
ಕುಟ್ಟದಿಂದ ಮಡಿಕೇರಿಗೆ ಪಾದಯಾತ್ರೆ, ಆರು ದಿಕ್ಕುಗಳಿಂದ ನಗರ ಪ್ರವೇಶ- ಅಖಿಲ ಕೊಡವ ಸಮಾಜ ನೇತೃತ್ವ
ವಿವಿಧ ಕೊಡವ ಸಮಾಜ ಹಾಗೂ ಸಂಘ ಸಂಸ್ಥೆ, ಕೊಡವ ಭಾಷಿಕ ಸಮುದಾಯಗಳ ನಿರ್ಧಾರ
ವಿರಾಜಪೇಟೆ, ಜ.21: ದೇಶವಾಗಿದ್ದ ಕೊಡಗು, ನಂತರ ರಾಜ್ಯದ ಸ್ಥಾನಮಾನ ಹೊಂದಿ ವಿಶಾಲ ಕರ್ನಾಟಕದೊಂದಿಗೆ ವಿಲೀನವಾಗಿ, ಇಂದು ಒಂದು ಪುಟ್ಟ ಜಿಲ್ಲೆಯಾಗಿ ಉಳಿದಿದೆ. ಕೊಡಗಿನ ಮೂಲ ನಿವಾಸಿಗಳಾದ ಕೊಡವರು ಹಾಗೂ ಕೊಡವ ಸಂಸ್ಕೃತಿಗೆ ಒಳಪಟ್ಟ ಇತರ ಜನಾಂಗಗಳ ಮೇಲೆ ಕಳೆದ ಹಲವು ದಶಕಗಳಿಂದ ನಿರಂತರವಾಗಿ ನಡೆಯುತ್ತಿರುವ ಜನಾಂಗೀಯ ನಿಂದನೆ, ಜನಾಂಗೀಯ ತಾರತಮ್ಯ ಹಾಗೂ ಸಾಮಾಜಿಕ, ದಾರ್ಮಿಕ, ರಾಜಕೀಯ ದೌರ್ಜನ್ಯದ ವಿರುದ್ಧ ಇದೇ ಫೆಬ್ರವರಿ 2ರಿಂದ 7ರವರೆಗೆ ಬ್ರಹತ್ ಪಾದಯಾತ್ರೆ ಹಮ್ಮಿಕೊಳ್ಳಲು ವಿರಾಜಪೇಟೆಯ ಕೊಡವ ಸಮಾಜದ ಸಭಾಂಗಣದಲ್ಲಿ ವಿವಿಧ ಕೊಡವ ಸಮಾಜ ಹಾಗೂ ಸಂಘ ಸಂಸ್ಥೆಗಳ ಸಭೆಯಲ್ಲಿ ಒಕ್ಕೊರಲ ತೀರ್ಮಾನಕ್ಕೆ ಬರಲಾಗಿದೆ.
ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಅವರ ಉಪಸ್ಥಿತಿಯಲ್ಲಿ, ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನು ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಉಪಸ್ಥಿತರಿದ್ದ ವಿವಿಧ ಕೊಡವ ಸಮಾಜ ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಸುದೀರ್ಘ ಚರ್ಚೆ ನಡೆಸಿ, ಇದೇ ಫೆಬ್ರವರಿ 2ರಿಂದ 7ರವರೆಗೆ, ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಕೊಡವ ಸಂಸ್ಕೃತಿಗೆ ಒಳಪಟ್ಟ ಎಲ್ಲಾ ಜನಾಂಗಗಳ ಸಹಕಾರದೊಂದಿಗೆ ದಕ್ಷಿಣ ಕೊಡಗಿನ ಗಡಿಭಾಗವಾದ ಕುಟ್ಟಾದಿಂದ ಜಿಲ್ಲಾಕೇಂದ್ರ ಮಡಿಕೇರಿಯವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಿತು.
ಸಭೆಯಲ್ಲಿ ಮಾತನಾಡಿದ ಪ್ರಮುಖರು ಕೊಡಗಿನ ಪ್ರಧಾನ ಸಂಸ್ಕೃತಿಗೆ ಒಳಪಡುವ ಕೊಡವರು ಹಾಗೂ ಕೊಡವ ಭಾಷೆಯನ್ನು ಮಾತನಾಡುವ ಇತರ ಸಮುದಾಯಗಳ ವಿರುದ್ಧ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ನಿರಂತರ ದಬ್ಬಾಳಿಕೆಯನ್ನು ನಡೆಸುತ್ತಾ ಬಂದಿದೆ. ಕೊಡಗು ಕರ್ನಾಟಕದೊಂದಿಗೆ ವಿಲೀನವಾದಾಗ ಆಡಳಿತರೂಢ ಬಹುಸಂಖ್ಯಾತ ಸಮುದಾಯಗಳು ಭಾಷಾ ಅಲ್ಪಸಂಖ್ಯಾತ ಸಮುದಾಯಗಳ ಹಿತರಕ್ಷಣೆಯನ್ನು ಕಾಪಾಡಬೇಕೆಂಬ ಸ್ಪಷ್ಟ ಒಡಂಬಡಿಕೆ ಇತ್ತು. ಭಾರತದ ಸಂವಿಧಾನವೂ ಇದನ್ನೇ ಸ್ಪಷ್ಟಪಡಿಸಿದೆ. ಆದರೆ ಇಂದು ಕೊಡಗಿನಲ್ಲಿ ಕೊಡವ ಜನಾಂಗದ ಪಾಲಿಗೆ ಇದು ಉಲ್ಲಂಘನೆಯಾಗುತ್ತಲೇ ಬಂದಿರುವುದು ವಿಪರ್ಯಾಸವಾಗಿದೆ ಬೇಸರ ವ್ಯಕ್ತಪಡಿಸಿ, ಹರತಾಳ ಒಂದೇ ಮಾರ್ಗ ಎಂಬ ತೀರಮಾನಕ್ಕೆ ಬರಲಾಯಿತು.
ಕೊಡವರನ್ನು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮೂಲೆಗುಂಪು ಮಾಡುವ ಷಡ್ಯಂತ್ರ ಈ ಪಟ್ಟಭದ್ರ ಹಿತಾಸಕ್ತಿಗಳಿಂದ ನಿರಂತರವಾಗಿ ನಡೆಯುತ್ತಾ ಬರುತ್ತಿದೆ, ಇದೀಗ ಕೊಡವರ ಪಾರಂಪರಿಕ ಉಡುಗೆ ತೊಡುಗೆಗಳನ್ನು ಹಾಗೂ ಆಚರಣೆಗಳನ್ನು ನಿರ್ಬಂಧಿಸುವ ಮಟ್ಟಕ್ಕೆ ಕೆಲವು ಕಿಡಿಗೇಡಿಗಳು ಬಂದಿರುವುದು ಇತ್ತೀಚಿನ ಕೆಲವು ಘಟನೆಗಳಿಂದ ಸಾಭಿತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಕೆಲವು ವರ್ಷಗಳಿಂದ ತಲಕಾವೇರಿಯಲ್ಲಿ ಕೊಡವರ ಹಕ್ಕುಗಳನ್ನು ಉದ್ದೇಶಪೂರ್ವಕವಾಗಿ ಕಸಿದುಕೊಳ್ಳಲು ಹುನ್ನಾರ ನಡೆಯುತ್ತಲೆ ಬಂದಿದೆ.
ತಲತಲಾಂತರದಿಂದ ತಲಕಾವೇರಿಯಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ದುಡಿಕೊಟ್ಟ್ ಪಾಟ್ನೊಂದಿಗೆ ಕಾವೇರಿ ತೀರ್ಥೋದ್ಭವಕ್ಕೆ ಹೋಗುವುದು ವಾಡಿಕೆಯಾಗಿತ್ತು, ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಕಾವೇರಿಗೆ ಕೊಡವರು ತಮ್ಮ ಸಾಂಪ್ರದಾಯಿಕ ಉಡುಗೆ, ಹಾಗೂ ಸಾಂಪ್ರದಾಯಿಕ ಆಚರಣೆಗಳಾದ ದುಡಿಕೊಟ್ಟ್ ಪಾಟ್, ಪತ್ತಾಯಕ್ಕೆ ಅಕ್ಕಿ ಹಾಕುವುದು, ತೀರ್ಥ ಕುಂಡಿಕೆ ಸುತ್ತ ತಳಿಯತಕ್ಕಿ ಹಿಡಿದು ಕಾವೇರಿ ಮಾತೆಯನ್ನು ಸ್ವಾಗತಿಸುವುದು ಹಾಗೂ ಕೊಡವರು ಮಾಡುತ್ತಿರುವ ಅನ್ನದಾನವನ್ನು ಕೂಡ ನಿರ್ಬಂಧಿಸುವ ಪ್ರಯತ್ನ ನಿರಂತರ ನಡೆದಿದೆ.
ಇದು ಕೊಡವರ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಭಾವನೆಗೆ ತೀವ್ರ ಧಕ್ಕೆಯಾಗಿದೆ ಎಂದು ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.
ಕೊಡವ ಸಾಂಪ್ರದಾಯಿಕ ಉಡುಗೆ, ತೊಡುಗೆಗಳು, ಆಭರಣಗಳು, ಜಾನಪದ ಕಲೆಗಳು ಸೇರಿದಂತೆ ಕೊಡವ ಸಂಸ್ಕೃತಿಯ ಆಚರಣೆಗಳನ್ನು ನಿಕೃಷ್ಟವಾಗಿ ನಕಲು ಮಾಡಿ ಕೊಡವ ಸಂಸ್ಕೃತಿಯನ್ನು ಅವಮಾನಿಸುತ್ತಲೇ ಬಂದಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಇದೆಲ್ಲಾವು ಕೊಡವರ ಮತ್ತು ಭಾಷಿಕ ಜನಾಮಗಗಳ ಅಸ್ತಿತ್ವವನ್ನು ನಾಶ ಮಾಡುವ ಹುನ್ನಾರವಾಗಿದ್ದು, ಮಾನವ ಹಕ್ಕಿನ ಉಲ್ಲಂಘನೆಯೂ ಆಗಿದೆ ಎಂದು ಸಭೆ ಅಭಿಪ್ರಾಯ ಪಟ್ಟಿತು.
ದೇಶವೇ ಹೆಮ್ಮೆ ಪಡುವ ವೀರ ಸೇನಾನಿಗಳಾದ ಫಿ.ಮಾ ಕಾರ್ಯಪ್ಪ ಹಾಗೂ ಜ.ತಿಮ್ಮಯ್ಯ ಅವರು ಕೊಡವರು ಎಂಬ ಕಾರಣಕ್ಕೆ ಅವರನ್ನು ಅವಮಾನಿಸಲಾಗಿದೆ. ಇನ್ನೂ ಕೊಡವರ ತಲೆತಲಾಂತರದ ಸಂಸ್ಕೃತಿಯಾದ ಕೋವಿಯ ಹಕ್ಕನ್ನು ಕೂಡ ಪ್ರಶ್ನಿಸಿ ಗೊಂದಲ ಸೃಷ್ಟಿಸುವ ಕೆಲಸ ನಡೆದಿದೆ.
ಇತ್ತಿಚೆಗೆ ಕಟ್ಟೆಮಾಡು ಮಹಾದೇವರ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿದ್ದ ಕೊಡವರು ಹಾಗೂ ಕೊಡವ ಭಾಷಿಕ ಸಮುದಾಯದ ಪುರುಷರು, ಮಹಿಳೆಯರು ಹಾಗೂ ಮಕ್ಕಳನ್ನು ದೇವಸ್ತಾನದ ಒಳಗೆ ಬಿಡದಂತೆ ನಿರ್ಬಂಧ ಹೇರಿರುವುದರ ಜೊತೆಗೆ ಕುಪ್ಯಚೇಲೆ ಹಾಕಿದ ಕೊಡವರ ಮೇಲೆ ಹಲ್ಲೆ ಮಾಡುವ ಮೂಲಕ ಭಯದ ವಾತಾವರಣವನ್ನು ಸೃಷ್ಟಿಸಿ ಅಲ್ಪ ಸಂಖ್ಯಾತರಾದ ಕೊಡವರಿಗೆ ಅಭದ್ರತೆಯನ್ನು ಸೃಷ್ಟಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಇಷ್ಟೆಲ್ಲಾ ಕೃತ್ಯಗಳು ನಡೆದಿದ್ದರೂ ಕಿಡಿಗೇಡಿಗಳ ವಿರುದ್ಧ ಇದುವರೆಗೆ ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲ. ಕೆಲವರು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿ ಕೊಡವರನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಎಲ್ಲಾ ಕುತಂತ್ರಗಳನ್ನು ಹೆಣೆಯುತ್ತಿರುವುದು ನೋಡಿದಾಗ, ಈ ವ್ಯವಸ್ಥೆಯಲ್ಲಿ ಕೊಡವರಿಗೆ ಭದ್ರತೆ ಇಲ್ಲ ಎಂಬ ಭಾವನೆ ಉಂಟು ಮಾಡಿದೆ. ಇದು ಮಾತ್ರವಲ್ಲದೆ ಹಲವಾರು ಘಟನೆಗಳು ಕೊಡವ ಹಾಗೂ ಕೊಡವ ಸಂಸ್ಕೃತಿಯ ಮೇಲೆ ಜನಾಂಗೀಯ ದೌರ್ಜನ್ಯ ಮತ್ತು ಜನಾಂಗೀಯ ತಾರತಮ್ಯಕ್ಕೆ ಸಾಕ್ಷಿಯಾಗಿದೆ.
ಈ ನಿಟ್ಟಿನಲ್ಲಿ ಕೊಡವ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಹಕ್ಕಿನ ರಕ್ಷಣೆಯ ಹಿನ್ನೆಲೆಯಲ್ಲಿ ಕೊಡವ ಸಂಸ್ಕೃತಿ ಅಡಿಯಲ್ಲಿ ಬದುಕು ಸಾಗಿಸುತ್ತಿರುವ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ತಮಗಾಗಿರುವ ಅನ್ಯಾಯದ ವಿರುದ್ಧ ಬ್ರಹತ್ ಪಾದಯಾತ್ರೆಯನ್ನು ನಡೆಸಲು ಸಭೆ ಒಮ್ಮತದ ತಿರ್ಮಾನ ಕೈಗೊಳ್ಳಲಾಯಿತು ಎಂದು ಪ್ರಮುಖರು ತಿಳಿಸಿದ್ದಾರೆ.