
ವಿರಾಜಪೇಟೆ ಜೂ.17, (nadubadenews): ಹಲವು ವರ್ಷಗಳಿಂದ ಸಮಸ್ಯೆಯಾಗಿದ್ದ ವಿರಾಜಪೇಟೆಯ ಗಡಿಯಾರ ಕಂಬದ ಸಮೀಪದಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ಕಾಲುದಾರಿಗೆ ಕೊನೆಗೂ ತಾತ್ಕಾಲಿಕ ಮುಕ್ತಿ ದೊರಕಿದೆ. ಪ್ರತಿದಿನ ನೀರು ಮತ್ತು ಕೆಸರು ತುಂಬಿ ನಡೆದಾಡಲು ಕಷ್ಟಕರವಾಗುತ್ತಿತ್ತು. ಶಾಲಾ ಕಾಲೇಜು ಮಕ್ಕಳು, ಸಾರ್ವಜನಿಕರು, ಅತಿಯಾಗಿ ಈ ಕಾಲುದಾರಿಯಲ್ಲಿ ಸಂಚಾರ ಮಾಡುತ್ತಾರೆ. ಈ ಕುರಿತು ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾಗಿತ್ತು. ಇದಿಗ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅವರ ಸಲಹೆಯಂತೆ ಸದಸ್ಯ ಎಸ್.ಎಚ್. ಮತೀನ್ ಕೇರಳದ ಕೆಂಪು ಕಲ್ಲುಗಳನ್ನು ಕಾಲದಾರಿಗೆ ಹಾಕಿಸಿ ನೆಡೆದಾಡಲು ಅನುಕೂಲವಾಗುವಂತೆ ಮಾಡಿದ್ದಾರೆ. ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿದ ಮತೀನ್ ಅವರು ಖಾಸಗಿ ಸ್ಥಳದ ಮಾಲೀಕರಲ್ಲಿ ಸ್ಥಳ ನೀಡುವಂತೆ ಹಲವು ಬಾರಿ ಪುರಸಭೆ ವತಿಯಿಂದ ಮನವಿ ಮಾಡಲಾಗಿತ್ತು. ಆದರೆ ಈವರೆಗೂ ಸ್ಥಳ ಪುರಸಭೆಗೆ ಹಸ್ತಾಂತರ ಮಾಡಿರುವುದಿಲ್ಲ. ಮತ್ತೊಮ್ಮೆ ಮನವಿ ಮಾಡುವ ಪ್ರಯತ್ನ ಮಾಡುತ್ತೇವೆ, ಸ್ಥಳ ದೊರಕಿದಲ್ಲಿ ಉತ್ತಮ ರಸ್ತೆ ನಿರ್ಮಾಣ ಮಾಡಲಾಗುತ್ತದೆ, ಸದ್ಯದ ಮಟ್ಟಿಗೆ ಕೆಂಪು ಕಲ್ಲು ಬಳಸಿ ಸಾರ್ವಜನಿಕರಿಗೆ ಸಂಚರಿಸಲು ಅನುಕೂಲ ಮಾಡಲಾಗಿದೆ ಎಂದು ತಿಳಿಸಿದರು. ತಾತ್ಕಾಲಿಕ ಪರಿಹಾರ ಕಂಡಿರುವ ಕಾಲುದಾರಿ ಶಾಸ್ವತ ಪರಿಹಾರಕ್ಕಾಗಿ ಕಾಯುವಂತಾಗಿದೆ.