಇದೇ ಭರತನಿಂದ. ಶೈವಾರಾಧಕರು ಹೆಚ್ಚಿದ್ದ ದೇಶದ ಅಸ್ತಿತ್ವವನ್ನು ಮರೆಮಾಚಿಸಿದ್ದು ಸಪ್ತಸಾಗರದಾಚೆ ಅಂದರೆ ಸಿಂಧುವಿನ ಸಪ್ತನದಿಗಳಾಚೆ ಆಳ್ವಿಕೆ ನಡೆಸುತ್ತಿದ್ದ ಹರಿಯ (ವಿದೇಶಿಯರ ಭಾಷೆಯ ಹ್ಯಾರಿಯ)ಆತನ ಮಗ ಬ್ರಹ್ಮ (ಅಬ್ರಾಹಮನ್) ಅನುಯಾಯಿಗಳು. ಮಗಳು ಸರಸ್ವತಿಯನ್ನು ಮದುವೆಯಾಗಿರುವ ಪುರಾಣ ಕಥೆ ಎಲ್ಲರಿಗೂ ತಿಳಿದೇ ಇದೆ. ಭಾರತದ ಆಡಳಿತಗಾರರು, ಸೈನಿಕರು, ವ್ಯಾಪಾರಿಗಳು ಅಂದಿನ ಕಾಲದಲ್ಲಿಯೂ ದೇಶ ವಿದೇಶಗಳ ಸಂಪರ್ಕವಿರಿಸಿಕೊಂಡಿದ್ದರು ಎಂಬುವುದಕ್ಕೆ ಸಾಕಷ್ಟು ಸಾಕ್ಷ್ಯಗಳು ಲಭ್ಯವಿದೆ. ಅದರಂತೆ 4000 ವರ್ಷದ ಹಿಂದಿನ ಇತಿಹಾಸ ಹೇಳುವ ಈಜಿಪ್ಟ್ ನಲ್ಲಿಯೂ ರಾಂಸೇಸ್, ರಾ ಮುಂತಾದ ಹೆಸರುಗಳ ಸಾಮ್ಯತೆ ವೈದಿಕರ ಗ್ರಂಥಗಳಲ್ಲಿ ಇರುವುದು ಕಾಕತಾಳೀಯವಲ್ಲ ಎಂದೇ ಹೇಳಬೇಕಾಗುತ್ತದೆ. ಇವರೆಲ್ಲರು ಕಥೆಗಳ ಮೂಲಕ ಜನರ ಮನಸ್ಸನ್ನು ಕಟ್ಟಿ ಹಾಕುವುದನ್ನು ಸಿದ್ಧಿಸಿಕೊಂಡವರು.
ನೀವೀಗ ಗಮನಿಸಬೇಕಿರುವುದು ಈಗಿನ ಪುಟ್ಟ ಕೊಡಗಲ್ಲ ಕ್ರೋಢ ದೇಶ, ಕುಡುಮಲೈ ಎಂದು ದಾಖಲಾಗಿರುವ ಸಾವಿರಾರು ವರ್ಷಗಳ ಹಿಂದಿನ ಪ್ರದೇಶ. ಅಂತಹ ಆಡಳಿತ ಪ್ರದೇಶಗಳು ಭಾರತದಲ್ಲಿ ಇದ್ದುದುರಿಂದಲೇ ಯುರೋಪಿಯನ್ನರು ಹೆಸರುವಾಸಿಯಾಗಿದ್ದ ಭಾರತವನ್ನು ಕಂಡು ಹಿಡಿಯಲು ಅಮೇರಿಕ, ಆಫ್ರಿಕಾವನ್ನೆಲ್ಲ ತಲುಪಿ ಕೊನೆಗೆ ಕೇರಳದಲ್ಲಿ ಬಂದಿಳಿದಿರುವುದು. ಅಂತಹ ನಾಡಿನಲ್ಲಿ ಇದ್ದುದು ಇದೇ ಭರತ ಸ್ಥಾಪಿಸಿದ್ದ ಅಂದಾಜು ಹತ್ತು ಸಾವಿರ ವರ್ಷಗಳ(24 ತೀರ್ಥಂಕರರ ಕಾಲಮಾನ ದಾಖಲೆಯ ಗಣತಿಯಂತೆ) (ಪ್ರಾಕೃತ ಭಾಷೆ ಇಂದಿಗೂ ಉಳಿದಿರುವುದು ಪ್ರಕೃತಿ ಆರಾಧಕರಾದ ತೀರ್ಥಂಕರರನ್ನು ಆರಾಧಿಸುತ್ತ ಬಂದಿರುವ ಜೈನರಿಂದ, ಆದರೆ ಅಹಿಂಸಾವಾದ ಪ್ರತಿಪಾದಿಸಿದ ಜಿನ ಮತ ಜೈನ ಧರ್ಮವಾಗಿ ಮಹಾವೀರರಿಂದ ಸ್ಥಾಪನೆ ಆಗಿರುವುದು 550BCEನಂತರದಲ್ಲಿ ) ಹಿಂದಿನ ಕ್ಷತ್ರೀಯ, ಬ್ರಾಹ್ಮಣ, ವೈಶ್ಯ, ಶೂದ್ರ, ದಸ್ಯು, ಚಾಂಡಾಳ ಇತ್ಯಾದಿ ವೃತ್ತಿ ಆಧಾರಿತ ಸಾಮಾಜಿಕ ವ್ಯವಸ್ಥೆ. ಆದರೆ ಮುಸ್ಲಿಂಮರ ದಾಳಿಯ ಸಮಯದಲ್ಲಿ ಶ್ರೇಣೀಕೃತ ವರ್ಣ ವ್ಯವಸ್ಥೆ ವರ್ಧನೆಯಾಗಿದ್ದುದರಿಂದ, ಜೈನ ರಾಜರ ಆಳ್ವಿಕೆಗಳು ಅಂತ್ಯ ಕಂಡವು ಮತ್ತು ಮೂಲ ವ್ಯವಸ್ಥೆ ಸಾಕಷ್ಟು ವಿರೂಪಗೊಂಡಿತ್ತು. ಭರತ ಆಳಿರುವ ಭೂ ಪ್ರದೇಶ ಈಗಿನ ಭಾರತವಷ್ಟೇ ಆಗಿರಲಿಲ್ಲ. ಆದುದರಿಂದಲೇ ಉತ್ಖನನಗಳಲ್ಲಿ 5000ಸಾವಿರ ವರ್ಷಗಳಿಗಿಂತ ಹಿಂದಿನ ಪ್ರಾಚೀನ ಪಶುಪತಿ, ಬುಲ್ ಮೂರ್ತಿ, ಗುಡಿಗಳಂತಹ ಕುರುಹುಗಳು ಏಷ್ಯಾ ಆಫ್ರಿಕ ಮತ್ತು ಯೂರೋಪ್ ವರೆಗೂ ಹರಡಿರುವುದು ಕಂಡು ಬರುತ್ತಿವೆ. ಪೂರ್ವಿಕರು, ರಾಜ ಮಹಾರಾಜರನ್ನೇ ದೇವರೆಂದು ಆರಾಧಿಸಿಕೊಂಡು ಬಂದಿರುವ ದೇಶ ಭಾರತ. ಭರತ ಚಕ್ರವರ್ತಿಯಿಂದಲೇ ಪ್ರಸಿದ್ಧವಾದ ವೃಷಭೇಶ್ವರ, ಭರತೇಶ್ವರ, ಪರಮೇಶ್ವರ, ಜಗದೀಶ್ವರ ಮುಂತಾದ ಬಿರುದುಗಳು ಇಂದಿಗೂ ದೇವರ ಹೆಸರಾಗಿ ಉಳಿದಿದೆ. ಇನ್ನು ತನ್ನದೇ ಆದ ಲಿಪಿಯನ್ನು ಹೊಂದಿರದ ಸಂಸ್ಕೃತವನ್ನು ಪ್ರಾಚೀನ ಕಂಠಪಾಠದ ಮೂಲಕ ಬೆಳೆದ ದೇವ ಭಾಷೆ ಎನ್ನುವವರು ಬ್ರಾಹ್ಮಿಲಿಪಿ ದಾಖಲೆಗಳ ಲಭ್ಯತೆಯನ್ನು ಪ್ರಶ್ನಿಸುತ್ತಾರೆ. ಆದರೆ ಸಂಸ್ಕೃತಕ್ಕಿಂತಲೂ ಹಳೆಯ, ಬ್ರಾಹ್ಮಿಲಿಪಿ ಇದ್ದ ಭಾಷೆ ಪ್ರಾಕೃತ. ಸಂಸ್ಕೃತ ಭರತನ ವ್ಯವಸ್ಥೆಯೊಳಗೆ ಛಂದಸ್ಸಿನಿಂದ ಬೆಳೆದ ಭಾಷೆ. ದೇಶದ ಉದ್ದಗಲ ಪುರಾತತ್ವ ಉತ್ಖನನಕಾರರಿಗೆ ಲಭ್ಯವಾಗಿರುವ ಅತ್ಯಂತ ಪ್ರಾಚೀನ ಲಿಪಿ ಶಾಸನಗಳು ಖರೋಷ್ಠಿ, ಬ್ರಾಹ್ಮಿಲಿಪಿಯಲ್ಲಿಯೇ ಇರುವುದು. ನಂತರದ ಧಾರ್ಮಿಕತೆಯ ಮಂಥನದಲ್ಲಿ ಬೌದ್ಧ ಮತ್ತು ಜೈನವೂ ಬೇರೆ ಬೇರೆ ಧರ್ಮಗಳಾಗಿ ರೂಪುಗೊಂಡಿವೆ.
ಭರತನ ರಾಷ್ಟ್ರದಲ್ಲಿ ಬ್ರಾಹ್ಮಣರ ಸ್ಥಾನವನ್ನು ಅನೇಕ ಜನಾಂಗದವರು ಅಲಂಕರಿಸಿದ್ದಾರೆ. ಆದರೆ ಅಲೌಕಿಕತೆಯನ್ನು ಪ್ರಚುರ ಪಡಿಸಿದ ವೈದಿಕ ಬ್ರಹ್ಮಣರು ಭರತನ ವ್ಯವಸ್ಥೆಯೊಳಗೇ ಮನುಸ್ಮೃತಿ ಕಾನೂನು ಅಳವಡಿಸಿಕೊಂಡು ಶ್ರೇಣೀಕೃತ ವರ್ಣವ್ಯವಸ್ಥೆಯನ್ನು ಬೆಳೆಸಿ ಪಾಲನೆ ಮಾಡಿದವರು. ಅದರ ಕುರುಹು ನಾವಿಂದಿಗೂ ಕಣ್ಣಾರೆ ಕಾಣುತ್ತಿರುವ ಅಸ್ಪೃಶ್ಯತೆ ಅಥವಾ ದಲಿತರ ಅಸ್ತಿತ್ವ. ಅದೇ ಭರತನ ವ್ಯವಸ್ಥೆಯಲ್ಲಿ ಬಂದಿದ್ದ ಬ್ರಾಹ್ಮಣರು ಅವೈದಿಕರಾಗಿದ್ದ ಅಮ್ಮಕೊಡವರು, ಕಣಿಯರು ಮುಂತಾದವರಾಗಿದ್ದರೆ, ಕೊಡವರು, ಒಕ್ಕಲುತನ ಮಾಡುತ್ತಿದ್ದ ಇತರರು ಕ್ಷತ್ರೀಯ ವ್ಯವಸ್ಥೆಗೆ ಸೇರಿದ್ದರು ಕೊಡವರ ಚೆಹರೆ ಸ್ವಲ್ಪ ಭಿನ್ನ ಅನಿಸಲು ಕಾರಣವೇ ತಮ್ಮ ಗಡಿಯನ್ನು ಕಾಯುವುದು ಮತ್ತು ಮುಖಂಡರ, ಅರಸರ ಅಣತಿಯಂತೆ ಈ ಕ್ಷತ್ರೀಯರು ಯಾವುದೇ ಇತರ ಪ್ರದೇಶದ ಮೇಲೆ ಯುದ್ಧ ಮಾಡುವುದು ಸಾಮಾನ್ಯವಾಗಿತ್ತು. ಆಗ ಅವರು ಗೆದ್ದರೆ ಅವರಿಗೆ ಕ್ಷತ್ರೀಯ ಕುಲದ ಹೆಣ್ಣು ಮಕ್ಕಳು, ಧನ ಧಾನ್ಯ ಸಂಪತ್ತನ್ನು ಕಪ್ಪವಾಗಿ ನೀಡಲಾಗುತ್ತಿತ್ತು. ಆ ವ್ಯವಸ್ಥೆಯಲ್ಲಿ ವಿದೇಶಿಯರನ್ನು ಮದುವೆಯಾಗುವುದಕ್ಕೂ ಅಡ್ಡಿ ಇರಲಿಲ್ಲ. ಇದೇ ಕಾರಣಕ್ಕೆ ಕೊಡವರಲ್ಲಿ ಎಲ್ಲ ರೀತಿಯ ಬಣ್ಣದವರು ಮತ್ತು ಮುಖಲಕ್ಷಣದವರು ಇರುವುದು.
ಕೊಡವ ಎಂಬ ಹೆಸರೂ ಈ ಕ್ಷತ್ರೀಯರ ಸಾಹಸದ ಪ್ರತೀಕವಾಗಿ ಕುಡ ಎಂಬ ನೆಲದ ಹೆಸರಿನಿಂದಲೇ ಬಂದಿರುವಂತಹದ್ದು. ಆದರೆ ವರ್ಣ ಪದ್ಧತಿಯ ಜಾತಿ ವ್ಯವಸ್ಥೆ ಬೆಳೆದ ನಂತರ ಇವೆಲ್ಲವೂ ಸಂಪೂರ್ಣವಾಗಿ ಬದಲಾಗಿದೆ. ಪ್ರಕೃತಿಯನ್ನು ಆರಾಧಿಸುತ್ತಿದ್ದ ಕೊಡಗಿಗೆ ತನ್ನದೇ ಆದ ಸಂಸ್ಕೃತಿ ಸಂಪ್ರದಾಯವಿತ್ತು. ಅದಕ್ಕೆ ಪುರಾವೆಯಾಗಿ ಉಳಿದಿರುವುದೇ ಕೊಡವರು ಮತ್ತು ಕೊಡವ ಭಾಷಿಕರು ಹಾಗೂ ಅವರ ನಡುವೆ ಇಂದಿಗೂ ಇರುವ ಅನೇಕ ಆಚರಣೆಗಳು. ಉದಾಹರಣೆಗೆ ಕೊಡವರ ಮದುವೆಯಲ್ಲಿ ಮೇದರ ಓಲಗ, ಹಜಾಮ, ಮಡಿವಾಳರ ಪಾತ್ರ, ಸಾವಿನಲ್ಲಿ ಕೆಂಬಟಿಯರ ಪಾತ್ರ ಮುಂತಾದವು. ಅದರಲ್ಲೂ ಕೊಡವರಲ್ಲಿ ಕಂಡುಬರುವ ಚೋಳ, ಚೇರ, ಪಾಂಡಂಡ, ಚಂಗಚಂಡ ಇಂತಹ ಮನೆ ಹೆಸರುಗಳು ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ರಾಜ ಕುಲಗಳ ಹೆಸರನ್ನೇ ಸೂಚಿಸುತ್ತವೆ. ಕಾಲಘಟ್ಟದಲ್ಲಿ ಆದ ಬದಲಾವಣೆಗಳಲ್ಲಿ ನೂರಾರು ಜನಾಂಗಗಳು ಕೊಡಗಿನಲ್ಲಿ ನೆಲೆ ಕಟ್ಟಿಕೊಂಡಿವೆ. ಈಗಲೂ ಅಸ್ಸಾಂ, ಬಂಗಾಳದಿಂದ ಬಂದು ನೆಲೆ ಕಟ್ಟಿಕೊಳ್ಳುತ್ತಿರುವವರೂ ಇದ್ದಾರೆ. ಆದರೆ ತಮ್ಮ ಅಸ್ತಿತ್ವವನ್ನು ಬಿಗಿ ಮಾಡಿಕೊಳ್ಳಲು ಪ್ರಪಂಚದಾದ್ಯಂತ ಗಟ್ಟಿಯಾಗಿ ಬೇರೂರಿರುವ ಅಲೌಕಿಕ ಧಾರ್ಮಿಕತೆಯ ಬಾವುಟ ಹಿಡಿದು ಯಾರೇ ಆಗಲಿ ಯಾವುದೇ ನೆಲೆಯ ಮೂಲ ನಿವಾಸಿಗಳ ನೆಮ್ಮದಿ ಕೆಡಿಸುವುದು ಇಂದಿನ ಪ್ರಜಾಪ್ರಭುತ್ವ ಭಾರತದಲ್ಲಿ ದೊಡ್ಡ ಅಪರಾಧವೆ. ಅದರಂತೆ ಮೂಲ ನಿವಾಸಿಗಳು ಇತರರ ತಪ್ಪುಗಳನ್ನು ತಿಳಿಯಪಡಿಸುವುದು ತಪ್ಪಲ್ಲ ಆದರೆ ಈಗಾಗಲೇ ತಲೆಮಾರುಗಳಿಂದ ಉಳಿದಿರುವವರ ಅಸ್ತಿತ್ವವನ್ನು ಅಲ್ಲಗಳೆಯುವುದೂ ಅಪರಾಧವೇ ಆಗುತ್ತದೆ. ಇವೆಲ್ಲದಕ್ಕೂ ಮೂಲ ಕಾರಣವಾಗಿರುವ ವಾಸ್ತವಗಳನ್ನು ಹಾಗೇ ಕಂಡು ಹಿಡಿಯುವುದು ಕಷ್ಟ. ಆದರೆ ಇತಿಹಾಸವನ್ನೇ ತೆರೆದಿಟ್ಟಾಗ ಮೊದಲಿಗೆ ಅದನ್ನು ಅರಗಿಸಿಕೊಳ್ಳಲು ಯಾರಿಗೇ ಆದರೂ ಕಷ್ಟವಾಗುತ್ತದೆ ಆದರೆ ಅಸಾಧ್ಯವಲ್ಲ. ಹಾಗಾಗಿ ಕೊನೆಯದಾಗಿ ನಾನು ಹೇಳಲು ಬಯಸುವುದು ಧಾರ್ಮಿಕತೆಯಿಂದ ಹೊರತಾದ ಎಲ್ಲರನ್ನು ಒಗ್ಗೂಡಿಸುವ ಭಾರತೀಯತೆಯನ್ನು ಒಂದಾಗಿ ಪ್ರದರ್ಶಿಸಬೇಕು. ಇದಕ್ಕೆ ಯಾರು ಹಿಂದೇಟು ಹಾಕಲಾರರು ಏಕೆಂದರೆ ಅದು ಎಲ್ಲರ ಪಾಲಿನ ವಾಸ್ತವ. ಅದನ್ನು ವಿರೋಧಿಸಿದರೆ ಹೊರದೇಶದ ಶತ್ರು ಎಂದು ಗುರುತಿಸಲು ಯಾವುದೇ ಯಂತ್ರ ಬೇಕಾಗುವುದಿಲ್ಲ. ಇದರಿಂದ ನಾವೆಲ್ಲರು ಸಹಬಾಳ್ವೆಯಿಂದ ಇರಬಹುದಲ್ಲವೇ?