ಸೋಮವಾರಪೇಟೆ ಮೇ.27(Nadubade News): ಮೈಸೂರು ವಲಯದ ಕವಿಪ್ರನಿನಿ, ಯೋಜನೆಗಳು, ಕೊಡಗು ವಿಭಾಗದ ವತಿಯಿಂದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನಲ್ಲಿ ನೂತನವಾಗಿ ನಿರ್ಮಿಸಿರುವ 66/11 ಕೆ.ವಿ. ಮಾದಪುರ (ಯೋಜನೆ ಜಂಬೂರು) ವಿದ್ಯುತ್ ವಿತರಣಾ ಕೇಂದ್ರದ ಒಳಬರುವ 66 ಕೆ.ವಿ. ಮಾದಪುರ ವಿದ್ಯುತ್ ಮಾರ್ಗವನ್ನು ಹಾಲಿ ಚಾಲ್ತಿಯಲ್ಲಿರುವ 66 ಕೆ.ವಿ. ಸುಂಟಿಕೊಪ್ಪ-ಸೋಮವಾರಪೇಟೆ ವಿದ್ಯುತ್ ಮಾರ್ಗದಿಂದ ನೂತನ 66/11 ಕೆ.ವಿ. ಮಾದಪುರ ವಿದ್ಯುತ್ ವಿತರಣಾ ಕೇಂದ್ರದವರೆಗೆ ನಿರ್ಮಾಣ ಹಂತದಲ್ಲಿದ್ದ 1.524 ಕಿ.ಮೀ. ಉದ್ದದ 66 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿ ಕೆಲಸವು ಪೂರ್ಣಗೊಂಡಿದ್ದು, ಈ ಮಾರ್ಗವನ್ನು ಮೇ, 26 ಅಥವಾ ನಂತರದ ಯಾವುದೇ ದಿನಗಳಲ್ಲಿ ಚಾಲನೆಗೊಳಿಸಲಾಗುವುದು (ವಿದ್ಯುತ್ ಹರಿಸಲಾಗುವುದು). ಈ ಮಾರ್ಗವು ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕಿನ ಜಂಬೂರು, ಗರಗಂದೂರು ಮತ್ತು ಮಾದಪುರ ಗ್ರಾಮಗಳ ಸರಹದ್ದಿನಲ್ಲಿ ಹಾದುಹೋಗುತ್ತದೆ.
ಆದ್ದರಿಂದ ಸಾರ್ವಜನಿಕರು ಈ 66 ಕೆವಿ ಮಾರ್ಗದ ವಿದ್ಯುತ್ ಗೋಪುರಗಳ ಮೇಲಿರುವ ವಿದ್ಯುತ್ ವಾಹಕವು ಚಾಲನೆಗೊಳ್ಳುವುದರಿಂದ, ಗೋಪುರಗಳಿಗೆ ದನಕರುಗಳನ್ನು ಮತ್ತು ಇತರೆ ಸಾಕು ಪ್ರಾಣಿಗಳನ್ನು ಕಟ್ಟುವುದಾಗಲಿ, ಲೋಹದ ಪಟ್ಟಿಯನ್ನು ತೆಗೆಯುವುದಾಗಲಿ, ಗೋಪುರಗಳನ್ನು ಹತ್ತುವುದಾಗಲಿ, ತಂತಿಗಳನ್ನು ಮುಟ್ಟುವುದಾಗಲಿ, ಗೋಪುರಗಳ ಕೆಳಗೆ ಮರಗಿಡಗಳನ್ನು ನೆಡುವುದಾಗಲಿ, ಗೋಪುರಗಳಿಗೆ ಬಳ್ಳಿ, ತಂತಿ, ಹಗ್ಗ ಮುಂತಾದುವುಗಳನ್ನು ಎಸೆಯುವುದಾಗಲಿ, ಗಾಳಿಪಟ ಮುಂತಾದುಗಳನ್ನು ಗೋಪುರದ ಹತ್ತಿರ ಹಾರಿಸುವುದಾಗಲಿ ಮಾಡಬಾರದು ಎಂದು ಕೋರಿದೆ. ಹಾಗೆ ಮಾಡುವುದರಿಂದ ತುಂಬಾ ಅಪಾಯಕಾರಿ ಅಪಘಾತ ಮತ್ತು ಪ್ರಾಣಹಾನಿಯಾಗುವ ಸಂಭವವಿರುತ್ತದೆ ಎಂದು ಸಾರ್ವಜನಿಕರಿಗೆ ತಿಳಿಸಿದೆ.
ಈ ಸೂಚನೆಯನ್ನು ಉಲ್ಲಂಘಿಸಿದ ಪಕ್ಷದಲ್ಲಿ ಉಂಟಾಗುವ ಯಾವುದೇ ತರಹದ ಅಪಘಾತ ಅಥವಾ ಪ್ರಾಣಹಾನಿಗೆ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ಜವಾಬ್ದಾರರಲ್ಲ ಎಂದು ಕುಶಾಲನಗರ ಕವಿಪ್ರನಿನಿ, ಕೊಡಗು ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.