ವಿರಾಜಪೇಟೆ, ಮಾ.08: ಕೊಡಗು ರಾಜಕೀಯಕ್ಕೆ ವಿರಾಜಪೇಟೆಯ ಹಾಲಿ ಶಾಸಕರಾಗಿರುವ ಅಜ್ಜಿಕುಟ್ಟಿರ ಪೊನ್ನಣ್ಣ ಅವರ ಪಾದಾರ್ಪಣೆ ಆದ ನಂತರದಲ್ಲಿ ಸಾಕಷ್ಟು ರಾಜಕೀಯ ಬದಲಾವಣೆಗಳಾಗಿವೆ. ಅದರಲ್ಲೂ 2023ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿಯ ಭದ್ರ ಕೋಟೆಯನ್ನು ಛಿದ್ರ ಮಾಡಿ, ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಪಡೆಯುವಲ್ಲಿ ಪೊನ್ನಣ್ಣರ ಪಾತ್ರ ಮಹತ್ತರವಾದದ್ದು. ಆ ನಂತರ ರಾಜ್ಯ ರಾಜಕಾರಣದಲ್ಲಿಯೂ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡು ಪ್ರಭಾವಶಾಲಿಯಾಗಿ ಬೆಳೆಯುತ್ತಿರುವ ಪೊನ್ನಣರ ನಾಗಾಲೋಟ ಕೊಡಗು ಬಿಜೆಪಿಗರ ನಿದ್ದೆಗೆಡಿಸಿದಂತಿದೆ.
ಹಾಗಾಗಿ ಕೊಡಗು ಬಿಜೆಪಿ ಏನೇ ಪ್ರತಿಭಟನೆ ಮಾಡಿದರೂ, ಪ್ರತಿಕ್ರಿಯಿಸಿದರೂ ಅಲ್ಲಿ ಕಾಂಗ್ರೆಸ್ ಪಾರ್ಟಿ ಅಥವಾ ಸರ್ಕಾರವನ್ನು ಬಿಟ್ಟು, ಶಾಸಕ ಪೊನ್ನಣ್ಣರನ್ನು ಗುರಿಯಾಗಿಸಲು ಹೋಗಿ, ಸಾಮಾಜಿಕ ಜಾಲತಾಣಗಳಲ್ಲಿ ಪೇಚಿಗೆ ಸಿಲುಕತ್ತಿದೆ. ಚುನಾವಣಾ ಸಮಯದಲ್ಲಿಯೂ ಪೊನ್ನಣ್ಣ ಅವರ ವಿರುದ್ದ ಕೆಲವರು ಆಡಿದ್ದ ಮಾತು, ತೀರಾ ವಯುಕ್ತಿಕ ನೆಲೆಗಟ್ಟಿನ ಟೀಕೆಗಳು ಇಡೀ ಕೊಡಗಿನ ರಾಜಕೀಯ ವಲಯವನ್ನೇ ಅಲ್ಲೋಲ ಕಲ್ಲೋಲ ಮಾಡಿತ್ತು. ಆ ನಂತರ ಪೊನ್ನಣ್ಣರ ಪ್ರತಿಕೃತಿ ಧಹಿಸಿದ ಬಿಜೆಪಿ, ಪಕ್ಷಾತೀತವಾಗಿ ಟೀಕೆಗೆ ಗುರಿಯಾಗಿತ್ತು. ನಂತರ ಬೆಂಗಳೂರಿನಲ್ಲಿ ನಡೆದ ಪ್ರಕರಣಕ್ಕೆ ಪೊನ್ನಣ್ಣರ ಮನೆಗೆ ಹಸುವಿನೊಂದಿಗೆ ಹೋಗಿ ಪ್ರತಿಭಟಿಸಿ, ಸ್ವ ಪಕ್ಷಿಯರಿಂದಲೇ ಟೀಕೆಗೆ ಗುರಿಯಾಗಿದ್ದರು. ಇತ್ತೀಚೆಗೆ ನಾಪೋಕ್ಲುವಿನಲ್ಲಿ ಮುಚ್ಚಿ ಬೀಗ ಹಾಕಲಾಗಿದ್ದು ಎನ್ನಲಾದ ಶೌಚಾಲಯ ಒಂದರ ಫೋಟೋವನ್ನ ಎಡಿಟ್ ಮಾಡಿ, ಪೊನ್ನಣ್ಣರ ಫೋಟೋದೊಂದಿಗೆ ಹಂಚಿಕೊಂಡು ಛಿಮಾರಿ ಹಾಕಿಸಿಕೊಂಡದಲ್ಲದೆ, ಕೇಸನ್ನೂ ಹಾಕಿಸಿಕೊಂಡರು.
ಇದೀಗ ಮತ್ತೊಮ್ಮೆ ಸಾಮಾಜಿಕ ಮಾದ್ಯಮದಲ್ಲಿ ಬಿಜೆಪಿ, ಟೀಕಾಕಾರರಿಗೆ ಆಹಾರವಾಗುತಿದ್ದು, ಮೊನ್ನೆ ನಡೆದ ಬಿಜೆಪಿಯ ಅಹೋರಾತ್ರಿ ಧರಣಿಯಲ್ಲಿ ಬಳಸಿದ ಹಾಡಿನ ತುಣುಕೊಂದು ವಿವಾದದ ಸ್ವರೂಪ ಪಡೆದು ಕೊಂಡಿದೆ.
ರಾಜ್ಯ ಸರ್ಕಾರದ ವಿರುದ್ದ ಕೊಡಗು ಬಿಜೆಪಿ ಕಳೆದ ಎರಡು ದಿನ ಅಹೋರಾತ್ರಿ ಪ್ರತಿಭಟನೆ ಮಾಡಿತು. ಆ ಸಂದರ್ಭದದಲ್ಲಿ ರಾಜ್ಯ ಸರ್ಕಾರ ಕೊಡಗನ್ನು ಕಡೆಗಣಿಸಿದೆ, ಜಿಲ್ಲೆಯ ಶಾಸಕರು ನಿಷ್ಕ್ರಿಯರಾಗಿದ್ದಾರೆ ಎಂದು ಬಿಂಬಿಸುವ ಹಾಡೊಂದರಲ್ಲಿ, ಪೊನ್ನಣ್ಣ ಬಂದವರೇ, ಎಲ್ಲ ಸೇರಿ ಕಳ್ಳರೇ ಎಂಬ ಸಾಲು ಇದೀಗ ವಿವಾದ ರೂಪ ತಾಳಿದ್ದು, ಪರ ವಿರುದ್ದ ವಾಕ್ಸಮರ ಸಾಮಾಜಿಕ ಮಾದ್ಯಮದ ಮೂಲಕ ನಡೆಯುತ್ತಿದೆ.
ಕೊಡಗು ಬಿಜೆಪಿ ಪ್ರತಿಭಟಿಸುವುದು, ಪ್ರಶ್ನಿಸುವುದು ವಿರೋಧ ಪಕ್ಷವಾಗಿ ಅವರ ಹಕ್ಕು ಮತ್ತು ಕರ್ತವ್ಯ. ಆದರೆ ಸರ್ಕಾರದ ವಿರುದ್ದ ಪ್ರತಿಭಟನೆಯಲ್ಲಿ ಶಾಸಕ ಪೊನ್ನಣ್ಣರನ್ನ ವಯುಕ್ತಿಕವಾಗಿ ಹೊಣೆಯಾಗಿಸಿ ನಿಂದಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇಬ್ಬರು ಶಾಸಕರೂ ಕಾಂಗ್ರೆಸ್ನವರೇ ಆದರೂ, ಕೇವಲ ಪೊನ್ನಣ್ಣರನ್ನು ಪ್ರಶ್ನಿಸಲಷ್ಟೇ ದೈರ್ಯವೇ ಬಿಜೆಪಿಗರಿಗೆ ಎಂಬುದು ಪೊನ್ನಣ್ಣ ಬೆಂಬಲಿಗರ ವಾದವಾದರೆ, ಪ್ರಜಾಪ್ರಭುತ್ವದ ಅಡಿಯಲ್ಲಿ ಪ್ರತಿಯೊಬ್ಬರೂ ಪ್ರಶ್ನಾರ್ಹರೇ, ನಾವೂ ಕಾನೂನಿನ ವ್ಯಾಪ್ತಿಯಲ್ಲೆ ಪ್ರಶ್ನಿಸಿದ್ದೇವೆ, ಪ್ರತಿಭಟಿಸಿದ್ದೇವೆ ಎಂಬುದು ಬಿಜೆಪಿ ವಾದ.
ಈ ಕುರಿತು ನಡುಬಾಡೆ ನ್ಯೂಸ್ ಎರಡೂ ಕಡೆಗಳಿಂದ ಪ್ರತಿಕ್ರಿಯೆ ಬಯಸಿದಾಗ ಉಭಯ ಪಕ್ಷದ ಮುಖಂಡರು, ಶಾಸಕರ ಅಭಿಮಾನಿಗಳು ಈ ಕೆಳಗಿನಂತೆ ಅಭಿಪ್ರಾಯಿಸಿದ್ದಾರೆ. ದುರಂತ ಎಂದರೆ ಈ ಹಾಡಿಗೆ ಕೇಕೆ ಹಾಕಿ ನಕ್ಕಿದ್ದ ಹಲವು ಬಿಜೆಪಿ ನಾಯಕರಿಗೆ ಈ ಸಾಲು ಹಾಡಿದ್ದೇ ಕೇಳಿಲ್ಲವಂತೆ.
ಬಿಜೆಪಿಗರು ತಮ್ಮನ್ನು ತಾವು ಮುಟ್ಟಿ ನೋಡಿ ಕೊಂಡಿದ್ದಾರೆ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ
ಕೊಡಗು ಬಿಜೆಪಿಗೆ ಪ್ರತಿಭಟಿಸುವ ನೈತಿಕ ಹಕ್ಕಿಲ್ಲ ಎಂದಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ದರ್ಮಜ ಉತ್ತಪ್ಪ ಅವರು, ಕಳೆದ 25 ವರ್ಷಗಳ ಕಾಲ ಜಿಲ್ಲೆಯನ್ನು ಲೂಟಿ ಮಾಡಿರುವ ಬಿಜೆಪಿಗರಿಂದ, ನಾವು ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಯಾರು ಕಳ್ಳರು, ಯಾರು ಉತ್ತಮರು ಎನ್ನುವುದನ್ನು ಜಿಲ್ಲೆಯ ಜನ ಈಗಾಗಗಲೇ ತೀರ್ಮಾನ ಮಾಡಿದ್ದಾರೆ. ಇನ್ನಾದರೂ ಬಿಜೆಪಿಗರು ಮೌಲ್ಯಾಧರಿತ ರಾಜಕಾರಣ ಮಾಡಲಿ ಎಂದರು.
ವೈಯುಕ್ತಿಕ ನಿಂದನೆ ನಮ್ಮ ಸಿದ್ದಾಂತವಲ್ಲ: ನಾಪಂಡ ರವಿ ಕಾಳಪ್ಪ
ಬಿಜೆಪಿ, ಈ ನೆಲದ ಕಾನೂನಿಗೆ ಗೌರವ ಕೊಟ್ಟು, ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸುತ್ತದೆ. ಯಾರದ್ದೇ ವಯುಕ್ತಿಕ ನಿಂದನೆ ನಮ್ಮ ಸಿದ್ದಾಂತವಲ್ಲ ನಾವದನ್ನು ಮಾಡಿಯೂ ಇಲ್ಲ ಎಂದಿರುವ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು, ಸಂವಿಧಾನ ಬದ್ದವಾಗಿಯೇ ನಾವು ಪ್ರತಿಭಟಿಸಿದ್ದೇವೆ, ಸರ್ಕಾರವನ್ನು ಪ್ರಶ್ನಿಸಿದ್ದೇವೆ, ಜನ ಪರವಾಗಿ ಕೆಲಸ ಮಾಡುವಂತೆ ಆಗ್ರಹಿಸಿದ್ದೇವೆ ಇದನ್ನು ಯಾರೂ ವಯುಕ್ತಿಕವಾಗಿ ತೆಗೆದುಕೊಳ್ಳಬಾರದು ಎಂದಿದ್ದಾರೆ.
ಜಿಲ್ಲೆಯ ಜನರನ್ನು ಕಳ್ಳರಿಗೆ ಹೋಲಿಸಿದ ಕೊಡಗು ಬಿಜೆಪಿ ಕ್ಷಮೆಯಾಚಿಸಲಿ: ಮಂಞಿರ ಕುಟ್ಟಪ್ಪ
ಜಿಲ್ಲೆಯ ಜನರ ಮತಗಳಿಂದ ಆಯ್ಕೆಯಾದ ಪೊನ್ನಣ್ಣರನ್ನು ಅವಮಾನಿಸುವ ಭರದಲ್ಲಿ, ಬಿಜೆಪಿಗರು ಜಿಲ್ಲೆಯ ಮತದಾರರನ್ನು ಅವಮಾನಸಿದ್ದಾರೆ. ಎಲ್ಲರೂ ಕಳ್ಳರು ಎಂದರೆ, ಜಿಲ್ಲೆಯ ಜನತೆಯನ್ನೂ ಕಳ್ಳರಿಗೇ ಹೋಲಿಕೆ ಮಾಡಲಾಗಿದೆ. ತಮ್ಮ 25 ವರ್ಷಗಳ ಕಳ್ಳತನದ ಅನುಭವವನ್ನು ಇದೀಗ ಕಾಂಗ್ರೆಸಿಗರ ಮೇಲೆ ಅನುಮಾನಿಸುತಿದ್ದಾರೆ. ನಮ್ಮನ್ನು ಛೇಲಗಳು ಎಂದಿರುವವರು, ತಾವು ಯಾರ ಛೇಲಾ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್ ಮುಖಂಡ ಮಂಞಿರ ಕುಟ್ಟಪ್ಪ ಹೇಳಿದರು.
ನಾನೂ ಎ.ಕೆ. ಸುಬ್ಬಯ್ಯ ಅವರ ಶಿಷ್ಯನಾಗಿ ರಾಜಕೀಯ ಪ್ರಾರಂಭಿಸಿದವನು: ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ
ಕರ್ನಾಟಕ ರಾಜಕಾರಣ ಕಂಡ ಧೀಮಂತ ರಾಜಕಾರಣಿ ಎ.ಕೆ. ಸುಬ್ಬಯ್ಯ ಅವರ ಶಿಷ್ಯನಾಗಿ ನಾನು ರಾಜಕಾರಣಕ್ಕೆ ಬಂದವನು. ಎಂದಿರುವ ಬಿಜೆಪಿ ಮಾಜೀ ಜಿಲ್ಲಾಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರು, ಸುಬ್ಬಯ್ಯ ಅವರ ನೇರ ನಿಷ್ಟುರವಾದವನ್ನು ನೋಡಿಕೊಂಡು ಬೆಳೆದವರು ನಾವು, ಕಳೆದ 45 ವರ್ಷಗಳಿಂದ ರಾಜಕೀಯ ರಂಗದಲ್ಲಿ ಎಲ್ಲವನ್ನೂ ನೋಡಿದ್ದೇವೆ, ಆದರೆ ಯಾರ ಮೇಲೂ ವಯುಕ್ತಿಕ ದ್ವೇಶ ಇಲ್ಲ ಎಂದಿದ್ದಾರೆ. ಶಾಸಕ ಪೊನ್ನಣ್ಣ ಅವರನ್ನು ರಾಜಕೀಯವಾಗಿ ಸೈದ್ದಾಂತಿಕವಾಗಿ ವಿರೋಧಿಸಿದ್ದೇನೆ. ವ್ಯಕ್ತಿಗತವಾಗಿ ಅವರನ್ನು ಗೌರವಿಸುತ್ತೇನೆ ಮತ್ತು ಅವರೂ ಉತ್ತಮ ನಡತೆ ಇರುವ ರಾಜಕಾರಣಿ ಆದರೆ ಅವರ ಹಿಂಬಾಲಕರು ಅವರನ್ನು ಹಾಳು ಮಾಡುತಿದ್ದಾರೆ. ಅದನ್ನು ಅವರು ಅರಿಯಬೇಕು ಎಂದಿದ್ದಾರೆ. ನಾನು ಕೊಡವನಾಗಿದ್ದುಕೊಂಡು, ಜನಾಂಗದ ಸೇವೆಯ ನಡುವೆಯೇ ರಾಜಕಾರಣವನ್ನೂ ಮಾಡುತ್ತಿದ್ದೇನೆ, ರಾಜಕೀಯಕ್ಕಾಗಿ ಕೊಡವಾಮೆಯನ್ನು ಬಳಸಿಕೊಂಡಿಲ್ಲ. ಆದರೆ ನನ್ನನ್ನು ವೈಯುಕ್ತಿಕವಾಗಿ ಗುರಿಯಾಗಿಸಿ ಪಿತೂರಿ ಮಾಡುವ ಮೂಲಕ ದ್ವೇಶ ಸಾಧನೆ ಮಾಡಲಾಗುತ್ತಿದೆ. ಕೊಡವಾಮೆಯ ಮಾತಾಡುವವರಿಗೆ ನಾನೂ ಒಬ್ಬ ಕೊಡವ ಎನ್ನುವುದು ಯಾಕೆ ನೆನಪು ಬರುತಿಲ್ಲ ಎಂದು ಪ್ರಶ್ನಿಸಿರುವ ಮನು ಮುತ್ತಪ್ಪ ಅವರು, ಚುನಾವಣೆ ಸಂದರ್ಭದಲ್ಲಿ ರಾಜಕೀಯವಾಗಿ ವಿರೋಧಿಸಿ ಭಾಷಣ ಮಾಡಿದ್ದೆ ಮತ್ತು ನಮ್ಮ ಕೌಟುಂಬಿಕ ಹಾಕಿಗೆ ಪೊನ್ನಣ್ಣ ಅವರು ನೀಡಿದ 3 ಲಕ್ಷ ರೂ. ಧನಸಹಾಯವನ್ನು ಸ್ವೀಕರಿಸಲು ಅವರ ಮನೆಗೆ ನಾನು ಹೋಗಿಲ್ಲ, ನಮ್ಮ ಕುಟುಂಭಸ್ತರು ಸ್ವೀಕರಿಸಿದ್ದಾರೆ ಎಂದು ಹೇಳಿದ್ದೆ. ಆದರೆ ಅದಕ್ಕೂ ಮೊದಲು ಬೇರೊಂದು ಖಾಸಗೀ ಕಾರ್ಯಕ್ರಮದಲ್ಲಿ ಭೇಟಿಯಗಿದ್ದಾಗ ಅವರಲ್ಲಿ ಧನಸಹಾಯ ಕೇಳಿದ್ದೇ ಎಂದ ಹೇಳಿಕೆಯನ್ನು ವಯುಕ್ತಿಕವಾಗಿ ತಿರುಚಿ, ನನ್ನ ತೇಜೋವಧೆ ಮಾಡಲಾಯಿತು. ಪೊನ್ನಣ್ಣರನ್ನು ರಾಜಕೀಯವಾಗಿ ವಿರೋಧಿಸುವವರೆಲ್ಲರೂ ಕೊಡವ ವಿರೋಧಿಗಳು ಎಂದು ಬಿಂಬಿಸುವ ಧೋರಣೆ ಬದಲಾಗಲಿ, ಶಾಸಕ ಪೊನ್ನಣ್ಣ ಅವರು ಧೀಮಂತ ನಾಯಕ ಎ.ಕೆ. ಸುಬ್ಬಯ್ಯ ಅವರ ಮಗನಾಗಿ ಸರಿ ತಪ್ಪುಗಳನ್ನು ತಿಳಿದು ನೇರ ರಾಜಕಾರಣ ಮಾಡಲಿ, ಅವರ ಒಳ್ಳೆತನವನ್ನು ದುರ್ಭಳಕೆ ಮಾಡುತ್ತಿರುವವರ ಮೇಲೆ ಅವರು ಗಮನ ಹರಿಸಬೇಕು. ಅಂತವರನ್ನೇ ನಾನೂ ಛೇಲಾಗಳು ಎಂದು ಕರೆದಿದ್ದೇನೆ ಎಂದ ಮನು ಮುತ್ತಪ್ಪ ಅವರು, ಸಾಮಾನ್ಯವಾಗಿ ಪ್ರಭಾವಿಗಳು ಮತು ಬಲಿಷ್ಟರು ಯಾವುತ್ತೂ ಗುರಿಯಾಗುತ್ತಾರೆ, ಹಾಗೆಯೇ ಜಿಲ್ಲೆಯ ರಾಜಕಾರಣದಲ್ಲಿ ಪೊನ್ನಣ್ಣ ಅವರು ಪ್ರಸ್ಥುತ ಪ್ರಭಾವಿ ರಾಜಕಾರಣಿ, ಜನಪ್ರತಿನಿಧಿ. ಆ ನೆಲೆಗಟ್ಟಿನಲ್ಲಿ ಪೊನ್ನಣ್ಣ ಅವರಿಗೆ ಹೆಚ್ಚು ಒತ್ತು ನೀಡಲಾಗುತ್ತದೆಯೇ ಹೊರತು ಬಿಜೆಪಿಗೆ ಅವರ ಮೇಲೆ ವಯುಕ್ತಿಕ ದ್ವೇಷವೂ ಇಲ್ಲ ಭಯವೂ ಇಲ್ಲ ಎಂದರು.
ಬಲಿಷ್ಠರ ವಿರುದ್ದ ಅಪಪ್ರಚಾರವೇ ಬಿಜೆಪಿ ಅಸ್ತ್ರ: ಸೂರಜ್ ಹೊಸೂರು
ಶಾಸಕ ಪೊನ್ನಣ್ಣರ ಜನ ಮನ್ನಣೆಯನ್ನು ಸಹಿಸಲಾಗದ ಬಿಜೆಪಿಗರು ಅವರ ತೇಜೋವಧೆಗೆ ಇಳಿದಿದ್ದಾರೆ. ಬಲಿಷ್ಟರ ವಿರುದ್ದ ಅಪಪ್ರಚಾರವೇ ಅವರ ಅಸ್ತ್ರ. ಮುಂದೆ ಕನಿಷ್ಟ 20-30 ವರ್ಷ ಜಿಲ್ಲೆಯಲ್ಲಿ ಅವರಿಗೆ ನೆಲೆ ಇಲ್ಲ ಆ ಭಯದಿಂದಲೇ ನೀರಿನಿಂದ ಹೊರ ತೆಗೆದ ಮೀನಿನಂತೆ ಪರದಾಡುತಿದ್ದಾರೆ. ತಾನು ಕಳ್ಳ ಪರರ ನಂಬ ಎಂಬಂತೆ ಬಿಜೆಪಿಗರು ಕಳೆದ 25 ವರ್ಷ ಕೊಡಗನ್ನು ಕೊಳ್ಳೆ ಹೊಡೆದು, ಈಗ ಅಭಿವೃದ್ದಿ ಸಹಿಸದೆ ಅಪವಾದ ಹೊರಿಸುತಿದ್ದಾರೆ, ಇಬ್ಬರು ವಿರೋಧಿಸಿದರೆ 200ಜನ ಪೊನ್ನಣ್ಣ ಅವರ ಬೆಂಬಲಕ್ಕೆ ನಿಲ್ಲಲಿದ್ದೇವೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕ ಸೂರಜ್ ಹೊಸೂರು ಹೇಳಿದರು.
25 ವರ್ಷದ ಕಳ್ಳರಿಗೆ ಈಗ ಎಲ್ಲರೂ ಅವರಂತೇ ಕಾಣುತ್ತಾರೆ : ಚೋವಂಡ ವಿಷ್ಟು
ಜಿಲ್ಲೆಯಲ್ಲಿ ಕಳೆ 25 ವರ್ಷ ವಕ್ಕರಿಸಿಕೊಂಡಿದ್ದ ಕಳ್ಳರಿಗೆ ಈಗ ಎಲ್ಲರೂ ಕಳ್ಳರಂತೇ ಕಾಣುತ್ತಾರೆ. ಜಿಲ್ಲೆಯಲ್ಲಿ ಇಬ್ಬರು ಶಾಸಕರಿದ್ದರೂ ಎಲ್ಲದಕ್ಕೂ ಪೊನ್ನಣ್ಣರನ್ನು ಮಾತ್ರ ಹೊಣೆ ಮಾಡುತ್ತಾ, ಅವರ ವಿರುದ್ದ ದ್ವೇಶ ಸಾಧಿಸುತ್ತಿರುವುದು ಸರಿಯಲ್ಲ ಎಂದಿರುವ, ಸಾಮಜಿಕ ಕಾರ್ಯಕರ್ತ ಚೋವಂಡ ವಿಷ್ಟು ಅವರು, ನಾನು ಯಾವುದೇ ಪಕ್ಷದ ಕಾರ್ಯಕರ್ತನಲ್ಲ ಆದರೆ ಶಾಸಕ ಪೊನ್ನಣ್ಣ ಅವರ ಕಟ್ಟಾ ಅಭಿಮಾನಿ ಆಗಿದ್ದೇ, ಅವರ ವಿರುದ್ದ ವಿನಾ ಕಾರಣ ತೇಜೋವಧೆ ಮಾಡಿದರೆ ನಾವೂ ಪ್ರತಿಕ್ರಿಸುತ್ತೇವೆ ಎಂದಿದ್ದಾರೆ.
ಇನ್ನು ಹಲವು ಬಿಜೆಪಿಯ ನಾಯಕರನ್ನು ನಡುಬಾಡೆ ನ್ಯೂಸ್ ಪ್ರತಿಕ್ರಿಯೆ ಕೇಳಿದಾಗ, ಪ್ರತಿಕ್ರಿಯೆ ಕೊಡದೇ ನುಣುಚಿಕೊಂಡರು. ಮತ್ತೆ ಕೆಲವರು ನಾವು ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆವು ಆದರೆ ಈ ಹಾಡು ನಮ್ಮ ಗಮನಕ್ಕೆ ಬರಲಿಲ್ಲ ಎಂದರೆ, ಹಲವರು ಅದು ಹಾಡು ಹಾಡಿದ್ದು ಕನ್ನಂಡ ಸಂಪತ್ ಅವರು, ಅದು ಅವರ ವಯುಕ್ತಿಕ ಅಭೀಪ್ರಾಯ ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದುಬಿಟ್ಟರು.
ಒಟ್ಟಾರೆಯಾಗಿ ನೋಡಿದರೆ ಹಲವು ಬಾಜಾಪ ನಾಯಕರಿಗೆ ಪೊನ್ನಣ್ಣ ಫೋಬಿಯಾ ಕಾಡುತ್ತಿರುವುದಂತೂ ನಿಜ. ಆ ಕಾರಣಕ್ಕೇ ಅವಕಾಶ ಸಿಕ್ಕಾಗಲೆಲ್ಲ ಅವರನ್ನು ನಿಂದಿಸುವ ಪ್ರಯತ್ನ ಸಾಗುತ್ತಿದೆಯಾ ಎಂಬುದು ಜನತೆಯ ಪಿಸುಮಾತು. ಸದಾ ಮೌಲ್ಯಾಧಾರಿತ ರಾಜಕಾರಣಕ್ಕೆ ಸಾಕ್ಷಿಯಾಗಿದ್ದ, ಸದಾ ಸೈದ್ದಾಂತಿಕ ನೆಲೆಗಟ್ಟಿನಲ್ಲೇ ರಾಜಕಾರಣ ಮಾಡುತಿದ್ದ ಕೊಡಗು, ಇಂದು ತೀರಾ ದ್ವೇಶ ಮತ್ಸರಕ್ಕೆ ತಿರುಗಿದ್ದು, ಪರಸ್ಪರ ವಯುಕ್ತಿಕ ಕಿಚ್ಚಿಗೆ ನಾಂದಿ ಹಾಡಿದೆ. ಮುಂದೆ ಇದು ಯಾವ್ಯಾವ ದಿಕ್ಕಿನಲ್ಲಿ ಕವಲೊಡೆಯಲಿದೆಯೋ ಕಾದು ನೋಡಬೇಕಿದೆ.