ಭಾಗಮಂಡಲ, ಮಾ.21:- ಬೆಂಗಳೂರು ಮಹಾನಗರ ಸೇರಿದಂತೆ ದಕ್ಷಿಣ ಕರ್ನಾಟಕಕ್ಕೆ ಮೂಲ ಜಲಾಶ್ರಯ ನೀಡುತ್ತಿರುವ ಕೊಡಗಿಗೆ ಎಂದೂ ಕೂಡ ಆಭಾರಿಯಾಗಿರುತ್ತೇನೆ, ಈ ಪವಿತ್ರ ಭೂಮಿ ಎಂದಿಗೂ ಹಸನಾಗಿರಲಿ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಹೇಳಿದರು.
ನಾಳೆ ವಿಶ್ವ ಜಲ ದಿನದ ಅಂಗವಾಗಿ ಇಂದು ಸಂಜೆ ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ನಲ್ಲಿ ನಡೆಯುವ ಮಹಾ ಆರತಿಗೆ ಕಾವೇರಿ ತೇರ್ಥ ಕೊಂಡೊಯ್ಯುವ ಸಲುವಾಗಿ, ತಲೆಕಾವೆರಿಗೆ ಆಗಮಿಸಿದ ಅವರು, ಭಾಗಮಂಡಲದ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊಡಗು ಎಂದಿಗೂ ಕರ್ನಾಟಕದ ಹೆಮ್ಮೆ, ಇಡೀ ಬೆಂಗಳುರಿಗೆ ಕುಡಿಯುವ ನೀರು ಕೊಡುತ್ತಿರುವವರು ನೀವು ಅಷ್ಟೇ ಅಲ್ಲ, ಬಹುಪಾಲು ದಕ್ಷಿಣ ಕರ್ನಾಟಕವೇ ಕೊಡಗಿನಿಂದ ಹರಿಯುವ ನೀರನ್ನು ಆಶ್ರಯಿಸಿದೆ, ನಮಗೆಲ್ಲ ನೀರು ಕೊಡುತ್ತಿರುವ ನೀವೆಂದು ಸುಖ ಸಮೃದ್ದಿಯಿಂದ ಇರಬೇಕು ಎಂದರು.
ವಿಶ್ವ ಜಲ ದಿನದ ಅಂಗವಾಗಿ ಇಂದು ಸ್ಯಾಂಕಿ ಟ್ಯಾಂಕಿನಲ್ಲಿ ಶಾಸ್ತ್ರೋಕ್ತವಾಗಿ ಜಲ ಪೂಜೆ ನಡೆಯಲಿದೆ, ಈ ಪೂಜೆಗೆ ಕಾವೇರಿ ತಾಯಿಯ ಆಶೀರ್ವಾದ ಬೇಡಿ, ತಾಯಿಯ ಪವಿತ್ರ ಜಲವನ್ನು ಕೊಂಡೊಯ್ಯಲು ಬಂದಿದ್ದೇನೆ ಎಂದ ಅವರು, ಈಗಾಗಗಲೇ ಘೋಷಣೆ ಆಗಿರುವಂತೆ ಕೆ.ಆರ್. ಎಸ್. ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಸಲು ಎಲ್ಲಾ ತಯಾರಿಗಳು ನಡೆಯುತಿದ್ದು, ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ಆಯೋಜನೆಗೊಳ್ಳಲಿರುವ ಆ ಕಾರ್ಯಕ್ರಮದಲ್ಲಿ, ಕೊಡಗಿನ ಪಾತ್ರವೂ ಮಹತ್ವದಿರಲಿದ್ದು, ಕೊಡಗಿನ ಭಾಗವಹಿಸುವಿಕೆಗೆ ಹೆಚ್ಚಿನ ಪ್ರಾಷಸ್ತ್ಯ ನೀಡಲಾಗುವುದು ಎಂದರು.
ಈ ಹಿಂದೆ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಆರಂಭಿಸುವ ಮುನ್ನ ತಾವು ತಲೆಕಾವೇರಿಗೆ ಬಂದು ಪೂಜೆ ಸಲ್ಲಿಸಿ ಪ್ರಾಂರಂಭಿಸಿದ ಯಾತ್ರೆಯು ಜನಾಂದಲೋನವಾಗಿ ನಡೆದದನ್ನು ನೆನಪಿಸಿದ ಉಪ ಮುಖ್ಯಮಂತ್ರಿಗಳು, ಕೊಡಗಿನಿಂದ ಇಬ್ಬರೂ ಶಾಸಕರನ್ನುಆರಿಸಿ ಕಳಿಸಿದ ಜಿಲ್ಲೆಯ ಜನತೆಗೆ ಕೃತಜ್ಞತೆಯನ್ನೂ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಶಾಸಕರೂ ಆದ ಅಜ್ಜಿಕುಟ್ಟಿರ ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂಥರ್ ಗೌಡ, ಮಾಜೀ ಶಾಸಕರಾದ ಚೆಪ್ಪುಡಿರ ಅರುಣ್ ಮಾಚಯ್ಯ, ಶಾಂತೆಯಂಡ ವೀಣಾ ಅಚ್ಚಯ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ದರ್ಮಜ ಉತ್ತಪ್ಪ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.