Site icon nadubadenews.com

ಮುದ್ದಂಡ ಕಪ್ ಹಾಕಿ ನಮ್ಮೆ: ಇದೇ ಪ್ರಥಮ ಬಾರಿಗೆ ವಿಡಿಯೋ ರೆಫರಲ್ ಪರಿಚಯ,  ಏ.27ರ ಸಮಾರೋಪಕ್ಕೆ ಸಚಿವರ ಶಾಸಕರ ದಂಡು…

ಮುದ್ದಂಡ ಕಪ್ ಹಾಕಿ ನಮ್ಮೆ: ಇದೇ ಪ್ರಥಮ ಬಾರಿಗೆ ವಿಡಿಯೋ ರೆಫರಲ್ ಪರಿಚಯ,  ಏ.27ರ ಸಮಾರೋಪಕ್ಕೆ ಸಚಿವರ ಶಾಸಕರ ದಂಡು…
Spread the love
ಮುದ್ದಂಡ ಕಪ್ ಹಾಕಿ ನಮ್ಮೆ: ಇದೇ ಪ್ರಥಮ ಬಾರಿಗೆ ವಿಡಿಯೋ ರೆಫರಲ್ ಪರಿಚಯ,  ಏ.27ರ ಸಮಾರೋಪಕ್ಕೆ ಸಚಿವರ ಶಾಸಕರ ದಂಡು…

ಮಡಿಕೇರಿ ಏ.21 : ಬೆಳ್ಳಿಹಬ್ಬದ ಸಂಭ್ರಮದೊಂದಿಗೆ ನಡೆಯುತ್ತಿರುವ ಕೊಡವ ಕೌಟುಂಬಿಕ ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಇದೇ ಪ್ರಥಮ ಬಾರಿಗೆ ಆಧುನಿಕ ತಂತ್ರಜ್ಞಾನದ ವಿಡಿಯೋ ರೆಫರಲ್ ಅನ್ನು ಪರಿಚಯಿಸಲಾಗುತ್ತಿದ್ದು, ಬೃಹತ್ ಪರದೆಗಳನ್ನು ಅಳವಡಿಸಲಾಗುವುದು ಎಂದು ಮುದ್ದಂಡ ಹಾಕಿ ಉತ್ಸವದ ಪ್ರಮುಖರು ತಿಳಿಸಿದರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುದ್ದಂಡ ಹಾಕಿ ಉತ್ಸವದ ಕ್ರೀಡಾ ಪ್ರವರ್ತಕ ಅಜ್ಜೆಟ್ಟಿರ ವಿಕ್ರಮ್ ಉತ್ತಪ್ಪ ಹಾಗೂ ಲೈವ್ ಸ್ಟ್ರೀಮಿಂಗ್ ಮತ್ತು ರೆಫರಲ್ ಸಲಹೆಗಾರ ಐಚೆಟ್ಟಿರ ತನೀಶ್ ಅಯ್ಯಣ್ಣ, ಮುದ್ದಂಡ ಕುಟುಂಬಸ್ಥರು ಹಾಗೂ ಕೊಡವ ಹಾಕಿ ಅಕಾಡೆಮಿಯ ಸಹಯೋಗದಲ್ಲಿ ಇದೇ ಪ್ರಥಮ ಬಾರಿಗೆ ವಿನೂತನ ಪ್ರಯತ್ನ ಮಾಡಲಾಗಿದ್ದು, ಪಂದ್ಯಾವಳಿಯ ಕ್ವಾಟರ್ ಫೆನಾಲೆಯ ದಿನದಿಂದ ವಿಡಿಯೋ ರೆಫರಲ್ ಗಳನ್ನು ಪರಿಚಯಿಸಲಾಗುತ್ತಿದ್ದು, ಅದಕ್ಕಾಗಿ ಬೃಹತ್ ಗಾತ್ರದ 5 ಎಲ್‌ಇಡಿ ಪರದೆಯನ್ನು ಅಳವಡಿಸಲಾಗುವುದು ಎಂದರು.

ಕ್ವಾಟರ್ ಫೆನಾಲೆಯಂದು 8 ತಂಡಗಳ ನಡುವೆ 4 ಪಂದ್ಯಗಳು ನಡೆಯಲಿದ್ದು, 1 ತಂಡಕ್ಕೆ 2 ರೆಫರೆಲ್ ಇರಲಿದೆ. ಅಲ್ಲದೇ ಮೂರನೇ ಎಂಪೈರ್‌ಗಳಿಗೆ ಅವಕಾಶ ಇರುತ್ತದೆ ಎಂದು ತಿಳಿಸಿದರು. 

ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಮಾತನಾಡಿ, ಏ.26 ರಂದು ಮುದ್ದಂಡ ಕಪ್ ಹಾಕಿ ಉತ್ಸವದ ಸೆಮಿಫೈನಲ್ಸ್ ಪಂದ್ಯಾವಳಿಯು ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮುದ್ದಂಡ ಹಾಕಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಮುದ್ದಂಡ ಬಿ.ದೇವಯ್ಯ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದಲ್ಲಿ ಅಂಪೈರ್‌ಗಳು, ತಾಂತ್ರಿಕ ತಂಡ, ಎಲ್ಲಾ ಕ್ರೀಡಾ ತಂಡಗಳಿಗೆ, ಹಾಗೂ ಸೈಕ್ಲಥಾನ್‌ನಲ್ಲಿ ಭಾಗವಹಿಸುವವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದರು.

ಅದೇ ದಿನ  ಮಹಿಳೆಯರ 5 ‘ಎ’ ಸೈಡ್ ಫೈನಲ್ಸ್ ಪಂದ್ಯಾವಳಿ ನಡೆಯಲಿದ್ದು, ರಿಪಬ್ಲಿಕ್ ಟಿವಿ ವಿತರಣೆಗಾರ ಹಾಗೂ ಆರ್.ಕನ್ನಡದ ಆರ್. ಕನ್ನಡ ಅಧ್ಯಕ್ಷ ಚೇರಂಡ ಕಿಶನ್ ಉದ್ಘಾಟಿಸಲಿದ್ದಾರೆ.

ಏ.27 ರಂದು 10 ಗಂಟೆಗೆ ಫೈನಲ್ ಪಂದ್ಯಾವಳಿ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ಮುದ್ದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಣ್ಣ ನೀರಾವರಿ ಸಚಿವ ಮತ್ತು ಕೊಡಗಿನ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಪಾಲ್ಗೊಳ್ಳಲಿದ್ದಾರೆ.

ಗೌರವ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಭಾಗವಹಿಸಲಿದ್ದಾರೆ ಎಂದರು.

ಗೌರವ ಉಪಸ್ಥಿತರಾಗಿ ಒಲಿಂಪಿಯನ್, ಅರ್ಜುನ ಪ್ರಶಸ್ತಿ ಪುರಸ್ಕೃತರು ಹಾಗೂ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಅಶ್ವಿನಿ ಪೊನ್ನಪ್ಪ ಮಾಚಿಮಂಡ, ಭಾರತೀಯ ಮಾಜಿ ಫೀಲ್ಡ್ ಹಾಕಿ ಆಟಗಾರ ಮನೆಯಪಂಡ ಎಂ.ಸೋಮಯ್ಯ, ಒಲಿಂಪಿಯನ್ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಮನೆಯಪಂಡ ಅಶ್ವಿನಿ ನಾಚಪ್ಪ, ಜಿಲ್ಲಾಧಿಕಾರಿ ವೆಂಕಟರಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಮುದ್ದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ, ಮಾತನಾಡಿ, ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ  ‘25ನೇ ವರ್ಷದ ಮುದ್ದಂಡ ಕಪ್ ಹಾಕಿ ಉತ್ಸವದ ಸಾಕ್ಷ್ಯ ಚಿತ್ರದ ಚಿತ್ರೀಕರಣವು ಏ.24ರಿಂದ ಆರಂಭವಾಗಲಿದ್ದು, ಜಾಗತಿಕ ಮಟ್ಟದ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ದೆಹಲಿ ಮೂಲಕದ ಮಾನ್ಸಿ ಮತ್ತು ಜಾನ್ವಿ ಚಿತ್ರೀರಕಣ ಮಾಡಲಿದ್ದು, ಆರು ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದರು.

ಕೊಡವ ಹಾಕಿ ಅಕಾಡೆಮಿಯ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ, ಮಡಿಕೇರಿ ಪ್ರವಾಸಿ ತಾಣಗಳ ಬೀಡಾಗಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಹೋಂಸ್ಟೇ, ರೆಸಾರ್ಟ್ಗಳಿಗೆ ಮುದ್ದಂಡ ಹಾಕಿ ಉತ್ಸವದ ಕುರಿತು ಮಾಹಿತಿ ನೀಡಲಾಗಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಂದ್ಯಾವಳಿಯನ್ನು ವೀಕ್ಷಿಸಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುದ್ದಂಡ ಹಾಕಿ ಹಬ್ಬದ ಉಪಾಧ್ಯಕ್ಷ ಡೀನ್ ಬೋಪಣ್ಣ, ಕಾರ್ಯದರ್ಶಿ ಆದ್ಯ ಪೂವಣ್ಣ, ಸದಸ್ಯ ಅರುಣ್ ಬೇಬ, ನಿರ್ದೇಶಕರಾದ ಬಡಕಡ ಡೀನಾ ಪೂವಯ್ಯ, ನೆಲ್ಲಮಕ್ಕಡ ಪಾವನ್ ಮುತ್ತಪ್ಪ ಉಪಸ್ಥಿತರಿದ್ದರು.

Exit mobile version