ವಿರಾಜಪೇಟೆ, ಮಾ.03: ದಕ್ಷಿಣ ಕೊಡಗು ಭಾಗದ ಅರಣ್ಯದಂಚಿನ ಗ್ರಾಮಗಳ, ಅದರಲ್ಲಿಯೂ ನಾಗರಹೊಳೆ ಅರಣ್ಯವಲಯದ ಭಾಗಗಳಲ್ಲಿ, ಹುಲಿಗಳ ಇರುವಿಕೆಯ ಬಗ್ಗೆ ಬಲ್ಲ ಮತ್ತು ಖಚಿತ ಸುದ್ದಿಯಿದ್ದು, ಈ ವ್ಯಾಪ್ತಿಯಲ್ಲಿ ಸುಮಾರು 05 ರಿಂದ 06 ಹೆಬ್ಬುಲಿಗಳು ಸಂಚರಿಸುತ್ತಿರುವ ಬಗ್ಗೆ ಚರ್ಚೆಯಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಎರಡು ದಿನದ ಹಿಂದೆ ತಾನೆ ಆ ಭಾಗದಲ್ಲಿ ಹಸುಗಳನ್ನು ಹುಲಿ ಕೊಂದಿದ್ದು, ಮತ್ತಷ್ಟು ಪುಷ್ಟಿ ನೀಡುತ್ತಿದೆ.
ಒಂದು ವೇಳೆ ಐದಾರು ಹುಲಿಗಳು ಜನ ಜಾನುವಾರುಗಳ ಮೇಲೆ ಧಾಳಿ ಮಾಡಿದರೆ ಪರಿಸ್ಥತಿ ತೀರಾ ಹದಗೆಟ್ಟು, ತೀವ್ರ ನಷ್ಟಕಷ್ಟಗಳನ್ನು ಎದುರಿಸಬೇಕಾಗಬಹುದು. ಇದಕ್ಕೆ ಉದಾಹರಣೆಯಾಗಿ ಮೂರ್ನಾಲ್ಕು ವರ್ಷಗಳ ಹಿಂದಿನ ಘಟನೆಗಳನ್ನು ನೆನೆಸಿಕೊಳ್ಳಬಹುದು. ಅಂತ ಘಟನೆಗಳು ನಡೆಯದಿರಲಿ ಎನ್ನುವುದು ನಮ್ಮ ಆಶಯ. ಆದರೆ ಅದ್ಕಕೂ ಮುನ್ನ ಇಲಾಖೆ ಮತ್ತು ಸರ್ಕಾರ ಸೂಕ್ತ ಮುಂಜಾಗೃತಾ ಕ್ರಮ ಕೈಗೊಂಡು, ಹುಲಿಗಳ ಸೆರೆ ಹಿಡಿದರೆ ಜನ ಜಾನುವಾರುಗಳು, ಅದರಲ್ಲೂ ಕಾಫಿ, ಮೆಣಸಿನ ಕೆಲಸದಲ್ಲಿ ಮಗ್ನರಾಗಿರವ ರೈತಾಪಿ ವರ್ಗಕ್ಕೆ ಇದರಿಂದ ಭಯಮುಕ್ತ ದುಡಿಮೆಗೆ ಸಹಕಾರಿ ಆಗಬಹುದು.