
ಮಡಿಕೇರಿ, ಮಾ.05: ರಾಜ್ಯ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಧೋರಣೆಯನ್ನು ಅನುಸರಿಸುತಿದ್ದು, ಕೂಡಲೇ ಅಭಿವೃದ್ದಿ ಕಾರ್ಯಗಳಿಗೆ ಒತ್ತು ನೀಡಬೇಕು ಮತ್ತು ಕೊಡಗು ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿ ಕೊಡಗು ಬಿಜೆಪಿ ಘಟಕದಿಂದ ದಿನಾಂಕ 6-3-2025ರ ಗುರುವಾರ ಬೆಳಿಗ್ಗೆ 10 ಗಂಟೆಯಿಂದ, 7-3-2025ರ ಶುಕ್ರವಾರ ಮಧ್ಯಾಹ್ನ 2-00 ಗಂಟೆಯ ತನಕ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಏಕಾಏಕಿ ಭಾರತೀಯ ಜನತಾ ಪಾರ್ಟಿಯ ಸರ್ಕಾರ ಜಿಲ್ಲೆಗೆ ನೀಡಿದ ಕೊಡಗು ವಿಶ್ವ ವಿದ್ಯಾನಿಲಯವನ್ನು ಅನುದಾನದ ಕೊರತೆಯ ನೆಪವೊಡ್ಡಿ ರದ್ದು ಪಡಿಸಲು ಚಿಂತಿಸಿದೆ, ಜಿಲ್ಲೆಯ ರೈತಾಪಿ ಜನರಿಗೆ ಮಾರಕವಾಗಿರುವ ಸಿ & ಡಿ ಜಮೀನನ್ನು ರೈತರಿಂದ ಕಿತ್ತು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡುವ ಹುನ್ನಾರ ನಡೆಸಿದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟ 25,000 ಕೋಟಿ ಅನುದಾನವನ್ನು ಉಚಿತ ಭಾಗ್ಯಗಳ ಬಳಕೆಗೆ ಬಳಸಿರುವುದನ್ನು ಖಂಡಿಸಿ ಕೊಡಗು ಜಿಲ್ಲಾ ಬಿ.ಜೆ.ಪಿ. ವತಿಯಿಂದ ಅಹೋರಾತ್ರಿ ಧರಣಿಯನ್ನು ಮಡಿಕೇರಿ ನಗರದಲ್ಲಿರುವ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ.
ಈ ಅಹೋರಾತ್ರಿ ಧರಣಿಗೆ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಹಿತೈಷಿಗಳು, ಚುನಾಯಿತ ಪ್ರತಿನಿದಿಗಳು ನಾಯಕರುಗಳು ಹಾಗೂ ಜಿಲ್ಲೆಯ ಎಲ್ಲಾ ಸಾಮಾಜಿಕ ಸಂಘಟನೆಗಳು, ವಿದ್ಯಾರ್ಥಿಗಳು ಹಾಗೂ ಪೋಷಕ ವರ್ಗದವರು ಮತ್ತು ನಾಗರಿಕ ಬಂಧುಗಳು ಬಂದು ನಮ್ಮೊಂದಿಗೆ ಭಾಗವಹಿಸಿ ಜಿಲ್ಲೆಗೆ ನ್ಯಾಯ ಒದಗಿಸಿಕೊಡಬೇಕಾಗಿ ಮತ್ತು ಜಿಲ್ಲೆಯನ್ನು ಅಪಾಯದಿಂದ ಕಾಪಾಡಿಕೊಳ್ಳಬೇಕಾಗಿ ಅವರು ಮನವಿ ಮಾಡಿದ್ದಾರೆ.
ಈ ಪ್ರತಿಭಟನೆಗೂ ಸರ್ಕಾರ ಬಗ್ಗದಿದ್ದಲ್ಲಿ ಕೊಡಗು ಬಂದ್ಗೆ ಕರೆಕೊಡವುದಾಗಿ ಅವರು ಘೋಷಿಸಿದ್ದಾರೆ.