
ದೆಹಲಿ, ಮಾ.26: ರಸ್ತೆ ಅಪಘಾತಗಳಾದಾಗ ಸಂತ್ರಸ್ತರ ನೆರವಿಗೆ ಧಾವಿಸುವ ಮೂರನೇ ವ್ಯಕ್ತಿಗೆ 25,000 ರೂ ಬಹುಮಾನ ನೀಡಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ ವರ್ಷಕ್ಕೆ ಐದು ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಇದರಿಂದ ಜಿಡಿಪಿಗೆ ಶೇ. 3 ನಷ್ಟವಾಗುತ್ತದೆ ಎಂದಿರುವ ಅವರು, ಸರಿಯಾದ ಡಿಪಿಆರ್ ಇಲ್ಲದೆ ರಸ್ತೆ ನಿರ್ಮಾಣಗೊಂಡಿರುವುದು ಅಪಘಾತಗಳಿಗೆ ಕಾರಣ ಎನ್ನುತ್ತಾರೆ.
ಅಪಘಾತಕ್ಕೊಳಗಾದ ವ್ಯಕ್ತಿಗೆ ತುರ್ತು ವೈದ್ಯಕೀಯ ನೆರವಿನ ಅವಶ್ಯಕತೆ ಇರುತ್ತದೆ. ಅದೆಷ್ಟೋ ಪ್ರಕರಣಗಳಲ್ಲಿ ಗಂಭೀರ ಗಾಯವಾಗಿ ಜೀವ ಹೋಗುತ್ತಿದ್ದರೂ ಯಾರೂ ನೆರವಿಗೆ ಮುಂದಾಗದೇ ಪ್ರಾಣ ಬಿಟ್ಟಿರುವುದುಂಟು. ಈ ಹಿನ್ನೆಲೆಯಲ್ಲಿ, ಜನರಲ್ಲಿ ಸಹಾಯ ಮನೋಭಾವನೆ ಹೆಚ್ಚಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಅಪಘಾತಗೊಂಡ ವ್ಯಕ್ತಿಗೆ ನೆರವು ನೀಡಲು ಮುಂದಾಗುವ ಯಾವುದೇ ಮೂರನೇ ವ್ಯಕ್ತಿಗೂ 25,000 ರೂ ಬಹುಮಾನ ನೀಡುತ್ತೇವೆ, ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಅಪಘಾತದಿಂದ, ಅಥವಾ ಅಪಘಾತದ ಬಳಿಕ ವ್ಯಕ್ತಿಯು ಯಾವುದೇ ಆಸ್ಪತ್ರೆಗೆ ದಾಖಲಾದರೆ, ಅವರಿಗೆ ಒಂದೂವರೆ ಲಕ್ಷದವರೆಗೂ ಧನಸಹಾಯ ನೀಡಲಾಗುವುದು. ಅಥವಾ ಏಳು ವರ್ಷಗಳವರೆಗೆ ವೈದ್ಯರಿಂದ ಆಗುವ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುವುದು’ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ರಸ್ತೆ ಅಪಘಾತದಿಂದ ಜಿಡಿಪಿಗೆ ಶೇ. 3 ನಷ್ಟ ಎಂದಿರುವ ಸಚಿವರು, ‘ಭಾರತದಲ್ಲಿ ಪ್ರತೀ ವರ್ಷ 4,80,000 ಅಪಘಾತಗಳು ಸಂಭವಿಸುತ್ತವೆ. 18ರಿಂದ 45 ವರ್ಷ ವಯಸ್ಸಿನ 1,88,000 ಮಂದಿ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ 18 ವರ್ಷಕ್ಕಿಂತ ಕೆಳ ವಯಸ್ಸಿನ 10,000 ಮಂದಿ ಇದ್ದಾರೆ. ಇದು ದೊಡ್ಡ ಸಾರ್ಜನಿಕ ಆರೋಗ್ಯ ಸಮಸ್ಯೆಯೇ ಆಗಿದೆ. ಈ ರಸ್ತೆ ಅಪಘಾತಗಳಿಂದ ಜಿಡಿಪಿಗೆ ಶೇ. 3ರಷ್ಟು ನಷ್ಟವಾಗುತ್ತಿದೆ’ ಎಂದು ನಿತಿನ್ ಗಡ್ಕರಿ ಖೇದ ವ್ಯಕ್ತಪಡಿಸಿದ್ದಾರೆ.