ಕಾಕೋಟ್ಪರಂಬು, ಜ.10: (ಕುಂಞಿರ ಗಿರೀಶ್ಭೀಮಯ್ಯ) ವರ್ಷಕ್ಕೊಮ್ಮೆ ಒಟ್ಟು ಸೇರಿ, ಒಂದು ಪಾರ್ಟಿ ಮಾಡಿದರೆ ಸಾಲದು, ನಮಗೆ ವಯಸ್ಸಾದಂತೆ ನಮ್ಮ ಹಿಂದೆ ಬರುವ ಹೊಸಬರಿಗೆ ಏನಾದರೂ ಹೊಸತನ್ನು ಪರಿಚಯಿಸುವ ಪ್ರಯತ್ನದೊಂದಿಗೆ, ಬಡವರಿಗೆ ಮತ್ತು ಪರಿಸರಕ್ಕೆ ಪೂರಕ ಕಾರ್ಯಗಳನ್ನು ಮಾಡೋನ ಎಂದು, ಕಡಂಗಮರೂರು, ವಿಜಯ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಹತ್ತನೆ ತರಗತಿ ಉತ್ತೀರ್ಣರಾದ 1992-93ರ ಸಾಲಿನ ವಿದ್ಯಾರ್ಥಿಗಳ ವಾರ್ಷಿಕ ಸಮ್ಮಿಲನದಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.
ಜನವರಿ 7ರಂದು ಮೈಸೂರಿನ ಸಿಂಪ್ಲಿ ಕೊಡವಾಸ್ ಹೊಟೇಲ್’ನ ಸಭಾಂಗಣದಲ್ಲಿ ನಡೆದ, ಐದನೇ ವರ್ಷದ ಸ್ನೇಹ ಸಮ್ಮಿಲನದಲ್ಲಿ ಪಾಲ್ಗೊಂಡಿದ್ದ,ಸುಮಾರು ಮೂವತ್ತು ಸದಸ್ಯರು ಒಟ್ಟಾಗಿ ಮುಂದಿನ ದಿನಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಚರ್ಚಿಸಿದರು.
ಬೆಂಗಳೂರಿನಲ್ಲಿ ಉದ್ದಿಮೆ ನಡೆಸುತ್ತಿರುವ ಮಾತಂಡ ನಾಚಪ್ಪನವರು ಪ್ರಾಸ್ತಾವಿಕವಾಗಿ ಎಲ್ಲಾ ಸದಸ್ಯರಿಗೆ ಸ್ವಾಗತಿಸಿದರು, ನಂತರ ಮುಂದುವರೆದು ಮಾತಾಡಿದ ಅವರು, ಕೊಡಗಿನಲ್ಲಿ ಅಂದು ನಾವು ಓದಿದ ಒಳ್ಳೆಯ ಸರ್ಕಾರಿ ಶಾಲೆಗಳ ದುಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು ಮತ್ತು ಅದರ ಸುಧಾರಣೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ತಮ್ಮ ವಿಧ್ಯಾರ್ಥಿ ಜೀವನದಲ್ಲಿ ತಮಗೆ ವಿದ್ಯೆ ಕಲಿಸಿದ ಗುರುಗಳ ಶ್ರಮ ಅಪಾರವಾಗಿತ್ತು. ಅದಲ್ಲದೆ ಬದುಕಿನ ವಿಷಯ ಬಂದಾಗ ನಮಗೆ ನಾವೆ ಶ್ರಮಪಟ್ಟು ಸಹಪಾಠಿಗಳೆಲ್ಲರೂ ಒಂದು ಹಂತದಲ್ಲಿ ಬದುಕಿನ ದಾರಿಯನ್ನು ಕಂಡುಕೊಂಡು ನೆಮ್ಮದಿಯ ಜೀವನ ನಡೆಸುತ್ತಿರುವುದು ಸಂತೋಷಕರ ವಿಷಯ ಎಂದರು
ಅಮೇರಿಕದಲ್ಲಿ ನೆಲೆಸಿ, ಹೆಚ್. ಪಿ ಕಂಪನಿಯಲ್ಲಿ ಉಪ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿರುವ ಪಟ್ಟಚೆರುವಂಡ ಮೊಣ್ಣಪ್ಪರವರು ಮಾತನಾಡಿ, ವರ್ಷಕೊಮ್ಮೆ ನಾವು ನಡೆಸಿಕೊಂಡು ಬರುವ ಸಮ್ಮಿಲನ ಕಾರ್ಯಕ್ರಮ ನಮ್ಮ ಬದುಕಿನಲ್ಲಿ ಸಂತೋಷವನ್ನು ತರುತ್ತದೆ. ಇದೊಂದೆ ಅಲ್ಲದೆ ಇದರಾಚೆಗೆ ನಮ್ಮ ತಂಡದಿಂದ ಸಾರ್ವಜನಿಕರಿಗೆ ಮತ್ತು ಮುಂದೆ ಬರುವಂತ ಮಕ್ಕಳಿಗೆ ಅವರ ಕಷ್ಟಗಳಿಗೆ ನೆರವಾಗುವ ಉದ್ದೇಶವನ್ನು ಇಟ್ಟುಕೊಳ್ಳುವುದು ಹಾಗೂ ಬದಲಾದ ಕಾಲಕ್ಕನುಗುಣವಾಗಿ ಚಿಂತಿಸಿ ಒಳ್ಳೆಯ ಕೆಲಸ ಮಾಡಬಹುದೆಂದು ಅಭಿಪ್ರಾಯಪಟ್ಟರು.
ಮತ್ತೊರ್ವ ಸದಸ್ಯರಾದ ಕುಂಞೀರ ಗಿರೀಶ್ ಭೀಮಯ್ಯನವರು ಮಾತನಾಡಿ, ನಮ್ಮಲ್ಲಿ ಯಾರು ಎಷ್ಟೇ ದೊಡ್ಡ ಕೆಲಸದಲ್ಲಿದ್ದರು, ನಮ್ಮ ಪದ್ದತಿ ಸಂಸ್ಕೃತಿಯ ನೆರಳಲ್ಲಿಯೆ ಜೀವಿಸುವುದನ್ನು ಬೆಳೆಸಿಕೊಳ್ಳಬೇಕು ಹಾಗೂ ಸ್ವಚ್ಚ ಭಾರತದ ಪರಿಕಲ್ಪನೆಯಡಿಯಲ್ಲಿ ನಮ್ಮ ಮನೆ, ನಾವು ನಿತ್ಯ ಓಡಾಡುವ ಜಾಗ, ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದರ ಜೊತೆಗೆ, ನಮ್ಮ ಮಕ್ಕಳಿಗೂ ಮತ್ತು ಸಾರ್ವಜನಿಕರಿಗೆ ಸ್ವಚ್ಚತೆಯ ಅರಿವು ಮೂಡಿಸುವ ಸಲುವಾಗಿ ಚಿಕ್ಕದಾಗಿ ಚೊಕ್ಕವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡು, ಜಾಗ್ರತಿ ಮೂಡಿಸುವಂತೆ ಆಗಬೇಕು ಎಂದರು.
ಸೈನ್ಯದಲ್ಲಿ ಸುಬೇದಾರ್ ಮೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪಂದ್ಯಂಡ ರಾಶಿ ಸುಬ್ರಮಣಿಯವರು ಮಾತನಾಡಿ, ಹಿಂದೆ ಭಾರತ ಸೈನ್ಯದಲ್ಲಿ ಕೊಡಗಿನ ಒಂದೊಂದು ಮನೆಯಲ್ಲೂ ಸೈನಿಕರು ಇರುತ್ತಿದ್ದರು. ಈಗೀಗ ಆ ಸಂಖ್ಯೆ ತೀರಾ ಇಳಿಮುಖ ಆಗುತ್ತಿದೆ. ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಲು ಮಕ್ಕಳಿಗೆ ತಂದೆ ತಾಯಿಯ ಪ್ರೋತ್ಸಾಹ ಬಹಳ ಮುಖ್ಯ ಎಂದು ಹೇಳಿದರು.
ತಂಡದಲ್ಲಿದ್ದ ಮತ್ತೊಬ್ಬ ಮಾಜಿ ಸೈನಿಕ (ಆರು ತಿಂಗಳ ಹಿಂದೆ ಸೇವೆಯಿಂದ ನಿವೃತ್ತಿ) ಮಾತಂಡ ಸೂರಜ್ ಗಣಪತಿಯವರು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡುವುದು ಪುಣ್ಯದ ಕೆಲಸ, ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಈಗಿನ ಮಕ್ಕಳು ಸೈನ್ಯಕ್ಕೆ ಸೇರುವಂತಾಗಬೇಕೆಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಇತರ ಸದಸ್ಯರಾದ ಟೈನಾ, ಪಟ್ಟು ಲೀಲಾವತಿ, ಕಾಳಪ್ಪ, ರಾಜೇಶ್ ಮೇದಪ್ಪ, ಡ್ಯಾನಿ ನಾಣಯ್ಯ, ದಿವ್ಯ, ಇಂದಿರ, ಜಯಂತಿ, ರೇಖಾ ಕುಮಾರಿ, ಕಾಳಯ್ಯ, ಜನಾರ್ದನ, ಭಾರತಿ, ಸರು ತೇಜಾವತಿ, ಸುನೀತ ಕುಮಾರಿ, ಮುತ್ತಣ್ಣ, ಹೇಮಾವತಿ, ಸಂತೋಷ್ ಸುವರ್ಣ ಸೇರಿದಂತೆ ಎಲ್ಲರೂ ಮಾತನಾಡಿ ಮುಂದಿನ ದಿನಗಳಲ್ಲಿ ಈ ತಂಡದಿಂದ ಒಳ್ಳೆಯ ಕಾರ್ಯಕ್ರಮವನ್ನು ರೂಪಿಸಿಕೊಂಡು ಹೋಗುವ ನಿರ್ಣಯ ಕೈಗೊಳ್ಳಲಾಯಿತು.
ಮೊದಲಿಗೆ ಸದಸ್ಯರಾದ ಮಂಡೇಟಿರ ಟೈನಾ ಪ್ರಾರ್ಥಿಸಿದರು. ಪಟ್ಟು ಲೀಲಾವತಿ ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು. ಊಟೋಪಚಾರದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.