
ನಡುಬಾಡೆ ಸಂಪಾದಕೀಯ, ಮಾ.26:- ಕನ್ನಡ ಚಿತ್ರ ರಂಗ ಕಂಡ ಅತ್ಯಂತ ಯಶಸ್ವಿ ನಿರ್ದೇಶಕ, ಕೊಡವ ಕಲಾ ಲೋಕಕ್ಕೂ ಅಗಾಧ ಕೊಡುಗೆಯನ್ನು ನೀಡಿದ್ದ, ಎ.ಟಿ. ರಘು ಎಂದೇ, ಖ್ಯಾತರಾಗಿದ್ದ, ಪುಟ್ಟಣ್ಣ ಕಣಗಾಲ್, ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿದ್ದ ಆಪಾಡಂಡ ಟಿ. ರಘು ಅವರು ಇತ್ತೀಚೆಗೆ ನಮ್ಮನ್ನ ಅಗಲಿದರು. ಇಂತಃ ಮೇರು ಕಲಾವಿಧನಿಗೆ ಸರ್ಕಾರವಾಗಲಿ ಸಂಘ ಸಂಸ್ಥೆಗಳಾಗಲಿ, ಚಿತ್ರ ರಂಗವಾಗಲಿ, ಕೊಡವ ಸಮಾಜಗಳಾಗಲೀ, ಸಲ್ಲಿಸಬೇಕಾದ ಗೌರವ ಸಲ್ಲಿಸದೆ, ಕಾಟಚಾರಕ್ಕೆ ಎಂಬಂತೆ ಅಲ್ಲೊಂದು ಇಲ್ಲೊಂದು ಹೇಳಿಕೆಗಳ ಮೂಲಕ ಸಂತಾಪ ಸೂಚಿಸಿದ್ದು ಸರಸ್ವತಾ ಲೋಕಕ್ಕೆ ಮಾಡಿದ ಅತ್ಯಂತ ಘೋರ ಅಪಮಾನ.
ಎ.ಟಿ. ರಘು ಎಂದರೆ 1980-90ರ ಕನ್ನಡ ಚಲನಚಿತ್ರ ಲೋಕದಲ್ಲಿ ಗೆಲ್ಲುವ ಕುದುರೆ, ನಿರ್ದೇಶಿಸಿದ ಕನ್ನಡ ಚಿತ್ರರಂಗದ ಮೇರು ನಟ ಅಂಬರೀಷ್ ಅಂತವರನ್ನ ಚಿತ್ರ ರಂಗದ ಉತ್ತುಂಗಕ್ಕೆ ಏರಿಸಿದವರು. ಆ ಕಾಲಗಟ್ಟದಲ್ಲಿ ಸುಮಾರು 57 ಕನ್ನಡ ಸಿನೇಮಗಳನ್ನು ನಿರ್ದೇಶಿಸಿ, ಹಲವು ಸಿನೆಮಾಗಳಿಗೆ ನಿರ್ಮಾಣವನ್ನೂ ಮಾಡಿದವರು ಎ.ಟಿ. ರಘು.
ಇಷ್ಟೇ ಅಲ್ಲ ಸುಮಾರು ಐದು ಸುದೀರ್ಘ ಧಾರವಾಹಿಗಳನ್ನು ನಿರ್ದೇಶಿಸಿ, ನಿರ್ಮಿಸಿ ಕರ್ನಾಟಕ ಮಾತ್ರ ಅಲ್ಲ, ವಿಶ್ವದಾದ್ಯಂತ ಕೊಡವ ಭಾಷೆ, ಪದ್ದತಿ ಪರಂಪರೆಯನ್ನು ಪಸರಿಸಲು ಶ್ರಮಿಸಿಸಿದವರು ಆಪಾಡಂಡ ತಿಮ್ಮಯ್ಯ ರಘು. ಇವರ ಅಗಲಿಗೆಕೆ ಸಲ್ಲಬೇಕಿದ್ದ ಕನಿಷ್ಟ ಗೌರವವೂ ಸಿಗಲಿಲ್ಲ.
ಇಂತಃ ಒಬ್ಬ ಮೇರು ಕಲಾ ಪೋಷಕ, ಕಲಾ ರಕ್ಷಕ, ಕಲಾವಿಧನ ಅಗಲಿಕೆಗೆ ಸ್ವತಃ ಮುಖ್ಯ ಮಂತ್ರಿಗಳು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಬೇಕಿತ್ತು. ಸರ್ಕಾರಿ ಗೌರವದ ಅಂತಿಮ ವಿದಾಯ ಸಲ್ಲಬೇಕಿತ್ತು, ಅಂದು ವಿಧಾನ ಸಭಾ ಅದಿವೇಶನ ನಡೆಯುತಿತ್ತು, ಈ ಸಂದರ್ಭ ಸದನದಲ್ಲಿ ಸಂತಾಪ ಸೂಚಿಸಿ ನಿರ್ಣಯ ಅಂಗೀಕರಿಸಬೇಕಿತ್ತು. ಇವೆಲ್ಲ ಮಾಡುವುದಿರಲಿ ಸರ್ಕಾರದಿಂದ ಅಧಿಕೃತವಾದ ಒಂದು ಸಂತಾಪ ಸೂಚಕ ಮಾದ್ಯಮ ಹೇಳಿಕೆಯೂ ಬರಲಿಲ್ಲ.
ಇನ್ನು ಚಲನಚಿತ್ರ ಉದ್ಯಮಕ್ಕೆ ಸಂಭಂದಿಸಿದಂತೆ ಹತ್ತಾರು ಸಂಘಟನೆಗಳಿವೆ ಚಿತ್ರೋದ್ಯಮದ ಎಲ್ಲಾ ಸಂಘಟನೆಗಳು ಅಥವಾ ಬ್ರಮುಖ ಕಲಾವಿಧರು ಅಂತಿಮ ದರ್ಶನದಲ್ಲಿ ಭಾಗವಹಿಸಬೇಕಿತ್ತು, ಅಂತಿಮ ವಿದಾಯವನ್ನು ಗೌರವಯುತವಾಗಿ ನೀಡಬೇಕಿತ್ತು, ಆದರೆ ಬೆರಳೆಣಿಕೆಯ ಕೆಲವವರನ್ನು ಬಿಟ್ಟರೆ, ಯಾವ ಕಲಾವಿಧರನ್ನೂ ಆ ದಿನ ಕಾಣಲಿಲ್ಲ.
ಇನ್ನು ಆಪಾಡಂಡ ರಘು ಅವರು ಕೊಡವ ಸಮುದಾಯಕ್ಕೆ ಸೇರಿದವರು ಮಾತ್ರವಲ್ಲ, ಕೊಡವ ಭಾಷೆ ಕಲೆಗೂ ಅಭೂತಪೂರ್ವ ಸೇವೆಯನ್ನು ಸಲ್ಲಿಸಿದವರು. ಕೊಡವ ಪದ್ದತಿ, ಪರಂಪರೆ, ಶೌರ್ಯವನ್ನು ಬಿಂಬಿಸುವ ಸುಮಾರು 5ಕ್ಕೂ ಹೆಚ್ಚು ಧಾರವಾಹಿಗಳನ್ನು ಡಿಡಿ ಚಂದನ ವಾಹಿನಿ ಮತ್ತು ಕೆಲ ಖಾಸಗೀ ವಾಹಿನಿಗಳ ಮೂಲಕವೂ ನಿರ್ದೇಶಿಸಿ ವಿಶ್ವದಗಲಕ್ಕೂ ಕೊಡವಾಮೆಯ ಬೀರ್ಯವನ್ನು ಪಸರಿಸಿದವರು. ದುರಂತ ಅಂದರೆ ಅವರ ಅಂತ್ಯಕ್ರಿಯೆಯ ನೆನಪು ಕೊಡವ ಸಮಾಜ, ಸಂಘಟನೆಗಳಿಗೂ ಬರಲಿಲ್ಲ.
ಬೆಂಗಳೂರು ಕೊಡವ ಸಮಾಜ ತನ್ನ ಸದಸ್ಯರು ಯಾರೇ ನಿಧನರಾದರೂ ರೀತ್ ಕಳಿಸುವ ಪದ್ದತಿ ಇದೆ. ಹಾಗೇ ರಘು ಅವರಿಗೂ ಸಮಾಜ ವ್ಯವಸ್ಥಾಪಕರ ಮೂಲಕ ಒಂದು ರೀತ್ ಕಳಿಸಿದ್ದಾರೆ. ಆಡಳಿತ ಮಂಡಳಿಯ ಕೆಲವರು, ಹಲವು ಪ್ರಮುಖರು ವಯುಕ್ತಿಕವಾಗಿ ಅಂತಿಮ ದರ್ಶನ ಪಡೆದಿದ್ದಾರೆ ಹೊರತು, ಒಬ್ಬ ಮೇರು ಕಲಾವಿಧನಿಗೆ ಸಲ್ಲಿಸಬಹುದಾಗಿದ್ದ ಗೌರವವನ್ನು ಸಲ್ಲಿಸಲೇ ಇಲ್ಲ. ಇನ್ನು ಕೊಡವ ಜನಾಂಗದ ಹಿರಿಯ ಸಂಘಟನೆಗಳ ಸಾಲಿನಲ್ಲಿ ಅಗ್ರಗಣ್ಯರಾದ ಅಖಿಲ ಕೊಡವ ಸಮಾಜ, ಕೊಡವ ಸಮಾಜ ಒಕ್ಕೂಟದಿಂದ ಒಂದೇ ಒಂದು ಸಂತಾಪ ಸೂಚನಾ ಹೇಳಿಕೆ ಕನಿಷ್ಟ ಮಾದ್ಯಮ ಪ್ರಕಟಣೆಯಾದರೂ ಬರಲಿಲ್ಲ. ಕೊಡವಾಮೆರ ಕೊಂಡಾಟ ಮತ್ತು ಕೊಡವ ಭಾಷಿಕ ಸಮುದಾಯಗಳ ಒಕ್ಕೂಟದಿಂದ ಸಂತಾಪ ಹೇಳಿಕೆಗಳು ಬಿಟ್ಟರೆ ಮತ್ಯಾವ ರೀತಿಯ ಗೌರವವೂ ಯಾವುದೇ ಸಮಾಜ ಸಂಘಟನೆಗಳಿಂದ ಬರಲಿಲ್ಲ.
ಇದು ಒಬ್ಬ ಮೇರು ಕಲಾವಿಧನಿಗೆ ಕೊಡುವ ಗೌರವ ಅಲ್ಲ ಎಂದು, ಸಾಮಾಜಿಕ ಕಾರ್ಯಕರ್ತ ಸರ್ಕಂಡ ಸೋಮಯ್ಯ ಅವರು ತಮ್ಮ ಅಸಮಧಾನವನ್ನು ಸಾಮಾಜಿಕ ಮಾಧ್ಯಮದ ಮೂಲಕ ವ್ಯಕ್ತಪಡಿಸಿದ್ದು, ಅವರ ಅಭಿಪ್ರಾಯದಂತೆ, ಬೆಂಗಳೂರು ಕೊಡವ ಸಮಾಜ, ಎ.ಟಿ. ರಘು ಅವರ ಅಂತಿಮ ದರ್ಶನಕ್ಕೆ ಸಮಾಜದ ಆವರಣದಲ್ಲಿ ಅವಕಾಶ ಮಾಡಿ, ಸಾರ್ವಜಿನಿಕ ದರ್ಶನಕ್ಕೆ ಅನುವು ಮಾಡಿ, ಕೊಡವ ಪದ್ದತಿಯಡಿಯಲ್ಲಿಯೇ ಮೆರವಣಿಗೆಯ ಮೂಲಕ ಅವರ ಅಂತಿಮ ಯಾತ್ರೆಯನ್ನು ಕೈಗೊಂಡು, ಅವರಿಗೆ ಆಖೀರಿ ಗೌರವ ಸಲ್ಲಿಸುವ ಅವಕಾಶ ಇತ್ತು. ಆದರೆ ಹಾಗಾಗಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿರುವ ಅವರು, ಕನ್ನಡ ಮತ್ತು ಕೊಡವ ಭಾಷೆಗಾಗಿ, ಕಲೆ, ಸಂಸ್ಕೃತಿಗಾಗಿ ತನ್ನ ಜೀವಮಾನವನ್ನೇ ಮುಡಿಪಿಟ್ಟ ಮೇರು ಕಲಾವಿಧನೊಬ್ಬನಿಗೆ ಇಂತ ಹೀನಾಯ ವಿದಾಯ ಕೊಟ್ಟಿದ್ದು ನಾವೆಲ್ಲರೂ ತಲೆಗಗ್ಗಿಸಬೇಕಾದ ವಿಚಾರ ಎಂದು ವಿಷಾಧಿಸಿದ್ದಾರೆ.
ಆದರೆ ನಾವು, ವಿಶ್ವ ಕಂಡ ಮಹಾನ್ ಸೇನಾನಿ, ಸಮರವೀರ, ಜನರಲ್ಸ್ಗಳ ಜನರಲ್ ಎಂದೆಲ್ಲ ಖ್ಯಾತರಾಗಿದ್ದ, ಪದ್ಮಭೂಷಣ ಜನರಲ್ ಕೊಡಂದೇರ ತಿಮ್ಮಯ್ಯ ಅವರಿಗೇ ಗೌರವ ಪೂರ್ವಕ ವಿದಾಯ ಸಲ್ಲಿಸಿಲ್ಲ. 1965ರಲ್ಲಿ ಸೈಪ್ರಸ್ ದೇಶದ ರಾಜಧಾನಿ ನಿಕೋಸಿಯಾದಲ್ಲಿ, ಯುನೈಟೆಡ್ ನೇಶನ್ಸ್ನ ಶಾಂತಿ ಪಾಲನಾ ಸಮಿತಿಯ ಕಮಾಂಡರ್ ಆಗಿದ್ದಾಗಲೇ, ಸಾವನಪ್ಪಿದ ತಿಮ್ಮಯ್ಯ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತಂದು, ಒಬ್ಬ ತೀರಾ ಸಾಮಾನ್ಯನಂತೆ, ವಿಲ್ಸನ್ ಗಾರ್ಡನ್ ಸ್ಮಶಾನದಲ್ಲಿ ಅಂತ್ಯ ಕ್ರಿಯೆ ನೆರವೇರಿಸಿದರು.
ಇದಾಗಿ 32 ವರ್ಷಗಳ ನಂತರ ಸೈಪ್ರಸ್ನ ಸೇನಾಧಿಕಾರಿಯೊಬ್ಬರು ಅಲ್ಲಿನ ಸೇನಾ ಮುಖ್ಯಸ್ಥರಾದಾಗ, ಅವರು ಗುರು ಎಂದು ಪೂಜಿಸುತಿದ್ದ ಜ.ತಿಮ್ಮಯ್ಯ ಅವರಿಗೆ ನಮನ ಸಲ್ಲಿಸಲು ಬೆಂಗಳೂರಿಗೆ ಬಂದು, ಸರಾಕರದ ಬಳಿ ಮಾಹಿತಿ ಕೇಳಿದರೆ, ಸರ್ಕಾರದ ಬಳಿ ತಿಮ್ಮಯ್ಯ ಅವರ ಸ್ಮಾರಕ ಹೋಗಲಿ, ಸ್ಮಶಾನದ ಮಾಹಿತಿಯೇ ಇರಲಿಲ್ಲ. ನಂತರ ಸೈಪ್ರಸ್ ಅಧಿಕಾರಿ ಭಾರತ ಸರ್ಕಾರಕ್ಕೆ ಛೀಮಾರಿ ಹಾಕಿದ ಮೇಲೆ, ಹುಡಕಾಡಿದ ನಮ್ಮ ಹೆಮ್ಮೆಯ ಸರಕಾರ, ವಿಲ್ಸನ್ ಗಾರ್ಡನ್ನಲ್ಲಿ ಹೂತಿದ್ದ ತಿಮ್ಮಯ್ಯ ಅವರ ಪಾರ್ಥಿವ ಶರೀರವನ್ನು ಹೊರತೆಗೆದು ಸಕಲ ಸರ್ಕಾರಿ ಗೌರವದೊಂದಿಗೆ ಮೆರವಣಿಗೆಯಲ್ಲಿ ತಂದು, ಡಿಸೆಂಬರ್ 18, 1997ರಂದು ASC Centerನಲ್ಲಿ ಮರು ಅಂತ್ಯಕ್ರಿಯೆ ಮಾಡಲಾಯಿತು. ವಿಷೇಶ ಎಂದರೆ, ಪ್ರಪಂಚ ಕಂಡ ಅಪರೂಪದ ಸೇನಾನಿ, ತಿಮ್ಮಯ್ಯ ಅವರ ದೇಹ ಕೆಡಬಾರದೆಂದು, ಸೈಪ್ರಸ್ ಸರ್ಕಾರ ಸಂಸ್ಕರಿಸಿ ಭಾರತಕ್ಕೆ ಕಳುಹಿಸಿತ್ತು. ಬರೋಬ್ಬರಿ 32 ವರ್ಷಗಳ ಕಾಲವೂ ತಿಮ್ಮಯ್ಯ ಅವರ ದೇಹ ಹಾಗೇ ಇತ್ತು. ಆದರೆ ಭಾರತಕ್ಕೆ ಅವರು ತೀರಾ ಸಾಮಾನ್ಯರಾಗಿ ಮಾತ್ರ ಕಂಡರು.
ಈ ಎರಡೂ ಪ್ರಕರಣಗಳನ್ನು ನೋಡಿದರೆ, ಎಲ್ಲ ಗೌರವ, ಸಮ್ಮಾನ, ಸಂತಾಪಗಳು ಕೇವಲ, ಸಂಕ್ಯಾಬಲ, ಹಣಬಲ ಮತ್ತು ಪ್ರದೇಶವಾರು ಲೆಕ್ಕಾಚಾರದಲ್ಲಿ ಲಭ್ಯವಾಗುವಂತವು. ಇಲ್ಲಿ ಪ್ರತಿಭೆ, ಸಾಧನೆ, ದುಡಿಮೆ, ಸೇವೆ ಎಲ್ಲವೂ ನೆಪಮಾತ್ರ ಎನ್ನುವುದಕ್ಕಿಂಕ ಗೌಣವಷ್ಟೇ.
ಆದರೂ ಕಡೇಯದಾಗಿ ಒಂದು ಮನವಿ, ಸರ್ಕಾರ, ಚಲನ ಚಿತ್ರ ರಂಗ, ಕೊಡವ ಸಮಾಜಗಳು ಇನ್ನಾದರೂ ಎ.ಟಿ. ರಘು ಅವರ ಗೌರವಾರ್ಥ ಒಂದು ಸಾರ್ವಜನಿಕ ಶ್ರದ್ದಾಂಜಲಿ ಸಭೆಯನ್ನಾದರೂ ಮಾಡಲಿ. ಅವರ ಹೆಸರಿನಲ್ಲಿ ಮುಂದಿನ ಪೀಳಿಗೆಯ ಕಲಾವಿದರಿಗೆ ಪ್ರೇರಣೆಯಾಗಬಲ್ಲ ಯಾವುದಾದರೊಂದು ಯೋಜನೆಯನ್ನು ರೂಪಿಸಿ, ಕಲೆ, ಸಾಹಿತ್ಯ ಕ್ಷೇತ್ರಕ್ಕೆ ಬರುವ ನವ ಪೀಳಿಗೆಯನ್ನು ಪ್ರೇರೇಪಿಸುವ ಕಾರ್ಯ ಮಾಡಿದರೆ, ತನ್ನ ಜೀವಮಾನವನ್ನೇ ಕನ್ನಡ ಚಿತ್ರದ್ಯಮಕ್ಕಾಗಿ ಸವೆಸಿ ಅಗಲಿದ ಆಪಾಡಂಡ ರಘು ಅವರ ಆತ್ಮಕ್ಕಾದರೂ ಮೋಕ್ಷ ದೊರೆಯಬಹುದು.