
ವಿರಾಜಪೇಟೆ ಜೂ.01 (Nadubade News): ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ (ರಿ) ವತಿಯಿಂದ, ರಾಜ್ಯಾದ್ಯಂತ ನಡೆಯುತ್ತಿರುವ ಅನಿರ್ದಿಷ್ಟ ಅವಧಿ ಮುಷ್ಕರದ ಭಾಗವಾಗಿ, ವಿರಾಜಪೇಟೆಯ ಪೌರ ಸೇವಾ ನೌಕರರು, ವಿರಾಜಪೇಟೆಯ ಪುರಾಸಭೆ ಆವರಣದಲ್ಲಿ ಮುಷ್ಕರದಲ್ಲಿ ತೊಡಗಿದರು. ಪೌರ ಸೇವಾ ನೌಕರರ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಈ ಪ್ರತಿಭಟನೆ ನಡೆಯುತ್ತಿದೆ. ವಿರಾಜಪೇಟೆಯಲ್ಲಿ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಮಾನ್ಯ ಶಾಸಕರು, ಪುರಸಭೆ ನೌಕರರನ್ನು ಮಾತನಾಡಿಸಿ ಅವರ ಬೇಡಿಕೆಗಳನ್ನು ಆಲಿಸಿದರು. ಬಳಿಕ ವಿರಾಜಪೇಟೆಯಲ್ಲಿ ತಾವು ಪುರಸಭೆ ನೌಕರರ ಬೇಡಿಕೆಗಳಿಗೆ ಈ ಹಿಂದೆ ಸ್ಪಂದಿಸಿರುವುದನ್ನು ನೆನಪಿಸಿದ ಮಾನ್ಯ ಶಾಸಕರು, ಪ್ರತಿಭಟನೆಯನ್ನು ಕೈ ಬಿಟ್ಟು ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡಿದರು. ಮೊದಲಿಗೆ ಪುರಸಭೆ ನೌಕರರ ಸಂಘದ ಪದಾಧಿಕಾರಿಯೊಬ್ಬರು ಇದಕ್ಕೆ ಒಪ್ಪದಿದ್ದಾಗ, ಮಾನ್ಯ ಶಾಸಕರು ನೈರ್ಮಲ್ಯ ವಿಷಯದಲ್ಲಿ ಯಾವುದೇ ರಾಜಿ ಮಾಡಲು ಸಾಧ್ಯ ಇಲ್ಲದಿರುವುದರಿಂದ ತಾವೇ ಖುದ್ದಾಗಿ ಸ್ವಚ್ಛತಾ ಕಾರ್ಯ ಮಾಡುವುದಾಗಿ ತಿಳಿಸಿ, ಸ್ವತ ಸ್ವಚ್ಛತ ವಾಹನದ ಚಾಲಕ ಸ್ಥಾನದಲ್ಲಿ ಕುಳಿತುಕೊಂಡರು. ಶಾಸಕರ ಕಾರ್ಯ ವೈಖರಿಯ ಬಗ್ಗೆ ಅಪಾರ ಮೆಚ್ಚುಗೆ ಹಾಗೂ ಭರವಸೆ ಇರುವ ವಿರಾಜಪೇಟೆ ಪುರಸಭೆ ನೌಕರರು, ಕೂಡಲೇ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾದರು.
ಪುರಸಭೆ ದಿನಗೂಲಿ ನೌಕರರ ಮನವೊಲಿಸುವ ಸಂದರ್ಭದಲ್ಲಿ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಥಿಕಾರದ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ ಹಾಗೂ ಉಪಾಧ್ಯಕ್ಷೆ ಮತ್ತು ಸದಸ್ಯರು, ಸರಕಾರದ ವಿವಿಧ ನಾಮನಿರ್ದೇಶಕ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.