ಬಾಳೊ ಬಾಳೊ ನಂಗಡ, ದೇವೋ ಬಾಳೊ ಮಾದೇವ…, ಎನ್ನುವುದು ಕೊಡವ ಕುಲದ ಅಗಮ್ಯ ಸ್ಲೋಕ, ಮಹಾ ಬೀಜ ಮಂತ್ರ, ಎಲ್ಲಾ ಕಾರ್ಯಗಳಿಗೂ ಮುನ್ನ, ಮಾದೇವನ್ನನ್ನ ಸ್ಥುತಿಸಿಯೇ ಮುಂದಡಿ ಇಡುವುದು ಕ್ರಮ. ಬಾಳೋ ಪಾಟಿನಲ್ಲಿಯೂ ಕೂಡ ಮೊದಲು ಪ್ರಾರಂಭವಾಗುವುದೇ ಮೇಲಿನ ಸಾಲುಗಳು ಎಂದರೆ ಮಾದೇವನೇ ಎಲ್ಲಾದಕ್ಕೂ ಮೂಲ ಮಿಗಿಲು ಎನ್ನುವುದು. ಕೊಡಗಿನಾಧ್ಯಂತ ನೂರಾರು ಪುರಾತನ ಮೂಲ ಮಾದೇವರ ಅಥವಾ ಈಶ್ವರನ ಗುಡಿಗಳನ್ನು ನೋಡಬಹುದು. ಇಂತ ಗುಡಿಗಳಲ್ಲಿ ಮಾದೇವನ ಮಹಿಮೆಯನ್ನು ಇಂದಿಗೂ ನಾವು ಕಾಣುತ್ತೇವೆ.
ಅಂತಃ ಪವಾಡ, ವಿಸ್ಮಯಗಳು ನಡೆಯುವ ದಕ್ಷಿಣ ಕೊಡಗಿನ, ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಹೋಬಳಿಯ ಮಾವುಕಲ್ ಬೆಟ್ಟದಲ್ಲಿರುವ ಪುರಾತನ ಕಾಲದ ಮಾವುಕಲೇಶ್ವರನ ಗುಡಿಯೂ ಒಂದು. ಇಲ್ಲಿ ಇಂದಿಗೂ ಭಕ್ತರ ಬೇಡಿಕೆಗೆ ಹೂವಿನ ಮೂಲಕ ಮಾದೇವ ಪ್ರತಿಕ್ರಿಯೆ ನೀಡುತ್ತಾನೆ. ಮಾಜೀ ಮುಖ್ಯ ಮಂತ್ರಿ ದಿವಂಗತ ಗುಂಡುರಾವ್ ಅವರು ಸ್ವತಃ ಆನೆ ಏರಿ ಬಂದು ಇಲ್ಲಿ ಹರಕೆ ತೀರಿಸಿದನ್ನೂ ಇಲ್ಲಿ ಸ್ಮರಿಸಬಹುದು.
ತಿತಿಮತಿಯಿಂದ ಆನೆಚೌಕೂರಿಗೆ ತೆರಳುವ ಮಾರ್ಗದ ಚೈನಿಗೆಟ್ ನಿಂದ ಅರಣ್ಯದ ಮಧ್ಯದಲ್ಲಿ ಹಾದು ಹೋಗಿ, ಭೀಮನಹಾರ ಮಾರ್ಗವಾಗಿ ಮುಂದಕ್ಕೆ ಸಾಗಿದರೆ, ನಾವು ಬೆಟ್ಟಕ್ಕೆ ತಲುಪುತ್ತೇವೆ. ಈ ತಪ್ಪಲಿನಿಂದ 4.5 ಕಿಲೋಮೀಟರ್ ಬೆಟ್ಟ ಹತ್ತಬೇಕು. ಇಲ್ಲಿ ಪುರಾತನ ಕಾಲದ ಶಿವನ ಗುಡಿ ಇದೆ, ಪಕ್ಕದಲ್ಲಿ ಹಚ್ಚಹಸಿರಿನ ಸೀತಾ ಕೊಳವಿದೆ. ರಾಮ-ಲಕ್ಷ್ಮಣ ಹಾಗೂ ಸೀತೆ ಇಲ್ಲಿ ಬಂದು ತಂಗಿದ್ದರು ಎಂಬುದಕ್ಕೆ ಪುರಾವೆಗಳಿವೆ. ಸೀತೆ ಈ ಕೊಳದಲ್ಲಿ ಸ್ನಾನ ಮಾಡಿದ್ದರಿಂದ, ಇದಕ್ಕೆ ಸೀತಾಕೊಳ ಎಂಬ ಹೆಸರು ಬಂತು. ಈ ಕೊಳದ ಸುತ್ತಮುತ್ತಲು ಇಂದೂ ಕೂಡ ಹಚ್ಚ ಹಸಿರಿನಿಂದ ಕೂಡಿದೆ. ಇದೇ ಕೊಳದಿಂದ ನೀರು ತಂದು ಕಲ್ಲಿನ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಹೂವಿನಿಂದ ಶೃಂಗಾರಗೊಳಿಸಿ, ನೈವೇದ್ಯ ತಯಾರಿಸಿ, ಆರತಿ ಬೆಳಗಿ, ಬೇಡುವ ಭಕ್ತರಿಗೆ, ಈಶ್ವರ ವರವನ್ನು ಕೊಡುವ ಅದ್ಭುತ ದೃಶ್ಯವನ್ನು ಇಲ್ಲಿ ಕಾಣಬಹುದು.
ಶಿವರಾತ್ರಿಯಂದು ಇಲ್ಲಿ ಜಾಗರಾಣೆ ಮತ್ತು ಪೂಜೆ ಸಲ್ಲುತ್ತದೆ. ಪ್ರತಿ ಸೋಮವಾರ ಭಕ್ತಾದಿಗಳ ಕರೆಯ ಮೇರೆಗೆ ಕೋಗಿಲವಾಡಿ ಹಾಗೂ ಬೂದಿತಿಟ್ಟು ಮಾರ್ಗವಾಗಿ ಪೂಜಾರಿ ಆಗಮಿಸಿ ಪೂಜೆ ಸಲ್ಲಿಸುತ್ತಾರೆ.
ಮಳೆಗಾಗಿ ನಡೆಯುವ ವಿಸ್ಮಯ : 17-03-2025ರಂದು ತಿತಿಮತಿ, ಮಾಯಮುಡಿ ಹಾಗು ಸುತ್ತಮುತ್ತಲಿನ ಗ್ರಾಮಸ್ತುರು ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ಮಳೆಗಾಗಿ ವರವನ್ನು ಬೇಡುವಾಗ, ಶಿವಲಿಂಗದ ಮೇಲಿದ್ದ ಜೋಡಿ ಹೂ ಬಿದ್ದಿದ್ದನ್ನು ಈ ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ. ಹೂ ತಡವಾಗಿ ಬಿದ್ದರೆ ಮಳೆ ಸ್ವಲ್ಪ ತಡೆವೆಂದು, ಬೇಗ ಬಿದ್ದರೆ ಮಳೆ ಶೀಘ್ರವಾಗಿ ಬೀಳುತ್ತದೆ ಎಂಬುದು, ಅನಾದಿ ಕಾಲದಿಂದಲೂ ನಡೆದು ಬಂದ ನಂಬಿಕೆ. ಅದರಂತೆ 17/03/25ರಂದು ಬೆಳಿಗ್ಗೆ ಪೂಜೆ ಸಲ್ಲಿಸಿ ಹಿಂದಿರುಗಿದಾಗ, ವಿಸ್ಮಯ ಕಾದಿತ್ತು. ಮಧ್ಯಾಹ್ನ 3:00 ಗಂಟೆಯ ಸಮಯದಿಂದ ರಾತ್ರಿಯವರೆಗೂ ಮಳೆರಾಯನ ಓಕುಳಿಯಾಟ ರೈತರ ಮೊಗದಲ್ಲಿ ಮಂದಹಾಸ ತಂದಿದೆ.
ಲೇಖಕರ ಸ್ವ ಅನುಭವ :- 40 ವರ್ಷಗಳ ಹಿಂದೆ ಮಾವುಕಲ್ ಬೆಟ್ಟಕ್ಕೆ ತಿತಿಮತಿಯಿಂದ ರಾಮಮಂದಿರ ಹಾಗೂ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಟ್ರ್ಯಾಕ್ಟರ್ ನಲ್ಲಿ ಬಹಳಷ್ಟು ರೈತರು, ಭಕ್ತಾದಿಗಳೊಂದಿಗೆ ಹಾಗೂ ವಾಲಗದೊಂದಿಗೆ ತೆರಳಿದ್ದೆವು. ದಟ್ಟಾರಣ್ಯದಲ್ಲಿ ನಾವು ಹೋದ ಟ್ರ್ಯಾಕ್ಟರ್ ಹಲವು ಬಾರಿ ಮರಗಳ ಮಧ್ಯೆ ಸಿಲುಕಿತ್ತು. ಇದರ ನಡುವೆಯೂ ಬೆಟ್ಟದ ತಪ್ಪಲಿಗೆ ತಲುಪಿದೆವು. ಹಚ್ಚ ಹಸಿರಿನ ದಟ್ಟಾರಣ್ಯದಲ್ಲಿ 5 ಕಿಲೋಮೀಟರ್ ನಡೆದಿದ್ದು ತಿಳಿಯಲೇ ಇಲ್ಲ. ಮಳೆಗಾಗಿ ಪೂಜೆ ಸಲ್ಲಿಸಿ ಹಿರಿಯರೊಡನೆ ಬಂದು ತಲುಪುವಾಗ ಮಳೆಯೂ ಕೂಡ ನಮ್ಮೊಂದಿಗೆ ಆಗಮಿಸಿತ್ತು. ಎಲ್ಲ ರೈತರ ಸಂತೋಷ ಅಂದು ಮುಗಿಲು ಮುಟ್ಟಿತ್ತು. ಅದೇ ದೃಶ್ಯ ಇಂದು ಪುನರ್ ಸೃಷ್ಟಿಯಾದಂತಿದೆ.
ಇಂದು ಆ ದಟ್ಟಾರಣ್ಯ ಮಾಯವಾಗಿದೆ. ಇಂದು ಇಲ್ಲಿಗೆ ತೆರಳಲು ಅರಣ್ಯ ಇಲಾಖೆಯ ಅನುಮತಿ ಬೇಕು.
ಮುಖ್ಯಮಂತ್ರಿ ಆರ್.ಗುಂಡುರಾಯರ ಹರಕೆ:- ಅಂದಿನ ಮುಖ್ಯಮಂತ್ರಿ, ಸೋಮವಾರಪೇಟೆ ಶಾಸಕ ಆರ್.ಗುಂಡೂರಾವ್ ಅವರು ಚುನಾವಣೆಯ ಸಮಯದಲ್ಲಿ ಮಾವುಕಲ್ಲೇಶ್ವರನಿಗೆ ಹರಕೆ ಕಟ್ಟಿ, ಗೆದ್ದರೆ ಅನ್ನದಾನ ಮಾಡಿಸುವುದಾಗಿ ಬೇಡಿ ಕೊಂಡಿದ್ದರಂತೆ. ಗೆದ್ದ ನಂತರ, ಆನೆಯ ಮೇಲೆ ಬಂದು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಿ, ತಮ್ಮ ಬೆಂಬಲಿಗರ ಹರಕೆಯನ್ನು ಸ್ವತಃ ಗುಂಡುರಾಯರು ತೀರಿಸಿದ್ದರು.
ಇಂತ ನೂರಾರು ಪವಾಡಗಳು, ವಿಸ್ಮಯಗಳು ನಡೆಯುವ ಮಾವುಕಲ್ಲೇಶ್ವರನ ಮಹಿಮೆಯಿಂದ, ನಾಡಿನಲ್ಲಿ ಮಳೆ ಬೆಳೆಯಾಗಿ, ಲೋಕ ಕಲ್ಯಾಣವಾಗಲಿ ಎಂದು ಶಿರಭಾಗಿ ಬೇಡಿಕೊಳ್ಳುತ್ತೇನೆ.
ಲೇಖನ: ಚೆಪ್ಪುಡೀರ ಕಾರ್ಯಪ್ಪ, ರೈತ, ನೊಖ್ಯ – ತಿತಿಮತಿ, ದೂರವಾಣಿ: 9900369212