ಬೆಂಗಳೂರು, ಮಾ.07: ಇಂದು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಅವರ ದಾಖಲೆಯ 16ನೇ ರಾಜ್ಯ ಬಡ್ಜೆಟ್, ಸರ್ಕಾರಕ್ಕೆ, ಸಿದ್ದರಾಮಯ್ಯ ಅವರಿಗೆ ಮತ್ತು ಕೊಡಗಿನ ಪಾಲಿಗೂ ಕೂಡ ಐತಿಹಾಸಿಕ ಬಡ್ಜೆಟ್ ಆಗಿದ್ದು, ಮುಖ್ಯ ಮಂತ್ರಿ ಮತ್ತು ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ವಿರಾಜಪೇಟೆ ಶಾಸಕರೂ, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ಅಜ್ಜಿಕುಟ್ಟಿರ ಪೊನ್ನಣ್ಣ ಹರ್ಷ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ತಜ್ಞರಾಗಿರುವ ಮುಖ್ಯಮಂತ್ರಿಗಳು, ಎಲ್ಲಾ ಆಯಾಮಗಳಲ್ಲೂ ಅಳೆದೂ ತೂಗಿ, ಬಡ್ಜೆಟ್ ತಯಾರಿಸಿದ್ದು, ರಾಜ್ಯದ ಎಲ್ಲಾ ವರ್ಗ, ಭಾಗ, ಪ್ರದೇಶದ ಜನರಿಗೆ ಅನೂಕೂಲಕರವಾದ ಮುಂಗಡ ಪತ್ರ ಮಂಡಿಸಿದ್ದಾರೆ ಎಂದು ಅವರು ಹೇಳಿದರು.
ಕೊಡಗಿನ ಪಾಲಿಗೆ ಇದೋಂದು ಐತಿಹಾಸಿಕ ಕೊಡುಗೆಯಾಗಿದ್ದು, ಈ ಹಿಂದೆ ಯಾವುದೇ ಮುಖ್ಯಮಂತ್ರಿಗಳು ನೀಡದಷ್ಟು ಯೋಜನೆಯನ್ನು ಈ ಬಡ್ಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದಾರೆ ಎಂದ ಪೊನ್ನಣ್ಣ ಅವರು, ವಿರಾಜಪೇಟೆಗೆ 400 ಹಾಸಿಗೆಗಳ ಆಸ್ಪತ್ರೆ, ಪೊನ್ನಂಪೇಟೆಗೆ ನೂತನ ECH ಆಸ್ಪತ್ರೆ, ಪೊನ್ನಂಪೇಟೆ, ವಿರಾಜಪೇಟೆ, ಮಡಿಕೇರಿ ವ್ಯಾಪ್ತಿಯ ರಸ್ತೆಗಳಿಗೆ 20ಕೋಟಿ ಅನುದಾನ, ಐದು ವಸತಿ ಶಾಲೆಗಳು, ಪ್ರೌಡಶಾಲೆಗಳು ಪದವಿಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೆ, ಪ್ರಾಥಮಿಕ ಶಾಲೆಗಳನ್ನು ಪ್ರೌಡ ಶಾಲೆಗಳಾಗಿ ಮೇಲ್ದರ್ಜೆಗೇರಿಸುವುದು, ಕೂಡಿಗೆ ಕ್ರೀಡಾ ವಸತಿ ಶಾಲೆಗೆ 3 ಕೋಟಿ, ಮಲೆನಾಡು ಪ್ರದೇಶಭಿವೃದ್ದಿ ನಿಗಮಕ್ಕೆ ನೀಡಿರುವ 83 ಕೋಟಿ, ಮಡಿಕೇರಿ, ಮಾದಾಪುರ, ಸೋಮವಾರಪೇಟೆ, ಕೊಡ್ಲೀಪೇಟೆ ಮಾರ್ಗವಾಗಿ ಪೆರಿಗಲ್ ವರೆಗಿನ 95 ಕಿ.ಮಿ. ಹೆದ್ದಾರಿ ಯೋಜನೆ, ಅಲ್ಲದೆ ಮುಖ್ಯಮಂತ್ರಿಗಳ ಪ್ರಗತಿ ಪಥ ನೂತನ ಯೋಜನೆಯಡಿಯಲ್ಲಿ ಒಟ್ಟು 8000 ಕೋಟಿ ಅನುದಾನ ಮೀಸಲಿಟ್ಟಿದ್ದು, ಅದರಲ್ಲೂ ಕೊಡಗಿಗೆ ಸಿಂಹ ಪಾಲು ಬರಲಿದೆ. ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಅಕ್ಕ ಕೆಫೆ ಪ್ರಾರಂಭವಾಗಲಿದೆ, DCC ಮತ್ತು PEACARD ಬ್ಯಾಂಕ್ಗಳ ಸಾಲದ ಮೇಲಿನ ಬಡ್ಡಿ ಮನ್ನದಲ್ಲಿಯೂ ಜಿಲ್ಲೆಯ ಜನತೆಗೆ ಉಪಯೋಗವಿದೆ. ಕುಡಿಯ, ಯರವ ಮಲೆಕುಡಿಯ ಸೇರಿದಂತೆ ಹಿಂದುಳಿದ ಜನಾಂಗಗಳಿಗೆ ವಿಷೇಶ ಯೋಜನೆಯನ್ನು ನೀಡಲಾಗಿದೆ. ವನ್ಯಜೀವಿ ಧಾಳಿಯಿಂದ ಆಗುವ ಜೀವ ಹಾನಿ ಪರಿಹಾರವನ್ನೂ ಹೆಚ್ಚಿಸಲಾಗಿದೆ. ಹಿಂದೆ ಹೇಳಿದಂತೆ ಆನೆ ಪುನರ್ವಸತಿ ಯೋಜನೆಯನ್ನು ಘೋಷಿಸಲಾಗಿದೆ. ಹಾಗೇ ಎಲ್ಲಾ ವರ್ಗದ ಜನರಿಗೂ ಮನ್ನಣೆ ಮತ್ತು ಮಾನ್ಯತೆಯನ್ನು ನೀಡಿ ಸುಸ್ಥಿರ ಆರ್ಥಿಕ ಅವಲೋಕನದ ಬಡ್ಜೆಟನ್ನು ಮಂಡಿಸಿದ್ದು, ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಲ್ಲಾ ಯೋಜನೆಗಳನ್ನು ಅದರಲ್ಲೂ ಕೊಡಗಿಗೆ ಲಭ್ಯವಾಗಿರುವ ಘೋಷಣೆಗಳೊಂದಿಗೆ ಇನ್ನೂ ಹೆಚ್ಚಿನ ಅನುದಾನವನ್ನು ತಂದು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದ ವಿರಾಜಪೇಟೆ ಶಾಸಕ ಪೊನ್ನಣ್ಣ ಅವರು, ಜಿಲ್ಲೆಯ ಜನತೆಯ ಮೇಲೆ ಅಪಾರವಾದ ಪ್ರೀತಯನ್ನಿಟ್ಟಿರುವ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಜಿಲ್ಲೆಯ ಸರ್ವರ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.