ವಿರಾಜಪೇಟೆ, ಮಾ. 07: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ದಾಖಲೆಯ 16ನೇ ಆಯವ್ಯವನ್ನು ಮಂಡಿಸಿದ್ದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಕಾರ್ಯಕರ್ತ, ಎನ್ನುವುದಕ್ಕಿಂತ ಹೆಚ್ಚಾಗಿ ಒಬ್ಬ ಸಾಮಾನ್ಯ ಪ್ರಜೆಯಾಗಿ ಹರ್ಷಿಸುತ್ತೇನೆ ಎಂದು, ಕಾಂಗ್ರೆಸ್ ಜಿಲ್ಲಾಧ್ಯಕ್ಷರೂ, ಗ್ಯಾರಂಟಿ ಅನುಸ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರೂ ಆಗಿರುವ ತೀತಿರ ದರ್ಮಜ ಉತ್ತಪ್ಪ ಅವರು ಅಭಿಪ್ರಾಯಿಸಿದ್ದಾರೆ.
ಇಂದು ಸಿದ್ದರಾಮಯ್ಯ ಅವರು ಮಂಡಿಸಿದ ಬಡ್ಜೆಟ್ ಸಂಪೂರ್ಣ ಜನಪರವಾಗಿದ್ದು, ಎಲ್ಲಾ ವರ್ಗದ ಜನರನ್ನೂ ಏಕ ಸಮಾನವಾಗಿ ಸಮೀಕರಿಸುವ ಕಾರ್ಯವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದು ಅವರು ಹೇಳಿದರು. ಜಿಲ್ಲೆಯ ವಿಚಾರಕ್ಕೆ ಬಂದರೆ, ವಿವಿಧ ಯೋಜನೆಗಳ ಮೂಲಕ, ಜಿಲ್ಲೆಗೆ ನೂರಾರು ಕೋಟಿ ಅನುದಾನ ಹರಿದು ಬಂದಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿ ಆಗಲಿದೆ, ಈ ನಿಟ್ಟಿನಲ್ಲಿ ಉಭಯ ಶಾಸಕರೂ ಶಕ್ತಿ ಮೀರಿ ದುಡಿಯುತಿದ್ದು, ಜನತೆಯ ಆಶೋತ್ತರಕ್ಕೆ ಸ್ಪಂದಿಸುತಿದ್ದಾರೆ ಎಂದು ದರ್ಮಜ ಉತ್ತಪ್ಪ ಹೇಳಿದರು.
ಹಿಂದಿನ ಬಿಜೆಪಿ ಶಾಸಕರು ತಮ್ಮ ವೈಪಲ್ಯಗಳನ್ನು ಮುಚ್ಚಿ ಹಾಕಲು ಈ ಬಡ್ಜೆಟನ್ನು ಟೀಕಿಸುತಿದ್ದು, ಇದು ಹಾಸ್ಯಾಸ್ಪದವಾಗಿದೆ. ತಮ್ಮ ಸರ್ಕಾರದಲ್ಲಿ ಕೇವಲ 100 ಕೋಟಿ, 150 ಕೋಟಿ ಪ್ಯಾಕೇಜ್ ಹೆಸರಿನಲ್ಲಿ ಜಿಲ್ಲೆಯ ಜನತೆಯ ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಿ, ಕಣ್ಣು ಕಟ್ಟುತ್ತಿದ್ದರು. ಆದರೆ ಇಂದು ಘೋಷಿಸಿರುವ ಮಡಿಕೇರಿ ಕೊಡ್ಲಿಪೇಟೆ, ಚನ್ನರಾಯಪಟ್ಟಣ ರಸ್ತೆಯ ಮೊತ್ತವೇ ಬಿಜೆಪಿಗರು ಕೊಟ್ಟ ಐದು ವರ್ಷದ ಪ್ಯಾಕೇಜನ್ನು ಮೀರಲಿದೆ ಎಂದಿರುವ ಧರ್ಮಜ ಉತ್ತಪ್ಪ ಅವರು, ನಮ್ಮ ಸರ್ಕಾರ ಈಗಾಗಲೇ ಹಲವಾರು ಯೋಜನೆಗನ್ನು ಕಾರ್ಯಗತಗೊಳಿಸಿದ್ದು, ಗ್ಯಾರಂಟಿ ಯೋಜನೆಗಳ ಸಮರ್ಪಕ ನಿರ್ವಹಣೆಯೊಂದಿಗೆ ಸರ್ವರ ಅಭಿವೃದ್ದಿಗೆ ಒತ್ತು ನೀಡಲಾಗಿದೆ ಎಂದು ಹರ್ಷಿಸಿದ್ದಾರೆ.