Site icon nadubadenews.com

ಕೊಡವಾಮೆ ಬಾಳೋ ಪಾದಯಾತ್ರೆಯಿಂದ  ಆಗಿದ್ದೇನು..? ಹೋಗಿದ್ದೇನು…?!!

ಕೊಡವಾಮೆ ಬಾಳೋ ಪಾದಯಾತ್ರೆಯಿಂದ  ಆಗಿದ್ದೇನು..? ಹೋಗಿದ್ದೇನು…?!!
Spread the love
ಕೊಡವಾಮೆ ಬಾಳೋ ಪಾದಯಾತ್ರೆಯಿಂದ  ಆಗಿದ್ದೇನು..? ಹೋಗಿದ್ದೇನು…?!!

ಸಂಪಾದಕೀಯ: ಕೊಡಗು ಪುರಾತನ ಕಾಲದಿಂದ ಇಂದಿನವರೆಗೂ ತನ್ನದೇ ಆದ ಹಲವು ಇತಿಹಾಸವನ್ನು ಸೃಷ್ಟಿಸಿದೆ.  ಅಂತದೇ ಒಂದು ಇತಿಹಾಸ ಇಂದಿಗೆ  ಹದಿನೈದು ದಿನದ ಹಿಂದೆ, ಅಂದರೆ ಫೆಬ್ರವರಿ 07/2025ನೇ ಶುಕ್ರವಾರ ಮತೊಮ್ಮೆ ದಾಖಲಾಯಿತು.  ಅಂದು ಮಡಿಕೇರಿ ಮಾತ್ರ ಅಲ್ಲ, ಕೊಡಗಿನ ಇತಿಹಾಸದಲ್ಲಿಯೇ ಅತೀ ಹೆಚ್ಚು ಜನ ಸೇರಿದ ಪಾದಯಾತ್ರೆ ಆಗಿ ಕೊಡವಾಮೆ ಬಾಳೊ ಪಾದ ಯಾತ್ರೆ ಇತಿಹಾಸ ಬರೆಯಿತು. ಒಂದು ಜನಾಂಗದ  ಸಂಸ್ಕೃತಿಗಾಗಿನ ಶಾಂತಿಯುತ ಪಾದಯಾತ್ರೆ ಎಂಬ ವಿಶ್ವದಾಖಲೆಯ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಕೊಡವ ಮತ್ತು ಕೊಡವ  ಸಂಸ್ಕೃತಿಗೆ ಒಳಪಡುವ ಎಲ್ಲಾ ಜನಾಂಗಗಳ ಒಗ್ಗಟ್ಟಿನ ಈ ನಡಿಗೆ ಅಂತಃದೊಂದು ಇತಿಹಾಸಕ್ಕೆ ಸಾಕ್ಷಿ ಆಯಿತು ನಿಜ. ಆದರೆ ಆ ಇತಿಹಾಸ ಕೇವಲ ತೋರಿಕೆಗೆ ಆಗಿರಲಿಲ್ಲ, ಕೇವಲ ಸಂಖ್ಯೆಗೆ ಆಗಿರಲಿಲ್ಲ, ಕೇವಲ ದಾಖಲೆಗೆ ಆಗಿರಲಿಲ್ಲ, ಕೇವಲ ಯಾವುದೋ ಒಂದು ಘಟನೆಗೆ ಮಾತ್ರ ಸೀಮಿತ ಆಗಿರಲಿಲ್ಲ, ಯಾರದ್ದೋ ವಿರುದ್ದವೂ ಆಗಿರಲಿಲ್ಲ. ಬದಲಾಗಿ ದಶಮಾನಗಳ ಕಾಲ ಮಡುಗಟ್ಟಿದ ಅಸಮಧಾನ ಮತ್ತು ಸಂಸ್ಕೃತಿಯ ಮೇಲಿನ ದೌರ್ಜ್ಯನ್ಯದ ಪ್ರತಿಫಲನದಂತೆ ಇತ್ತು.  

 ಆ ಎಲ್ಲಾ ಅವಮಾನ, ದೌರ್ಜನ್ಯ ಮತ್ತು  ವಿರೂಪಗಳ ವಿರುದ್ದ ಎದ್ದು ನಿಲ್ಲಬೇಕಾದ ಸಂದರ್ಭ ಒದಗಿ ಬಂದದ್ದು ಮಾತ್ರ  ಕಟ್ಟೆಮಾಡ್‌ ಮಾದೇವನ ಮುಖಾಂತರ ಅದರೂ ಅದರ ಚುಕ್ಕಾಣಿಯನ್ನು ಹಿಡಿದದ್ದು, ಮೂಲ ಬೈಲಾ ಆಧಾರದಲ್ಲಿ 1942ರಲ್ಲಿ “ಅಖಿಳ” ಕೊಡವ ಸಮಾಜ ಎಂಬ ಹೆಸರಿನಿಂದ, ಕೊಡವ ಭಾಷೆ ಮತ್ತು ಸಂಸ್ಕೃತಿಗೆ  ಒಳಪಡುವ ಎಲ್ಲಾ ಜನಾಂಗಗಳ ಒತ್ತಾಸೆಗಾಗಿ ಉದಯಿಸಿದ ಈಗಿನ  ಅಖಿಲ ಕೊಡವ ಸಮಾಜ.

ಈ ಎಲ್ಲಾ ಜನಾಂಗಗಳು ತಮ್ಮದೇ ಆದ ಹಲವು ಸಂಘಟನೆಗಳು, ಸಮಾಜಗಳನ್ನು ಕಟ್ಟಿಕೊಂಡು, ಜನಾಂಗ ಮತ್ತು ನಾಡಿಗಾಗಿ ತಮ್ಮದೇ ಆದ ರೀತಿಯಲ್ಲಿ ಸೇವೆಗೆಯ್ಯುತ್ತಾ, ತಮ್ಮದೇ ಹಾದಿಯಲ್ಲಿ ಸಾಗುತ್ತಿದ್ದವು. ಆದರೂ ಎಲ್ಲಾ ಒಂದುಗೂಡಿ ಹೋಗುವ ತವಕದಲ್ಲಿ ಎಲ್ಲರೂ ಇದ್ದರು. ಅದೇ ಸಮಯದಲ್ಲಿ, ನಿರ್ಧಾರವಾದ ಪಾದಯಾತ್ರೆ ಅಖಿಲ ಕೊಡವ ಸಮಾಜ ನೇತೃತ್ವ ಎಂದಾಗ ಯಾರಿಗೂ ಅತಿಶಯೋಕ್ತಿ ಎನಿಸಲಿಲ್ಲ. ಅಖಿಲ ಕೊಡವ ಸಮಾಜ ನೇತೃತ್ವದಲ್ಲಿ ಹೋಗಲು ಯಾರ ಆಕ್ಷೇಪಣೆಯೂ ಇರಲಿಲ್ಲ. ಎಲ್ಲರೂ ತಮ್ಮಷ್ಟಕ್ಕೇ ತಾವೇ ಕೆಲಸ ಆರಂಭಿಸಿದರು.

ಇಡೀ ಯಾತ್ರೆಯ ನೇತೃತ್ವವನ್ನು ವಹಿಸಿದ್ದು ಅಖಿಲ ಕೊಡವ ಸಮಾಜ ಆದರೆ, ಇದು ಯಾರೊಬ್ಬರ, ಇಬ್ಬರ, ಮೂವರ, ನಾಲ್ವರ, ಐವರ, ಐವತ್ತು, ನೂರು ಜನರ ಪ್ರಯತ್ನ ಅಥವ ಸಂಘಟನೆಯಾಗಲಿಲ್ಲ. ಪ್ರತೀ ಒಕ್ಕಗಳು, ಪ್ರತೀ ಊರ್‌, ನಾಡ್‌ಗಳು,  ಪ್ರತೀಯೊಬ್ಬರೂ ವೈಯುಕ್ತಿಕ ನೆಲೆಗಟ್ಟಿನಲ್ಲಿಯೂ ಟೊಂಕ ಕಟ್ಟಿ ನಿಂತರು. ಕಾರಣ ಇದು ಕೊಡವಾಮೆ ಬಾಳೊ…. ಇದು ಕೊಡವಾಮೆಯ ಮೇಲಿನ ದೌರ್ಜ್ಯನ್ಯದ ಪ್ರತಿಫಲನ, ಇದು ಈ ಮಣ್ಣಿನ ಸ್ವಾಭಿಮಾನದ ಪ್ರಶ್ನೆಯಾಗಿತ್ತು.  ಅದಕ್ಕಾಗಿ ಇದು ಪ್ರತಿಯೊಬ್ಬರ  ಪಾದಯಾತ್ರೆಯಾಯಿತು.  ಯಶಸ್ಸಿನ ಇತಿಹಾಸ ಬರೆಯಿತು.

ಹೌದು ಒಂದಷ್ಟು ಜನರು ಪಾದಯಾತ್ರೆಯ ಸುಸಜ್ಜಿತ ನಡೆಗಾಗಿ ಸ್ವಯಂ ಸೇವಕರ ತಂಡ ಮಾಡಿ, ಅದಕ್ಕೆ “ಕೋರ್‌ ಟೀಂ” ಎಂಬ ಹೆಸರನಿಟ್ಟು,  ಸಂಫೂರ್ಣ ನಿರ್ವಹಣೆ ಮಾಡಿದ್ದು ನಿಜ. ಆದರೆ ಅದಕ್ಕೂ  ಮೀರಿ ಸಾವಿರಾರು ಜನರು ಸ್ವಯಂಪ್ರೇರಿತರಾಗಿ, ಇಡೀ ಯಾತ್ರೆಯ ದಿನಾಂಕ ನಿಗದಿ ಆದಾಗಿನಿಂದ ಯಾತ್ರೆ ಮುಗಿದು, ಎಲ್ಲಾ ಪರಿಸ್ಥಿತಿ, ಕಾರ್ಯಚಟುವಟಿಕೆಗಳು ಒಂದು ಹತೋಟಿಗೆ ಬರುವ ವರೆಗೂ ದುಡಿದಿದ್ದಾರೆ. ಅಷ್ಟೂ ದುಡಿದ ದೇಹಗಳು ಯಾವುದೇ ಪ್ರಚಾರದ ಕಣ್ಣಿಗೆ ಬೀಳಲಿಲ್ಲ, ಅದರ ಹಂಗಿಗೂ ಹೋಗಲಿಲ್ಲ. ಅವರಿಗೆ ಅದರ ಗುಂಗೂ ಇರಲಿಲ್ಲ ಬಿಡಿ. ಯಾಕೆಂದರೆ ಅವರೆಲ್ಲರಿಗೂ ಬೇಕಿದಿದ್ದು  ಅವರ ಸಂಸ್ಖೃತಿಯ ಮೇಲಾಗುತ್ತಿರುವ ದಬ್ಬಾಳಿಕೆ ಮತ್ತು  ತಮ್ಮದೇ ನೆಲದಲ್ಲಿ ತಮ್ಮ ಅಸ್ತಿತ್ವದ ಪ್ರಶ್ನೆಗೆ ಉತ್ತರ. ಅದನ್ನಷ್ಟೇ ಅವರು ಚಾಚೂ ತಪ್ಪದೆ ಮಾಡಿದರು. ಅವರ ನಿಷ್ಟೆ ಇದ್ದದ್ದೂ ಅವರವರ ಗುರು ಕಾರೋಣರಿಗೆ, ಮಾದೇವ ಮಾತಾಯಿಗೆ. ಆ ನಿಷ್ಕಲ್ಮಷ ನಿಷ್ಠೆಯ ದುಡಿಮೆಯ ಪ್ರತಿಫಲನ, ಕುಟ್ಟದಿಂದ ಹೊರಟು ಮಡಿಕೇರಿ ಮಂದ್‌ಗರೆವರೆಗೂ ಅಬ್ಬರಿಸಿ ಬೊಬ್ಬಿರಿಯಿತು. ಅವರಂದುಕೊಂಡ ಉತ್ತರ ಸ್ಪಷ್ಟವಾಗಿತ್ತು.  ತಲುಪಬೇಕಾದಲ್ಲಿಗೆ ತಲುಪಿತ್ತು. ಅಷ್ಟೇ ಅವರ್ಯಾರು ಮತ್ಯಾವ ಪ್ರಚಾರ, ಸುದ್ದಿಗಳಿಗೂ ನಿಲ್ಲಲಿಲ್ಲ, ಎಂದಿನಂತೆ ತಮ್ಮ ದೈನಂದಿನ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಮುಂದೆಯೂ ಮಣ್ಣ್‌ ಮನಸ್ಥಾನದ ವಿಚಾರ ಬಂದಾಗ ಇದೇ ಹುರುಪಿನಿಂದ ಎದ್ದುಬರುತ್ತಾರೆ. ಇಂತ ಸಾವಿರಾರು ದುಡಿದ ಮನಸುಗಳಿಗೆ, ಮಾದೇವ ಮಾತಾಯಿ, ಮಾಗುರು ಕಾರೋಣ ಒಳಿತು ಮಾಡಲಿ ಎನ್ನುವುದೇ  ನಮ್ಮ ಪ್ರಾರ್ಥನೆ.  

ಇವರ ಜೊತೆಗೆ ಪಾದಯಾತ್ರೆ ಸಾಗಿದ ದಾರಿಯುದ್ದಕ್ಕೂ ಪಾನೀಯ, ಆಹಾರ, ಹಣ್ಣು ಹಂಪಲು, ಹೂಮಳೆಗಳೊಂದಿಗೆ ಸ್ವಾಗತಿಸಿದ ಜಾತಿ, ಧರ್ಮ, ಜನಾಂಗಗಳಾಚೆಗಿನ ಬೆಂಬಲ, ಕೊಡಗು ಎಂದಿಗೂ ಸರ್ವ ಜನಾಂಗದ ಶಾಂತಿಯ ತೋಟ, ಇಲ್ಲಿ ಕುತಂತ್ರಿಗಳ  ಮೇಲಾಟಗಳು, ಎಲ್ಲೆಮೀರದರೆ ಜೋಕೆ ಎನ್ನುವುದನ್ನು ಸಾರಿ ಹೇಳುತಿತ್ತು.  ಇದಕ್ಕಾಗಿ ಸರ್ವರೂ ವಂದನರ್ಹರೇ.

ಹೀಗೇ ಸಾಮೂಹಿಕ ಕೈಗಳ ದುಡಿಮೆ, ಸಾವಿರಾರು ಮನಸ್ಸುಗಳ ಒಗ್ಗಟಿನ ಪ್ರತೀಕವಾಗಿ ಸೇರಿದ ಸಾಗರೋಪಾದಿ ಪಾದಯಾತ್ರಿಗಳ ಸಮ್ಮುಖದಲ್ಲಿ, ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಪಾದಯಾತ್ರೆಯಷ್ಟೇ ಉದ್ದದ ಮನವಿ ಪತ್ರವನ್ನು ಸರ್ಕಾರಕ್ಕೆ ಜಿಲ್ಲಾಡಳಿತದ ಮೂಲಕ  ಸಲ್ಲಿಸಲಾಯಿತು.   ಅದರಲ್ಲಿ ಮುಖ್ಯವಾಗಿ  ಪ್ರಮುಖ 09 ಬೇಡಿಕೆಗಳನ್ನೂ ಇಡಲಾಗಿತ್ತು.  

ಈ ಬೇಡಿಕೆಗಳಾವುವೂ, ಸೂರ್ಯ ಚಂದ್ರರನ್ನು ಕೇಳಿರಲಿಲ್ಲ, ಈ ಬೇಡಿಕೆಗಳಾವುವೂ  ಸಂವಿಧಾನದ ವಿರೋಧವಾಗಿರಲಿಲ್ಲ, ಈ ಬೇಡಿಕೆಗಳಾವುವೂ ದೇಶದ ಅಥವಾ ಜಿಲ್ಲೆಯ  ಆಂತರಿಕ ಭದ್ರತೆ ಸಾರ್ವಭೌಮತ್ವವನ್ನ ಅಣಕಿಸುವಂತವಲ್ಲ. ಈ ಬೇಡಿಕೆಗಳು ಸಂವಿಧಾನದ ಅಡಿಯಲ್ಲಿ, ಈ ಮಣ್ಣಿನ ಮೂಲದ ನೆಲೆಗಟ್ಟಿನಲ್ಲಿ, ದಕ್ಕಬೇಕಾದ ಮೂಲಭೂತ ಹಕ್ಕು ಮತ್ತು ಭದ್ರತೆಯದ್ದಾಗಿತ್ತು.

ವಿಪರ್ಯಾಸ ಎಂದರೆ, ಅರ್ಜಿ ಸ್ವೀಕರಿಸಿದ ಜಿಲ್ಲಾಡಳಿತ, ಮನವಿಗನುಗುಣವಾಗಿ  ಸೂಕ್ತ ಕ್ರಮ ಕೈಗೊಳ್ಳುವುದಿರಲಿ, ಈ ಹದಿನೈದು ದಿನದಲ್ಲಿ ಕನಿಷ್ಟ ಪಕ್ಷ ಅಖಿಲ ಕೊಡವ ಸಮಾಜಕ್ಕೆ ಒಂದು ಹಿಂಬರಹವನ್ನೂ ನೀಡಲಿಲ್ಲ.  ಮತ್ತೆ ಕ್ರಮದ ನಿರೀಕ್ಷೆ ಮರೀಚಿಕೆಯೇ ಎನ್ನುವುದು ಯಕ್ಷ ಪ್ರಶ್ನೆ.

ಈಗ ಎದ್ದಿರುವ ಪ್ರಶ್ನೆ ಈ ಪಾದಯಾತ್ರೆ ಪಡೆದ್ದದೇನು..? ಕಳೆದ್ದದೇನು..? ಆಗಿದ್ದೇನು…? ಹೋಗಿದ್ದೇನು..?  ಎಂಬುದರ ವಿಸ್ತೃತ ಉತ್ತರಕ್ಕೆ ಮತ್ತೊಂದಷ್ಟು ದಿನ ಕಾದು ನೋಡೋಣವಂತೆ.

ಆದರೂ ಎಲ್ಲರ ನಿರೀಕ್ಷೆಗೂ ಮೀರಿದ, ಜನಸಂದಣಿಯ ಶಿಸ್ತು ಬದ್ದ ನಡೆ, ಸ್ವಯಂಸೇವಕರ ನಿಷ್ಕಲ್ಮಷ ದುಡಿಮೆ, ಪೊಲೀಸ್‌ ಮತ್ತು ಜಿಲ್ಲಾಡಳಿತದ ಸ್ನೇಹಮಯ ಸಹಕಾರಕ್ಕೊಂದು ಸಲಾಂ ಹಾಕಲೇ ಬೇಕು.

Exit mobile version