
ವಿರಾಜಪೇಟೆ, ಜ,10: ಇಂದು ವಿರಾಜಪೇಟೆಗೆ ಆಗಮಿಸಲಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕೀಹೋಳಿ ಅವರು, ಕ್ಷೇತ್ರವ್ಯಾಪ್ತಿಗೆ 31 ಕೋಟಿ ರಸ್ತೆ ಕಾಮಗಾರಿಯ ಶಂಕುಸ್ಥಾಪನೆಯೊಂದಿಗೆ, ಹೆಚ್ಚುವರಿ ಅನುದಾನವನ್ನೂ ಘೋಷಿಸಲಿದ್ದಾರೆ ಎಂದು ಎಲ್.ಎ.ಸಿ. ಹಾಗೂ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ತಿಳಿಸಿದ್ದಾರೆ.
ಇಂದು ಬೆಂಗಳೂರಿನಿಂದ ಮದ್ಯಹ್ನ 1.30ರ ಸಮಯಕ್ಕೆ ಆನೆ ಚೌಕೂರುಗೇಟ್ ಮೂಲಕ ವಿರಾಜಪೇಟೆಗೆ ಆಗಮಿಸುವ ಸಚಿವರು, ವಿರಾಜಪೇಟೆಯಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗೆ 06 ಕೋಟಿ ಮತ್ತು ರಾಜ್ಯ ಹೆದ್ದಾರಿಗೆ 25ಕೋಟಿ ಅನುದಾನದ ಕಾಮಗಾರಿಗೆ ಮುನ್ನುಡಿ ಹಾಕಲಿರುವ ಸಚಿವರು, ಇದೇ ಸಂದರ್ಭದಲ್ಲಿ ಹೆಚ್ಚುವರಿ ಅನುದಾನವನ್ನು ಸರ್ಪ್ರೈಸ್ ಆಗಿ ಘೋಷಿಸಲಿದ್ದಾರೆ ಎಂದು ಪೊನ್ನಣ್ಣ ಮಾಹಿತಿ ನೀಡಿದ್ದಾರೆ.
ಒಟ್ಟು 224 ವಿಧಾನ ಸಭಾ ಕ್ಷೇತ್ರಗಳಲ್ಲಿ, ವಿರಾಜಪೇಟೆ ಕ್ಷೇತ್ರವು ಎರಡನೇ ಅತೀ ದೊಡ್ಡ ಕ್ಷೇತ್ರವಾಗಿದ್ದು, ಇಲಾಖೆಯ ಅಂಕಿ ಅಂಶದಲ್ಲಿ ಸೇರ್ಪಡೆಯಾಗಿರುವ ರಸ್ತೆಯ ವ್ಯಾಪ್ತಿಯೇ 64000 ಕಿಮಿ. ಇದೆ. ಇನ್ನೂ ಪಕ್ಕಾ ರಸ್ತೆಯಾಗಿ ಮಾರ್ಪಡದೇ ಜಿಲ್ಲಾ ಪಂಚಾಯತ್ ಮತ್ತು ಪಿ.ಡಬ್ಲ್ಯು.ಡಿ. ವ್ಯಾಪ್ತಿಗೆ ಸೇರ್ಪಡೆ ಆಗದೇ ಹಿಂದುಳಿದಿರುವ ಕಚ್ಛಾರಸ್ತೆಗಳು ನೂರಾರು ಕಿ.ಮಿ. ಇವೆ. ಈ ಎಲ್ಲಾ ರಸ್ತೆಗಳನ್ನು ಸಮರ್ಪಕವಾಗಿ ಸುಸಜ್ಜಿತ ರಸ್ತಗಳಾಗಿ, ಅಭಿವೃದ್ದಿ ಪಡಿಸುವುದು ನನ್ನ ಗುರಿಯಾಗಿದ್ದು, ಹಂತ ಹಂತವಾಗಿ, ಆದ್ಯತಾನುಸಾರ ಕಾಮಗಾರಿ ಕೈಗೊಳ್ಳಲಾಗುವುದು. ಇದಕ್ಕಾಗಿ ಹೆಚ್ಚುವರಿ ಅಗತ್ಯ ಅನುದಾನವನ್ನೂ ತರುತ್ತೇನೆ. ವಿರಾಜಪೇಟೆ ಕ್ಷೇತ್ರವನ್ನು ಮಾದರೀ ಕ್ಷೇತ್ರವಾಗಿ ರೂಪಿಸುವುದು ನನ್ನ ಕನಸಾಗಿದ್ದು, ಅವಧಿ ಮೀರುವುದರೊಳಗೆ ಇದನ್ನು ಮಾಡಿಯೇ ಸಿದ್ದ ಎಂದು ಅಜ್ಜಿಕುಟ್ಟಿರ ಪೊನ್ನಣ್ಣ ಭರವಸೆ ನೀಡಿದ್ದಾರೆ.
ಸಚಿವರನ್ನು ಸ್ವಾಗತಿಸಲು ಸಕಲ ಸಿದ್ದತೆ ನಡೆಸಿರುವ ಕೊಡಗು ಕಾಂಗ್ರೇಸ್, ಆನೆ ಚೌಕೂರು ಗೇಟ್ನಲ್ಲಿ ಕಾರ್ಯಜರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರುವಂತೆ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮನವಿ ಮಾಡಿದ್ದಾರೆ.