
ಕುಶಾಲನಗರ ಜೂ.11 (Nadubade News): ಇಂದು ಕುಶಾಲನಗರ ಪುರಸಭೆಯ ನೂತನ ಕಚೇರಿ ಸಂಕೀರ್ಣ ಉದ್ಘಾಟನೆಯಾಗಿದ್ದು, ಇದರೊಂದಿಗೆ ಪುರಸಭೆ ಆಡಳಿತ ಮತ್ತು ಸಿಬ್ಬಂದಿಗಳು ಸಾರ್ವಜನಿಕರ ಕೆಲಸಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಬೇಕು
ಯಾವುದೆ ದೂರು ಬಾರದಂತೆ ಎಚ್ಚರ ವಹಿಸಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕಿವಿಮಾತು ಹೇಳಿದರು . ಕುಶಾಲನಗರ ಪುರಸಭೆ ನೂತನ ಕಛೇರಿ ಸಂಕೀರ್ಣ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಸಚಿವರಾದ ರಹೀಂ ಖಾನ್ ಮತ್ತು ಬೈರತಿ ಸುರೇಶ್ ಅವರ ಸ್ಪಂದನೆಯಿಂದ ಕುಶಾಲನಗರ,ಸೋಮವಾರಪೇಟೆ, ಮಡಿಕೇರಿ ಸೇರಿದಂತೆ ಮೂರು ಇಂದಿರಾ ಕ್ಯಾಂಟೀನ್ ಮಂಜೂರು ಮಾಡಲಾಗಿದ್ದು, ಕುಶಾಲನಗರ ಇಂದಿರಾ ಕ್ಯಾಂಟೀನ್ನಲ್ಲಿ 5೦೦ ಊಟ ವಿತರಣೆಗೆ ಅವಕಾಶ ಕಲ್ಪಿಸುವಂತೆ ಸಚಿರ ರಹೀಂ ಖಾನ್ರಿಗೆ ಶಾಸಕ ಡಾ.ಮಂತರ್ ಗೌಡ ಮನವಿ ಮಾಡಿದರು.
ಕುಶಾಲನಗರ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು, ಪಾಲಿಟೆಕ್ನಿಕ್ ಕಾಲೇಜು ಬಳಿ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಜಾಗ ಮಂಜೂರಾಗಿದ್ದು, ಸಧ್ಯದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು. ಡಿಸೆಂಬರ್ ಒಳಗೆ ಕುಶಾಲನಗರದಲ್ಲಿ ಬಸ್ ಡಿಪೋ ಉದ್ಘಾಟನೆ, ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತಾಗಲು ಪುತ್ಥಳಿ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಡಾ.ಮಂತರ್ ಗೌಡ ಇದೇ ಸಂದರ್ಭದಲ್ಲಿ ತಿಳಿಸಿದರು.