
ಗೋಣಿಕೊಪ್ಪ ಜೂ 02(Nadubade News): ಈ ಹಿಂದೆ ಸಮಾಜಮುಖಿ ಚಟುವಟಿಕೆಗಳಲ್ಲಿ ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೊಡವ ಸಾಹಿತ್ಯ ಕ್ರಷಿಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಮಹಿಳೆಯರೇ ಅತೀ ಹೆಚ್ಚು ಸಾಧನೆಗೈಯ್ಯುತ್ತಿರುವುದು ಶ್ಲಾಘನೀಯ ಎಂದು ಕಾವೇರಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಮಂಡೇಪಂಡ ಸುಗುಣ ಮುತ್ತಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದು ನಾಡಿನ ಪ್ರತಿಷ್ಠಿತ ಸಂಸ್ಥೆ ಎನಿಸಿಕೊಂಡಿರುವ ‘ಕೊಡವ ತಕ್ಕ್ ಎಳ್ತ್ಕಾರಡ ಕೂಟ’ ಹಾಗೂ ‘ಕಾವೇರಿ ಎಜುಕೇಷನ್ ಸೊಸೈಟಿಯ’ ಜಂಟಿ ಆಶ್ರಯದಲ್ಲಿ ಗೋಣಿಕೊಪ್ಪ ಕಾವೇರಿ ವಿದ್ಯಾಸಂಸ್ಥೆಯಲ್ಲಿ ನಡೆದ ‘ಕೂಟ’ದ ವಿಶೇಷ ಕೊಡವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಕೊಡವ ಭಾಷೆ, ಸಾಹಿತ್ಯ, ಕಲೆ ಸೇರಿದಂತೆ ಕೊಡವ ಸಂಸ್ಕೃತಿಯ ಬೆಳವಣಿಗೆಗೆ ಅತೀ ಹೆಚ್ಚು ಕೊಡುಗೆ ನೀಡಿರುವ ಕೊಡವ ತಕ್ಕ್ ಎಳ್ತ್ಕಾರಡ ಕೂಟ ನಮ್ಮ ಕಾಲೇಜಿನಲ್ಲಿ ಈ ರೀತಿಯ ಕಾರ್ಯಕ್ರಮ ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸಲು ಪ್ರಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ನಮ್ಮ ಆಡಳಿತ ಮಂಡಳಿಯು ತಯಾರಿದ್ದು ಮತ್ತಷ್ಟು ಇಂತಹ ಕಾರ್ಯಕ್ರಮ ನಮ್ಮ ವಿದ್ಯಾಸಂಸ್ಥೆಯಲ್ಲಿ ನಡೆಯುವಂತಾಗಲಿ ಎಂದು ಆಶಿಸಿದರು.
ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಾಳೇಟಿರ ಕಾವೇರಪ್ಪ ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೊಡವ ತಕ್ಕ್ ಎಳ್ತ್ಕಾರಡ ಕೂಟವು ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ ಆಯೋಜಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿಗಳು ಈ ಅವಕಾಶವನ್ನು ಬಳಸಿಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವುದರೊಂದಿಗೆ ಸಾಹಿತ್ಯ ಕ್ರಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ‘ಕೂಟ’ ಇದುವರೆಗೆ ಮಾಡಿದ ಸಾಧನೆಯ ಮಾಹಿತಿ ನೀಡುವುದರೊಂದಿಗೆ ಎಲ್ಲರಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಮನಸಿಟ್ಟು ಪ್ರಯತ್ನಿಸಿದರೆ ಸಾಧನೆಗೆಯ್ಯಬಹುದು. ಕೊಡವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈಯ್ಯಲು ಆಸಕ್ತಿ ಇರುವವರಿಗೆ ‘ಕೂಟ’ ಎಲ್ಲಾ ರೀತಿಯ ಸಹಕಾರ ನೀಡಲು ಸದಾ ಸನ್ನದ್ಧವಾಗಿರುತ್ತದೆ. ಉತ್ತಮ ಬರಹಗಾರನಾಗಬೇಕಾದರೆ ಮೊದಲು ಉತ್ತಮ ಓದುಗ ಆಗಬೇಕು. ಉತ್ತಮ ಲೇಖನಗಳನ್ನು ಓದುವುದರಿಂದ ಉತ್ತಮ ಲೇಖಕನಾಗಬಹುದು. ಈ ದಿಕ್ಕಿನಲ್ಲಿ ಎಲ್ಲರು ಪ್ರಯತ್ನಿಸುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ‘ಕೂಟ’ದ “ಜನಪ್ರಿಯ ಕೊಡವ ಸಾಹಿತ್ಯ ಮಾಲೆ” ಯೋಜನೆಯ 190ನೆ ಹೆಜ್ಜೆಯ ಪುಸ್ತಕವಾಗಿ ಉಳುವಂಗಡ ಕಾವೇರಿ ಉದಯ ಬರೆದ ‘ಕಾಂಗತಾನ ಚುಳಿ’ , 191ನೆ ಹೆಜ್ಜೆಯ ಪುಸ್ತಕವಾಗಿ 17 ಲೇಖಕರು ಬರೆದ ‘ಕಕ್ಕಡ ಕಥೆ’ , 192ನೆ ಹೆಜ್ಜೆಯ ಪುಸ್ತಕವಾಗಿ ಕೊಟ್ಟಂಗಡ ಕವಿತ ಬೋಜಮ್ಮರವರು ಬರೆದ ‘ನಾ ಬಯಂದ ಪೂ’ ಎಂಬ ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ “ಮುದ್ದಿಯಡ ಕುಶ ಪೊನ್ನಪ್ಪ ದತ್ತಿನಿಧಿ”ಯ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿದ 17 ಲೇಖಕರಿಗೂ ಪ್ರಶಸ್ತಿ ಪತ್ರ ಮತ್ತು ಕಿರು ಕಾಣಿಕೆ ನೀಡುವುದರೊಂದಿಗೆ ವಿಜೇತ ಆರು ಲೇಖಕರಿಗೆ ಬಹುಮಾನ ನೀಡಲಾಯಿತು. ನಂತರ ನಡೆದ ಕೊಡವ ಭಾಷೆಯ ಹಾಡುಗಾರಿಕೆ ಮತ್ತು ಓದುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ಹಾಗೂ ಭಾಗವಹಿಸಿದವರೆಲ್ಲರಿಗೂ ಕಿರು ಕಾಣಿಕೆಯೊಂದಿಗೆ ಪ್ರಶಂಸನಾ ಪತ್ರ ನೀಡಲಾಯಿತು.
ಪುಸ್ತಕದ ಲೇಖಕಿಯರಾದ ಉಳುವಂಗಡ ಕಾವೇರಿ ಉದಯ ಹಾಗೂ ಕೊಟ್ಟಂಗಡ ಕವಿತ ಬೋಜಮ್ಮ ತಮ್ಮ ಸಾಹಿತ್ಯ ಕ್ರಷಿಯ ಸಂದರ್ಭದ ಅನುಭವ ಹಾಗೂ ಕ್ರತಿಯಲ್ಲಿನ ಸಾಹಿತ್ಯ ತುಣುಕುಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ದಾನಿಗಳಾದ ಮೇಚಮಡ ಮಲ್ಲಿಗೆ ಪೂವಮ್ಮ, ಮುದ್ದಿಯಡ ಪದ್ಮ ಕುಶಾಲಪ್ಪ, ಚಿಂಡಮಾಡ ಸರಿತ ಅಶೋಕ್, ಕೊಟ್ಟಂಗಡ ವಾಸುದೇವ ಹಿರಿಯರಾದ ಡಾ. ಕಾಳಿಮಾಡ ಕೆ.ಶಿವಪ್ಪ ಉಪಸ್ಥಿತರಿದ್ದರು.
‘ಕೂಟ’ದ ಸದಸ್ಯೆ ಅಜ್ಜಮಾಡ ಸಾವಿತ್ರಿ ಪ್ರಾರ್ಥಿಸಿ, ಉಪಾಧ್ಯಕ್ಷ ಚೆಂಬಾಂಡ ಶಿವಿ ಭೀಮಯ್ಯ ಸ್ವಾಗತಿಸಿ, ಸಹ ಕಾರ್ಯದರ್ಶಿ ಬೊಜ್ಜಂಗಡ ನಿತಿನ್ ನಂಜಪ್ಪ ಲೇಖಕರ ಹಾಗೂ ದಾನಿಗಳನ್ನು ಪರಿಚಯಿಸಿದರು, ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ನಿರೂಪಿಸಿ, ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ ವಂದಿಸಿದರು.
ಈ ಸಂದರ್ಭ ‘ಕೂಟ’ ಇದುವರೆಗೆ ಬಿಡುಗಡೆಗೊಳಿಸಿದ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟವನ್ನು ‘ಕೂಟ’ದ ಸದಸ್ಯ ಬೋಡಂಗಡ ಕಾರ್ತಿಕ್ ನಿರ್ವಹಿಸಿದರು.