ಬೆಂಗಳೂರು, ಮಾ.10: ಕೊಡಗು ವಿಶ್ವಾ ವಿದ್ಯಾಲಯವನ್ನು ಮುಚ್ಚುವ ಅಥವಾ ವಿಲೀನ ಮಾಡುವ ನಿರ್ಧಾರವನ್ನು ಕೈಬಿಟ್ಟು, ಕೊಡಗು ವಿವಿಗೆ ಸೂಕ್ತ ಅನುದಾನ ಕಲ್ಪಿಸಿ, ಜಿಲ್ಲೆಯ ಮತ್ತು ನೆರೆ ಜಿಲ್ಲೆಗಳ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳೂ ಸೇರಿದಂತೆ ಸರ್ವರಿಗೂ ಸಹಕಾರಿಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು, ಕೊಡಗು ವಿವಿ ಹಿತರಕ್ಷಣಾಬಳಗದ ವತಿಯಿಂದ, ಮಡಿಕೇರಿ ಶಾಸಕರಾದ ಡಾ. ಮಂಥರ್ ಗೌಡ ಅವರ ನೇತೃತ್ವದಲ್ಲಿ, ಮಾನ್ಯ ಉಪ ಮುಖ್ಯಮಂತ್ರಿಗಳು ಮತ್ತು ಈ ಸಂಭಂದಿತ ಸಜಿವ ಸಂಪುಟ ಉಪಸಮಿತಿಯ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಉಪಮುಖ್ಯಮಂತ್ರಿಗಳು, ಕೊಡಗು ವಿವಿ ನಿಯೋಗಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ನಿಮಗೆ ಮಂಗಳೂರು ವಿವಿ ಬೇಕೇ ? ಕೊಡಗು ವಿವಿ ಬೇಕೇ ? ಎಂದು ಮಾಹಿತಿ ಪಡೆದರು. ಈ ಹಿಂದೆ ನಮಗೆ ಬಂದ ಮಾಹಿತಿಗಳ ಆಧಾರದ ಮೇಲೆ ಸಂಪುಟದಲ್ಲಿ ಚರ್ಚಿಸಿದ್ದು, ಇದೀಗ ಮತ್ತೊಮ್ಮೆ ಪೂರ್ಣ ಮಾಹಿತಿ ತರಿಸಿಕೊಂಡು ಚರ್ಚಿಸಲಾಗುವುದು, ಕೊಡಗಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನಾನುಕೂಲವಾಗದಂತೆ ಎಚ್ಚರ ವಹಿಸಲಾಗುವುದು, ಕೊಡಗಿನ ವಿದ್ಯಾರ್ಥಿಗಳು ದೇಶ ವಿದೇಶಗಳ ವಿವಿಗಳ ಜೊತೆ ಸಂವಹನ ನಡೆಸಿ ಉನ್ನತ ಮಟ್ಟದ ಜ್ಞಾನ ಹೊಂದಬೇಕು ಎಂಬುದು ಸರ್ಕಾರದ ಮೂಲ ಉದ್ದೇಶ, ಮಂಗಳೂರು ವಿವಿಗೆ ಸಂಯೋಜಿತಗೊಂಡ ಬೋಧಕ ವರ್ಗದವರು, ಮಂಗಳೂರು ವಿವಿಯಲ್ಲೇ ಮುಂದುವರಿಸುವಂತೆ ಸರ್ಕಾರಕ್ಕೆ ನೀಡಿದ ಮಾಹಿತಿಯನ್ನಾಧರಿಸಿ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಲಾಗಿದೆ, ಶಾಸಕರಾದ ಡಾ.ಮಂತರಗೌಡರ ವಿಶೇಷ ಕಾಳಜಿಯ ಒತ್ತಾಸೆ ಹಾಗೂ ಕೊಡಗಿನ ಮಂದಿಯ ಕೋರಿಕೆಯನ್ನು ಸರ್ಕಾರ ಮನ್ನಿಸಲಿದೆ, ಈ ಬಗ್ಗೆ ಮತ್ತೊಮ್ಮೆ ಸಂಪುಟ ಸಮಿತಿಯಲ್ಲಿ ಪರಾಮರ್ಶಿಸಿ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಸಕರಾತ್ಮಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಮಾತನಾಡಿದ ಮಡಿಕೇರಿ ಶಾಸಕ ಡಾ. ಮಂಥರ್ ಗೌಡರವರು, ಕೊಡಗಿನ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ವಿಶೇಷ ಮುತವರ್ಜಿ ವಹಿಸಲಾಗುವುದು, ಇದಕ್ಕಾಗಿ ವಿವಿ ಉಳಿಸುವ ಮೂಲಕ ಅವಕಾಶ ಮಾಡಿಕೊಡಿ ಎಂದು ಡಿಸಿಎಂ ಬಳಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೊಡಗು ವಿವಿ ಹಿತರಕ್ಷಣಾಬಳಗದ ಅಧ್ಯಕ್ಷ ಕೆ.ಎಸ್. ಕೃಷ್ಟಣೇಗೌಡ, ಮುಖಂಡರಾದ ಕೆ.ಪಿ. ಚಂದ್ರಕಲಾ, ಚಂದ್ರಮೌಳಿ, ವಿ.ಪಿ. ಸಶಿಧರ್, ಮಂಜುನಾಥ್ ಗುಂಡುರಾವ್, ಅರಣ್ ಕೊತ್ತನಳ್ಳಿ ಸೇರಿದಂತೆ ನೂರಾರು ಮುಖಂಡರು ವಿದ್ಯಾಪ್ರೇಮಿಗಳು ಪಾಲ್ಗೊಂಡಿದ್ದರು.
ಇದೇ ನಿಯೋಗ ಮಾನ್ಯ ಮುಖ್ಯ ಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರನ್ನೂ ಭೇಟಿಯಾಗುವ ಯೋಜನೆಯನ್ನು ಹಾಕಿಕೊಂಡಿದೆ.