
ಸೋಮವಾರಪೇಟೆ, ಡಿ.27: (ತೇಲಪಂಡ ಕವನ್ ಕಾರ್ಯಪ್ಪ) ಕೊಡವರ ಶೌರ್ಯದೊಂದಿಗೆ ಮೈಸೂರು ರಾಜ ವಂಶಸ್ಥರಿಕ್ಕೆ ಐತಿಹಾಸಿಕ ಸಂಬಂಧವಿದೆ ಎಂದು ಕೊಡಗು-ಮೈಸೂರು ಸಂಸದರಾದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಬುಧವಾರ ಕೊಡವ ಸಮಾಜದಲ್ಲಿ ನಡೆದ ಸೋಮವಾರಪೇಟೆ ಕೊಡವ ಸಮಾಜದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೈದರಾಲಿ ಮತ್ತು ಟಿಪ್ಪು ಮೈಸೂರು ಸಂಸ್ಥಾನವನ್ನು ಹಿಡಿತಕ್ಕೆ ತೆಗೆದುಕೊಂಡ ಸಂದರ್ಭ, ಕೊಡಗಿನಲ್ಲಿ ಕೊಡವರ ಶೌರ್ಯದಿಂದ ಹೈದರಾಲಿ ಮತ್ತು ಟಿಪ್ಪುವಿನ ಪ್ರಾಬಲ್ಯವನ್ನು ಕುಂಠಿತಗೊಳಿಸಿದ ನಂತರ ಕೊಡಗು ಮೈಸೂರು ಸಂಸ್ಥಾನದ ಸಂಬಂಧ ಹೆಚ್ಚಾಯಿತು ಎಂದು ಗತಕಾಲದ ಸಂದರ್ಭವನ್ನು ನೆನಪಿಸಿದರು.
ಈಗಲೂ ಕೊಡವರು ಶೌರ್ಯಕ್ಕೆ ಹೆಸರಾಗಿದ್ದಾರೆ. ದೇಶಕ್ಕಾಗಿ ರಾಷ್ಟ್ರಕ್ಕಾಗಿ ತಮ್ಮದೇ ಕೊಡುಗೆ ನೀಡಿದ್ದಾರೆ. ಅಂತಹ ಸಮಾಜವಿರುವ ನಾಡಿನಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಕ್ಷೇತ್ರದ ಅಭಿವೃದ್ದಿಗೆ ಹಾಗೂ ಕೊಡಗು ಸಮಾಜದ ಅಭಿವೃದ್ಧಿ ಕಾಮಗಾರಿಗಳಿಗೆ ಸೂಕ್ತ ಅನುದಾನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟಿಸ್ ಚೆಪ್ಪುಡಿರ ಪೂಣಚ್ಚ ಮಾತನಾಡಿ, ಕೊಡವರು ಅತೀ ಕಡಿಮೆ ಸಂಖ್ಯೆಯಲ್ಲಿದ್ದರೂ ಅವರ ಶೌರ್ಯ, ದೇಶಪ್ರೇಮ ಮತ್ತು ಶಿಸ್ತಿನಿಂದ ಹೆಸರು ಇದೆ. ಇತ್ತೀಚಿನ ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ. ಚಿಕ್ಕ ಸಮುದಾಯವಾಗಿರುವುದರಿಂದ ತುಂಬ ಎಚ್ಚರಿಕೆಯಿಂದ ಇರಬೇಕು. ತಪ್ಪುಗಳಾಗದಂತೆ ಎಚ್ಚರ ವಹಿಸಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಯುವ ಸಮುದಾಯ ಸಮಾಜವನ್ನು ಕಟ್ಟವಲ್ಲಿ ಪ್ರಯತ್ನ ಮುಂದುವರಿಸಬೇಕು ಎಂದು ಹೇಳಿದರು.
ವಿರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಮಾತನಾಡಿ, ಕೊಡವ ಜನಾಂಗ ಎಂಬುದು ವಿಶಿಷ್ಟ ಸಂಸ್ಕøತಿಯನ್ನು ಹೊಂದಿದೆ. ಪೂರ್ವಜರು ಕೊಡವ ಸಂಸ್ಕøತಿ, ನಾಡನ್ನು ಕಟ್ಟಿ ಬೆಳಸುವುದಕ್ಕೆ ತ್ಯಾಗ ಮಾಡಿದ್ದಾರೆ. ಕೊಡವರ ಜನಸಂಖ್ಯೆ ಕಡಿಮೆಯಾಗುತ್ತಿದೆ. ಸಂಸ್ಕøತಿ, ಭಾಷೆ ಕಳೆದುಹೋಗಲು ಅವಕಾಶ ಮಾಡಿಕೊಡಬಾರದು. ಕೊಡವರು ರಾಜಕೀಯ ಮರೆತು ಒಗ್ಗಟ್ಟಾಗಬೇಕು ಎಂದು ಆಶಿಸಿದರು.
ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಬಿ.ಅಭಿಮನ್ಯು ಕುಮಾರ್ ಮಾತನಾಡಿ, ಪಟ್ಟಣದಲ್ಲಿ ಕೊಡವ ಸಮಾಜ ನಿರ್ಮಾಣದಲ್ಲಿ ಅನೇಕರು ಸೇವೆ ಮಾಡಿದ್ದಾರೆ. ಹಂಚೆಟ್ಟಿರ ಕುಟ್ಟಪ್ಪ ಅವರು ನೀಡಿದ ದಾನವಾಗಿ ನೀಡಿದ ಜಾಗದಲ್ಲಿ ದಾನಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಕೊಡವ ಸಮಾಜವನ್ನು ನಿರ್ಮಿಸಲಾಗಿದೆ. ಎರಡೂವರೆ ಎಕರೆ ಜಾಗವನ್ನು ಕೊಡವ ಸಮಾಜಕ್ಕಾಗಿ ಖರೀದಿಸಲಾಗಿದೆ. ವಿದ್ಯಾರ್ಥಿಗಳಿಗೋಸ್ಕರ ಕ್ಷೇಮನಿಧಿ ಸ್ಥಾಪಿಸಲಾಗಿದೆ. 2018ರಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ಥರಿಗಾಗಿ 2 ತಿಂಗಳ ಕಾಲ ಸಂತ್ರಸ್ಥರಿಗೆ ಕೊಡವ ಸಮಾಜದಲ್ಲಿ ವಸತಿ, ಸೌಕರ್ಯ ಒದಗಿಸಲಾಗಿತ್ತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮುಖ್ಯ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು, ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ, ಕೊಡವ ಸಮಾಜದ ಅಧ್ಯಕ್ಷ ಅಭಿಮನ್ಯು ಕುಮಾರ್ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಮಂಡೇಪಂಡ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಕರ್ನಲ್ ಮರುವಂಡ ತಿಮ್ಮಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ಚಿತ್ರನಟಿ ಐಮುಡಿಯಂಡ ಶ್ವೇತ ಚಂಗಪ್ಪ, ಫೆಡರೇಷನ್ ಆಫ್ ಕೊಡವ ಸಮಾಜ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಸಿನಿಮಾ ಕಲಾವಿದ ಆಧ್ಯಾ ಪೂವಣ್ಣ ಇದ್ದರು.
ಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅತಿಥಿಗಳು ಗೇನೋಲೆ ಸಂಚಿಕೆ ಪವಳಮಾಲೆ ಬಿಡುಗಡೆಗೊಳಿಸಿದರು.
ಎಂಡಿಕೆ25ಎಸ್ಪಿಟಿ3: ಸೋಮವಾರಪೇಟೆ ಕೊಡವ ಸಮಾಜದ ಸುವರ್ಣ ಮಹೋತ್ಸವದ ಅಂಗವಾಗಿ ಕೊಡವ ಸಮಾಜದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಸಂಸದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಪೊನ್ನಣ್ಣ, ಅಭಿಮನ್ಯುಕುಮಾರ್,ಅಪ್ಪಚ್ಚು ರಂಜನ್, ಸುಜಾ ಕುಶಾಲಪ್ಪ, ಮತ್ತಿತರರು ಇದ್ದರು.