ಸಂಪಾದಕೀಯ: ಪುರಾಣ ಇತಿಹಾಸದಲ್ಲಿ ದೇಶವಾಗಿದ್ದ ಕೊಡಗು, ಸ್ವತಂತ್ರ್ಯ ನಂತರವೂ ಪ್ರತ್ಯೇಕ ರಾಜ್ಯವಾಗಿದ್ದು, ಆ ನಂತರದ ಬೆಳವಣಿಗೆಯಲ್ಲಿ ವಿಶಾಲ ಕರ್ನಾಟಕದೊಂದಿಗೆ ವೀಲೀನವಾಗಿ ಕೇವಲ ಒಂದು ಜಿಲ್ಲೆಯಾಗಿ ಉಳಿದಿದೆ.
ಹೀಗೆ ಕರ್ನಾಟಕದೊಂದಿಗೆ ವಿಲೀನವಾಗುವಾಗ ಕೊಟ್ಟ ಯಾವ ಭರವಸೆಯನ್ನೂ, ಸರ್ಕಾರಗಳು ಅಂದಿನಿಂದ ಇಂದಿನವರೇಗೂ ಈಡೇರಿಸಲಿಲ್ಲ. ಆ ನಿರೀಕ್ಷೆ ಕೂಡ ಮುಂದೆಯೂ ಗಗನ ಕುಸುಮವೇ. ಅಂದಿನಿಂದ ಇಂದಿನವರೆಗೂ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳೂ ಕೊಡಗನ್ನು ನೋಡಿದ್ದು ಎರಡನೇ ದರ್ಜೆಯ ಪ್ರದೇಶವಾಗಿಯೇ ಹೊರತು, ಕರ್ನಾಟಕದ ಒಂದು ಪ್ರಮುಖ ಭಾಗ ಎಂದು ಪರಿಗಣಿಸಿ ಅಭಿವೃದ್ದಿಗೆ ಒತ್ತು ಕೊಟ್ಟದ್ದು ಕೆಲವೇ ಸರ್ಕಾರದ ಆಡಳಿತಗಾರರು ಮಾತ್ರ.
ಹೀಗೇ ಸದಾ ಮಲತಾಯಿ ಧೋರಣೆಯಲ್ಲಿಯೇ ನಲುಗುತ್ತಿರುವ ಕೊಡಗು ಜಿಲ್ಲೆ, ಪ್ರಾಕೃತಿಕವಾಗಿ ಗುಡ್ಡಗಾಡು ಪ್ರದೇಶ. ಕರ್ನಾಟಕದ ಇತರ ಯಾವುದೇ ಜಿಲ್ಲೆಗಳ ಮೇಲ್ಮೈ ಲಕ್ಷಣವನ್ನು ಗಮನಿಸಿದರೂ, ಕೊಡಗು ವಿಭಿನ್ನವೇ.
ಇಂತಃ ಕೊಡಗಿಗೆ ಪ್ರತೀ ಬಡ್ಜೇಟ್ನಲ್ಲೂ ಪ್ರತ್ಯೇಕ ಅನುದಾನ ಮೀಸಲಿಡಬೇಕಿತ್ತು, ಇತರ ಎಲ್ಲಾ ಜಿಲ್ಲೆಗಳಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳೂ ಚಾಚೂ ತಪ್ಪದೆ ಕೊಡಗಿನಲ್ಲಿಯೂ ಅನುಷ್ಟಾನಕ್ಕೆ ಬರಬೇಕಿತ್ತು. ದುರಂತ ಎಂದರೆ ಸರ್ಕಾರಗಳು ಕೊಡಗಿಗೆ ವಿಷೇಶ ಆದ್ಯತೆ ಕೊಡವುದಿರಲಿ, ಕೊಟ್ಟ ಯೋಜನೆಗಳನ್ನು ಕಿತ್ತುಕೊಂಡ ಉದಾಹರಣೆಗಳೇ ಹಲವು ಇವೆ. ಆ ಸರಮಾಲೆಗೆ ಈಗ ಕೊಡಗು ವಿಶ್ವವಿದ್ಯಾನಿಲಯ ಸೇರ್ಪಡೆಗೊಳ್ಳುತ್ತಿದೆ ಎಂಬುದು ಸರ್ಕಾರದ್ದೇ ಚಿಂತನೆ ಅಂತೆ.
ಉನ್ನತ ಶೈಕ್ಷಣಿಕ ಕೇಂದ್ರಗಳ ಕೊರತೆಯಿಂದ ಬಳಲುತಿದ್ದ ಕೊಡಗು, ತನ್ನದೇ ಆದ ಶೈಕ್ಷಣಿಕ ಭದ್ರತೆಯನ್ಜು ಕಂಡುಕೋಳ್ಳಬೇಕು ಎನ್ನುವುದು ಹಲವು ವ್ರರ್ಷಗಳ ಕನಸು. ಇದಕ್ಕಾಗಿ ಪ್ರತ್ಯೇಕ ಕೊಡಗು ವಿಶ್ವವಿದ್ಯಾನಿಲಯ ಬೇಕೆಂಬ ಹತ್ತಾರು ವರ್ಷಗಳ ಬೇಡಿಕೆ, ಒತ್ತಡಗಳ ನಡುವೆ, ಕಳೆದ ಸರ್ಕಾರ ಕೊಡಗು ಜಿಲ್ಲೆಗೆ ಒಂದು ವಿಶ್ವವಿದ್ಯಾನಿಲಯವನ್ನು ಘೋಷಿಸಿತು.
ಈ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿ ಕಾರ್ಯ ನಿರ್ವಹಿಸುತಿದ್ದ ಕುಶಾಲನಗರ ತಾಲೋಕಿನ ಚಿಕ್ಕ ಅಳುವಾರದ, ಸುಮಾರು 100+ ಏಕರೆ ಜಾಗದ, ಸುಸಜ್ಜಿತ ಕಟ್ಟಡದಲ್ಲಿ, ಎಲ್ಲಾ ವಿವಿಗಳಂತೆ, ಉಪ ಕುಲಪತಿಗಳೂ ಸೇರಿದಂತೆ ಎಲ್ಲಾ ಆಡಳಿತ ವರ್ಗವನ್ನೂ ನೇಮಿಸಿದ ಸರ್ಕಾರದ ಅಣತಿಯಂತೆ, ಕೊಡಗು ವಿವಿ ತನ್ನ ಕಾರ್ಯಾರಂಭವನ್ನು ಮಾಡಿತು.
ಆದರೆ ಈ ವಿವಿ ಪ್ರಾರಂಭವಾದಾಗಿನಿಂದ ಇಂದಿನವರೆಗೂ ಒಂದಿಲೊಂದು ವಿಚಾರಕ್ಕೆ ಸುದ್ದಿಯಲ್ಲಿದೆ ದುರಂತ ಎಂದರೆ ಕೊಡಗು ವಿವಿ ಸ್ಥಾಪನೆಯಾದಾಗಿನಿಂದ ಇಂದಿನವರೆಗೆ ಒಳ್ಳೆ ವಿಚಾರಕ್ಕಿಂತ ವಿವಾದಕ್ಕೇ ಹೆಚ್ಚು ಸುದ್ದಿಯಾದದ್ದು. ಇದೀಗ ಮತ್ತೆ ಅಂತದೇ ವಿವಾದದ ಕೇಂದ್ರಬಿಂದುವಾಗಿ ಮತ್ತೆ ಕೊಡಗು ವಿವಿ ಸುದ್ದಿಯಾಗಿದೆ. ಆದರೆ ಈ ಭಾರಿ ಕೇವಲ ಸುದ್ದಿಯಾಗಷ್ಟೇ ಉಳಿಯದೆ, ಕೊಡಗಿನ ಶಿಕ್ಷಣ ಪ್ರೇಮಿಗಳ, ಸಂಘ ಸಂಸ್ಥೆ ಸಮಾಜಗಳ ಪ್ರತಿಭಟನೆ, ಕೊಡಗು ಬಂದ್ ಹೇಳಿಕೆಯಂತ ಕಿಚ್ಚು ಹೊತ್ತಿ ಕೊಳ್ಳುತ್ತದೆ.
ಪ್ರಕೃತಿ ರಮಣೀಯವಾದ, ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಚಿಕ್ಕಅಳುವಾರದಲ್ಲಿ ತನ್ನಷ್ಟಕ್ಕೆ ತಾನು ಕಾರ್ಯಮಗ್ನವಾಗಿದ್ದ ಕೊಡಗು ವಿವಿಯನ್ನು ಮುಚ್ಚುವ ಬಗ್ಗೆ, ಸಚಿವ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಲಾಗಿದೆ, ಎಂಬ ಸುದ್ದಿ, ಇಡೀ ಕೊಡಗನ್ನು ಹೋರಾಟಕ್ಕೆ ಅಣಿಯಾಗಿಸುತ್ತಿದೆ.
ಅಕ್ಷರಷಃ ಕೊಡಗು ವಿವಿ ಎಂಬ ಜೇನು ಗೂಡಿಗೆ ಸರ್ಕಾರ ಕಲ್ಲು ಹೊಡೆದು, ಕೊಡಗಿನ ಜನತೆ ಎಂಬ ಜೇನು ಹುಳುಗಳಿಂದ ಕಚ್ಚಿಸಿಕೊಳ್ಳುತ್ತಿದೆ. ಕೇವಲ ಚಿಂತನೆ ಎಂಬ ವಿಚಾರಕ್ಕೆ ಬಹುಪಾಲು ಸಂಘ ಸಂಸ್ಥೆಗಳು ಪ್ರತಿಭಟನೆಯ ಎಚ್ಚರಿಕೆ ನೀಡಿವೆ. ಬಹುತೇಕ ರಾಜಕೀಯ ಪಕ್ಷಗಳೂ ತಮ್ಮ ಪ್ರತಿಭಟನಾ ಹೇಳೀಕೆಯನ್ನು ನೀಡಿವೆ. ವಿರೋದ ಪಕ್ಷವಾದ ಬಿಜೆಪಿ, ಅದರಲ್ಲೂ ತಮ್ಮ ಅವಧಿಯಲ್ಲಿ, ಕೊಡಗು ವಿವಿ ಮಂಜೂರು ಮಾಡಿಸಿದ್ದ ಮಾಜೀ ಸಚಿವ ಅಪ್ಪಚ್ಚು ರಂಜನ್ ಅವರು ವಿವಿ ಮುಚ್ಚಿದರೆ ಕೊಡಗು ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದಿದ್ದಾರೆ. ವಿದ್ಯಾರ್ಥಿಗಳಂತೂ ಈಗಾಗಲೇ ತಮ್ಮ ಪರಿಕ್ಷಾ ಕಾಲದ ತಯಾರಿಯನ್ನು ಬದಿಗಿಟ್ಟು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ
ಆಡಳಿತ ಪಕ್ಷದ ಶಾಸಕರೇ ಕೊಡಗಿನ ಎರಡೂ ಕ್ಷೇತ್ರದಲ್ಲೂ ಇದ್ದರೂ ಕೂಡ, ವಿವಿ ಮುಚ್ಚುವ ವಿಚಾರದಲ್ಲಿ ನಾವು ಜನರ ಪರ ಎನ್ನುತಿದ್ದಾರೆ. ಸರ್ಕಾರದೊಂದಿಗೆ ವ್ಯವಹರಿಸಿ ವಿವಿ ಮುಚ್ಚದಂತೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡುತಿದ್ದಾರೆ. ಕೊಡಗು ವಿವಿಹಿತರಕ್ಷಣಾ ಸಮಿತಿ ಸ್ಥಾಪನೆಗೊಂಡು, ಸಮರೋಪಾದಿಯಲ್ಲಿ ಸಭೆಗಳನ್ನು ಮಾಡಿ, ಹೋರಾಟದ ರೂಪು ರೇಷೆಯನ್ನು ಸಿದ್ದಪಡಿಸುತ್ತಾ, ಜಿಲ್ಲೆಯಾದ್ಯಂತ ಜನ ಸಂಘಟನೆಗೆ ಮುಂದಾಗಿದೆ.
ಕೊಡಗು ವಿವಿ ಕೇವಲ ಸರ್ಕಾರದ ಅದೀನ ಸಂಸ್ಥೆ ಮಾತ್ರ ಅಲ್ಲ ಅದು ಕೊಡಗಿನ ಜನತೆಯ ಅಸ್ಮಿತೆಯ ಪ್ರಶ್ನೆಯಾಗಿದೆ. ಕೊಡಗಿನ ಸ್ವಾಭಿಮಾನದ ಪ್ರಶ್ನೆಯಾಗಿದೆ. ಒಂದುವೇಳೆ ಕೊಡಗು ವಿವಿ ಮುಚ್ಚುವ ನಿರ್ದಾರಕ್ಕೆ ಸರ್ಕಾರ ಬಂದರೆ, ಕೊಡಗು ಮತ್ತೊಂದು ಹರತಾಳದ ಕೇಂದ್ರ ಬಿಂದುವಾಗುವುದರಲ್ಲಿ ಸಂಶಯವೇ ಇಲ್ಲ.
ಹಾಗಾಗಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡುತ್ತದೆ ಎಂಬ ನಂಬಿಕೆ ಕೊಡಗಿಗೆ ಇದೆ. ಕೊಡಗು ವಿವಿಗೆ ಕೇವಲ 3ಕೋಟಿಯಷ್ಟು ಅನುದಾನ ಕೊಡದಷ್ಟು ಬಡತನ ಸರ್ಕಾರಕ್ಕೆ ಬಂದಿಲ್ಲ ಎಂಬುದು ಜನತೆಯ ಕಲ್ಪನೆ. ಒಂದುವೇಳೆ ಸರ್ಕಾರ ನಮ್ಮ ಕೈಯ್ಯಿಂದ ಅನುದಾನ ಕೊಡಲು ಸಾಧ್ಯವಿಲ್ಲ, ನೀವೇ ನಡೆಸಿಕೊಂಡು ಹೋಗಿ, ಆದರೆ ನಿಯಂತ್ರಣ ಮಾತ್ರ ಸರ್ಕಾರದ ಕಯ್ಯಲ್ಲೇ ಇರಲಿದೆ ಎಂದರೆ, ವಂತಿಗೆ ಸಂಗ್ರಹಿಸಿ ವಿವಿಯನ್ನು ನಡೆಸುತ್ತೇವೆ ಎಂದು ಸರ್ಕಾರಕ್ಕೆ ಶೆಡ್ಡು ಹೊಡೆಯುವಷ್ಟು ಕಿಚ್ಚು ಅಭಿಮಾನ ಕೊಡಗಿನ ಶಿಕ್ಷಣ ಪ್ರೇಮಿಗಳಿಗಿದೆ.
ಸರ್ಕಾರ ಈಗಲಾದರೂ ಕೊಡಗಿನ ದ್ವನಿಗೆ ಕಿವಿಯಾಗಿ, ವಿದ್ಯಾರ್ಥಿಗಳ ಪಾಲಿನ ಬೆಳಕಾಗಲಿದೆಯಾ, ಇಲ್ಲ ಎಂದಿನಂತೆ ಕೊಡಗು ಎಂದರೆ ಲೆಕ್ಕಕುಂಟು ಆಟಕಿಲ್ಲ ಎಂಬ ಧೋರಣೆಯನ್ನೇ ಮುಂದುವರೆಸಿ, ಕಣ್ಣುಮುಚ್ಚಿ ಕೂರಲಿದೆಯಾ ಕಾದು ನೋಡಬೇಕಿದೆ.