
ಮಡಿಕೇರಿ ಏ.27 : ದೇಶ ಮತ್ತು ರಾಜ್ಯದಲ್ಲಿ ಹಾಕಿ ಕ್ರೀಡೆ ಜೀವಂತವಾಗಿರಲು ಕೊಡವರು ಕಾರಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಶ್ಲಾಘಿಸಿದ್ದಾರೆ. ಕೊಡವ ಕುಟುಂಬ ತಂಡಗಳ ನಡುವಿನ ಮುದ್ದಂಡ ಕಪ್ ಹಾಕಿ ಉತ್ಸವದ ಅಂತಿಮ ಪಂದ್ಯಾವಳಿಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಾಕಿ ಕ್ರೀಡೆಗೆ 4 ಸಾವಿರ ವರ್ಷಗಳ ಇತಿಹಾಸವಿದೆ, ಈಜಿಪ್ಟ್ ನಲ್ಲಿ ಆರಂಭಗೊಂಡ ಹಾಕಿ ಬ್ರಿಟಿಷರ ಮೂಲಕ ಭಾರತಕ್ಕೆ ಬಂತು. ಈ ಕ್ರೀಡೆ ಪ್ರಖ್ಯಾತಿಯನ್ನು ಪಡೆದು ದೇಶದ ಕೀರ್ತಿ ಮತ್ತು ಗೌರವವನ್ನು ಕಾಪಾಡಿದೆ. ದೇಶ ಮತ್ತು ರಾಜ್ಯದಲ್ಲಿ ಹಾಕಿ ಜೀವಂತವಾಗಿರಲು ಕೊಡವರು ಕಾರಣಕರ್ತರಾಗಿದ್ದಾರೆ. ಹಾಕಿ ಹಬ್ಬದ ಮೂಲಕ ಹಾಕಿ ಕ್ರೀಡೆಯನ್ನು ಜೀವಂತವಾಗಿಟ್ಟು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುತ್ತಿರುವ ಕೊಡವರಿಗೆ ಕೋಟಿ ಕೋಟಿ ನಮನ ಎಂದರು.
ಹಿಂದೆ ರಾಜ್ಯವಾಗಿದ್ದ ಕೊಡಗು ಅತ್ಯಂತ ಸಣ್ಣ ಜಿಲ್ಲೆಯಾಗಿದೆ, ಆದರೆ ದೇಶಕ್ಕೆ ದೊಡ್ಡ ದೊಡ್ಡ ಕೊಡುಗೆಯನ್ನೇ ನೀಡಿದೆ. ಸೇನಾ ಕ್ಷೇತ್ರದಲ್ಲಿ ಫೀ.ಮಾ.ಕೆ.ಎಂ.ಕಾರ್ಯಪ್ಪ, ಜನರಲ್ ಕೆ.ಎಸ್.ತಿಮ್ಮಯ್ಯ, ಸೇರಿದಂತೆ ಹಲವು ಅಧಿಕಾರಿಗಳು ಸೇವೆ ಸಲ್ಲಿಸಿದ್ದು, ಇವರೆನ್ನೆಲ್ಲ ಸ್ಮರಿಸಿಕೊಳ್ಳಬೇಕಾಗುತ್ತದೆ. ಕೊಡಗು ಅನೇಕ ಖ್ಯಾತ ಕ್ರೀಡಾಪಟುಗಳನ್ನು ಕೂಡ ಕ್ರೀಡಾಕ್ಷೇತ್ರಕ್ಕೆ ನೀಡಿದೆ. ಒಂದು ಸಮುದಾಯ ದೊಡ್ಡ ಮಟ್ಟದಲ್ಲಿ ಕ್ರೀಡೆಯ ರಕ್ಷಣೆ ಮಾಡುತ್ತಿರುವುದು ವಿಶ್ವದಲ್ಲೇ ಪ್ರಥಮ ಎಂದರೆ ಅತಿಶಯೋಕ್ತಿಯಲ್ಲ. ಈ ಬಾರಿ ಹಾಕಿ ಪಂದ್ಯಾವಳಿಯಲ್ಲಿ ದಾಖಲೆಯ 396 ಕೊಡವ ತಂಡಗಳು ಪಾಲ್ಗೊಂಡಿದ್ದು, ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡುತ್ತಿದೆ. ಪೊಲೀಸ್ ಇಲಾಖೆಯ ಹುದ್ದೆಗಳಲ್ಲಿ ಕ್ರೀಡಾಪಟುಗಳಿಗೆ ಶೇ.3ರಷ್ಟು ಮೀಸಲಾತಿ ಪ್ರಕಟಿಸಲಾಗಿದೆ. ಉಳಿದ ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ಘೋಷಿಸಿದ್ದು, ಬೇರೆ ಯಾವುದೇ ರಾಜ್ಯದಲ್ಲಿ ಈ ವ್ಯವಸ್ಥೆ ಇಲ್ಲ. ರಾಜ್ಯ ಸರ್ಕಾರ ಕ್ರೀಡಾಕೂಟ ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಕೊಡವ ಹಾಕಿ ಹಬ್ಬಕ್ಕೆ ಪ್ರತಿವರ್ಷ 1 ಕೋಟಿ ರೂ.ಗಳನ್ನು ಸರ್ಕಾರ ನೀಡುತ್ತಿದೆ. ಹೆಚ್ಚಿನ ಅನುದಾನ ಬೇಕು ಎಂದು ಕೇಳಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದು ಮುಂದಿನ ದಿನಗಳಲ್ಲಿ ಹೆಚ್ಚು ಅನುದಾನ ಬಿಡುಗಡೆಗೆ ಪ್ರಯತ್ನ ಮಾಡುವುದಾಗಿ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.
ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಮಾತನಾಡಿ ಕೊಡಗು ಕೇವಲ ಕ್ರೀಡಾ ಕ್ಷೇತ್ರಕ್ಕೆ ಮಾತ್ರ ಕೊಡುಗೆಯನ್ನು ನೀಡಿಲ್ಲ, ದೇಶಸೇವೆಗೆ ಪ್ರಾಣವನ್ನು ಮುಡಿಪಾಗಿಟ್ಟಿದೆ. ವೀರರು ಹುಟ್ಟಿದ ನಾಡಿನ ಸೇವೆ ಮಾಡಲು ಇಬ್ಬರು ಶಾಸಕರೊಂದಿಗೆ ಸರ್ಕಾರ ಕೈಜೋಡಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೊಡಗು ಮತ್ತು ಕೊಡವರ ಪರ ಇದೆ ಎಂದರು.
ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ ನಿಮ್ಮ ಜೊತೆ ಇರಲಿದೆ, ಮುಂದಿನ ವರ್ಷ ಹಾಕಿ ಹಬ್ಬಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು. ಬೆಂಗಳೂರು ಕೊಡವ ಸಮಾಜಕ್ಕೆ ಸುಮಾರು 50 ಕೋಟಿ ರೂ. ಬೆಲೆ ಬಾಳುವ 7 ಏಕರೆ ಜಾಗವನ್ನು ರಾಜ್ಯ ಸರ್ಕಾರ ನೀಡಿದೆ. ಈ ಜಾಗ ಮಂಜೂರಾಗಲು ರಾಜ್ಯ ಸರ್ಕಾರದ ಟ್ರಬಲ್ ಶೂಟರ್ ಎಂದೇ ಹೆಸರಾಗಿರುವ ಶಾಸಕ ಎ.ಎಸ್.ಪೊನ್ನಣ್ಣ ಅವರು ಸಾಕಷ್ಟು ಶ್ರಮವಹಿಸಿ ನಮ್ಮ ಮೇಲೆ ಒತ್ತಡ ಹಾಕಿದ್ದಾರೆ. ಇದು ಪೊನ್ನಣ್ಣ ಅವರಿಗೆ ಕೊಡವ ಸಮಾಜದ ಮೇಲೆ ಇರುವ ಪ್ರೀತಿ ಮತ್ತು ಕಾಳಜಿಯನ್ನು ತೋರುತ್ತದೆ ಎಂದು ತಿಳಿಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ ಪ್ರವಾಸಿ ಕ್ಷೇತ್ರವಾಗಿ ಹೆಸರು ಗಳಿಸಿರುವ ಪ್ರಕೃತಿ ಸೌಂದರ್ಯದ ಕೊಡಗು ಜಿಲ್ಲೆ ಎಂದರೆ ಎಲ್ಲರಿಗೂ ಪ್ರೀತಿ. ಕೊಡವರು ಧೈರ್ಯ ಮತ್ತು ತ್ಯಾಗಕ್ಕೆ ಹೆಸರಾದವರು, ಕ್ರೀಡಾಕೂಟಕ್ಕೆ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹ ನೀಡುತ್ತಿರುವುದನ್ನು ವಿಶ್ವದ ಬೇರೆಲ್ಲೂ ನೋಡಲು ಸಾಧ್ಯವಿಲ್ಲವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಕಳೆದ 25 ವರ್ಷಗಳಿಂದ ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬ ನಡೆಸಿಕೊಂಡು ಬರುತ್ತಿರುವುದು ಐತಿಹಾಸಿಕ ಸಾಧನೆಯಾಗಿದೆ. ಪ್ರತಿವರ್ಷ ಈ ರೀತಿಯ ಹಾಕಿ ಪಂದ್ಯಾವಳಿ ನಡೆಸುವುದನ್ನು ದೇಶದ ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಎಂದರು.
ಕ್ರೀಡೆಗಾಗಿ ಕೊಡವರು ನೀಡಿದಷ್ಟು ದೊಡ್ಡ ಕೊಡುಗೆಯನ್ನು ದೇಶದ ಬೇರೆ ಯಾವ ಸಮಾಜವೂ ನೀಡಿಲ್ಲ. ಸಣ್ಣ ಸಮುದಾಯವಾಗಿದ್ದರೂ ಅನೇಕ ಮಂದಿ ಕ್ರೀಡಾಪಟುಗಳು ದೇಶಕ್ಕಾಗಿ ಆಡಿದ್ದಾರೆ. ಕ್ರೀಡೆ, ದೇಶದ ಭದ್ರತೆ ಮತ್ತು ದೇಶವನ್ನು ಕಟ್ಟಲು ಕೊಡುಗೆಯನ್ನು ನೀಡಿದವರಲ್ಲಿ ಕೊಡಗಿನ ಜನ ಅಗ್ರಸ್ಥಾನದಲ್ಲಿದ್ದಾರೆ. ಸೇನೆ, ಪೊಲೀಸ್ ಮತ್ತು ಸಮಾಜಸೇವೆಯಲ್ಲೂ ಗಮನ ಸೆಳೆದಿರುವ ಕೊಡಗಿನವರು ಕೆಲಸದ ಜೊತೆ ಮಹತ್ತರ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಖ್ಯಾತ ಕ್ರೀಡಾಪಟು ಎಂ.ಪಿ.ಗಣೇಶ್ ಅವರಿಗೆ ನಮ್ಮ ತಂದೆಯವರು ಅಧಿಕಾರದಲ್ಲಿದ್ದಾಗ ಹಾಕಿ ಅಕಾಡೆಮಿ ಸ್ಥಾಪನೆಗೆ 20 ಏಕರೆ ಭೂಮಿ ಮಂಜೂರು ಮಾಡುವುದಾಗಿ ತಿಳಿಸಿದ್ದರು. ಆದರೆ ಇದನ್ನು ನಿರಾಕರಿಸಿದ ಗಣೇಶ್ ಅವರು ಆ ಜಾಗದಲ್ಲಿ ಕ್ರೀಡಾ ಹಾಸ್ಟೆಲ್ ಸ್ಥಾಪಿಸುವಂತೆ ಕೇಳಿಕೊಂಡಿದ್ದರು. ಕೊಡವರು ಧೈರ್ಯಶಾಲಿಗಳು ಮಾತ್ರವಲ್ಲದೆ ತ್ಯಾಗ ಮನೋಭಾವ ಹೊಂದಿರುವವರು ಎಂದು ಶ್ಲಾಘಿಸಿದರು. ಹಾಕಿ ಕ್ರೀಡೆಯ ಮೂಲಕ ದೇಶಕ್ಕೆ ಹೆಚ್ಚಿನ ಕ್ರೀಡಾ ಪ್ರತಿಭೆಗಳು ಕೊಡಗಿನಿಂದ ಸಿಗಲಿ ಎಂದು ದಿನೇಶ್ ಗುಂಡೂರಾವ್ ಹಾರೈಸಿದರು.
ಮೈಸೂರು ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಮಾತನಾಡಿ ಕ್ರೀಡಾಕೂಟಕ್ಕೆ ನನ್ನ ಸಂಪೂರ್ಣ ಪ್ರೋತ್ಸಾಹ ಮತ್ತು ಬೆಂಬಲವಿದೆ. ಹಾಕಿ ಹಬ್ಬಕ್ಕೆ ಶಾಶ್ವತ ಮೂಲ ಸೌಕರ್ಯದ ಅಗತ್ಯವಿದ್ದು, ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ಭರವಸೆ ನೀಡಿದರು.
ಕ್ರೀಡೆ ಸಮಾಜ ಮತ್ತು ದೇಶದ ಏಕತೆಗಾಗಿ ಬಳಕೆಯಾಗುವ ಉತ್ತಮ ಯಂತ್ರಯಾಗಿದೆ. ಪಕ್ಷ, ಧರ್ಮ, ಜಾತಿ ಎಂಬ ವ್ಯತ್ಯಾಸವಿಲ್ಲದೆ ಕ್ರೀಡಾಕೂಟಗಳಲ್ಲಿ ಮಾತ್ರ ನಾವು ಕ್ರೀಡಾಭಿಮಾನಿಗಳಾಗಿ ಒಂದಾಗುತ್ತೇವೆ. ಸಮಾಜದ ಏಕತೆಗಾಗಿ ಕ್ರೀಡಾಯಂತ್ರ ಬಳಕೆಯಾಗುತ್ತಿದ್ದು, ಈ ವಿಚಾರದಲ್ಲಿ ಕೊಡಗು ಇತರರಿಗೆ ಮಾದರಿಯಾಗಿದೆ. ಕಳೆದ 25 ವರ್ಷಗಳಿಂದ ಹಾಕಿ ಹಬ್ಬವನ್ನು ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರವೆಂದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಕೊಡವ ಹಾಕಿ ಹಬ್ಬ ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಗಮನ ಸೆಳೆದಿದೆ. ಕೊಡಗಿನಲ್ಲಿ ಕೊಡವರ ಸಂಖ್ಯೆ ಸಣ್ಣದು, ಆದರೆ ಕೊಡುಗೆ ದೊಡ್ಡದು. ಸ್ವಾತಂತ್ರö್ಯ ಹೋರಾಟದಿಂದ ಆರಂಭಗೊAಡು ಕ್ರೀಡೆ, ಸೇನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕೊಡವರ ಪಾತ್ರವಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಕ್ರೀಡಾ ಹಾಸ್ಟೆಲ್, ಕ್ರೀಡಾ ಮೈದಾನ ಉನ್ನತೀಕರಣ ಮೊದಲಾದ ಬೇಡಿಕೆಗಳಿಗೆ ಸ್ಪಂದಿಸಿದೆ. ಇಬ್ಬರೇ ಶಾಸಕರಿರುವ ಜಿಲ್ಲೆಯಾದರೂ ಸರ್ಕಾರ ಕಾಳಜಿ ತೋರುತ್ತಿದೆ, ಕೊಡಗಿನ ಮೇಲಿನ ಪ್ರೀತಿಯಿಂದ ಸಚಿವರುಗಳು ಪಂದ್ಯಾವಳಿ ವೀಕ್ಷಿಸಲು ಬಂದಿದ್ದಾರೆೆ. ಸೂರ್ಯ ಚಂದ್ರ ಇರುವವರೆಗೆ ಹಾಕಿ ಹಬ್ಬ ನಡೆಯಬೇಕು, ಇದು ಕೊಡವರ ನಾಲ್ಕನೇ ಹಬ್ಬವಾಗಬೇಕು, ವಿಶ್ವ ದಾಖಲೆಯಾಗಬೇಕು ಎಂದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಮಾತನಾಡಿ ರಾಜಕಾರಣಿಗಳು ಜನಾಂಗವನ್ನು ಒಡೆಯುವ ಕೆಲಸ ಮಾಡುತ್ತಾರೆ, ಆದರೆ ಕ್ರೀಡೆಗಳು ಎಲ್ಲರನ್ನು ಒಂದುಗೂಡಿಸುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಮಾತನಾಡಿ ಬಾಳುಗೋಡು ಕ್ರೀಡಾ ಮತ್ತು ಸಂಸ್ಕೃತಿ ಕೇಂದ್ರದ ಅಭಿವೃದ್ಧಿಗೆ 50 ಕೋಟಿ ರೂ.ಗಳ ಅಗತ್ಯವಿದ್ದು, ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ, ಶಾಸಕರುಗಳು ಕೊಡವ ಸಮಾಜಗಳ ಅಭಿವೃದ್ಧಿಗೆ ಅನುದಾನ ತರಲಿ ಎಂದು ಹೇಳಿದರು.
ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡAಡ ಬೋಪಣ್ಣ ಮಾತನಾಡಿ ಪ್ರಸ್ತುತ 396 ತಂಡಗಳು ಆಟವಾಡಿದ್ದು, ಮುಂದೆ ಈ ಸಂಖ್ಯೆ 500ಕ್ಕೆ ಏರಿಕೆಯಾಗುವ ಸಾಧ್ಯತೆಗಳಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ಅಂಪೈರ್ ಗಳ ಅಗತ್ಯವಿದ್ದು, ಆಸಕ್ತರು ಮುಂದೆ ಬರಬೇಕು, ಅಕಾಡೆಮಿ ತರಬೇತಿ ನೀಡಲಿದೆ ಎಂದು ಕರೆ ನೀಡಿದರು.
ಕೊಡವ ಹಾಕಿ ಹಬ್ಬ ಕೊಡವರ ನಾಲ್ಕನೇ ಹಬ್ಬವಾಗಿ ನಿರಂತರ ನಡೆಯಬೇಕು. ಹಾಕಿ ಹಬ್ಬಕ್ಕೆ 3ರಿಂದ 4 ಕೋಟಿ ರೂ. ಖರ್ಚಾಗುತ್ತಿದೆ, ಸರ್ಕಾರ 1ಕೋಟಿ ರೂ. ಮಾತ್ರ ನೀಡುತ್ತಿದೆ. ಇದು ಸಾಲದೆ ಇರುವುದರಿಂದ 2ಕೋಟಿ ರೂ. ನೀಡಲಿ, ಕೇಂದ್ರದಿAದ ವಿಶೇಷ ಅನುದಾನ ತರಲಿ ಎಂದರು.
ಕಳೆದ 25 ವರ್ಷಗಳಿಂದ ನಡೆದ ಕೊಡವ ಕೌಟುಂಬಿಕ ಹಾಕಿ ಹಬ್ಬದಲ್ಲಿ ಗೆಲುವು ಸಾಧಿಸಿದ ಮತ್ತು ಸೋತ ತಂಡಗಳ ನಡುವೆ ಅಕಾಡೆಮಿ ಮೂಲಕ ಪಂದ್ಯಾವಳಿ ನಡೆಸಲಾಗುವುದು ಎಂದು ತಿಳಿಸಿದರು.
2026 ರಲ್ಲಿ ನಾಪೋಕ್ಲುವಿಲ್ಲಿ ನಡೆಯುವ 26 ನೇ ವರ್ಷದ ಚೇನಂಡ ಕಪ್ ಹಾಕಿ ಉತ್ಸವವನ್ನು ಯಶಸ್ವಿಗೊಳಿಸುವಂತೆ ಪಾಂಡಂಡ ಬೋಪಣ್ಣ ಮನವಿ ಮಾಡಿದರು.
ಮುದ್ದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಮಾತನಾಡಿ, ಕೊಡಗಿನಲ್ಲಿ ಕಾರ್ಯಕ್ರಮಗಳಿಗೆ ಜನ ಸೇರಿವುದಿಲ್ಲ ಎನ್ನುವ ಮಾತಿದೆ, ಆದರೆ ಮುದ್ದಂಡ ಹಪ್ ಹಾಕಿ ಉತ್ಸವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿರುವುದು ಸಂತಸ ತಂದಿದೆ. ಹಲವು ಸವಾಲುಗಳ ನಡುವೆಯೂ ಮುದ್ದಂಡ ಹಾಕಿ ಉತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.
ತಾಂತ್ರಿಕ ತಂಡದ ಸಹಕಾರದಿಂದ ಆನ್ ಲೈನ್ ನೋಂದಾವಣಿಗೆ ಅವಕಾಶ ಕಲ್ಪಿಸಿದ್ದರಿಂದ ದಾಖಲೆಯ 396 ತಂಡಗಳು ನೋಂದಾಯಿಸಿಕೊಂಡು ಹಾಕಿ ಹಬ್ಬ ಯಶಸ್ವಿಯಾಗಿದೆ. ಮುದ್ದಂಡ ಕಪ್ ಹಾಕಿ ಉತ್ಸವದ ಪ್ರಯುಕ್ತ ಕರಡ ಗ್ರಾಮದಿಂದ ‘ಕ್ರೀಡಾ ಜ್ಯೋತಿ’ ಯನ್ನು ಐನ್ಮನೆಗಳಿಗೆ ಕೊಂಡೊಯ್ದು 128 ಕಿ.ಮೀ. ಓಟದ ಮೂಲಕ ಕ್ರಮಿಸಲಾಯಿತು. ‘ಕ್ರೀಡಾ ಜ್ಯೋತಿ’ಯ ಸಂಭ್ರಮದ ಮೆರವಣಿಗೆ ಫೀ.ಮಾ.ಕಾರ್ಯಪ್ಪ ಮೈದಾನದ ವರೆಗೆ ಸಾಗಿತು.
ಪಶುವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ಶ್ವಾನ ಪರದರ್ಶನ, ಮೈಂಡ್ ಎಂಡ್ ಮ್ಯಾಟರ್ ಸಂಸ್ಥೆಯ ಸಹಯೋಗದಲ್ಲಿ ರಸ್ತೆ ಸುರಕ್ಷರಾ ಓಟ, ತೆಂಗಿನಕಾಯಿಗೆ ಗುಂಡಿಹೊಡೆಯುವ ಸ್ಪರ್ಧೆ, ರಸ ಪ್ರಶ್ನೆ ಸ್ಪರ್ಧೆ, ಸೈಕ್ಲೋಥಾನ್ ಸೇರಿದಂತೆ ಹಲವು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು ಎಂದು ತಿಳಿಸಿದರು.
ಕೊಡವ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಅವರಿಗೆ ವಿಶೇಷ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 5ಎ ಸೈಡ್ ಪಂದ್ಯಾವಳಿಯನ್ನು ಆಯೋಜಿಸಿ ಯಶಸ್ವಿಯಾಗಿದ್ದೇವೆ. ಪುರುಷರಷ್ಟೇ ಮಹಿಳೆಯರಿಗೂ ಸಮಾನ ಅವಕಾಶವನ್ನು ಕಲ್ಪಿಸುವ ಮೂಲಕ ಮುದ್ದಂಡ ಹಾಕಿ ಉತ್ಸವ ಮಹಿಳೆರನ್ನು ಮುಂಚೂಣಿಗೆ ಕೊಂಡೊಯ್ಯುವ ಕೆಲಸ ಮಾಡಿದೆ ಎಂದರು.
ಕೊಡವ ಹಾಕಿ ಅಕಾಡೆಮಿ, ಕೊಡವ ಕುಟುಂಬಸ್ಥರು, ಜನಪ್ರತಿನಿಧಿಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ಸರ್ವರು ಹಾಕಿ ಉತ್ಸವದ ಯಶಸ್ಸಿಗಾಗಿ ಸಹಕರಿಸಿದ್ದಾರೆ ಎಂದು ಮುದ್ದಂಡ ರಶಿನ್ ಸುಬ್ಬಯ್ಯ ನೆನಪಿಸಿಕೊಂಡರು.
ಶೂನ್ಯ ತ್ಯಾಜ್ಯ ನಿರ್ವಹಣೆ…
ಕೊಡವ ಕುಟುಂಬ ತಂಡಗಳ ನಡುವಿನ ಹಾಕಿ ಪಂದ್ಯಾವಳಿಯ ಬೆಳ್ಳಿಹಬ್ಬದ ಸಂಭ್ರಮದ ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಪರಿಸರ ಜಾಗೃತಿಗೆ ಮೊದಲ ಆದ್ಯತೆ ನೀಡಲಾಗಿದೆ. ಹಾಕಿ ಉತ್ಸವ ನಡೆಯುತ್ತಿರುವ ಪ್ರದೇಶದಲ್ಲಿ ಮೊದಲ 10 ದಿನಗಳಲ್ಲಿ 2 ಟನ್ ನಷ್ಟು ತ್ಯಾಜ್ಯ ಸಂಗ್ರಹಿಸಲಾಗಿದೆ. ಶೂನ್ಯ ತ್ಯಾಜ್ಯ ನಿರ್ವಹಣೆಗೆ ಬೆಂಗಳೂರಿನ ವೇದನ್ ಟ್ರಸ್ಟ್ ಕೈಜೋಡಿಸಿದೆ. 1,688.88 ಕೆಜಿ ಒಣ ತ್ಯಾಜ್ಯವನ್ನು ಮರುಬಳಕೆಗೆ ನೀಡಲಾಗಿದೆ. 7,000 ಕೆಜಿ ದ್ರವ ತ್ಯಾಜ್ಯವನ್ನು ಗೊಬ್ಬರ ಮಾಡುವ ಮಾಡಲು ಬಳಕೆ ಮಾಡಲಾಗುತ್ತಿದೆ. ಅಲ್ಲದೆ ಉಳಿದ ರಾಸಾಯನಿಕ ಯುಕ್ತ ತ್ಯಾಜ್ಯವನ್ನು ವಿಲೇವಾರಿ ಮಾಡುವ ಮೂಲಕ ಒಟ್ಟಾರೆ 5.57 ಮೆಟ್ರಿಕ್ ಟನ್ ತ್ಯಾಜ್ಯ ಮುಕ್ತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್…
ಬೆಳ್ಳಿ ಹಬ್ಬದ ಮುದ್ದಂಡ ಕಪ್ ಹಾಕಿ ಉತ್ಸವದ ಪುರುಷರ ಪಂದ್ಯಾವಳಿಯಲ್ಲಿ ಸುಮಾರು 396 ತಂಡಗಳು 5,544 ಆಟಗಾರರು, 397 ಪಂದ್ಯಗಳು ಹಾಗೂ ಮಹಿಳೆಯರ 5ಎ ಸೈಡ್ ಪಂದ್ಯಾವಳಿಯಲ್ಲಿ 58 ತಂಡಗಳು, 464 ಕ್ರೀಡಾಪಟುಗಳು, ಹಾಗೂ 57 ಪಂದ್ಯಗಳ ಮೂಲಕ ದಾಖಲೆ ಮಾಡಿದ ಮುದ್ದಂಡ ಕಪ್ ಹಾಕಿ ಉತ್ಸವ ಅಧಿಕೃತವಾಗಿ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಿಸಲಾಯಿತು. ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನ ಪ್ರಮುಖರಾದ ಸಿಂಧುಜಾ ಅವರು ಸಮಾರೋಪ ಸಮಾರಂಭದಲ್ಲಿ ದಾಖಲೆಯನ್ನು ಘೋಷಿಸಿ ಪ್ರಮಾಣ ಪತ್ರವನ್ನು ಮುದ್ದಂಡ ಕುಟುಂಬಕ್ಕೆ ಹಸ್ತಾಂತರಿಸಿದರು.
ಒಲಂಪಿಯನ್ಗಳಿಗೆ ಸನ್ಮಾನ…
ಮುದ್ದಂಡ ಕಪ್ ಹಾಕಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿ ವಿಜೇತ, ಶ್ರೇಷ್ಠ ಆಟಗಾರರನ್ನು ಅರ್ಥಪೂರ್ಣವಾಗಿ ಬರಮಾಡಿಕೊಂಡು ತೆರೆದ ಜೀಪಿನಲ್ಲಿ ಕೊಡಗಿನ ಸಾಂಪ್ರದಾಯಿಕ ದುಡಿಕೊಟ್ ಪಾಟ್ ನೊಂದಿಗೆ ಮೈದಾನದ ಸುತ್ತ ಮೆರವಣಿಗೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. 1975ರ ವಿಶ್ವಕಪ್ ಹಾಕಿ ವಿಜೇತ, ವಿಶ್ವದಲ್ಲೇ ಅತಿ ಹೆಚ್ಚು ಪದಕ ಗಳಿಸಿರುವ ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಕೊಡಗಿನ ಸಿಡಿಲಮರಿ ಖ್ಯಾತಿಯ ಬಿ.ಪಿ.ಗೋವಿಂದ, ವಿಶ್ವಕಪ್ ಹಾಕಿ ಭೂಪಟದಲ್ಲಿ ಭಾರತ ಹಾಕಿ ತಂಡದ ಹೆಸರನ್ನು ಅಜರಾಮರಗೊಳಿಸಿದ ಕೊಡಗಿನ ವೀರ, 1975 ವಿಶ್ವಕಪ್ ಹಾಕಿ ವಿಜೇತ ತಂಡದ ಆಟಗಾರ ಪೈಕೇರ ಕಾಳಯ್ಯ, 1980 ಮಾಸ್ಕೋ ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನಾಯಕ, ಭಾರತ ತಂಡದ ತರಬೇತುದಾರ, ವಿಶ್ವಕಪ್ ಹಾಗೂ ಒಲಂಪಿಕ್ಸ್ ನಲ್ಲಿ ಹೆಸರು ಗಳಿಸಿದ, ದಕ್ಷಿಣ ರೈಲ್ವೆ ತಂಡದ ಅದ್ಭುತ ಆಟಗಾರ ಪದ್ಮಶ್ರೀ ಪುರಸ್ಕೃತ ವಾಸುದೇವ ಭಾಸ್ಕರ್, ಭಾರತೀಯ ಮಾಜಿ ಹಾಕಿ ಆಟಗಾರ ಒಲಂಪಿಯನ್ ಮನೆಯಪಂಡ ಎಂ.ಸೋಮಯ್ಯ, 1996 ಹಾಗೂ 2000 ಒಲಂಪಿಕ್ಸ್ ಆಟಗಾರ. ಏಷ್ಯನ್ ಗೇಮ್ಸ್, ವಿಶ್ವಕಪ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಮಹಮ್ಮದ್ ರಿಯಾಜ್, ಒಲಂಪಿಯನ್ ಮಹಮ್ಮದ್ ರಿಯಾಜ್, ಒಲಿಂಪಿಯನ್, ಅರ್ಜುನ ಪ್ರಶಸ್ತಿ ಪುರಸ್ಕೃತರು ಹಾಗೂ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಮಾಚಿಮಂಡ ಅಶ್ವಿನಿ ಪೊನ್ನಪ್ಪ, ಒಲಿಂಪಿಯನ್ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಮನೆಯಪಂಡ ಅಶ್ವಿನಿ ನಾಚಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಚೇನಂಡ ಕುಟುಂಬದ ಮೆರವಣಿಗೆ
26ನೇ ವರ್ಷದ ಕೊಡವ ಕುಟುಂಬಗಳ ನಡುವಿನ 2026ರ ಹಾಕಿ ಉತ್ಸವ ನಾಪೋಕ್ಲುವಿನಲ್ಲಿ ನಡೆಯಲಿದ್ದು, ಆಯೋಜಕರಾದ ಚೇನಂಡ ಕುಟುಂಬಸ್ಥರು ಮುದ್ದಂಡ ಹಾಕಿ ಉತ್ಸವದ ಮೈದಾನದಲ್ಲಿ ಸಾಂಪ್ರದಾಯಿಕವಾಗಿ ಧ್ವಜ ಮೆರವಣಿಗೆ ನಡೆಸುವ ಮೂಲಕ ಮುಂದಿನ ಪಂದ್ಯಾವಳಿಯ ನೇತೃತ್ವವನ್ನು ವಹಿಸಿಕೊಂಡರು.
ಕಾರ್ಯಕ್ರಮದಲ್ಲಿ ಮುದ್ದಂಡ ಕುಟುಂಬದ ಪಟ್ಟೆದಾರ ಡಾಲಿ ತಿಮ್ಮಯ್ಯ, ಮುದ್ದಂಡ ಕಪ್ ಹಾಕಿ ಉತ್ಸವದ ಗೌರವಾಧ್ಯಕ್ಷ ಮುದ್ದಂಡ ದೇವಯ್ಯ, ಕಾರ್ಯದರ್ಶಿ ಆದ್ಯ ಪೂವಣ್ಣ, ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಚೆಪ್ಪುಡಿರ ಗ್ರಂಥ ಕಾರ್ಯಪ್ಪ ಪ್ರಾರ್ಥಿಸಿದರು. ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಉಪಾಧ್ಯಕ್ಷ ಡೀನ್ ಬೋಪಣ್ಣ ಸ್ವಾಗತಿಸಿದರು. ಸಂಯೋಜಕ ಮುದ್ದಂಡ ರಾಯ್ ತಮ್ಮಯ್ಯ ವಂದಿಸಿದರು.