ವಿರಾಜಪೇಟೆ, ಮಾ.01: ಪ್ರಕೃತಿ ವಿಕೋಪ ಸಂತ್ರಸ್ತರ ಮನೆ ಹಂಚಿಕೆಯಲ್ಲಿ ಯಾವುದೇ ಲೋಪವಾಗಿಲ್ಲ, ಸರ್ಕಾರಿ ನಿಯಮದಂತೆ ಹಂಚಿಕೆ ಮಾಡಿದ್ದೇವೆ ಎಂದು ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿ ವಿನಾಯಕ್ ಕರ್ಬರಿ ನರವಡೆ ಅವರು ಹೇಳಿದ್ದಾರೆ.
2018ರ ಮಳೆಹಾನಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ, ಹಂಚಿಕೆ ಮಾಡಲಾಗಿರುವ ಮನೆಗಳಲ್ಲಿ, ನೈಜ ಸಂತ್ರಸ್ತರನ್ನು ಕೈ ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ, ಉಪ ವಿಭಾಗಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿವರಣೆ ಬಯಸಿದಾಗ, ಮಾತನಾಡಿದ ಅವರು, ಸರ್ಕಾರದ ನಿಯಮದಂತೆ ಮನೆ ಹಂಚಿಕೆ ಮಾಡಲಾಗಿದ್ದು, 2024ರ ನವೆಂಬರ್ ತಿಂಗಳಿನಲ್ಲೇ ಅಂತಿಮ ಪಟ್ಟಿ ಸಿದ್ದಪಡಿಸಿ, ಜಿಲ್ಲಾಡಳಿತದ ಸೂಚನಾಫಲಕದಲ್ಲಿ ಬಹಿರಂಗಪಡಿಸಿದಲ್ಲದೆ, ಜಿಲ್ಲಾಡಳಿತದ ಅಧಿಕೃತ ವೆಬ್ ತಾಣದಲ್ಲಿಯೂ ಪ್ರಕಟಿಸಿ, ತಕಾರಾರುಗಳಿದ್ದರೆ ಸಲ್ಲಿಸಲು ಕೋರಲಾಗಿತ್ತು. ಆ 40 ದಿನಗಳಲ್ಲಿ ಸುಮಾರು 06 ತಕರಾರು ಅರ್ಜಿ ಬಂದಿದ್ದು ಅದನ್ನು ನಿಯಮಾನುಸಾರ ಇತ್ಯರ್ಥಪಡಿಸಲಾಗಿದೆ. ಆ ನಂತರವೂ ಮತ್ತೊಮ್ಮೆ ನೋಟಿಫಿಕೇಷನ್ ನೀಡಲಾಗಿದ್ದು, ಯಾವುದೇ ಮನವಿಗಳು ಬಂದಿಲ್ಲ. ಇದಾದ ಮೇಲೆಯೆ ಆಯ್ಕೆಗೊಂಡವರಿಗೆ, ಲಾಟರಿ ಮೂಲಕ ಮನೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಯಾವುದೇ ವೆತ್ಯಾಸ ಅಥವಾ ನಿಯಮ ಬಾಹಿರ ಪ್ರಕ್ರಿಯೆಗಳು ನಡೆದಿಲ್ಲ ಎಂದು ಸ್ಪಷ್ಟ ಪಡಿಸಿದರು. ಆದರೂ ಮನೆ ಹಂಚಿಕೆಯ ನಂತರ ಜಿಲ್ಲಾಡಳಿತಕ್ಕೂ ಕೆಲವು ತಕರಾರು ಅರ್ಜಿಗಳು ಬರುತಿದ್ದು, ಸಂಬಧಿಸಿದ ಎಲ್ಲಾ ಮನೆಗಳ ಹಂಚಿಕೆ ಪ್ರಕ್ರಿಯೆ ಮುಗಿದಿರುವುದರಿಂದ ಜಿಲ್ಲಾಡಳಿತ ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಕೆಲವರು ಅರ್ಜಿ ಸಲ್ಲಿಸಿದ್ದರೂ, ನೈಜ ಸಂತ್ರಸ್ತರಾದವರೀಗೆ ಮನೆ ಸಿಕ್ಕಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಎ.ಸಿಯವರು, ಎಲ್ಲಾ ಅರ್ಜಿಗಳನ್ನು ಪರಿಶೀಲಿಸಲಾಗಿದೆ, ಸರ್ಕಾರದ ಯಾವುದಾದರೊಂದು ನಿಯಮ ಉಲ್ಲಂಘನೆಯಾಗಿದ್ದರೂ ಅಂತವರ ಹೆಸರನ್ನು ಕೈ ಬಿಡಲಾಗಿದೆ ಎಂದರು. ಅಲ್ಲದೆ ನೋಟಿಫಿಕೇಷನ್ ನೀಡಿದ್ದ ಸಮಯದಲ್ಲಿಯೇ ತಕರಾರು ಸಲ್ಲಿಸಿದ್ದರೆ ಮರು ಪರಿಶೀಲನೆಗೆ ಅವಕಾಶ ಇತ್ತು, ಆದರೆ ಈಗ ಎಲ್ಲಾ ಮನೆಗಳ ವಿತರಣೆ ಆಗಿರುವ ಕಾರಣ ತಮ್ಮಿಂದ ಏನೂ ಮಾಡಲಾಗದು ಎಂದು ಸ್ಪಷ್ಟ ಪಡಿಸಿದರು.
ಕೆಲವರು ನ್ಯಾಯಲಯದ ಮೊರೆ ಹೋಗುವ ವಿಚಾರದ ಬಗ್ಗೆ ಪ್ರಶ್ನಿಸಿದಾಗ, ಉತ್ತರಿಸಿದ ಉಪ ವಿಭಾಗಾಧಿಕಾರಿಗಳು, ಪ್ರಶ್ನೆ ಮಾಡುವುದು ಮತ್ತು ನ್ಯಾಯ ಕೇಳುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು, ಆದರೆ ಇಲಾಖೆ ನ್ಯಾಯಾಲಯಕ್ಕೆ ಬೇಕಾದ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಲಿದೆ, ಅಲ್ಲದೆ ನ್ಯಾಯಾಲಯ ನೀಡುವ ಆದೇಶವನ್ನು ಪಾಲಿಸುವುದಾಗಿಯೂ ಹೇಳಿದರು.
ಒಂದೆಡೆ ನೈಜವಾಗಿಯೂ ಮನೆ ಕಳೆದುಕೊಂಡು, ಪರಿಹಾರವೂ ಇಲ್ಲದೆ, ಬದಲಿ ಮನೆಯೂ ಇಲ್ಲದೆ ಕಂಗಲಾಗಿರುವ ಸಂತ್ರಸ್ತರ ಗೋಳಾಟ, ಮತ್ತೊಂದೆಡೆ ನಿರ್ಧಿಷ್ಟ ನಿಯಮ ಪಾಲನೆ ಮಾಡಿ ಹಂಚಿಕೆ ಮಾಡಲಾಗಿದೆ ಎಂಬ ಜಿಲ್ಲಾಡಳಿತದ ಸ್ಪಷ್ಟನೆಯ ನಡವೆ, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದರೆ ಮುಂದೇನಾಗುವುದೋ ಕಾದು ನೋಡಬೇಕಿದೆ.