ಸುಬ್ರಮಣ್ಯ, ಡಿ.24: ಪಶ್ಚಿಮಘಟ್ಟ ವ್ಯಾಪ್ತಿಯನ್ನು ಸೂಕ್ಷ್ಮ ಪರಿಸ ತಾಣವಾಗಿ ಗುರುತಿಸಿ ಕಾಪಾಡಲು, ಶಿಫಾರಸು ಮಾಡಿದ್ದ ಕಸ್ತೂರಿರಂಗನ್ ಅವರ ಆಧ್ಯನ ವರದಿಯ ಅನುಷ್ಠನವನ್ನು ಕರ್ನಾಟಕ ಸರ್ಕಾರ ಸಂಪೂರ್ಣ ತಿರಸ್ಕರಿದೆ ಎಂದು ಅರಣ್ಯ ಸಚಿವ, ಈಶ್ವರ ಖಂಡ್ರೆ ಹೇಳಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಘಟ್ಟದ ಕುರಿತು ಹಿರಿಯ ವಿಜ್ಞಾನಿ ಡಾ.ಕಸ್ತೂರಿ ರಂಗನ್ ವರದಿ ಬಗೆಗಿನ ಆತಂಕ, ಗೊಂದಲಗಳನ್ನು ನಮ್ಮ ಸರ್ಕಾರ ನಿವಾರಣೆ ಮಾಡಿದ್ದು, ವರದಿಯನ್ನು ನಾವು ತಿರಸ್ಕಾರ ಮಾಡಿದ್ದೇವೆ. ಪಶ್ಚಿಮ ಘಟ್ಟ ಸಂರಕ್ಷಣೆಗೂ ಜನ ಆದ್ಯತೆ ನೀಡಬೇಕು ಎಂದರು.
ಶತಮಾನಗಳಿಂದ ಜನರು ಈ ಭಾಗದಲ್ಲಿ ವಾಸಿಸುತ್ತಿದ್ದು, ಅರಣ್ಯದಂಚಿನ ಜನರೇ ಅರಣ್ಯ ರಕ್ಷಿಸುತ್ತಿದ್ದಾರೆ. ಅರಣ್ಯ ರಕ್ಷಣೆಗೆ ಈಗಾಗಲೇ ನಮ್ಮಲ್ಲಿ ಸಾಕಷ್ಟು ಯೋಜನೆಗಳಿವೆ. ಜನರ, ಜನಪ್ರತಿನಿಧಗಳ ಬೇಡಿಕೆಯಂತೆ ಕಸ್ತೂರಿ ರಂಗನ್ ವರದಿ ತಿರಸ್ಕಾರ ಮಾಡಿದ್ದೇವೆ ಎಂದು ಕೇಂದ್ರಕ್ಕೆ ತಿಳಿಸಿದ್ದೇವೆ ಎಂದು ಹೇಳಿದರು.
ಜಂಟಿ ಸರ್ವೆಗೆ ಸಂಬಂಧಿಸಿ ಕಂದಾಯ ಮತ್ತು ಅರಣ್ಯ ಸಚಿವರು, ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಿ ಜಂಟಿ ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಜಂಟಿ ಸರ್ವೆಗೆ ಸಮಿತಿ ರಚಿಸಲಾಗಿದೆ. ಅದರಂತೆ ಮುಂದಿನ ಆರು ತಿಂಗಳಲ್ಲಿ ಸರ್ವೆ ನಡೆಸಿ ವಾಸ್ತವದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. ಈ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಯಲಿದೆಯೆಂದು ಮಾಹಿತಿ ನೀಡಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿಗಳು ಹಸಿರೀಕರಣ ಮತ್ತು ಅರಣ್ಯ ಉಳಿಸಲು ಹೆಚ್ಚಿನ ಯೋಜನೆ ರೂಪಿಸಿದ್ದಾರೆ. 2023ರಿಂದ 2025ರ ಮಧ್ಯೆ ರಾಜ್ಯದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗುವ ವಿಶ್ವಾಸ ಇದೆ.ಕರ್ನಾಟಕದಲ್ಲಿ ಅರಣ್ಯ ನಾಶವಾಗಿದೆ ಎಂಬ ವರದಿ 2021-23ರ ಮಾರ್ಚ್ ವರೆಗಿನ ವರದಿ. ಆ ಸಮಯದಲ್ಲಿ ಈ ಹಿಂದಿನ ಸರ್ಕಾರ ಅಧಿಕಾರದಲ್ಲಿತ್ತು. ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅರಣ್ಯ ಹಸುರೀಕರಣ, ಅರಣ್ಯ ಉಳಿಸಲು ಹೆಚ್ಚಿನ ಯೋಜನೆ ರೂಪಿಸಲಾಗಿದೆ. 2023ರಿಂದ 2025 ರಲ್ಲಿ ಕರ್ನಾಟಕ ರಾಜ್ಯದಲ್ಲಿಅರಣ್ಯ ಪ್ರದೇಶ ಜಾಸ್ತಿಯಾಗುವ ವಿಶ್ವಾಸ ಇದೆ ಎಂದರು.
ಜುಲೈನಲ್ಲಿ ಕೇಂದ್ರ ಸರ್ಕಾರ 6ನೇ ಕರಡು ಅಧಿಸೂಚನೆ ಹೊರಡಿಸಿತತ್ತು
ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಘೋಷಿಸುವ ಬಗ್ಗೆ ಡಾ. ಕಸ್ತೂರಿ ರಂಗನ್ ವರದಿ ಆಧರಿಸಿದ ಕರಡು ಅಧಿಸೂಚನೆಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು “ಈ ಹಿಂದಿನ ಬಿಜೆಪಿ ಸರ್ಕಾರ ವರದಿಯನ್ನು ತಿರಸ್ಕರಿಸಿ ಕೈಗೊಂಡಿದ್ದ ನಿರ್ಣಯವನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ” ಎಂದಿದ್ದರು.
ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಘೋಷಿಸಲು ಕೇಂದ್ರ ಸರ್ಕಾರ ಜುಲೈ 31, 2024ರಂದು ಆರನೇ ಕರಡು ಅಧಿಸೂಚನೆ ಹೊರಡಿಸಿತ್ತು. 60 ದಿನಗಳಲ್ಲಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು ರಾಜ್ಯಗಳಿಗೆ ಸೂಚಿಸಿತ್ತು.
ಕಸ್ತೂರಿ ರಂಗನ್ ವರದಿಯು ಕರ್ನಾಟಕದ 20,668 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಿತ್ತು. ಇದರಲ್ಲಿ ಆಗಿದ್ದ ಕೆಲ ಲೋಪಗಳನ್ನು ತಿದ್ದುಪಡಿ ಮಾಡಿ, 19, 252.70 ಚದರ ಕಿ.ಮೀ ಪ್ರದೇಶವನ್ನು ಸೂಕ್ಷ್ಮ ಎಂದು ಪರಿಗಣಿಸಲಾಗಿತ್ತು. ರಾಜ್ಯದ ವಿವಿಧ ಅರಣ್ಯ ಕಾನೂನುಗಳ ಅಡಿಯಲ್ಲಿ ಈಗಾಗಲೇ 16,164 ಚದರ ಕಿ.ಮೀ ಅರಣ್ಯ ಪ್ರದೇಶವನ್ನು ಸಂರಕ್ಷಿಸಲಾಗುತ್ತಿದೆ. ಆದ್ದರಿಂದ ಕರಡು ಅಧಿಸೂಚನೆ ತಿರಸ್ಕರಿಸಲಾಗಿದೆ ಎಂದು ಹೆಚ್.ಕೆ ಪಾಟೀಲ್ ವಿವರಿಸಿದ್ದರು.
ವಯನಾಡ್ ದುರಂತದ ಬಳಿಕ ಆರನೇ ಅಧಿಸೂಚನೆ
ಜುಲೈ 31, 2024ರ ಆರನೇ ಕರಡು ಅಧಿಸೂಚನೆಯಲ್ಲಿ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಗಳ 56,826 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್ಎ) ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಗುರುತಿಸಿತ್ತು.
ಈ ಹಿಂದೆ ಐದು ಬಾರಿ ಕರಡು ಅಧಿಸೂಚನೆ ಹೊರಡಿಸಿದ್ದ ಕೇಂದ್ರ, ವಯನಾಡ್ ಭೂಕುಸಿತ ದುರಂತ ಸಂಭವಿಸಿದ ಬಳಿಕ 6ನೇ ಅಧಿಸೂಚನೆ ಪ್ರಕಟಿಸಿತ್ತು.