
ಗೋಣಿಕೊಪ್ಪ,ಡಿ.22: ಕರ್ನಾಟಕ ಸರ್ಕಾರ ಕೊಡಗಿನಲ್ಲಿ 2000 ಹೆಕ್ಟೇರ್ ಪ್ರದೇಶದಲ್ಲಿ ಆನೆ ಪುನರ್ವಸತಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದೆ ಎಂದು ಅರಣ್ಯ ಸಚಿವರು ಹೇಳಿದ್ದಾರೆ. ಇದು ಕೊಡಗಿನ ರೈತರನ್ನು ದಿಕ್ಕು ತಪ್ಪಿಸಿ, ಒಕ್ಕಲೆಬ್ಬಿಸುವ ಕ್ರಮವಾಗಿದ್ದು, ರೈತ ಸಂಘವು ಈ ನಿರ್ಧಾರವನ್ನು ಸಂಪೂರ್ಣ ವಿರೋದಿಸುವುದಲ್ಲದೆ, ಸರ್ಕಾರದ ಈ ಕ್ರಮವನ್ನು ಖಂಡಿಸುತ್ತೇವೆ ಎಂದು ರಾಜ್ಯ ರೈತ ಸಂಘದ ಉಪಾದ್ಯಕ್ಷ ಹಾಗೂ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಕಾಡ್ಯಮಾಡ ಮನು ಸೋಮಯ್ಯ ಅವರು ಹೇಳಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಅರಣ್ಯ ಇಲಾಖೆ ನಾನಾ ಕಾರಣಗಳನ್ನ ನೀಡಿ, ರೈತರಿಗೆ ಮಾನಸಿಕ ಕಿರುಕುಳ ನೀಡುತ್ತಾ ಕೃಷಿ ಚಟುವಟಿಕೆಯಿಂದ ವಿಮುಖರಾಗುವಂತೆ ಮಾಡುತ್ತಿದೆ. ಇದರಲ್ಲಿ ಅರಣ್ಯ ಇಲಾಖೆ ಮತ್ತು ಎನ್.ಜಿ.ಓಗಳು ಕೊಡಗು ಜಿಲ್ಲೆಯನ್ನು ಸಂಪೂರ್ಣ ಮಾನವ ಮುಕ್ತ ಮಾಡಿ, ಅರಣೀಕರಣ ಮಾಡುವ ಹುನ್ನಾರ ಅಡಗಿದೆ. ಇದರ ಮುಂದುವರೆದ ಭಾಗವಾಗಿ ಇದೀಗ 2,000 ಹೆಕ್ಟರ್ ನಲ್ಲಿ ಆನೆ ಪುನರ್ವಸತಿ ಕಲ್ಪಿಸುವ ಯೋಜನೆಯಾಗಿದೆ. ಈ ಯೋಜನೆಯನ್ನು ರೈತ ಸಂಘವು ತೀವ್ರವಾಗಿ ವಿರೋಧಿಸುತ್ತದೆ ಎಂದಿದ್ದಾರೆ.
ಒಂದು ವೇಳೆ ಕೊಡಗಿನಲ್ಲಿ 2000 ಹೆಕ್ಟರ್ ಪ್ರದೇಶದಲ್ಲಿ ಆನೆ ಪುನರ್ವಸತಿ ಕೇಂದ್ರ ಸ್ಥಾಪನೆಯಾದರೆ, ಮುಂದೆ ಕೊಡಗು ಪೂರ್ತಿಯಾಗಿ ಆನೆಗಳ ಉಪಟಳಕ್ಕೆ ಒಳಗಾಗಬೇಕಾಗುತ್ತದೆ. ಒಮ್ಮೆ ಕೇಂದ್ರ ಸ್ಥಾಪನೆ ಆದರೆ ಕೊಡಗು ಜಿಲ್ಲೆ ಮಾತ್ರವಲ್ಲದೆ, ರಾಜ್ಯ, ಅಂತರ್ರಾಜ್ಯಗಳಿಂದಲೂ ಆನೆಗಳನ್ನು ತಂದು ಇಲ್ಲಿ ಬಿಡಲಾಗುತ್ತದೆ. ಆ ನಂತರದ ದಿನಗಳಲ್ಲಿ ನಾನ ಕಾರಣಗಳನ್ನ ಹೇಳಿ ಪುನರ್ವಸತಿ ಕೇಂದ್ರದ ಗೇಟ್ಗಳನ್ನು ತೆರೆಯುವ ಮೂಲಕ, ಆನೆಗಳನ್ನು ನಾಡಿಗೆ ಬಿಡುವ ಸಂಶಯ ಇದೆ. ಒಂದು ವೇಳೆ ಹಾಗಾದರೆ ಕಾಡಾನೆಗಳು ಈ ಕೊಡಗಿನಾದ್ಯಂತ ಎಲ್ಲ ತೋಟಗದ್ದೆಗಳನ್ನು ದ್ವಂಸ ಮಾಡುವುದರಲ್ಲಿ ಸಂದೇಹವೇ ಇಲ್ಲ. ಈಗಾಗಲೇ ಆನೆ ಮಾನವ ಸಂಗರ್ಷದಿಂದ ಕಂಗೆಟ್ಟಿರುವ ಕೊಡಗಿಗೆ, ಗಾಯದಮೇಲೆ ಉಪ್ಪು ಸುರಿದಂತಾಗುತ್ತದೆ, ಈ ಯೋಜನೆಯಿಂದ ಪುಟ್ಟ ಕೊಡಗು ಜಿಲ್ಲೆಯಲ್ಲಿ ಇತರ ವನ್ಯ ಪ್ರಾಣಿಗಳು ಮತ್ತು ಮಾನವ ಜೀವನಕ್ಕೆ ತೀವ್ರ ಅಡಚಣೆ ಆಗುವುದು ಶತಸಿದ್ಧ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಇದು ಕೊಡಗು ಜಿಲ್ಲೆಯನ್ನು ಆಶ್ರಯಿಸಿರುವ ಬಹು ನಗರಗಳು ತಮ್ಮ ನೀರು ಮತ್ತು ಜೀವನೋಪಾಯಕ್ಕಾಗಿ ಕೊಡಗಿನಲ್ಲಿ ಅಧಿಕ ಮಳೆಯಾಗಬೇಕು, ಹಾಗಾದರೆ ನೀರಿನ ಉತ್ಪತ್ತಿ ಅಧಿಕವಾಗಿ ಕಾವೇರಿಯು ತುಂಬಿ ಹರಿಯುವುದರಿಂದ ನಗರ ಪ್ರದೇಶಗಳಿಗೆ, ಕಾರ್ಪೊರೇಟ್ ವಲಯಗಳಿಗೆ ಉಪಯೋಗ ಆಗಲಿದೆ ಎಂಬ ದುರುದ್ದೇಶದಿಂದ ಇಡೀ ಕೊಡಗನ್ನು ಅರಣ್ಯೀಕರಣ ಮಾಡುವ ಹಲವು ವರ್ಷಗಳ ಮುಂದುವರಿದ ಭಾಗ ಇದಾಗಿದ್ದು, ಇದಕ್ಕೆ ಅಂತರಾಷ್ಟ್ರೀಯ ಮಟ್ಟದ ಕೆಲ ಎನ್.ಜಿ.ಓಗಳ ಕೈವಾಡ ಇರುವ ಸಂಶಯ ಮೂಡುತ್ತಿದೆ.
ಕೊಡಗಿನಲ್ಲಿ ನಾವು ನಮ್ಮ ಅರಣ್ಯವನ್ನು ರಕ್ಷಿಸುತ್ತಾ, ಪರಿಸರವನ್ನು ಉಳಿಸುತ್ತಾ, ರೈತಾಪಿ ಜೀವನವನ್ನು ನಡೆಸುತ್ತಾ, ಪರಿಸರ ಸ್ನೇಹಿ ಬದುಕನ್ನ ಕಾಣುತ್ತಿದ್ದೇವೆ. ನಮ್ಮ ಪರಿಸರವನ್ನು ಕಾಪಾಡಲು ಹೊರಗಿನ ಶಕ್ತಿಗಳ ಅವಶ್ಯಕತೆ ನಮಗಿಲ್ಲ. ಬದಲಾಗಿ ಸರ್ಕಾರ ಕೊಡಗಿನ ಮೂಲ ನಿವಾಸಿಗಳಿಗೆ ಅರಣ್ಯ ನಿರ್ವಹಣೆಯ ಜವಾಬ್ದಾರಿ ನೀಡಲಿ ಎಂದು ಮನು ಸೋಮಯ್ಯ ಆಗ್ರಹಿಸಿದ್ದಾರೆ.
ಹಾಗೇಯೇ ಆನೆ ಪುನರ್ವಸತಿ ಯೋಜನೆಯ ಅವಶ್ಯಕತೆ ಮಲೆನಾಡು ಭಾಗದಲ್ಲಿ ಇಲ್ಲ. ಇಲ್ಲಿನ ಅರಣ್ಯ ಪ್ರದೇಶಗಳಲ್ಲಿ ಬೇಸಿಗೆ ಕಾಲದಲ್ಲಿ ನೀರು ಮತ್ತು ಆಹಾರದ ಅಭಾವ ಕಾಡಲಿದೆ, ಹಾಗಾದಾಗ ಸಂದರ್ಭ ಆನೆಗಳು ಕ್ಯಾಂಪ್ಗಳಿಂದ ಹೊರಬಂದು ಜನವಲಯ ಮತ್ತು ಕೃಷಿ ಪ್ರದೇಶಗಳಿಗೆ ಲಗ್ಗೆ ಇಡಲಿದೆ. ಉದಾಹರಣೆಗೆ ಕೊಡಗಿನಲ್ಲಿ ಈಗಲೇ ಕಾರ್ಯ ನಿರ್ವಹಿಸುತ್ತಿರುವ ದುಬಾರೆ ಮತ್ತು ತಿತಿಮತಿ ಆನೆ ಕೇಂದ್ರಗಳ ಪರಿಸ್ಥಿತಿಯನ್ನು ಅವಲೋಕಿಸಿದರೆ ಸ್ಪಷ್ಟವಾಗಲಿದೆ. ಅಲಲಿರುವ ಕಡಿಮೆ ಸಂಖ್ಯೆಯ ಆನೆಗಳಿಗೇ ಆಹಾರ ಲಭ್ಯವಾಗದೆ, ನಾಡಿಗೆ ಪ್ರವೇಶಿಸುತ್ತಿರುವುದನ್ನು ನಾವು ಕಂಡಿದ್ದೇವೆ. ಇತರ ಮಲೆನಾಡು ಭಾಗದ ಅರಣ್ಯಗಳಲ್ಲಿಯೂ ಇತ್ತೀಚೆಗೆ ಆನೆಗಳ ಸಂಖ್ಯೆ ಅಧಿಕವಾಗಿದ್ದು ಆಹಾರದ ಅಭಾವ ಕಾಡುತ್ತಿರುವುದರಿಂದಲೇ ಅವುಗಳು ಜನವಲಯಕ್ಕೆ ಬರುತ್ತಿರವುದನ್ನು ಗಂಭೀರವಾಗಿ ಚಿಂತಿಸಬೇಕು ಎಂದು ಮನು ಸೋಮಯ್ಯ ವ್ಯಾಖ್ಯಾನಿಸಿದ್ದಾರೆ.
ಪ್ರಸ್ತುತ ಸರ್ಕಾರದ ಈ ಆನೆ ಪುನರ್ವಸತಿ ಯೋಜನೆಯು, ಅರಣ್ಯ ಪ್ರವಾಸೋಧ್ಯಮದ ಒಂದು ಭಾಗವಾಗಿದ್ದು, ಇದರಿಂದ ಪರಿಸರಕ್ಕೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಇದರ ಬದಲು, ಆನೆಗಳ ಸಂಖ್ಯೆ ಕಡಿಮೆ ಇರುವ ರಾಜ್ಯಗಳಲ್ಲಿ ಈಂತ ಯೋಜನೆಗಳನ್ನು ತಂದರೆ, ಅಲ್ಲಿ ಆನಎಗಳಿಗೆ ವಿಷಾಲ ಪ್ರದೇಶದ ವಸತಿ ಯೋಜನೆ ಆಗುವುದಲ್ಲದೆ, ಅಲ್ಲಿನ ಪ್ರವಾಸೋಧ್ಯಮದ ಆದಾಯಕ್ಕೂ ಆಧಾರ ಆಗಲಿದೆ. ಅದೂ ಅಲ್ಲದೆ ಹೆಚ್ಚುವರಿ ಆನೆಗಳನ್ನು ವಿದೇಶಗಳಿಗೆ ರಪ್ತು ಮಾಡಿದರೆ, ಬಹು ಬೇಡಿಕೆ ಇರುವ ದೇಶಗಳಿಂದ ಉತ್ತಮ ಆಧಾಯವೂ ಸರ್ಕಾರದ ಬೊಕ್ಕಸಕ್ಕೆ ಹರಿದು ಬರಲಿದೆ. ಹಾಗಾಗಿ ಈ ಯೋಜನೆಯನ್ನು ಸರ್ಕಾರ ಪುನರ್ಪರಿಶೀಲನೆ ಮಾಡಿ, ಮುಂದುರಿಯಬೇಕು ಮತ್ತು ಕೊಡಗು ಮಲೆನಾಡು ಭಾಗಗಳಲ್ಲಿ ಈ ಯೋಜನೆಯ ಅನುಷ್ಟಾನವನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.
ರೈತ ಸಂಘವು ಈ ವಿಚಾರವಾಗಿ ಕೊಡಗು ಮತ್ತು ಮಲೆನಾಡು ಭಾಗದ ಎಲ್ಲ ರೈತರು ಮತ್ತು ಕಾರ್ಯಕರ್ತ ಮುಖಂಡರ ಸಭೆ ಕರೆದು, ಮುಂದಿನ ತೀರ್ಮಾನವನ್ನು ಪ್ರಕಟಿಸಲಿದೆ ಎಂದು ರಾಜ್ಯ ರೈತ ಸಂಘ ಮತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರೂ ಆಗಿರುವ ಕಾಡ್ಯಮಾಡ ಮನು ಸೋಮಯ್ಯ ತಿಳಿಸಿದ್ದಾರೆ.