ಬೆಂಗಳೂರು, ಮೆ.05: (ನಡುಬಾಡೆ ನ್ಯೂಸ್) ಕ್ರೈಸ್ತ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ. ಹಾಗಾಗಿ, ಪರಿಶಿಷ್ಟ ಸಮುದಾಯದ ವ್ಯಕ್ತಿ ಆ ಧರ್ಮಕ್ಕೆ ಮತಾಂತರಗೊಂಡ ಬಳಿಕ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ (ದೌರ್ಜನ್ಯ ತಡೆ) ಕಾಯ್ದೆಯಡಿ ರಕ್ಷಣೆ ಸಿಗುವುದಿಲ್ಲ ಎಂದು ಆಂಧ್ರ ಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.
ಪಾದ್ರಿಯೊಬ್ಬರ ಮೇಲಿನ ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಹರಿನಾಥ್ ಅವರಿದ್ದ ಏಕಸದಸ್ಯ ಪೀಠ, ವ್ಯಕ್ತಿಯೊಬ್ಬರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ನಂತರ, ಅವರು ಪರಿಶಿಷ್ಟ ಜಾತಿ ಸಮುದಾಯದ ಸದಸ್ಯನಾಗಿ ಉಳಿಯುವುದಿಲ್ಲ. ಪರಿಶಿಷ್ಟ ಜಾತಿ ಪ್ರಮಾಣಪತ್ರ ಹೊಂದಿರುವ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರೆ, ಅವರಿಗೆ ಕಾಯ್ದೆಯಡಿ ರಕ್ಷಣೆ ಇರುವುದಿಲ್ಲ ಎಂದಿರುವುದಾಗಿ barandbench.com ವರದಿ ಮಾಡಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವ್ಯಕ್ತಿಗೆ ಮಾತ್ರ ಕಾಯ್ದೆಯನ್ನು ಅನ್ವಯಿಸಬಹುದಾಗಿದೆ. ಪಾದ್ರಿ ಸ್ವಯಂಪ್ರೇರಣೆಯಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ಕಳೆದ 10 ವರ್ಷಗಳಿಂದ ಚರ್ಚ್ನಲ್ಲಿ ಪಾದ್ರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಎಸ್ಸಿ, ಎಸ್ಟಿ ಕಾಯ್ದೆಯಡಿ ಅವರಿಗೆ ರಕ್ಷಣೆ ನೀಡಲು ಅನುಮತಿಸಲಾಗದು ಎಂದು ನ್ಯಾಯಾಲಯ ಹೇಳಿದೆ ಎಂದು ವರದಿ ವಿವರಿಸಿದೆ.
ಈ ಮೂಲಕ ಪಾದ್ರಿ ವಿರುದ್ಧ ಜಾತಿ ನಿಂದನೆ ಪದ ಬಳಸಿದ ಮತ್ತು ಹಲ್ಲೆ ನಡೆಸಿದ ಗುಂಪಿನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಹಲ್ಲೆ ಮಾಡಿದವರ ವಿರುದ್ಧ ಪೊಲೀಸರು ಎಸ್ಸಿ. ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದರು. ಆದರೆ, ಪಾದ್ರಿ ಕ್ರೈಸ್ತ ಧರ್ಮೀಯರಾಗಿರುವುದರಿಂದ ಎಸ್ಸಿ ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವುದು ಕಾನೂನುಬಾಹಿರ ಎಂದು ಆರೋಪಿಗಳು ವಾದಿಸಿದ್ದರು.
ಈ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಐಪಿಸಿಯಡಿಯ ಅಪರಾಧಗಳು ಕೂಡ ಸಾಬೀತಾಗಿಲ್ಲ. ಸುಳ್ಳು ದೂರು ದಾಖಲಿಸಲಾಗಿದ್ದು, ಪ್ರಕರಣದ ಅರ್ಜಿದಾರರನ್ನು ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸುವಂತೆ ಹೇಳಿದರೆ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ ಎಂದು barandbench.com ತಿಳಿಸಿದೆ.