ನೆಸ್ಲೆ ಕಪ್ ಕೊಡಗಿನಲ್ಲಿ ಆರಂಭವಾಗಿ ಸುಮಾರು 22 ವರ್ಷಗಳು ನಡೆಯುತ್ತಾ ಬಂತು. ಆದರೆ 12 ವರ್ಷಗಳು ಕಾರಣಾಂತರದಿಂದ ನಿಂತು ಹೋಯಿತು. ಈ 22 ವರ್ಷಗಳಲ್ಲಿ ಕೊಡಗಿನಲ್ಲಿ ಹೆಚ್ಚು ಬಾರಿ ಗೋಣಿಕೊಪ್ಪ, ವಿರಾಜಪೇಟೆ, ನಾಪೋಕ್ಲು, ಸೋಮವಾರಪೇಟೆ, ಪೊನ್ನಂಪೇಟೆಗಳಲ್ಲಿ ಈ ಪಂದ್ಯಾವಳಿ ನಡೆಯಿತು. ಇದರ ಮೂಲ ಉದ್ದೇಶ ಹಾಕಿಯ ತೆರೆಯ ಮರೆಯ ಪ್ರತಿಭೆಗಳು ಹಾಗೂ ಹಾಕಿಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳನ್ನು ಸನ್ಮಾನಿಸುವುದಾಗಿತ್ತು.
ಮೊಟ್ಟ ಮೊದಲ ಬಾರಿಗೆ ದ್ವಿಭಾಷಾ ಪರಿಣಿತ, ಸಿರಿಕಂಠದ ಮನೆಯಪಂಡ ಹರೀಶ್ ನಾಚಪ್ಪ ಅವರನ್ನು ಸನ್ಮಾನಿಸುವಾಗ ಬಹಳಷ್ಟು ಜನರು ಕಿಕ್ಕಿರಿದು ತುಂಬಿದ್ದರು. ಇವರಲ್ಲದೆ ಪುಚ್ಚಿಮಾಡ ಹರೀಶ್ ಮಾಸ್ಟರ್, ಚೆಪ್ಪುಡೀರ ಶುಭಾಷ್ ಮುತ್ತಣ್ಣ, ಕುಮಾರ್ ಅಪ್ಪಚ್ಚು, ಮೋಹನ್ ಅಯ್ಯಪ್ಪ, ಚೆಪ್ಪುಡೀರ ತಮ್ಮಿ ಮಾದಯ್ಯ, ಚಾರಿಮಂಡ ತಾರ ಸೋಮಯ್ಯ, ಡಾ. ಮುಕ್ಕಾಟಿರ ಕರುಣ್ ಕಾರ್ಯಪ್ಪ, ರಾಮಯ್ಯ, ಹಾಲಪ್ಪ ಹಾಗು ನಾಯಡ ವಾಸು ಮಾಸ್ಟರ್ ಹೀಗೆ ಹಾಕಿಗೆ ಶ್ರಮಿಸಿದ ಬಹಳಷ್ಟು ಆಟಗಾರರನ್ನು ಹಾಗು ವ್ಯಕ್ತಿಗಳನ್ನು ಮುಖ್ಯ ವಾಹಿನಿಗೆ ಕರೆ ತಂದಾಗ ಪ್ರೇಕ್ಷಕರು ಕೂಡ ಇದಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದ್ದರು.
ನೆಸ್ಲೆ ಮೈದಾನ ತಯಾರಿ
ನೆಸ್ಲೆಯನ್ನು ಸ್ಕಂದ ಕಾಫಿ ಕಂಪನಿ, ತಿತಿಮತಿ ಇದನ್ನು ಕೊಡಗಿಗೆ ಪರಿಚಯಿಸಿದ ವ್ಯಕ್ತಿ ಮನೆಯಂಡ ಪ್ರತಾಪ್ ಚಿಟ್ಟಿಯಪ್ಪ, ತಿತಿಮತಿಯಲ್ಲಿ ಇವರ ತೋಟದ ಎಲ್ಲಾ ಕೆಲಸಗಾರರೊಂದಿಗೆ ಎರಡರಿಂದ ಮೂರು ಟ್ಯಾಂಕ್ ನೀರಿನೊಂದಿಗೆ ಮೈದಾನದ ಉಸ್ತುವಾರಿಗಳಾದ ಬೋಪಯ್ಯ ಮತ್ತು ಕುಟ್ಟಪ್ಪ ಇವರು 10 ದಿನಗಳಲ್ಲಿ ಎಲ್ಲಾ ರೀತಿಯ ಮೈದಾನ ಸಾಮಗ್ರಿಗಳೊಂದಿಗೆ ನೋಡಲು ಮೆರುಗು ನೀಡುವಂತಹ ಅಚ್ಚುಕಟ್ಟಾದ ಮೈದಾನ ತಯಾರು ಮಾಡುತ್ತಿದ್ದರು. ಇವರೊಂದಿಗೆ ಸಾಥ್ ನೀಡಲು ತನ್ನ ಮನೆಯ ಹೂವಿನ ಗಿಡಗಳನ್ನು ತಂದು ಮೈದಾನವನ್ನು ಶೃಂಗಾರ ಮಾಡುತ್ತಿದ್ದ ಕೊಳುವಂಡ ಸುಬ್ಬು(ಸುಬ್ರಮಣಿ) ಅವರ ಶ್ರಮವೂ ಕೂಡ ಇದರಲ್ಲಿ ಬಹಳಷ್ಟು ಇತ್ತು.
ಈ ಪಂದ್ಯಾವಳಿ ಮುಗಿಯುವವರೆಗೆ ಒಂದು ಟೆಂಟ್ ಹಾಕಿಕೊಂಡು ಬಂದ ಪ್ರೇಕ್ಷಕರಿಗೆಲ್ಲ ಉಚಿತವಾಗಿ ಕುಡಿಯುವಷ್ಟು ಕಾಫಿ ನೀಡುತ್ತಿದ್ದುದು, ಹಾಕಿ ಹಾಗು ನೆಸ್ಲೆ ನಡುವೆ ಅವಿನಾಭಾವ ಸಂಬಂಧವನ್ನು ಸೃಷ್ಟಿಸಿತ್ತು.
ನೆಸ್ಲೆಯ ವಿಶೇಷತೆ
ಒಮ್ಮೆ ಆಶಿಶ್ ಬಳ್ಳಾಳ್ ಅವರು ಬಂದು ಆಡುವಾಗ, ಪುಚ್ಚಿಮಾಡ ಸಂತೋಷ್ ಎಂಬ ಗೋಲ್ ಕೀಪರ್ ಅದ್ಭುತ ಆಟವನ್ನು ನೋಡಿ, ಅವರ ಗೋಲ್ ಕೀಪಿಂಗ್ ಪ್ಯಾಡ್ ಅನ್ನು ಇವರಿಗೆ ಕೊಟ್ಟರು ಅದು ಸಂತೋಷ್ ಅವರ ಜೊತೆ ಇಂದಿಗೂ ಇದೆ. ಸಂತೋಷ್ ಅವರು ಐದು ವರ್ಷಗಳ ಕಾಲ ನೆಸ್ಲೆ ಕಪ್ನಲ್ಲಿ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಗೆದ್ದರು.
ಒಲಂಪಿಯನ್ ಅರ್ಜುನ ಹಾಲಪ್ಪ ಅವರು ಬಿಬಿಸಿ ಪರ ಆಡಿದ್ದರು. ಅಂದು ಅವರ ಆಟದಿಂದ ಬಂದಿದ್ದ ಪ್ರೇಕ್ಷಕರನ್ನೆಲ್ಲ ಮೋಡಿ ಮಾಡಿದ್ದರು, ಅಂತಹ ಒಂದು ಅದ್ಭುತ ಆಟ ಆಡಿದರು. ಅಂದು ಇವರೊಂದಿಗೆ ಸಾಥ್ ನೀಡಿದ್ದು ಮನೆಯಪಂಡ ಹರೀಶ್ ನಾಚಪ್ಪ ಅವರ ಮಗ ಬೋಪಣ್ಣ ಅದ್ಭುತ ಆಟಗಾರ ಇವರಿಬ್ಬರ 1 to 1 ಆಟ ಎಷ್ಟು ಜನರಿಗೆ ಇಂದಿಗೂ ನೆನಪಿದೆಯೋ ತಿಳಿದಿಲ್ಲ. ಹಾಗಾಗಿ ಅರ್ಜುನ ಹಾಲಪ್ಪ ಅವರು ತಮ್ಮ ಅತ್ಯುತ್ತಮ ಸ್ಟಿಕ್ ಅನ್ನು ಬೋಪಣ್ಣ ಅವರಿಗೆ ಉಡುಗೊರೆಯಾಗಿ ನೀಡಿದರು.
ಒಮ್ಮೆ ಒಎಸ್ಸಿಸ್ ತಂಡದ ಆಟಗಾರ ರಿಕ್ಕಿ ಗಣಪತಿಯವರು ಭಾರಿಸಿದ ಗೋಲ್ ಅನ್ನು ಕ್ಯಾಮೆರಾದ ಮೂಲಕ ಸೆರೆ ಹಿಡಿದು ಗೋಲ್ ಎಂದು ಘೋಷಿಸಿದ ಅದ್ಭುತ ಕ್ಷಣವೂ ಇತ್ತು.
5 ಅತಿಥೇಯ ಆಟಗಾರರನ್ನು ಕರೆತಂದು ಆಡಿಸುವ ನಿಯಮವನ್ನು ಕೂಡ ಸಿ.ಎಚ್.ಎ ಹಾಗೂ ನೆಸ್ಲೆ ಅವರು ಜಾರಿಗೆ ತಂದರು. ಇದಲ್ಲದೆ ಪ್ರಥಮ ಬಾರಿಗೆ ತಂಡಗಳಿಗೆ ಉಚಿತವಾಗಿ ಜರ್ಸಿ ಕಿಟ್ಟನ್ನು ಕೂಡ ವಿತರಿಸಿದ್ದರು.
ಓಯಸಿಸ್, ಶಿವಾಜಿ, ಬಿಬಿಸಿ, ವಾಂಡರರ್ಸ್, ಬ್ಲೂ ಸ್ಟಾರ್, ಪ್ಯಾಲೇಸ್, ಫಾರೆಸ್ಟ್ ಸೈಡರ್ಸ್, ಅಮ್ಮತ್ತಿ ಹಾಗು ಇತರ ಬಲಿಷ್ಠ ತಂಡಗಳು ಅಂದು ನೆಸ್ಲೆ ಕಪ್ ನಲ್ಲಿ ಆಡುತ್ತಿದ್ದವು.
ಕಳೆದ ವರ್ಷ ಈ ಪಂದ್ಯಾವಳಿ ಕಾಕೋಟುಪರಂಬುನಲ್ಲಿ ನಡೆಯಿತು. ಇದನ್ನು ಅಚ್ಚುಕಟ್ಟಾಗಿ ನಡೆಸಿದ ಹಾಕಿ ಕೂರ್ಗ್ ಅವರ ಪ್ರಯತ್ನಕ್ಕೆ ಕ್ರೀಡಾಪಟುಗಳ ಸಾಥ್ ಕೂಡ ಇದ್ದು, ಈ ವರ್ಷ ಗೋಣಿಕೊಪ್ಪದಲ್ಲಿ ಪುನಃ ಇದರ ಗತ ವೈಭವ ಮತ್ತೆ ಮರುಕಳಿಸಲಿದೆ. ಇಂದು ಹಾಕಿ ಕೂರ್ಗ್ನ ಎಲ್ಲಾ ಪದಾಧಿಕಾರಿಗಳು ಸೇರಿ ನೆಸ್ಲೆ ಕಪ್ ಗಾಗಿ ಶ್ರಮಿಸುತ್ತಿದ್ದಾರೆ. ಎಲ್ಲಾ ಕ್ರೀಡಾಭಿಮಾನಿಗಳ ಪರವಾಗಿ ನಾನು ಇವರಿಗೆ ಶುಭಾಶಯಗಳನ್ನು ಕೋರುತ್ತೇನೆ.