
ಬೆಂಗಳೂರು: ಮಾ,05: ಗೋಣಿಕೊಪ್ಪ ಮತ್ತು ವಿರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜುಗಳನ್ನು ಸರ್ಕಾರದ ಅನುದಾನಕ್ಕೆ ಒಳಪಡಿಸಲು ಮಾನ್ಯ ಶಿಕ್ಷಣ ಸಚಿವರಿಗೆ, ವಿರಾಜಪೇಟೆ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಕಾಲೇಜಿನ ನಿಯೋಗದೋಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.
1968ರಲ್ಲಿ ಪ್ರಾರಂಭವಾಗಿರುವ, ಸುಮಾರು 55 ವರ್ಷಗಳಿಂದ ಕಾವೇರಿ ಪದವಿ ಪೂರ್ವ ಕಾಲೇಜು, ಗೋಣಿಕೊಪ್ಪ ಕಾವೇರಿ ಪದವಿಪೂರ್ವ ಕಾಲೇಜು, ವಿರಾಜಪೇಟೆ ಈ ಎರಡೂ ಸಂಸ್ಥೆಗಳು ಉತ್ತಮ ಫಲಿತಾಂಶ, ಗುಣಮಟ್ಟದ ಶಿಕ್ಷಣದ ಸಾಧನೆ, ಉತ್ತಮ ಮೂಲ ಸೌಕರ್ಯ ಸೇರಿದಂತೆ ಜಿಲ್ಲೆಯಲ್ಲಿ ಅಗ್ರ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
20 ವರ್ಷಗಳ ಹಿಂದೆ ಸರ್ಕಾರದ ಆದೇಶದಂತೆ ಪ್ರಥಮ ದರ್ಜೆ ಹಾಗೂ ಪಿಯು ಕಾಲೇಜುಗಳನ್ನು ಬೇರ್ಪಡಿಸಿದಾಗ, ಪಿಯು ಕಾಲೇಜು ಸಿಬ್ಬಂದಿಗಳು ಪೂರ್ಣ ಪ್ರಮಾಣದಲ್ಲಿ ಅನುದಾನಕ್ಕೆ ಒಳಪಡಬೇಕಾಗಿತ್ತು. ಆದರೆ ಅಂದು ಅದು ಆಗಲಿಲ್ಲ. ಹಾಗಾಗಿ ಈ ಎರಡು ಕಾಲೇಜುಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಆರ್ಥಿಕ ಇಲಾಖೆಗೆ ಮರು ಪ್ರಸ್ತಾವನೆ ಸಲ್ಲಿಸಿ, ಸರ್ಕಾರದ ಅನುದಾನಕ್ಕೆ ಒಳಪಡಿಸಲು ಇಂದು ವಿಧಾನಸೌಧದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರ ನೇತೃತ್ವದಲ್ಲಿ ಮಾನ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾವೇರಿ ಕಾಲೇಜಿನ ಅಧ್ಯಕ್ಷರಾದ ಮಂಡೆಪಂಡ ಸುಗುಣ ಮುತ್ತಣ್ಣ, ಕೆಜಿ ಗೋಪಾಲಕೃಷ್ಣ ಭಟ್, ಡಾ. ಅಕ್ರಂ, ಚೇತನ್ ಚಿಣ್ಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.