Site icon nadubadenews.com

ಸರ್ವೇ ಮತ್ತು ನೋಂದಣಿ ಇಲಾಖೆಗಳ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ  ಶಾಸಕ ಡಾ.ಮಂಥರ್‌ ಗೌಡ ಚಾಲನೆ

Spread the love

ಸೋಮವಾರಪೇಟೆ, ಜ.07: (ತೇಲಪಂಡ ಕವನ್‌ ಕಾರ್ಯಪ್ಪ) ತಾಲ್ಲೂಕು ಆಡಳಿತ ಸೌಧದಲ್ಲಿರುವ ಸರ್ವೇ ಮತ್ತು ನೋಂದಣಿ ಇಲಾಖೆಗಳ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ರಮಕ್ಕೆ ಶಾಸಕ ಡಾ. ಮಂತರ್ ಗೌಡ ಅವರು ಚಾಲನೆ ನೀಡಿದರು.

  ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚಿನ ಕಾಲ ಶೀತ ಹವಾಮಾನ ಇರುವುದರಿಂದ ಕಾಗದ ರೂಪದಲ್ಲಿರುವ ಭೂ ದಾಖಲೆಗಳು ನಾಶವಾಗಿವೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದಕ್ಕೆ ಚಾಲನೆ ನೀಡಿದೆ. ನಮ್ಮ ರಾಜ್ಯದ ಸಾಕಷ್ಟು ಭೂ ದಾಖಲೆಗಳು ಇಂದಿಗೂ ತಮಿಳುನಾಡಿನಲ್ಲಿ ಸೇರಿವೆ. ನಮ್ಮ ತಾಲ್ಲೂಕಿನಲ್ಲಿ 100 ಕೋಟಿಗೂ ಹೆಚ್ಚಿನ ದಾಖಲೆಗಳನ್ನು ಡಿಜಿಲೀಕರಣ ಮಾಡಬೇಕಿದೆ. ಇದರಿಂದ ನಮ್ಮ ಎಲ್ಲ ದಾಖಲೆಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದು. ಮತ್ತು ದಾಖಲೆಗಳನ್ನು ತಿದ್ದುವುದು, ಕಳವು ಮಾಡುವುದನ್ನು ತಪ್ಪಿಸಲು ಅವಕಾಶವಾಗುವುದು ಎಂದರು.

 ಕಚೇರಿ ಸಿಬ್ಬಂದಿಗಳು ಜಾಗ್ರತೆಯಿಂದ ದಾಖಲಾತಿಯನ್ನು ಡಿಜಿಲೀಕರಣ ಮಾಡಬೇಕು. ಮೊದಲು ಬಂದಿರುವ ರೈತರ ದಾಖಲೆಗಳನ್ನು ಮೊದಲು ನೋಂದಣಿ ಮಾಡಬೇಕು. ಯಾವುದೇ ಗೊಂದಲಗಳಿಗೆ ಅವಕಾಶವಾಗದ ರೀತಿಯಲ್ಲಿ ಕೆಲಸ ಮಾಡಬೇಕೆಂದು ತಿಳಿಸಿದರು.

 ಸೋಮವಾರಪೇಟೆ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಮಾತನಾಡಿ, ಕಂದಾಯ ಇಲಾಖೆಯಲ್ಲಿನ ಎಲ್ಲ ದಾಖಲಾತಿಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಮುಖ ಯೋಜನೆಯನ್ನು ರಾಜ್ಯದಾದ್ಯಂತ  ಹಮ್ಮಿಕೊಂಡಿದೆ. ದಾಖಲೆ ರಕ್ಷಣೆಯೊಂದಿಗೆ ರೈತರಿಗೆ ತಕ್ಷಣ ದಾಖಲಾತಿ ನೀಡಲು ಅವಕಾಶವಾಗುವುದು. ಕಳೆದ ಒಂದು ವಾರದ ಹಿಂದಿನಿAದಲೇ ೭ ಸಾವಿರ ದಾಖಲಾತಿಯನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಶೀಘ್ರದಲ್ಲಿಯೇ ಎಲ್ಲ ದಾಖಲಾತಿ ಡಿಜಿಟಲೀಕರಣ ಮಾಡಿ, ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು. 

 ತಾಲ್ಲೂಕು ಕಚೇರಿಯ ಆಹಾರ ಶಾಖೆಗೆ ಹಾಗೂ ಭೂ ದಾಖಲೆಗಳ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

   ಈ ಸಂದರ್ಭ ಕುಶಾಲನಗರ ತಾಲ್ಲೂಕಿನ ತಹಶೀಲ್ದಾರ್ ಕಿರಣ್ ಗೌರಯ್ಯ, ಎಡಿಎಲ್‌ಆರ್ ಪರಮೇಶ್ ಮತ್ತಿತರರು ಇದ್ದರು.

Exit mobile version