ಸೋಮವಾರಪೇಟೆ ಡಿ.24: (ತೇಲಪಂಡ ಕವನ್ ಕಾರ್ಯಪ್ಪ): ದೇಶದ ಕ್ರೀಡೆ ಮತ್ತು ಸೈನ್ಯದಲ್ಲಿ ಕೊಡವರ ಹೆಸರು ಇಂದಿಗೂ ಮುಂಚೂಣಿಯಲ್ಲಿದೆ. ಇದಕ್ಕಾಗಿಯೇ ವಿಶ್ವಮಟ್ಟದಲ್ಲಿ ಎಲ್ಲರೂ ನಮ್ಮನ್ನು ಗುರುತಿಸುತ್ತಾರೆ ಎಂದು ಮಾಜಿ ಕ್ರೀಡಾ ಸಚಿವರಾದ ಮಂಡೇಪಂಡ ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.
ಸೋಮವಾರಪೇಟೆ ಕೊಡವ ಸಮಾಜದ ಸುವರ್ಣ ಮಹೋತ್ಸವದ ಅಂಗವಾಗಿ ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಆಲೆಕಟ್ಟೆ ರಸ್ತೆಯಲ್ಲಿರುವ ಸಮಾಜದ ಜಾಗದಲ್ಲಿ ಮಂಗಳವಾರ ಜನಾಂಗ ಬಾಂಧವರಿಗೆ ಆಯೋಜಿಸಲಾಗಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶ ಸೇವೆಯ ಹೆಸರು ಬಂದಾಗ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯನವರನ್ನು ಇಡೀ ವಿಶ್ವವೇ ಗೌರವಿಸುತ್ತದೆ. ಹಾಗೆಯೇ ಕೊಡಗಿನವರಲ್ಲಿ ಕ್ರೀಡೆ ಎಂಬುದು ರಕ್ತಗತವಾಗಿ ಹರಿದು ಬಂದಿದೆ.ಹಾಕಿಯಲ್ಲಿ ಸಾಕಷ್ಟು ಒಲಂಪಿಯನ್ಗಳನ್ನು ನೀಡಿರುವ ಕೊಡಗು ಎಲ್ಲಾ ಕ್ರೀಡೆಗಳಲ್ಲೂ ಗುರುತಿಸಿಕೊಂಡಿದೆ.ಕ್ರೀಡಾ ಕಲಿಗಳು ಹುಟ್ಟಿರುವ ಕೊಡವರಲ್ಲಿ ಕೋವಿಗೂ ವಿಶೇಷವಾದ ಸ್ಥಾನವಿದೆ. ಕೊಡವರು ಕೋವಿಯನ್ನು ಪೂಜ್ಯನೀಯ ಭಾವನೆಯಿಂದ ನೋಡುತ್ತಾರೆ.
ಕೊಡವ ಜನಾಂಗದವರು ಇತರೆ ಜನಾಂಗದವರವನ್ನೂ ಮತ್ತು ಅವರ ಸಂಸ್ಕೃತಿಯನ್ನು ಗೌರವಿಸುತ್ತೇವೆ. ಇಲ್ಲಿ ಎಲ್ಲರೂ ಸಮಾನರು. ಇತರೆ ರಾಜ್ಯಗಳಿಗೂ ಕೊಡಗಿನ ಕಾವೇರಿಯ ನೀರನ್ನು ಕೊಡುವ ಈ ಜಿಲ್ಲೆಯಲ್ಲಿ ಹುಟ್ಟಿದ ನಾವು ನಿಜಕ್ಕೂ ಧನ್ಯರು ಎಂದು ಅಭಿಪ್ರಾಯಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಐಶ್ವರ್ಯ ಕಾಲೇಜಿನ ಅಧ್ಯಕ್ಷರಾದ ಪುಲಿಯಂಡ ರಾಮ್ ದೇವಯ್ಯ ಮಾತನಾಡಿ, ನಾವು ನಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನಾದರೂ ಜನಾಂಗದ ಅಭಿವೃದ್ದಿಗೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು. ಇಂದಿನ ಹಲವು ಯುವಕರು ಪಿಯುಸಿ ಅಭ್ಯಾಸದ ನಂತರ ಹಾದಿ ತಪ್ಪುತ್ತಿರುವುದು ದುರಂತ. ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವ ಸಮಯದಲ್ಲಿ ಅನ್ಯ ದಾರಿ ಹಿಡಿಯುತ್ತಿದ್ದಾರೆ. ನಮ್ಮ ಯುವಜನಾಂಗ ಕೊಡಗನ್ನು ಬಿಡಬಾರದು. ದಯವಿಟ್ಟು ಇಲ್ಲಿಯ ಆಸ್ತಿಯನ್ನು ಯಾರೂ ಮಾರಬಾರದು ಎಂದು ಕಿವಿಮಾತು ಹೇಳಿದರು.
ಸಮಾಜದ ಅಧ್ಯಕ್ಷರಾದ ಮಾಳೇಟಿರ ಅಭಿಮನ್ಯುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಬೊಳಂದಂಡ ಕುಟ್ಟಪ್ಪ, ಹಿರಿಯರಾದ ಕಲ್ಲೇಂಗಡ ಅಪ್ಪಚ್ಚು, ಉಪನ್ಯಾಸಕಿ ಪುಲಿಯಂಡ ಕಾವೇರಮ್ಮ ಇದ್ದರು.