1975 ಹಾಕಿ ವಿಶ್ವಕಪ್ ನಲ್ಲಿ ಭಾರತ ಗೆದ್ದು 2025ಕ್ಕೆ, 50 ವರ್ಷಗಳು ತುಂಬಿದ ಸಂಭ್ರಮದಲ್ಲಿ, ನವ ದೆಹಲಿಯ ಲೀ ಮೆರಿಡಿಯನ್ ಹೋಟೆಲ್ ನಲ್ಲಿ ಹಾಕಿ ಇಂಡಿಯಾದ ವತಿಯಿಂದ ಆಯೋಜಿಸಲಾದ 7ನೇ ವರ್ಷದ ಕಾರ್ಯಕ್ರಮದಲ್ಲಿ, ಹಾಕಿ ಇಂಡಿಯಾದ ಕಾರ್ಯದರ್ಶಿಗಳಾದ ಬೋಲನಾಥ್ ಸಿಂಗ್ ಅವರು 1975ರ ಹಾಕಿ ವಿಶ್ವಕಪ್ ವಿಜೇತ ತಂಡದ ಎಲ್ಲಾ ಆಟಗಾರರನ್ನು ಸ್ವಾಗತಿಸಿದರು. ಆಲಿಗರ್ ಮುಸ್ಲಿಂ ಯುನಿವರ್ಸಿಟಿಯ ಇಂಜಿನಿಯರಿಂಗ್ ಪದವೀಧರ, ಇಂಡಿಯನ್ ಏರ್ ಲೈನ್ಸ್ ನ ಮಾಜಿ ಆಟಗಾರ, 1980 ರ ಮಾಸ್ಕೋ ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಟಗಾರ ಹಾಗು 1984 ಲಾಸ್ ಏಂಜಲ್ಸ್ ಒಲಂಪಿಕ್ಸ್ ನಲ್ಲಿ ಸೆಮಿ ಫೈನಲ್ ವರೆಗೂ ತಂಡವನ್ನು ಕೊಂಡೊಯ್ದ ಹಾಕಿ ತಂಡದ ನಾಯಕ ಜಾಫರ್ ಇಕ್ಬಾಲ್ ಅವರಿಂದ ಎಲ್ಲಾ ಆಟಗಾರರಿಗೂ ವಿಶ್ವಕಪ್ ಮಾದರಿಯ ಟ್ರೋಫಿ (Replica) ಅನ್ನು ಹಾಗೂ ಈ ಆಟಗಾರರಲ್ಲಿ ನಿಧನರಾದ ಆಟಗಾರರ ಪತ್ನಿಯರಿಗೆ ಈ ಟ್ರೋಫಿಗಳನ್ನು ನೀಡಿ ಗೌರವಿಸಲಾಯಿತು. ಇದಲ್ಲದೆ ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಾಗೂ 50 ಲಕ್ಷ ನಗದನ್ನು ತಂಡಕ್ಕೆ ಹಾಕಿ ಇಂಡಿಯಾದ ವತಿಯಿಂದ ನೀಡಿ ಗೌರವಿಸಲಾಯಿತು.
ವಿಶ್ವ ಕಪ್ ಆಟವಾಡಿದ ಆಟಗಾರರ ಹೆಸರು ಹೀಗಿದೆ
ಗೋಲ್ ಕೀಪರ್ – ಲೆಸ್ಲಿ ಫರ್ನಾಂಡಿಸ್ ಹಾಗೂ ಅಶೋಕ್ ದಿವಾನ್ ಮತ್ತು ಇತರ ಆಟಗಾರರಾದ ಸುರ್ಜಿತ್ ಸಿಂಗ್, ಅಸ್ಲಾಂ ಶೇರ್ ಖಾನ್, ಮೈಕಲ್ ಕಿಂಡೊ, ಓಂಕಾರ್ ಸಿಂಗ್, ಅಜಿತ್ ಪಾಲ್, ವಿರೇಂದರ್ ಸಿಂಗ್, ಅರ್ಚರಣ್ ಸಿಂಗ್, ವಿ.ಜೆ. ಪಿಲಿಪ್ಸ್, ಶಿವಾಜಿ ಪವರ್, ಮೋಹೆಂದರ್ ಸಿಂಗ್, ಚಿಮ್ಣಿ, ಅಶೋಕ್ ಕುಮಾರ್, ಕಾಳಯ್ಯ, ಗೋವಿಂದ ಇವರುಗಳನ್ನು ಒಳಗೊಂಡಿದ್ದರು. ತಂಡದ ತರಬೇತುದಾರರಾಗಿ ಗುರು ಚರಣ್ ಸಿಂಗ್ ಬೋದಿ, ವ್ಯವಸ್ಥಾಪಕರಾಗಿ ಬಲ್ಬೀರ್ ಸಿಂಗ್ ಇದ್ದರು. ಇವರೆಲ್ಲರೂ ವಿಶ್ವದ ಖ್ಯಾತ ಆಟಗಾರರು ದೂರದೃಷ್ಟವಾಗಿ ಇಂದು ಸುರ್ಜಿತ್ ಸಿಂಗ್, ವಿರೇಂದರ್ ಸಿಂಗ್, ಶಿವಾಜಿ ಪವರ್, ಮೋಹೆಂದರ್ ಸಿಂಗ್ ಹಾಗೂ ಮೈಕಲ್ ಕಿಂಡೊ ಇವರು ನಮ್ಮ ಜೊತೆ ಇಲ್ಲ.
ವಿಶ್ವಕಪ್ ಆಟಗಾರರಿಗೆ ಕರ್ನಾಟಕ ಹಾಗೂ ಕೊಡಗು ಗೌರವ ನೀಡಬೇಕು
ಇಂದಿಗೆ ವಿಶ್ವ ಕಪ್ ಗೆದ್ದು 50 ವರ್ಷಗಳು ಕಳೆದಿವೆ, ಕರ್ನಾಟಕ ಹಾಗೂ ಕೊಡಗು, ಕೊಡಗಿನ ಕಣ್ಮಣಿಗಳಾದ ಬಿ.ಪಿ.ಗೋವಿಂದ ಹಾಗೂ ಪಿ.ಇ.ಕಾಳಯ್ಯ ಅವರನ್ನು ಸನ್ಮಾನಿಸಬೇಕು. ವಿಶ್ವಕಪ್ ಗೆದ್ದದ್ದಕ್ಕೆ ತವರೂರಿನಲ್ಲಿ ಗೌರವ ಸಿಗಬೇಕು ಎಂಬುದು ಕ್ರೀಡಾಭಿಮಾನಿಗಳ ಮನವಿ.
ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ರಾಜ್ಯದ ಸರ್ಕಾರಗಳು ಹಾಕಿಗೆ ಬಹಳಷ್ಟು ಪ್ರೋತ್ಸಾಹವನ್ನು ನೀಡುತ್ತಿದ್ದು, ಆದುದರಿಂದ ಆ ರಾಜ್ಯದ ಆಟಗಾರರು ಇಂದು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಕೊಡಗಿನಲ್ಲಿ ಗಿನ್ನಿಸ್ ದಾಖಲೆ ಆದರೂ ಕೂಡ ಭಾರತಕ್ಕೆ ಆಡುತ್ತಿರುವ ಆಟಗಾರರು ಕೇವಲ ಬೆರಳೆಣಿಕೆಯಷ್ಟು ಮಾತ್ರ.
ಕೊಡಗು ಹಾಗೂ ಕರ್ನಾಟಕದಲ್ಲಿ ಬಹಳಷ್ಟು ಹಾಕಿ ಪಂದ್ಯಾವಳಿಗಳು ನಡೆಯುತ್ತಿವೆ, ಇದಕ್ಕೆ ಹಾಕಿ ವಿಶ್ವಕಪ್ ವಿಜೇತ ಆಟಗಾರರಾದ ಹಾಕಿಯಲ್ಲಿ ಪದ್ಮಶ್ರೀ ಪಡೆದ ಏಕೈಕ ಆಟಗಾರ ಡಾ.ಎಂ.ಪಿ.ಗಣೇಶ್, ಕಾಳಯ್ಯ, ಗೋವಿಂದ ಹಾಗು ಸ್ಥಳೀಯರೇ ಆದ ಲೆಫ್ಟಿನೆಂಟ್ ಕರ್ನಲ್ ಬಿ.ಕೆ.ಸುಬ್ರಮಣಿ ಇವರನ್ನು ಆಹ್ವಾನಿಸಬಹುದಲ್ಲವೇ ? ಇಂತಹ ಪ್ರತಿಭಾವಂತ ಆಟಗಾರರಿಂದ ಯುವ ಪೀಳಿಗೆಗೂ ಮಾರ್ಗದರ್ಶನ ಸಿಕ್ಕಂತಾಗುತ್ತದೆ.
ಬಾಳೆಯಡ ಕ್ರಿಕೆಟ್ ಹಬ್ಬ
2023 ಬಾಳೆಯಡ ಕ್ರಿಕೆಟ್ ಹಬ್ಬದಲ್ಲಿ 1975ನೇ ವಿಶ್ವಕಪ್ ವಿಜೇತರಾದ ಪಿ.ಈ.ಕಾಳಯ್ಯ, ಬಿ.ಪಿ.ಗೋವಿಂದ, ವಿ.ಜೆ. ಫಿಲಿಪ್ಸ್, ಅಸ್ಲಾಂ ಶೇರ್ ಖಾನ್ ಹಾಗು ಹರ್ಚರಣ್ ಸಿಂಗ್ ಇವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ ಸನ್ಮಾನಿಸಿ ಗೌರವಿಸಲಾಯಿತು. ಇಂತಹದ್ದು ಹಾಕಿ ಪಂದ್ಯಾವಳಿಗಳಲ್ಲೂ ನಡೆಯಬೇಕಲ್ಲವೇ ?
ವಿಶ್ವಕಪ್ ತಂಡ ಕೊಡಗಿನಲ್ಲಿ
1975ನೇ ವಿಶ್ವಕಪ್ ಗೆದ್ದ ಹಾಕಿ ತಂಡ ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ನಲ್ಲಿ ಪ್ರದರ್ಶನ ಪಂದ್ಯಾವಳಿ ಆಡಿತು. ತೆರೆದ ಜೀಪಿನಲ್ಲಿ ಕಾಳಯ್ಯ ಹಾಗೂ ಗೋವಿಂದ ಅವರನ್ನು ಮೆರವಣಿಗೆ ಮಾಡಲಾಯಿತು. ಪ್ರದರ್ಶನ ಪಂದ್ಯಾವಳಿ ಕಿಕ್ಕಿರಿದ ಪ್ರೇಕ್ಷಕರ ಮುಂದೆ ನಡೆಯಿತು. ಇದೆಲ್ಲ ಮುಗಿದು ದಶಕಗಳೇ ಕಳೆದು ಹೋದವು. ಈಗ ಯಾವ ಪಂದ್ಯಾವಳಿಗಳಲ್ಲೂ ಕೂಡ ವಿಶ್ವಕಪ್ ಆಟಗಾರರು ಅತಿಥಿಗಳಾಗಿರುವುದು ಕಾಣುವುದಿಲ್ಲ. ಇದು ಹಾಕಿ ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿದೆ. ಇನ್ನಾದರೂ ಪ್ರಾಯೋಜಕರು ಹಾಗೂ ಸರ್ಕಾರವು ಎಚ್ಚೆತ್ತುಕೊಳ್ಳಲಿ, ಕನಿಷ್ಠ ಪಕ್ಷ ಬೇರೆ ರಾಜ್ಯಗಳಲ್ಲಿ ನಡೆಯುವ ಕಾರ್ಯಕ್ರಮಗಳು ಕೊಡಗಿನಲ್ಲೂ ನಡೆಯಲಿ ಹಾಗು ಪ್ರತಿಭಾವಂತ ಆಟಗಾರರನ್ನು ಗುರುತಿಸಲಿ.
✍️-ಚೆಪ್ಪುಡೀರ ಕಾರ್ಯಪ್ಪ, ಖ್ಯಾತ ಹಾಕಿ ವೀಕ್ಷಕ ವಿವರಣೆಗಾರ