
ಮೈಸೂರು, ಮೆ.09: (ನಡುಬಾಡೆ ನ್ಯೂಸ್) :- ದಿ. ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘವು, ರೈತರ ಹಾಗೂ ಬೆಳೆಗಾಗರ ಸ್ನೇಹಿಯಾಗಿ ಮುಂದಿನ ದಿನಗಳಲ್ಲಿ ಯಶಸ್ಸಿನತ್ತ ನಡೆಯಲಿದೆ ಎಂದು ಸಂಘದ ಅಧ್ಯಕ್ಷರು, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಸದಸ್ಯರಿಗೆ ಅಭಯ ನೀಡಿದರು.
ಮೈಸೂರು ಜಿಲ್ಲೆ ಯಾದವಗಿರಿಯ ಕೆಆರ್ಎಸ್ ರಸ್ತೆಯಲ್ಲಿರುವ ದಿ. ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘ ನಿಯಮಿತದ ಕಚೇರಿ ಆವರಣದಲ್ಲಿ ನಡೆದ ಇಂದು 2024-25 ರ ಸಾಲಿನ ವಾರ್ಷಿಕ ವಿಶೇಷ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿರಿಯರು ದೂರದೃಷ್ಟಿಯಿಂದ ಕಟ್ಟಿಬೆಳಸಿದ ಸಂಘವು ಈ ಭಾಗದ ಹಾಗೂ ಸುತ್ತಮುತ್ತಲಿನ ಕಾಫಿ ಬೆಳೆಯುವ ಪ್ರದೇಶಗಳ ರೈತರಿಗೆ ಬಹುದೊಡ್ಡ ವರದಾನವಾಗಿದ್ದು, ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳುವಂತಾಗಲು ಸಂಘದ ಎಲ್ಲಾ ಸದಸ್ಯರು ಅತ್ಯಂತ ನಿಷ್ಠೆಯಿಂದ ತಮ್ಮ ಕಾರ್ಯಗಳನ್ನು ಮಾಡುವುದಲ್ಲದೆ ಸಂಘವು ಮತ್ತಷ್ಟು ಏಳಿಗೆ ಕಾಣುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಕರೆ ನೀಡಿದರು.
ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಘದ ಕಾರ್ಯ ಚಟುವಟಿಕೆಗಳನ್ನು, ಕಳೆದ ಒಂದು ವರ್ಷದಿಂದ ಮಾನ್ಯ ಶ್ರೀ ಎ.ಎಸ್ ಪೊನ್ನಣ್ಣ ರವರ ವಿಶೇಷ ಆಸಕ್ತಿ ಹಾಗೂ ಪ್ರಯತ್ನದಿಂದ ಮತ್ತೆ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿರುವ ಕುರಿತು ಸದಸ್ಯರಿಂದ ಹರ್ಷದ್ಘಾರ, ಕರತಾಡನದ ಮೂಲಕ ವ್ಯಕ್ತವಾಹಿತು. ಹಲವಾರು ವರ್ಷಗಳ ನಿರಂತರ ಕಾನೂನು ಹೋರಾಟದ ನಂತರ ನಡೆಯುತ್ತಿರುವ ಸಂಘದ ಮೊದಲ ವಾರ್ಷಿಕ ಮಹಾಸಭೆಯಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘದ ಉಪಾಧ್ಯಕ್ಷರು, ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.