
ಮಡಿಕೇರಿ ಜೂ02(Nadubade News): ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಮೂವರು ಪತ್ರಕರ್ತರು ಭಾಜನರಾಗಿದ್ದಾರೆ ಎಂದು ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಎಂ.ಕೆ.ಆದರ್ಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರಿಯ ಪತ್ರಕರ್ತ ಕೆ.ಬಿ.ಮಹಂತೇಶ್ ಅವರ ಸ್ಮರಣಾರ್ಥ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನೀಡುವ ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ “ರೂ.7 ಕೋಟಿ ವೆಚ್ಚದ ಜರ್ಮನ್ ತಂತ್ರಜ್ಞಾನದ ತಡೆಗೋಡೆ ಪೂರ್ಣಗೊಳ್ಳುವುದು ಎಂದು?’ ಎಂಬ ವರದಿಗೆ ಹೆಚ್.ಜೆ.ರಾಕೇಶ್ ಪಡೆದುಕೊಂಡಿದ್ದಾರೆ.
ಕೋವರ್ಕೊಲ್ಲಿ ಇಂದ್ರೇಶ್ ಮತ್ತು ಕುಟುಂಬವರ್ಗ ತಮ್ಮ ತಂದೆ ಬಿ.ವಿ.ಚಂದ್ರಶೇಖರ್ ಹಾಗೂ ತಾಯಿ ಪುಷ್ಪಲತಾ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ “ಸೋರುತಿಹುದು ಮೀನಾಳ ಮನೆಯ ಮಾಳಿಗೆ” ಎಂಬ ವರದಿಗೆ ಕೆ.ಎಂ.ಇಸ್ಮಾಯಿಲ್ ಕಂಡಕರೆ ಪಡೆದುಕೊಂಡಿದ್ದಾರೆ.
ಎಂ.ಎನ್.ಚಂದ್ರಮೋಹನ್ ಅವರು ತಮ್ಮ ತಂದೆ ಎಂ.ನಾರಾಯಣ ಹಾಗೂ ತಾಯಿ ಎನ್ ಪದ್ಮಾವತಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಪರಿಸರ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ “ಜಿಲ್ಲಾ ಕೇಂದ್ರದಲ್ಲಿ ವಾಕರಿಗೆ ತರಿಸುವ ಕೊಳಕು ಮಾಂಸ ಮಾರುಕಟ್ಟೆ!” ಎಂಬ ವರದಿಗೆ ಆನಂದ್ ಕೊಡಗು ಪಡೆದುಕೊಂಡಿದ್ದಾರೆ.
ಮೂರು ಪ್ರಶಸ್ತಿಯು ತಲಾ 5 ಸಾವಿರ ರೂಪಾಯಿ ನಗದು ಹಾಗೂ ಫಲಕ ಒಳಗೊಂಡಿದೆ. ಜೂ.8 ರಂದು ಮಧ್ಯಾಹ್ನ 12 ಗಂಟೆಗೆ ಪತ್ರಿಕಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಎಂ.ಕೆ.ಆದರ್ಶ್ ತಿಳಿಸಿದ್ದಾರೆ.