Site icon nadubadenews.com

ಗೋಣಿಕೊಪ್ಪಕ್ಕೆ ಒಂಟಿ ಕೋತಿಯ ಬಾದಕ

ಗೋಣಿಕೊಪ್ಪಕ್ಕೆ ಒಂಟಿ ಕೋತಿಯ ಬಾದಕ
Spread the love
ಗೋಣಿಕೊಪ್ಪಕ್ಕೆ ಒಂಟಿ ಕೋತಿಯ ಬಾದಕ

ಅರಣ್ಯಾಧಿಕಾರಿಗಳ ಹೊಣೆಗೇಡಿತನ, ಗ್ರಾಮ ಪಂಚಾಯತಿಯ ಪಜೀತಿ…

ವಿರಾಜಪೇಟೆ, ಫೆ.15:  ಜಿಲ್ಲೆಯ ಪ್ರಮುಖ ವಾಣೀಜ್ಯ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ನಗರಕ್ಕೆ ಒಂಟಿ ಕೋತಿಯೊಂದು ಕಾಟ ಕೊಡುತಿದ್ದು, ಉದ್ಯಮಿಗಳು ಮತ್ತು ಸಾರ್ವಜನಿಕರಿಗೆ ಬಾದಕವಾಗಿ ಪರಿಣಮಿಸಿದೆ. ಆದರೂ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಲು ಮೀನಮೇಶ ಎಣಿಸುತ್ತಿದ್ದಾರೆ ಎಂಬ ಆಕ್ರೋಶ ಕೇಳಿ ಬಂದಿದೆ.

          ಗೋಣಿಕೊಪ್ಪದ ಖಾಸಗೀ  ಸೂಪರ್‌ ಮಾರ್ಕೇಟ್‌ ಒಂದರ ಬಳಿ ಕಳೆದ ಹಲವಾರು ದಿನಗಳಿಂದ ಬೀಡು ಬಿಟ್ಟಿರುವ ಕೋತಿಯೊಂದು, ಅಲ್ಲಿ ಅಡ್ಡಾಡುವ ಸಾರ್ವಜನಿಕರಿಗೆ ತೀವ್ರ ತೊಂದರೆ ಕೊಡುತ್ತಿದೆ. ಹಲವು ಮಕ್ಕಳು ಮತ್ತು ಮಹಿಳೆಯರ ಮೇಲೆ ಧಾಳಿ ಮಾಡಿ ಪರಚಿ, ಗಾಯಗೊಳಿಸಿರುವ ಘಟನೆಯೂ ನಡೆದಿದೆ. ವ್ಯಾಪಾರಕ್ಕೆ ಬರುವ ಗ್ರಾಹಕರ ವಸ್ತುಗಳ ಮೇಲೆ, ಹಣ್ಣು ಹಂಪಲುಗಳ ಮೇಲೂ ನಿರಂತರ ಧಾಳಿ ನಡೆಸುತ್ತಿದೆ.

          ಈ ಒಂಟಿ ಕೋತಿಕಾಟದಿಂದ ಬೇಸತ್ತ ಸಾರ್ವಜನಿಕರು ಸ್ಥಳೀಯ ಗೋಣಿ ಕೊಪ್ಪ ಗ್ರಾಮ ಪಂಚಾಯತಿಗೆ ದೂರು ನೀಡಿದಾಗ, ಪಂಚಾಯತಿ ಕೋತಿಯನ್ನು ಸೆರೆಹಿಡಿಯಲು ಕೋರಿ, ಅರಣ್ಯಾಧಿಕಾರಿಗಳಿಗೆ ಪತ್ರ ಬರೆದಿದೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಕೋತಿಯನ್ನು ನೋಡಿ, ಇದು ಉತ್ತರದಿಂದ ವಲಸೆ ಬಂದಿರುವ ಕೋತಿ, ನಮಗೆ ಸೆರೆ ಹಿಡಿಯುವ ಅನುಮತಿ ಇಲ್ಲ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಬೂಬು ನೀಡಿ, ಇದಕ್ಕೆ ಸಂಭಂಧೀಸಿದವರು ಶಿವಮೊಗ್ಗದಲ್ಲಿದ್ದಾರೆ ಎಂದು ಅವರ ಸಂಪರ್ಕ ಸಂಖ್ಯೆಯನ್ನು ಪಂಚಾಯತಿಗೆ ಕೊಟ್ಟು ಕೈ ತೊಳೆದು ಕೊಂಡಿದ್ದಾರೆ. ಶಿವಮೊಗ್ಗದಲ್ಲಿರುವ ಕೋತಿ ಹಿಡಿಯುವವರನ್ನು ಗ್ರಾಮ ಪಂಚಾಯತಿ ಸಂಪರ್ಕಿಸಿದಾಗ, ಒಂದು ಕೋತಿ ಹಿಡಿಯಲು ಅರುವತ್ತು ಸಾವಿರ (60000) ಶುಲ್ಕ ಎಂದಿದ್ದಾರೆ. ಇದರಿಂದ ಕಂಗೆಟ್ಟ ಗೋಣೊಕೊಪ್ಪ ಗ್ರಾಮ ಪಂಚಾಯತಿ ತಾನೇ ಬೋನ್‌ ತಯಾರಿಸಿ ಕೋತಿಯನ್ನು ಬಂಧಿಸುವ ತಯಾರಿಯಲ್ಲಿದೆಯಂತೆ. 

          ಈಗಾಗಲೇ ಮಾನವನ ಮೇಲೆ ಧಾಳಿ ಮಾಡುತ್ತಿರುವ ಕೋತಿಯನ್ನು ಹಿಡಿಯಬೇಕಾದ ಅರಣ್ಯಾಧಿಕಾರಿಗಳ ಹೊಣೆಗೇಡಿತನಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ಈ ಒಂಟಿ ಕೋತಿ ಮತ್ತಷ್ಟು ಅನಾಹುತ ಮಾಡುವ ಮೊದಲು, ಗ್ರಾಮ ಪಂಚಾಯತಿ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

ವಿರಾಜಪೇಟೆ ಶಾಸಕರಾದ ಎ.ಎಸ್.‌ ಪೊನ್ನಣ್ಣ ಅವರು ಕೂಡ ಪಂಚಾಯತಿಗೆ ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

          ಈ ಕುರಿತು ನಡುಬಾಡೆ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಪಂಚಾಯತಿ ಅಭಿವೃದ್ದಿ ಅಧಿಕಾರಿ ತಿಮ್ಮಯ್ಯ ಅವರು, ಬೋನ್‌ ತಯಾರಿಸಲಾಗುತಿದ್ದು ಆದಷ್ಟು ತುರ್ತಾಗಿ ಕೋತಿಯನ್ನು ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ.

Exit mobile version