
ವಿರಾಜಪೇಟೆ, ಜ.12: ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್. ನಾಚಪ್ಪ ಅವರ ವಿರುದ್ದ ವಿನಾ ಕಾರಣ ದ್ವೇಷಪೂರಿತ ಪ್ರಕರಣ ದಾಖಲಿಸಿದ್ದು, ಅವರನ್ನು ಬಂಧಿಸಿದರೆ ಪ್ರತಿಭಟನೆ ಮಾಡುವುದಾಗಿ ಕೊಡವಾಮೆರ ಕೊಂಡಾಟ ಸಂಘಟನೆ ಹೇಳಿದೆ.
ಕೇವಲ ದ್ವೇಷ ಮತ್ತು ವಿಷಯಾಂತರದ ಕಾರಣಕ್ಕಾಗಿ ನಾಚಪ್ಪ ಅವರ ವಿರುದ್ದ ದೂರು ನೀಡಲಾಗುತ್ತಿದ್ದು, ಪದೇ ಪದೇ ಇಲಾಖೆಯ ಮೇಲೆ ಒತ್ತಡ ಹೇರಿ ನಾಚಪ್ಪರನ್ನು ಬಂಧಿಸುವಂತೆ ಒತ್ತಾಯಿಸಲಾಗುತ್ತಿದೆ. ನಾಚಪ್ಪ ಅವರನ್ನ ಬಂಧಿಸಿದರೆ ಅವರ ಹೋರಾಟ ಮತ್ತು ದ್ವನಿಯನ್ನು ಅಡಗಿಸಿ, ಕೊಡವರ ಬಲ ಕುಗ್ಗಿಸಬಹುದು ಎಂಬುದು ಭ್ರಮೆ. ನಾಚಪ್ಪ ಅವರ ಹೋರಾಟ ಜನಾಂಗದ ಪರವಾಗಿದ್ದು, ಕಾನೂನು ಬದ್ಧ ಹಕ್ಕನ್ನು ಪ್ರತಿಪಾದಿಸಿದ್ದಾರೆಯೆ ಹೊರತು, ಯಾರದ್ದೇ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ಮಾಡಿಲ್ಲ. ನಾಚಪ್ಪ ಅವರನ್ನ ದ್ವೇಷದ ಒತ್ತಡಕ್ಕೆ ಮಣಿದು ಬಂಧಿಸಿ, ಅವರಿಗೆ ಅವಮಾನ ಮಾಡಿದರೆ, ಇಡೀ ಕೊಡವ ಸಮುದಾಯ ಒಕ್ಕೊರಲಿನಿಂದ ಪ್ರತಿಭಟಿಸಲಿದೆ. ಅವರ ವಿರುದ್ದದ ದೂರಿನಲ್ಲಿ ಹುರುಳಿಲ್ಲ ಅನ್ನುವ ಅರಿವಿದ್ದರೂ ಇಲಾಖೆ ಅವರ ವಿರುದ್ದ ಪ್ರಕರಣ ದಾಖಲಿಸಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಮತ್ತು ಪ್ರಕರಣವನ್ನು ತಕ್ಷಣ ಕೈಬಿಡಬೇಕೆಂದು ಆಗ್ರಹಿಸುತ್ತೇವೆ.

