ಮಡಿಕೇರಿ, ಮಾ.07: ಇಂದು ರಾಜ್ಯ ಕಾಂಗ್ರೆಸ್ ಸರ್ಕಾರ ಮಂಡಿಸಿರುವ ಬಡ್ಜೆಟ್ ಕೇವಲ ಕಾಗದ ಪತ್ರಗಳಿಗೆ ಸೀಮಿತವಾಗಿದ್ದು, ಜನರಿಗೆ ಯಾವುದೇ ನಿರೀಕ್ಷೆಗಳಿರಲಿಲ್ಲ. ಬಡ್ಜೆಟನ್ನು ನೋಡಿದರೆ ಜನತೆಯ ಕಣ್ಣೊರೆಸಲು ಹೇಳಿದ ಕಥೆ ಎನ್ನುವುದು ಸ್ಪಷ್ಟವಾಗಲಿದೆ ಎಂದು ಬಿಜೆಪಿ ಮುಖಂಡ ತೇಲಪಂಡ ಶಿವಕುಮಾರ್ ನಾಣಯ್ಯ ಅಭಿಪ್ರಾಯಿಸಿದ್ದಾರೆ.
ಬಿಟ್ಟಿ ಭಾಗ್ಯಗಳಿಂದ ಬೊಕ್ಕಸ ಬರಿದಾಗಿ, ಸರ್ಕಾರವೇ ಸಾಲದ ಹೊರೆಯಲ್ಲಿದೆ. ಇನ್ನು ಕಳೆದ ಭಾರಿ ಗೋಷಿಸಿದ ಯೋಜನೆಗಳೇ ಇನ್ನೂ ಕೂಡ ಕಾರ್ಯಗತವಾಗಿಲ್ಲ. ಹೀಗಿರುವಾಗ ಹೊಸ ಯೋಜನೆಗಳ ಘೋಷಣೆ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ ಅವರು, ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿರುವ ಸಿದ್ದರಾಮಯ್ಯ ಸರ್ಕಾರದಿಂದ ನಾವಂತೂ ಯಾವುದೇ ನಿರೀಕ್ಷೆಗಳನ್ನು ಇಟ್ಟಿರಲಿಲ್ಲ. ರಾಜ್ಯದ ಜನತೆ ಕೂಡ ಯಾವುದೇ ಆಕಾಂಕ್ಷೆಗಳನ್ನು ಹೊಂದಿಲ್ಲ ಎಂದರು. ಕೊಡಗು ಜಿಲ್ಲೆಗೆ ಸೀಮಿತವಾಗಿ ಮಾತನಾಡಿದರೂ, ಹಿಂದಿನ ಬಿಜೆಪಿ ಶಾಸಕರು ತಂದ ಯೋಜನೆಗಳನ್ನೇ ಪೂರ್ಣ ಮಾಡಲು ಈಗಿನ ಶಾಸಕರಿಂದ ಆಗುತಿಲ್ಲ. ಕೊಡಗಿನ ಸ್ವಾಭೀಮಾನದ ಸಂಕೇತವಾಗಿರುವ ಕೊಡಗು ವಿವಿಯನ್ನು ಉಳಿಸುವಂತೆ ಗಟ್ಟಿಯಾಗಿ ಹೇಳುವ ಧ್ವನಿ ಈಗಿನ ಶಾಸಕರಿಗೆ ಇಲ್ಲ. ಇನ್ನೂ ಅಭಿವೃದ್ದಿ ಅನುದಾನ ಎಲ್ಲವೂ ಮರೀಚಿಕೆಯಾಗಿದ್ದು, ಇಂದು ಘೋಷಣೆಯಾದ ಯೋಜನೆಗಳೆಲ್ಲವೂ ಆಯವ್ಯಯ ದಾಖಲೆಯಲ್ಲಿ ಮಾತ್ರ ಉಳಿಯಲಿದೆ ಎಂದರು.